೧
ಯುದ್ಧ ಮುಗಿಯಿತು ಎಂಬ ಮಾತಿನ
ಹಿಂದೆ ನಿಂತಿದೆ ಸೂಚನ
ಮದ್ದು ಗುಂಡಿನ ಅಣುಸ್ಫೋಟನ;
ಮೃತ್ಯು ಮಾರಿಯ ನರ್ತನ
೨
ಕಣ್ಣುಕಾಣದ ಅಣುವಿನಣುವೇ
ಜಗವ ನುಂಗಲು ಬಂದಿದೆ;
ಮಣ್ಣು ಕಣದತಿ ಸೂಕ್ಷ್ಮ ರೂಪವೆ
ಮುಗಿಲ ಮೇರೆಯ ಮೀರಿದೆ
೩
ಕಿರಿದರಲಿ ಕಿರಿದಾದ ಜಡಕೂ
ಹಿರಿಯ ಚೇತನ ತುಂಬಿದೆ
ಬರಿದು ಬಯಲಿನ ಬಾಯ ಜಳಕೂ
ಅಗ್ನಿದೇವನ ಕಾವಿದೆ
೪
ದೀನಮಾನವ, ದೇವ-ದಾನವ
ರನ್ನು ಮೀರಿಸಿ ನಿಂತನು;
ಏನಿದದ್ಭುತ ಬಂತು ಜಗದಲಿ
ಎಂಬುದನು ತುಳಿದಿಟ್ಟನು
೫
ತನ್ನ ಶಕ್ತಿಗೆ ತಪದ ಬೆನ್ನಿದೆ
ನೆಳಲು ಕಾರ್ಯದ ಹಿನ್ನೆಲೆ
ಚೆನ್ನ ಹೊನ್ನಿನ ಹೊಳಪು ಹೊಮ್ಮಿದೆ
ಮಳಲುರಾಸಿಗೆ ಒಮ್ಮೆಲೆ
೬
ಅಂತರಂಗವನರಿತ ಮೇಲೆಯೆ
ಸೂಕ್ಷ್ಮ ತೆರೆದೊರೆ ದೊರೆವುದು
ಸಂತತವು ಬರಿ ಜೀವದೆಲೆಯೇ
ಚಿಗಿತು ಮಲಮಲನವೆನುವುದು
*****
ಬೆಂಗಳೂರು : ೧೯೪೬

















