Home / ಕವನ / ಕವಿತೆ / ಬುದ್ಧ ಮತ್ತು ವೈಶಾಲಿ ನಗರವಧು

ಬುದ್ಧ ಮತ್ತು ವೈಶಾಲಿ ನಗರವಧು

‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ
ಬುದ್ಧ ಬೋಧಿಯಾಗಿ ಆಗಾಗ
ಅಲ್ಲಲ್ಲಿ ಅವರವರ ಮನಸಿನಲಿ
ಚಿಗುರೊಡೆವ ಜೀವ
ಕಣ್ತೆರೆಸುವ ದೇವದೂತ.

ಸುಂದರ ನಗರಿ ವೈಶಾಲಿ
ಸಸ್ಯ ಶ್ಯಾಮಲೆಯ ನಾಡು ಬೀಡು
ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ
ಹೂ ಬಳ್ಳಿಗಳ ಪಿಸುಪಿಸು ಮಾತು ಅದೇ
ಬುದ್ಧನ ಆಗಮನ ತೋರಣಕೆ
ಪಾವನಕೆ ಮನದ ನಿರಾಳತೆಯ
ಸಮರ್ಪಿಕೆಯ ಭಾವನೆಗೆ ತೇವಗಣ್ಣು.

ಮಳೆಯೊಳು ಮಿಂದ ಮಣ್ಣು ಹಸನಾಗಿ
ಹದವಾಗಿ ಕಾಯ್ದಿತು ಬುದ್ಧನ ಪಾದಸ್ಪರ್ಶ
ಅದೋ ಬಂದೇ ಬಿಟ್ಟಿತು ಬಿಕ್ಖುಗಳ ಗುಂಪು
ನಡುವೆ ಅರವಿಂದವದನ
ಸಾಕ್ಷಾತ್ ತೇಜಪುಂಜ ಕಾಯಕಲ್ಪ.

ವೈಶಾಲಿಗೆ ಸಂಭ್ರಮ ಮನೆ ಮನೆ
ಬೀದಿ ಬೀದಿ ಸುತ್ತಲಿನ ಹಳ್ಳಿಪಳ್ಳಿಗೆ
ಪಸರಿಸತೊಡಗಿತು ’ಧಮ್ಮದೇಸನ’
ತುಂಬಿಕೊಳ್ಳುತ ಜನರ ಚಿಗುರೊಡೆಯಿತು ಅಂಬವನ.

ನೆಲಮುಟ್ಟುವ ಕ್ಷಣ ಹೊನ್ನಕಿರಣಗಳು
ಆಹಾ ! ‘ಅಂಬಪಾಲಿ’ ಅದೇನೋ ಮಾಂತ್ರಿಕತೆ

ಮೀಸೆಯೊಡೆದ ಪಡ್ಡೆಗಳ ಕನಸಿನೊಳಗೆಲ್ಲ ವಧು
ಕಣ್ಣು ಕೋರೈಸುವ ಸುಂದರಿ ಎದೆ ಝಲ್‌ಗುಡುವ
ಹರೆಯ ಮೋಹಕಮಾತಿನ ಬೆಡಗಿಯ
ತೋಳತೆಕ್ಕೆಗೆ ಬೀಳದವರಾರಲ್ಲಿ
ವೈಶಾಲಿಗೇ ವಧುವಾಗಿ ಕಿರುಬೆರಳಮೇಲೆ
ಕುಣಿಸುವ ಮಾಟಗಾತಿ ಮಲ್ಲಿಗೆಯ
ಮೊಗ್ಗುಗಳು ಅರಳುವ ಕಾತುರ
ಅವರವರ ಭಾವದ ಎದೆಗೂಡಲಿ.

ಬರುವುದೆಂದರೆ ಧರ್ಮೋಪದೇಶ ಕೇಳಲು
ಇರಬಹುದೆ ಹುನ್ನಾರ ಬಿಕ್ಖುಗಳ
ಮನವನಾವರಿಸುವ, ಭಗ್ನಗೊಳಿಸುವ
ದಿನಕೊಂದೊಂದು ಅಲಂಕಾರ ಆದರೂ
ಶಾಂತಚಿತ್ತ ಮನಸು ಗಂಭೀರೆ
ಆಲಿಸುವ ಅಂಬನೋಡಿ ಮನಕದಡಿಸಿಕೊಂಡದ್ದು
ಗಂಡುಜಾತಿ ತಮಗಿನ್ನೆಲ್ಲಿ ಕೈಜಾರುತ್ತೊ ಎನ್ನುವ ಭಯ.

ಧಮ್ಮದೇಸನ ಮುಗಿದು ಇನ್ನೇನು ಬಿಡಾರ
ಬಿಡಬೇಕು ಹೊರಡಬೇಕು ಮುಂದಿನೂರಿಗೆ
ಬಿಕ್ಖುಗಳ ನಡುವೆ ಹೆದರಿ ಅಂಜಿಕೆಯಿಂದಲೇ
ಬುದ್ಧನ ಕಾಲಿಗೆರಗಿ
‘ನೂರಾರು ಸಂಸಾರಗಳ ದುಃಖಕ್ಕೆ ಕಾರಣಳು ನಾನು
ದುಃಖಿಸಿದೆ ಗುರುವರ್ಯಾ ಈಗ
ನಿಮ್ಮ ಮಾತು ಕೇಳಿ, ತೋರಿಸಿದಿರೆನಗೆ
ಸತ್ಯದ ಬೆಳಕು ಅನಂತದೆಡೆಗೆ
ಗುರುಗಳೇ, ಬರಬೇಕೆನ್ನ ಮನೆಗೆ
ಬಿಕ್ಖುಗಳನೊಡಗೂಡಿ ಸ್ವೀಕರಿಸಬೇಕೆನ್ನ ಆತಿಥ್ಯ
ಪಾವನಳಾಗಿ ಮಾಡಿ ಹಾರೈಸು ತಂದೆ’.

ಆಗಬಹುದೆಂದಾ ಬುದ್ಧನ ಮಾತಿಗೆ ಬಿಕ್ಖುಗಳ
ಬಿಡಾರದೊಳಗೆ ಕದಡಿತು ಶಾಂತಿ
‘ಗುರುಗಳೇ ಇದೇನು ಮಾತುಕೊಟ್ಟಿರಿ
ಈ ನಗರಿಗರೆಲ್ಲರ ವಧು ಆಕೆ ಅದೇ ಅದೇs
ನೂರಾರು ಧನಿಕರ, ಯುವಕರ, ರಾಜರ ಮನ
ಕದ್ದು ಬುಟ್ಟಿಗೆ ಹಾಕಿಕೊಂಡ ನರ್ತಕಿ
ಹರೆಯಹಾಸಿ ಕಾಂಚಾಣ ಹೊದೆಯುವ ವೇಶ್ಯೆ
ಮಾನ ಕಳೆದುಕೊಂಡ ಸಂಸಾರಿಗರದೆಷ್ಟೊ
ಮೌಲ್ಯಬರಿದುಗೊಳಿಸಿಕೊಂಡ ಸನ್ಯಾಸಿಗಳೋ,
ಅಂಬಪಾಲಿಯ ಆತಿಥ್ಯ ಪಡೆಯುವ
ಬಿಕ್ಖುಗಳಾದ ನಮಗೆ’ …….. ಕಳವಳ.

‘ವೇಶ್ಯಯಾಗಿ ಕಂಡಳೇ ಅವಳು ನಿಮಗೆ?
ಅದೊಂದು ಹೆಣ್ಣುಜೀವ, ಕಣ್ಣು ಕುರುಡಾಯಿತೆ
ಬಿಕ್ಖುವಾದ ನಿಮಗೂ ಮನಚಂಚಲಿಸಿತೆ?
ಅವರವರ ಭಾವಕ್ಕೆ ಕಾಣುವ ಪರಿ
ತೆಗೆತೆಗೆದುಬಿಡಿ ಚೀವರ
ಬಿಕ್ಖುಯೋಗ್ಯತೆ ನಿಮಗಿಲ್ಲ’ ಬುದ್ಧ
ನಡದೇಬಿಟ್ಟ ಅಮೃಪಾಲಿಯ ಆತಿಥ್ಯಕ್ಕೆ.
*****
ಬಿಕ್ಖು = ಭಿಕ್ಷು
ಧಮ್ಮದೇಸನ = ಧರ್ಮೋಪದೇಶ
ಚೀವರ = ಬೌದ್ಧಭಿಕ್ಷುಗಳು ಹೊದೆಯುವ ಬಟ್ಟೆ
ಅಂಬಪಾಲಿ = ಅಮೃಪಾಲಿ
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...