Home / ಕವನ / ಕವಿತೆ / ವಿದ್ಯಾರಣ್ಯ

ವಿದ್ಯಾರಣ್ಯ

ಪರಶಿವನು ವರತಪವನೆಸಗಿದನು ವನದಲ್ಲಿ
ಗಿರಿಕನ್ಯೆ ಪಾರ್ವತಿಯ ಶುಶ್ರೂಷೆಯಲ್ಲಿ!
ಚಿರಕಾಲ ಸಾಗದೆಯೆ ಮನಸೋತ ವನಿತೆಯಲಿ
ಜಗವ ಮುಳುಗಿಸಿದ ಬೆಂಕಿ ಬೇಗುದಿಯಲ್ಲಿ ೧

ಯತಿಯೆ! ವಿದ್ಯಾರಣ್ಯ! ಕುಳಿತಿರುವೆ ತಪದಲ್ಲಿ
ತರುಣಿಮಣಿ ತುಂಗಭದ್ರೆಯ ಸೇವೆಯಲ್ಲಿ!
ಮನವಿನಿತು ಚಲಿಸದೆಯೆ ವರಯೋಗ ಮೌನದಲಿ
ಸಾಧಿಸಲು ಮುಕ್ತಿಯನು ಸ್ವಾತಂತ್ರ್ಯದಲ್ಲಿ ೨

ತುಂಗಭದ್ರೆಯ ತೆರೆಯ ಮಂಜುಳದ ನಾದದಲಿ
ಗಿಳಿವಿಂಡಿನಾ ಚಿಲಿಮಿಲಿಯ ಮೆಲ್ಲುಲಿಯಲಿ
ಕೋಗಿಲೆಯ ಕಲಕಂಠ ಮಧುರತರ ಗಾನದಲಿ
ವೈರಾಗ್ಯ ಸಾಧನೆಯ ಹಿಡಿದೆ ಯೋಗದಲ್ಲಿ ೩

ನದಿಯ ಕಲರವ ನಿನ್ನ ಜಪಮಾಲೆ ಮಂತ್ರಗಳು
ಅರಗಿಣಿಯ ಸವಿನುಡಿಯೆ ವೇದಘೋಷಗಳು
ಕೋಗಿಲೆಯ ಸವಿಗಾನ ಮೊರೆಯುತಿಹ ಓಂಕಾರ
ಸಂನ್ಯಾಸಿ ನಿನ್ನ ಮನವೇ ನಿರ್ವಿಕಾರ! ೪

ಹಿಂದಲ್ಲಿ ಪರಶಿವನು ತಪಗೆಟ್ಟ ಕತದಿಂದ
ಬಂದಿಹರೊ! ವಿದ್ಯಾರಣ್ಯ ರೂಪದಲಿಂದು!
ತಪಗೆಯ್ದು ಪರಿಪೂರ್ಣ ಸಿದ್ಧಿಯನು ಪಡೆಯಲೆಂದು
ಕರ್ಣಾಟದೇಕೀಕರಣವೇ ಗುರಿಯೆಂದು. ೫

ಪಂಪಾಸರಸಿನಲಿ ಈಜುತಿರುವಾ ಕಲಹಂಸ
ಪದಗತಿಯ ವೈಖರಿಯ ನರಿಯೆ ಪರಮಹಂಸ!
ನಿನ್ನ ವೈರಾಗ್ಯ ಗುರಿಯೇನೊ! ಯತಿರಾಜಹಂಸ!
ರಾಜಯೋಗವ ಹಿಡಿದೆ ಯತಿಕುಲೋತ್ತಂಸ! ೬

ಹುಕ್ಕ ಬಕ್ಕರ ಹೂಡಿದೆಯ ರಾಜ್ಯರಥದಲ್ಲಿ!
ಸಂನ್ಯಾಸಿ ಸಾರಥಿಯು ನೀನೆ ಜಗದಲ್ಲಿ!
ಒಕ್ಕಲಿಕ್ಕಿದೆ ಧರ್ಮದ್ರೋಹಿಗಳ ಛಲದಲ್ಲಿ
ಕನ್ನಡದ ಸಾಮ್ರಾಜ್ಯ ದೇವಿಯಡಿಯಲ್ಲಿ ೭

ರಾಜಯೋಗವು ಭಕ್ತಿಯೋಗವು ಕರ್ಮಯೋಗವು
ಕೂಡಿದಾ ಬ್ರಹ್ಮತೇಜೋಮೂರ್ತಿ ನಮಿಪೆ!
ಹರಸು ಕನ್ನಡನಾಡಿನೇಳ್ಗೆಯನು ಯತಿವರನೆ!
ಶಿರಬಾಗಿ ನಮಿಸುವೆನು ವೈರಾಗ್ಯಮೂರ್ತಿಯೇ ೮
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...