Home / ಕವನ / ಕವಿತೆ / ಮುಚ್ಚಖಂಡಿಯ ದುಂದುಮೆ

ಮುಚ್ಚಖಂಡಿಯ ದುಂದುಮೆ

ದುಂದುಮೆ ಕೇಳ್ರಿ ದುಂದುಮೆ ||ಪ||

ದುಂದುಮೆ ಎಂತೆಂದು ಪಾಡಿರಿ ಜನರು
ದುಂದುಮೆ ಬಸವಂತನ ಹಬ್ಬ | ದುಂದುಮೆ
ದುಂದುಮೆ ನಿರ್ದುಮೆ ಸಾಲಗನ್ನಿರೆ
ದುಂದುಮೆ ಕೇಳ್ರಿ ದುಂದುಮೆ ||ಅ. ಪ||

ಶ್ರೀಶಮೈದುನನಿಗೆ, ಪಾಶುಪತವನಿತ್ತ
ವಾಸವ ನಮಿತ ಮಹೇಶನನೆ | ಗಿರಿ
ಜೇಶನೆ ಮೂರ್ಜಿಗದೀಶನನೆ ಪರ-
ಮೇಶನೆ ಕೈಲಾಸ ವಾಸನನೆ | ಸುಪ್ರ ||
ಕಾಶನೆ ಅಂಬರ ಕೇಶನೆ ಮದನವಿ
ನಾಶನೆ ಬೇಗನೆ ಪಾಲಿಸೆನ್ನ ದಯದಿ ದುಂ ೧

ಧಾತ್ರಿಯೊಳ್ಮುಚಖಂಡಿ ಸ್ರೇತ್ರದೊಳಗಳಿವ
ಪುತ್ರನಿರುವನಾದಿ ಕ್ಷೇತ್ರದೊಳು | ಎನ್ನ-
ನೇತ್ರದಿ ನೋಡಿದೆ ಯಾತ್ರಿಯೋಳು | ಮತ್ತೆ-

ಪಾತ್ರದವರನು ಆ ಜಾತ್ರಿಯೊಳು | ಕಂಡು ||
ರಾತ್ರಿಯೊಳ್ಕುಳಿತು ಚರಿತ್ರೆ ಮಾಡಿದೆ | ಸಿಟ್ಟು
ಮಾತ್ರ ಮಾಡದೆ ವಿಚಿತ್ರ ಕೇಳುವದು ದುಂ ೨

ಪ್ಯಾಟಿಗಳೊಳಗೆಲ್ಲ, ನೀಟಾದ ಬಾಗಿಲ-
ಕೋಟೆಯ ಸಖಿಯರ ಧಾಟಿಬ್ಯಾರೆ | ದೇಹ
ಘಾಟವು ಎದಿಮೊಲೆ ಮಾಟ ಬ್ಯಾರೆ | ರತಿ

ಬ್ಯಾಟವು ಕಣ್ಣನ ನೋಟ ಬ್ಯಾರೆ | ಕಾಮ ||
ನಾಟದೊಳಗ ಮಹಾ ಭೂಟಕರೈ । ಇವ-
ರಾಟವು ತಿಳಿಯದು ನೋಟ ಜನಕೆ ದುಂ ೩

ಹೆಚ್ಚಿನ ಸಖಿಯರು ಸ್ವಚ್ಛದಿ ಫಣಿಯೊಳು
ಹಚ್ಚಿ ಬಟ್ಟಿನ ರೇಖಾ ಚುಚ್ಚಿಹರು | ಮೇಲೆ
ಅಚ್ಚ ಕಸ್ತುರಿತಿಲಕ ಹಚ್ಚಿಹರು | ಜಾತ್ರಿ

ವೆಚ್ಚಕೆ ಪೊನ್ಗಳ ಬಿಚ್ಚಿಹರು | ತಮ್ಮ ॥
ಇಚ್ಚಿಗ ಪುರುಷರ ಮೆಚ್ಚಿಲೆ ಕರಕೊಂಡು
ಮುಚ್ಚಖಂಡಿಗೆ ಬಂದಾರುತ್ಸಾಹದಿಂದ ದುಂ ೪

ಮುಟ್ಟಿದರೀಗಳೆ ಕೆಟ್ಟೀತೆಂಬುವ ಮೈಗೆ
ಪಟ್ಟಿ ಪೀತಾಂಬರ ನುಟ್ಟಿಹರು | ತೋಳ್ಗೆ
ನಟ್ಟಿಹ ಕುಪ್ಪಸ ತೊಟ್ಟಿಹರು | ಮನ-

ಕೆಷ್ಟು ಬಂದಷ್ಟೊಸ್ತ ನಿಟ್ಟಿಹರು | ಮುನ್ನ
ದೃಷ್ಟಿಲೆ ನೋಡಿನಾ ನೆಷ್ಟಂತ ವರ್ಣಿಸ
ಲೊಟ್ಟಿಗೆ ಚೆಲ್ವಿಕೆ ಘಟ್ಟಿಗಳೆನಲು ದುಂ ೫

ಕಾಲಸರ್ಪಳಿರುಳಿ ಕಾಲಂದುಗಿಯಗೆಜ್ಜಿ
ಕಾಲುಂಗರಣುಮೆಂಟು ಪೊಲುಗಳು ಮೇಲೆ | ವಜ್ರ
ನೀಲದುಂಗರೆ ಮುತ್ತಿ ನೋಲೆಗಳು | ಕಂಠ

ಮಾಲೆಯ ಪದಕ ಜೋಮಾಲಿಗಳು | ಇಂಥ ॥
ಮೇಲಾಭರಣನಿಟ್ಟು ಲೋಲ್ಯಾಡುತಲಿ ಚೆಲ್ವ
ಬಾಲೆಯರು ಬರುವ ವಿಶಾಲವೇನಸೆಂಬೆನೊ ದುಂ ೬

ಹೆರಳು ರಾಗುಟಿ ಚೌರಿ, ಗಿಳೆಗಳೆಡಬಲಕ
ಚಳತುಂಬ್ಹತಚ್ಚಿದ ಚೆಲ್ಡ ಚೌಕಳಿಯು | ಮೂಗಿ
ನೊಳುನತ್ತು ಮತ್ತಿನ ಜೊಳಜೊಳಿಯು | ಕರ-

ಗಳಿಗಿಟ್ಟಿ ಕಡಗ ಅಂಕಣ ಬಳಿಯು | ಕೊರ ||
ಳೊಳುಪಟ್ಟಿ ಮುತ್ತಿನೇಕಾವಳಿ ವಸ್ತ-
ಗಳನಿಟ್ಟು ನೀಲಕುಂತಳೆಯರು ಬರಲು | ದುಂ ೭

ಹರಳು ಕೆಚ್ಚಿದ ಪಟ್ಟಿ, ಸರಗಿ ಪುತ್ಥಳಿ ನೆಲ್ಲಿ
ಸರ ಚಿಂತಾಕ ಮುತ್ತಿನ್ಹಾರಗಳು | ದೋರೆ
ಹರಡಿ ಕೈಕಟ್ಟು ಕೈಹಾರಗಳು | ವಂಕಿ

ಮುರಡಿ ಸರ್ಪಳಿ ತೊಳ್ಪಾಪೂರಿಗಳು | ಮೀನ ॥
ಹಿರಿಪಿಲ್ಲಿ ಕಿರಿಪಿಲ್ಲಿ ಸುರಳಿ ಸಹಿತವಾಗಿ
ಪರಿಪರಿ ವಸ್ತವ ಧರಿಸಿಕೊಂಡಿಹರು ದುಂ ೮

ಜಾಣೇರು ಸುಗುಣ ನಿಶ್ರೇಣೇರು ಕಳಾಹಿ
ವೇಣೇರು ಪಲ್ಲವ ಪಾಣಿಯರು | ಮೃದು
ವಾಣೇರು ಮಾನ ಪ್ರಮಾಣಿಯರು | ಕರ

ತ್ರಾಣೇರು ಘನ ಧುರೀಣಿಯರು | ಸುಪ್ರ
ವೇಣೇರು ಮನ್ಮಥನಾಣೇರು ಇನ್ನ ಈ
ಕ್ಷೋಣಿಯೊಳೆಲ್ಲಿ ನಾ ಕಾಣೆ ನಿಂಥವರ ದುಂ ೯

ಕಂಬಕಂಧರ ಮರಿ ದುಂಬಿ ಕಂಗುರಳಿಯರು
ಬಿಂಬಾಧರದ ಸೊನಿತುಂಬಿಯರು ಬಣ್ಣ
ಲಿಂಬಿಯಹಣ್ಣೆರಕದ ಬೊಂಬಿಯರು | ಸ್ವರ್ಣ

ಕುಂಬ ಕುಚದ ಮಹಾರಂಬಿಯರು | ಸರ್ವ ॥
ಸಂಭ್ರಮ ದಿನದಲ್ಲಿ ಕುಂಭಿನಿಯೊಳು ಪೊಸ
ತೆಂಬಂತೆ ತೋರಿದರಂಬುಜಾಕ್ಷಿಯರು ದುಂ ೧೦

ಬೆದರಿದೆರಳಿನೋಟ, ಕದಪು ಕನ್ನಡಿ ನಡಿ-
ಮದಗಜ ಬಟುತರ ವದನೀಯರು | ಕೆಂಪ
ದಧರಮಲ್ಲಿಗಿ ಮಗ್ಗಿರದಸೀಯರು | ಚೆಲ್ವ

ಮದನನ ಕದನಕ್ಕೆ ಸದನೀಯರು | ಮಾಡು |
ಹದರೀಗ ನೋಡುವ ನದರೀಗೆ ಇನ್ನೊಬ್ಬ
ರಿದರಿಲ್ಲವೆಂಬುವ ಚದರಿಯರಿರಲು ದುಂ ೧೧

ಪುಂಡತನದಿ ಸೊಕ್ಕಿಕೊಂಡಿರ್ದ ಹರಿಯದ
ಮಿಂಡಿಯರ್ಕುಚಲೊಪ್ಪು ಚಂಡುಗಳು| ಒಳ್ಳೆ
ದುಂಡ ಕಟದ ಗೋಲಿಗುಂಡಗಳು | ಮುತ್ತಿ-

ನುಂಡಿಯು ಕನಕದ ಗಿಂಡಿಗಳು | ಇಂಥ ||
ಮಿಂಡೆದ್ದ ಮೊಲೆಗಳ ಸಂಡು ವಿಟರು ಮರುಳು
ಗೊಂಡು ಬೆನ್ಹತ್ತುವ ಭಂಡ ನಾನೆಂಬೆ ದುಂ ೧೨

ನೀಟ್ಕುಚಗಳಿಗೊಳ್ಳೆ ದಿಟ್ಕಾಂಬುಮಾಂಜರ
ಪಾಟ್ಕುಪ್ಪಸವ ತೊಟ್ಟು ಧಾಟ್ಕಾಂಬುವರು | ರತಿ
ಬ್ಯಾಟ್ಕಿಂತ ಇವರೊಳ್ಳೆ ಘಾಟ್ಕಾಂಬುವರು | ಕಾಮ-

ನಾಟ್ಕಂತು ನೋಡಲು ಝಾಟ್ಕಾಂಬುವರು | ತಮ್ಮ ||
ಕೂಟ್ಕಸೋತವರ ಮೇಲೆ ಕಾಟ್ಕೈಯನಡಿಸುವರು
ಕಾಟ್ಕನುಳ್ಳಂತ ನಾಟ್ಯ ಸಖಿಯರು ದುಂ ೧೩

ಹಾಡೂವರೆಲ್ಲರು ತಲೆಗೂಡುವರು ಸರಸಗ-
ಳಾಡುವರು ಶಿರವನಲ್ಲಾಡುವರಯ್ಯ | ಮಂದಿ
ನೋಡುವರು ಹಾಸ್ಯ ಮಾಡುವರಯ್ಯ | ಬಡಿ-

ದಾಡುವರು ಕೈಹೊಡಿದೋಡುವರಯ್ಯ | ಸುಳಿ ||
ದಾಡುವರು ಸವಿಮಾತನಾಡವರು ಖರ್ಚಿಗೆ
ಬೇಡುವರು ವಿಟಗಾರನ ಕಾಡುವರು ಬಿಡದೆ ದುಂ ೧೪

ಚೊಕ್ಕಟವಾದಂತ ಬೆಂಡು ಬೆನಕ ಬರ್ಪೆ
ತುಕ್ಕಡಿ ಕಲ್ಯಾಣಿ ಶಾವಿಗಳು || ಮನ-
ಕಕ್ಕರ ತೋರುವ ಬುಂದೆಗಳು | ಕರ-

ದಿಕ್ಕಿದ ಜಿಲ್ಪಿಲಿ ಲಡ್ಡುಗಳು | ಚಿನ್ನಿ ||
ಸಕ್ಕರಿ ಬದುಕನ್ನು ಸೊಕ್ಕ ಜವ್ವನಿಯರು
ರೊಕ್ಕಗಳನು ಕೊಟ್ಟು ತಕ್ಕೊಂಬುತಿಹರು ದುಂ ೧೫

ಚೂರ್ಮರಿ ಬುಂದೇವು, ಪೇರ್ಮೊದಲಾಗಿ ವಿ-
ಚಾರ್ಮಾಡಿ ತರಿಸಿ ತಯಾರಾಡ್ಮುತ | ವಿಟ-
ಗಾರ್ಮಂದಿ ಕೂಡ ಫಲಾರ್ಮಾಡುತ | ಬಹು

ಪೇರ್ಮಾಡಿ ತಿನಿಸು ತಯಾರ್ಮಾಡುತ | ಮಹಾ ||
ಕೂರ್ಮಿ ಇಂತು ಸವುಪ ಕಾರ್ಮಾಡಿ ಹೊನ್ನಿನ
ಕಾರ್ಮಳಿ ಸುರಿಸುವ ವಾರ್ಮಡದಿಯರು ದುಂ ೧೬

ಜಾತ್ಕಾಣಿ ನತ್ಕುಣಿ ಸೂತ್ಕಣ್ಗಳ ತಿರ
ವೂತ್ಕಯ್ಯಾ ಸೊನ್ನಿ ಮಾಡು ಬೇತ್ಕಾರರು | ಅತಿ
ಪ್ರೀತ್ಕಾಣಿಸುವ ಸವಿಮಾತ್ಕಾರರು | ಬರ-

ವೂತ್ಕಲಿತ್ಹಾಡು ಸಂಗೀತ್ಕಾರರು | ತಾನೆ ||
ಸೋತ್ಕರದಂಗ ಮಾಡಿ ಘಾತ್ಕದಿ ಸುಲಕೊಂಬು
ಯಾತ್ಕೇನು ಕಡಿಮಿಲ್ಲ ಜಾತ್ಕ ಸಖಿಯರು ದುಂ ೧೭

ತರುಳ್ಮಣಿಯರು ಮಂದಿ, ಮರುಳ್ಮಾಡು ನೆವದಿಂದ
ಎರಳಿಮರಿ ನೋಟಾದಿ ಹೊರಳಿ ನೋಡಲು | ತುದಿ
ಬೆರಳು ಮೊನೆಯಿಂದೆ ಮುಂಗುರಳು ನೀಡಲು | ಚೆಲ್ವ

ಕೊರಳು ಮಧ್ಯದ್ಹಾರವ ಸರಳ ಮಾಡಿಡಲು | ಕಂಡು ||
ದುರುಳ ಮಾರ ಹೊಡುವಂಥ ಸುರಮೊನಿ ಬೆನ್ನಿಗೆ
ನೆರಳ ಮನದೊಳು ಹಗಲಿರುಳು ಮರಿಯಾದೆ ದುಂ ೧೮

ರೇಸ್ಮಿಯಿಂದ್ಮಾಡುವ ಹಾಸ್ಮಲಗು ಸಾಮಾನ
ದಾಸ್ಮಡದಿಯರಿಂದ ಖಾಸ್ಮಾಡಿಸಿ | ತಂದು
ಹಾಸ್ಮಂಚದೊಳು ಹಾಕ್ಸಿ ಬೇಸ್ಮಾಡಿಸಿ | ಒಳ್ಳೆ

ಬಾಸ ಮಲ್ಲಿಗೆಯ ಸೂಸ್ಮಾಡಿಸಿ | ವಿಟಿರ್‌
ಏಸ್ಮಂದಿ ಬಂದರ ನಾಟಕ ವಿಲಾಸದಿ
ಮೋಸ್ಮಾಡಿ ತೋರಿಸು ವಿಲಾಸ್ಮಡದಿಯರು ದುಂ ೧೯

ಎಲ್ಲ ಕ್ಷೇತ್ರಗಳೊಳು ಬಲ್ಲಿದ ಮುಚಖಂಡಿ
ಅಲ್ಲೆ ಕಾಮಿನಿಯರ ಥಾಟವನು | ತಮ್ಮ
ನಲ್ಲನ ಕರಿಸುವ ಬ್ಯಾಟವನು | ಅವ-

ರಲ್ಲಿ ಮಾಡಿದ ಮೋಹದಾಟವನು | ಹೇಮ ||
ಗಲ್ಲೋಳು ಗುರುವಂಜನೊಲ್ಮಿಯಿಂದಿರುವಂಥ
ಅಲ್ಲಮ ಕಂಡಿದನೆಲ್ಲ ಪೇಳಿದನು ದುಂ ೨೦
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...