Home / ಕವನ / ಕವಿತೆ / ಆಸ್ತಿಕನಿಗೆ

ಆಸ್ತಿಕನಿಗೆ

ಎಲ್ಲಿಹನೋ ನಿನ್ನ ದೇವ?
ಅದೆಲ್ಲಿಹನೋ ನಿನ್ನ ಕಾವ?
ತಂದೆದುರಿಗೆ ನಿಲ್ಲಿಸೊ!
ಅದುವರೆವಿಗು ಏನೇನನೊ
ಗಳಹುವುದನು ನಿಲ್ಲಿಸೊ!

ಅನಂತನೆಂಬೆ!
ಅಂತವುಳ್ಳ ನೀನವನನು ಕಾಣೆ ಸತತ ಯತ್ನಿಪೆ!
ಅಚಿಂತ್ಯನೆಂಬೆ!
ಅನವರತವು ನಿನ್ನ ಮನದೊಳವನ ಬಿಡದೆ ಚಿಂತಿಪೆ!
ಅಮೇಯನೆಂಬೆ!
ಮೇಯವಾದ ಅವನ ಗುಣಗಳನ್ನು ಸತತ ಹೊಗಳುವೆ!
ಅಜೇಯನೆಂಬೆ!
ಭಕ್ತವಿಜಯಗಳನು ನೆನೆದು ಅದರ ಮುದದಿ ಮುಳುಗುವೆ!

“ಸಂಭವಾಮಿ ಯುಗೇ ಯುಗೇ”
ಎಂಬ ಮಾತನೊರೆಯುವೆ!-
ಅಧರ್ಮ ಜಗದಿ ಹೆಚ್ಚಿದಂದು
ಧರ್ಮದುದ್ಧಾರಕೆಂದು
ಅವತರಿಪನು ದೇವನೆಂದು
ಗೀತೆಯುದ್ಧರಿಸುವೆ!
ಅಂತಾದೊಡೆ ಇಂದಿಗಿಂತ
ಕೆಟ್ಟ ಜಗವು ದೊರೆವುದೆ?
ಇಂಥ ಸಮಯ ಬರುವುದೆ?
ಅಧರ್ಮ ಕಾಡ ಕಿಚ್ಚ ಹೋಲಿ
ಹಬ್ಬಿ, ನಲ್ಮೆಯೆಲ್ಲ ತೇಲಿ
ಮಾಯವಾಗೆ ಯಾವ ಕೇಲಿ-
ಯೊಳಗೆ ದೇವ ಮಗ್ನನೊ!
ಮಾತನಿತ್ತು ಬರದ ದೇವ-
ನೆಂಥ ವಚನ ಭ್ರಷ್ಠನೊ!

ಪಾಪ! ಸೊದೆಯ ಕಡಲ ಸವಿಯ
ಮತ್ತಿನೊಳಗೆ ಈ ಬುವಿಯ
ಗೋಳು ಸೇರದೇನೊ ಕಿವಿಯ!

“ಬುವಿ ಪ್ರಯೋಗಶಾಲೆಯು!
ಇದೆಲ್ಲ ಅವನ ಲೀಲೆಯು!”
ಎಂದು ನುಡಿಯುವೆ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಯುದ್ಧಮಾರಿ ಹರಡುತಿರುವ
ಕಿಚ್ಚು ಇಳೆಯ ದಹಿಸಲಿ!
ಚಽಕ್ರಾಧಿಪತ್ಯವೆನಿತೊ
ನುಚ್ಚು ನೂರಾಗಲಿ!
“ಎಲ್ಲ ಅವನ ಲೀಲೆಯು!”

ಕ್ಷಾಮಾಗ್ನಿಯು ನಾಲಗೆಯನು
ಚಾಚಿ ಜಗವ ನೆಕ್ಕಲಿ!
ಬುವಿಯ ಬಸಿರ ಬಗೆದು `ಲಾವ’
ಎಲ್ಲೆಲ್ಲಿಯು ಉಕ್ಕಲಿ!
“ಎಲ್ಲ ಅವನ ಲೀಲೆಯು!”

ಕಾದ ಗುಳದ ತೆರದಿ ಭಾನು
ಕೂಲಿಗಳನು ಚುಚ್ಚಲಿ!

ಕರಾಳ ಮೇಘ ಮಿಂಚು ಸಿಡಿಲ
ಪೊಟ್ಟಣವನು ಬಿಚ್ಚಲಿ!
“ಎಲ್ಲ ಅನನ ಲೀಲೆಯು!”

ಅನೀತಿ ಜಗದಿ ನೆಲಸಲಿ
ಅಧರ್ಮ ಬಂದು ಕುಣಿಯಲಿ
ಅಶಾಂತಿಯೆಲ್ಲು ಹಬ್ಬಲಿ
ಅಕೃತ್ಯ ಬಿಡದೆ ನಡೆಯಲಿ
ನರನು ನರನ ಸುಲಿಯಲಿ
ಜಗದ ಕೆಟ್ಟುದೆಲ್ಲ ಬಂದು
ಇಲ್ಲೆ ಹೆಪ್ಪುಗಟ್ಟಲಿ!
“ಎಲ್ಲ ಅವನ ಲೀಲೆಯು!”
ಲೀಲೆಯಂತೆ ಲೀಲೆಯು!

ಎಲ್ಲಿಹನೋ ದುರುಳ ದೇವ?
ಅದೆಲ್ಲಿಹನೋ ಜಗವ ‘ಕಾವ’?
ಎಳೆದು ತಾರೊ ಇಲ್ಲಿಗೆ
ಇಂತು ಲೀಲೆಯಾಡುವವನ
ಹಾಕಬೇಕು ಗಲ್ಲಿಗೆ!

ಸಾಕು ಮಾಡೊ! ಒಡ್ಡದಿರೆಲೊ
ಸಗ್ಗದ ಪ್ರಲೋಭನ!
ನರಳಿದರೂ ಇಲ್ಲಿ, ಮುಂ-
ದಿರುವ ಸುಖದ ಕಥನವ!
ಕೊಡನು ಕೈಯೊಳಿರುವ ಕಲ್ಲ!
ಕೊಡುವನೆ ಮುಚ್ಚಿಟ್ಟ ಬೆಲ್ಲ!

ಬುವಿಯ ಗೋಳ ಕಡಿಮೆ ಮಾಡ-
ಲವಗೆ ತ್ರಾಣವಿಲ್ಲವೆ?
ಇಲ್ಲ ಇಚ್ಛೆ ಯಿಲ್ಲವೆ?

ತ್ರಾಣವಿದ್ದು ಇಚ್ಛೆ ಯಿರದ
ಭಂಡನಾತನೆ?
ಇಚ್ಛೆಯಿದ್ದು ತ್ರಾಣವಿರದ
ಷಂಡನಾತನೆ?
ಇಚ್ಛೆ ತ್ರಾಣ ಎರಡುಮಿರದೆ
ಬರಿದೆ ಸೋತನೊ?
ಇಚ್ಛೆ ತ್ರಾಣ ಎರಡುಮಿರಲು
ಏಕೆ ಕೂತನೊ?
* * *

ಇಲ್ಲದಿರುವ ದೇವರನ್ನು
ಸುಮ್ಮನೇಕೆ ಬೈಯಲಿ:
ಬರಿಯೆ ಗಾಳಿಯನ್ನು ಗುದ್ದಿ
ಸುಮ್ಮನೇಕೆ ನೋಯಲಿ!
ವಿಚಾರ ಮಥನ ಮಾಡಿಬಿಡು!
ಇದೊಂದು ಮಾತ ಮನದಿ ನೆಡು:

ನರನ ಬಾಳ ಶಿಲ್ಪಿ ನರನೆ!
ದೇವ ಮನದ ಭಯದ ರಚನೆ!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...