Home / ಕವನ / ಕವಿತೆ / `ಹುಬ್ಬಳ್ಳಿ ಮಂಗ್ಯಾ’ನ ದುಂದುಮೆ

`ಹುಬ್ಬಳ್ಳಿ ಮಂಗ್ಯಾ’ನ ದುಂದುಮೆ

ದುಂದುಮೆ ಕೇಳ್ರಿ ದುಂದುಮೆ ||ಪ||
ದುಂದುಮೆ ಎಂತೆಂದು ಪಾಡಿರಿ ಜನರು
ದುಂದುಮೆ ಬಸವಂತನ ಹಬ್ಬ | ದುಂದುಮೆ |
ದುಂದುಮೆ ನಿರ್ದುಮೆ ಸಾಲಗನ್ನಿರೆ |
ದುಂದುಮೆ ಕೇಳ್ರಿ ದುಂದುಮೆ ||ಅ. ಪ||

ಸಬ್ಬ ದೇಶದೊಳು ಇಂಥ ಹೆಚ್ಚಿನ ಮರ್ಕಟ
ಅಬ್ಬರಿಸುತ್ತ ಹಾರ್ಯಾಡುವವು | ತಮ್ಮ
ಹುಬ್ಬು ಹಾರಿಸಿ ಹಲ್ಲು ಕಿಸಿಯುವವು | ಮತ್ತ
ತಬ್ಬುಬ್ಬಿ ಎಲೆಯಲ್ಲಿ ಕೂಡುವವು | ಮೈಯ ||
ಉಬ್ಬುತ ಕೊಬ್ಬುತ ಹಬ್ಬುತ ಒಳಗೆಲ್ಲ
ಹುಬ್ಬಳ್ಳಿಯೊಳು ಮಂಗ ಹುಡದಿಯಾಡಿದವು || ದುಂ ೧

ಅಂಗನೆಯರು ತಮ್ಮ ಅಂಗಳದೊಳು ಮನಿ
ಮುಂಗಡಿಯೊಳಗೆಲ್ಲ ಕೂಡಿದವು | ಮತ್ತೆ
ಹಿಂಗದೆ ಒಳಪೊಕ್ಕು ನೋಡಿದವು | ದೊಡ್ಡ
ಸಂಗಟಿಸ್ವಾರಿ ಈಡಾಡಿದವು | ಇಟ್ಟ ||
ಗಂಗಳ ತಂಬಿಗಿ ಆಂಬ್ರ ಚೆಲ್ಲಿದವವ್ವಾ
ಮಂಗಳವಾರ ಪ್ಯಾಟಿ ಮಾನಗೇಡಿ ಮಂಗ || ದುಂ ೨

ದೊಡ್ಡ ಮುಂಡಾಸ ಗಿಡ್ಡಂಗಿ ಜನಿವಾರ
ದೊಡ್ಡೆ ಗೊಂಗಡಿಯನ್ನು ಹಾಸಿಯರು | ಸಣ್ಣ
ಗಡ್ಡ ಹತ್ತಿ ಮೀಸಿ ಚಿನಿವಾಲರು | ಮುಂದೆ
ಅಡ್ಡ ಹಾಯ್ದರೆ ನೋಡಿ ಕರೆಯುವರು | ಹೊನ್ನು ||
ದುಡ್ಡು ರೂಪಾಯಿ ಚೀಲ ಅಡ್ಡಡ್ಡ ಎಳಿದಾಡಿ
ಎಡ್ಡು ಹಚ್ಚಿತಲ್ಲೊ ಅಡಮುಟ್ಟ ಮಂಗ|| ದುಂ ೩

ಹಪ್ಪಳ ಸಾಂವಿಗಿ ಸೆಂಡಿಗಿ ಗುಳಗಿಯ
ಚಪ್ಪರ ಮುಂದೊಣ ಹಾಕಿಹಳು | ಒಂದು
ತುಪ್ಪದ ಚಟಿಕೀಯ ಮುಂದಿಟ್ಟಹಳು । ಕೈಯ
ಚೆಪ್ಪಳಿಕ್ಕುತ ಮಾತನಾಡುವಳು | ನೋಡಿ ||
ತಪ್ಪದೆ ಹೊಕ್ಕೆಲ್ಲೊ ತಿಂದು ತಕ್ಕಿಯ ಬಿದ್ದು
ಕುಪ್ಪಸ ಹರಿದಿತು ಕುಲಗೇಡಿ ಮಂಗ ದುಂ ೪

ಪಂಚಮಿ ಬಂತೆಂದು ಹಂಚಿ ಬಿಟ್ಟಳ್ಳನು
ಹಂಚಿಕೆಯಿಂದ್ಹುರಿದಿಟ್ಟಿದ್ದೆನೆ | ಆಗ
ಮುಂಚೆ ಎಳ್ಳಚಿಗಳಿ ತಂಬಿಟ್ಟು ಕಟ್ಟಿದ್ದೆನೆ | ಹೊಸ
ಕುಂಚಿಗಿ ಟೊಪ್ಪಿಗಿ ಹೊಲಿಸಿಟ್ಟಿದ್ದೆನೆ | ಮನಿಯ
ಹಂಚು ಒಡೆದೊಳಗ್ಹೊಕ್ಕೆಲ್ಲ ತಿಂದಿತು
ಕಂಚಕಾರೋಂಣಿ ಕಸವಂಟ ಮಂಗ ದುಂ ೫

ಅಚ್ಚಬಾಳಿಯ ಹಣ್ಣು ಬಟ್ಟಿಟ್ಟು ಗಲ್ಲಕೆ
ಹಚ್ಚಿತು ಕೈಯನು ಮುಂಬಿನಲಿ | ಅದು
ತಬ್ಬಿಕೊಂಡೋಡಿತು ಕುಂಬಿಯಲಿ | ಕೂತು
ಬಿಚ್ಚಿತೆೊ ತೋವಿಯ ಕೈಯಿಂದಲಿ | ಬಾಯ್ಗೆ ॥
ಹಚ್ಚಿತೆನ್ನಯ ಜೀವ ಕಿಚ್ಚೆದ್ದು ಹೊಯ್ಕೊಂಡೆ
ಹೆಚ್ಚೆಂದು ಕಾಣವ್ವ ಹಿರಿಪ್ಯಾಟಿ ಮಂಗ ದುಂ ೬

ನಲ್ಲೆರ ಕೈಯಾನ ರಾಟಿಯ ಒಳಗಿನ
ಚಿಲ್ಲನು ಕತ್ತು ಈಡಾಡಿತಲ್ಲ | ಬುಟ್ಟಿ
ಯಲ್ಲಿದ್ದ ಕುಕ್ಕಡಿ ಹರದೀತಲ್ಲ ! ಹಾಸುಗ್ಹಾರಿ
ಹಲ್ಲಿಂದ ಹರಿದೋಡಿತಲ | ಮತ್ತು ||
ಹಲ್ಲಿಟ್ಟು ಹಣ್ಣುಕಾಯಿ ನೀರಲ ಪೇರಲ
ಪಲ್ಲೇವ ತಿಂದಿತು ಪಡನೆಂಟಿ ಮಂಗ ದುಂ ೭

ಬುಟ್ಟೇದ ಕುಪ್ಪಸ ಬುಗುಡಿ ಅಂಚಿನ ಸೀರಿ
ಉಟ್ಟು ತೊಟಗೊಂಡಿರುತಿದ್ದೆನೆ | ಅಕ್ಕಿ
ಕುಟ್ಟಿಕೊಂತ ನಾ ಕುಂತಿದ್ದೆನೆ | ಒಂದು
ಕಟ್ಟಿಗಿ ಕೋಲನ್ನು ಇಟ್ಟಿದ್ದೆನೆ | ಬಂದು ||
ಬಟ್ಟ ಕುಚವ ಮುಟ್ಟಿ ಕಟ್ಟನೆ ಕಡದೀತು
ಕಟ್ಟಾಣಿ ಹರದೀತು ಕವಡಿಯ ಮಂಗ ದುಂ ೮

ಬುಕ್ಕಿಟ್ಟಿನ ಚೀಲ ಬುಡಮೇಲ ಮಾಡಿತು
ಚಿಕ್ಕ ತಕ್ಕಂಗಡಿ ಹೊಕ್ಕಿತಲ್ಲ | ಕಲ್ಲ-
ಸಕ್ಕರೆ ಚೀಲವ ನೆಕ್ಕಿತಲ್ಲ | ಮತ್ತೆ
ತಕ್ಕಡಿ ದಂಡಿಗಿ ಮುರದಿತಲ್ಲ । ಅವ- ||
ಲಕ್ಕಿ ರೇವಡಿ ಬೆಂಡು ಬೆತ್ತನ ಪುಟಾಣಿ
ಮಕ್ಕಳ ಕಸಕೊಂಡು ಮುಕ್ಕಿತು ಮಂಗ ದುಂ ೯

ಪೆಟ್ಟಿಗಿಯೊಳಗಿನ ವಟ್ಟೆದಂಚಿನ ಸೀರಿ
ಇಟ್ಟು ಬಚ್ಚಲದಾಗ ಕುಂತಿದ್ದೆನೆ | ಎನ್ನ
ಕಟ್ಟಿದ ಕೂದಲ ಬಿಚ್ಚಿದ್ದೆನೆ | ಮತ್ತೆ
ಬಟ್ಟ ಬತ್ತಲೆ ನಾನು ಕೂತಿದ್ದೆನೆ | ಆಗ ||
ತಟ್ಟಿ ಮುರಿದು ಬಂದು ಇಟ್ಟಿಸೀರಿಯ ಕೊಂಡ
ಕಟ್ಟು ಕುಲಾಯವ ಸಕಸಿಕೊಂತು ಮಂಗ ದುಂ ೧೦

ಬಗ್ಗನೆ ಹೊಕ್ಕಿತು ಮಗ್ಗದವರ ಮನಿಯ
ಹುಗ್ಗಿಯ ಗಡಿಗಿಗೆ ಹಾರಿತಲ್ಲ | ಅದು
ಬಗ್ಗಿಸಿ ಬಾರಲ್ಹಾಕಿತಲ್ಲ | ಬಲು
ಸುಗ್ಗಿಯಾಯಿತೆಂದು ಹಿಗ್ಗಿತಲ್ಲ | ಕುಂತು ||
ಬಗ್ಗಿದವರ ಮೇಲೆ ಹಗ್ಗ ಹರಿದಿಳಿದು
ನುಗ್ಗ ಮಾಡಿತವ್ವ ಅಗ್ಗದ ಮಂಗ ದುಂ ೧೧

ಹಾರಿತು ಜವಳಿಯ ಅಂಗಡಿ ಸಾಲಿಗೆ
ಬಾರಲ್ಹಾಕಿತು ಮಸಿದೌತಿಯನು | ಕಿತ್ತು
ಈಡಾಡಿತೆಲ್ಲ ಜವಳಿಯನು | ಮಣಿ
ಗಾರಂಗಡಿಗಿಟ್ಟು ದಾಳಿಯನು | ವಟ್ಟೆ ||
ಮಾರುನಾರೇರ ಮಾರಿಯ ಮೇಲ್ಹೊಡೆದು
ನೀರಿಯ ಕಳೆದಿತು ಸಿರಿಗೇಡಿ ಮಂಗ ದುಂ ೧೨

ಮತ್ತೆನಾ ಬಸುರೆಂದು ಬುತ್ತಿಬೋನ್ಹದ ಮಾಡಿ
ಒತ್ತಿ ಒಳೊಳ್ಳಿ ಹರಿಸಿದ್ದೆನೆ | ಆಗ
ಚಿತ್ತೆಲ್ಲ ನಾನಲ್ಲಿ ಇರಿಸಿದ್ದೆನೆ | ನನ್ನ
ಸುತ್ತಲೆ ಯಾರಿಲ್ಲ ಕುಳಿತಿದ್ದೆನೆ | ಒಳ್ಳೆ ||
ಹೊತ್ತು ನೋಡಿ ಬಂದು ಮುತ್ತಿಕೊಂಡಿತೊಂದು-
ತುತ್ತಾರ ಬಿಡಲಿಲ್ಲ ತುಡಗಿನ ಮಂಗ ದುಂ ೧೩

ಹುಡಗೇರೆಲ್ಲರು ಕೂಡಿ ಕಡಲಿ ಕೊಬ್ಬರಿ ಕಬ್ಬು
ಹಿಡಕೊಂಡು ಹೋಗಲು ತುಡಕಿತವ್ವ | ಗಲ್ಲ
ಹಿಡಿದೆನ್ನ ಮಾರಿಯ ನೋಡಿತವ್ವ | ಉಟ್ರ
ಸಡಿಲಿಸಿ ನಿರಿಗೆಗಳ ಕಳಚಿತವ | ದೊಡ್ಡ ||
ಕಡುವನಂತ ಮೂಳ ಕಾಲಾಗ ಬಂದಿತು
ಉಡಿಯ ಚೆಲ್ಲಿಕೊಂಡು ಓಡಿತ ಮಂಗ ದುಂ ೧೪

ಲೋಕದೊಳೆಲ್ಲೆಲ್ಲ ನಾಕಾಣೆನಿಂತ್ಹಾದು
ಸಾಕು ಸಾಕಾದೀತು ಜನ್ಮಕೀಗ | ಇದರ
ಕಟಕಟಿ ಬಹಳವ್ವ ಅದರುಷ್ಟಕ | ಬೆಂಕಿ
ಹಚ್ಚಲೆವ್ವ ಮಾಡುವ ಬಾಳುವಿಗೆ | ಮುದದಿ ||
ಶ್ರೀ ಕುಂದಗೋಳ ಭೂಕಾಂತ ಗುರುವಿಗೆ ನಾನು
ಕಾಯ ಒಡೆದೇನಿ ಸಾಯಲಿ ಮಂಗ ದುಂ ೧೫
*****

Tagged:

Leave a Reply

Your email address will not be published. Required fields are marked *

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...