Home / ಕವನ / ಕವಿತೆ / ಏಡನ್‌

ಏಡನ್‌

ಮುಗಿಲುದ್ದ ನಿಗಿನಿಗಿ ಕೆಂಡದಂಥ ನೆಲದೊಳಗಿಂದ ನೆಗೆಯುತಿವೆ ನೋಡು,-
ಗುಡ್ಡ ದಿನ್ನೆಗಳು, ಪರ್ವತಗಳು, ಪರ್ವತಾವಳಿಗಳು!
ಭೂಮಿತಿಯ ನೆನೆದು ದೇವನಿಟ್ಟ ತ್ರಿಕೋಣಾಕೃತಿಗಳಂತೆ,-
ಉಸುಬಿನರಣ್ಯದಿ ಕಾವಲು ನಿಂತ ಹಿರಣ್ಯಕಶ್ಯಪನಂತೆ!
ಗಿಡವಿಲ್ಲ ಬಳ್ಳಿಯಿಲ್ಲ, ಹಾಳು ಹಾಳು! ಬೀಳು ಬೀಳು!
ವೃಕ್ಷವಿಲ್ಲ! ರುಕ್ಷ! ರುಕ್ಷ! ಹೊಗಿ! ಹೊಗಿ! ನಿಗಿ ನಿಗಿ!
ಹಸಿರ ಹೆಸರಿಲ್ಲ, ತಣ್ಣುಸಿರು ತಣ್ಣೆಳಲಿಲ್ಲ, ತೊಯ್ದ ಮಳಲಿಲ್ಲ,-
ನೀರಡಿಸಿ ಚಾಚಿದ ನಾಲಗೆಯಿದು! ಏಡನ್ನು!

ಮುನ್ನೀರ ಹತ್ತಿರ ನಿಂತು ಇಷ್ಟು ನೀರಡಿಸಿತೇ ನೆಲವು?
ಇಲ್ಲಿ ನೀರೆಲ್ಲಿ? ಉಪ್ಪಿನರಣ್ಯವಿದು!
ನೀರಡವಿಯ ಬದಿಗೆ ಉಸುಬಿನ ಬಯಲ ಹೊಯಲು!
ಇಲ್ಲಿಯ ಕೆರೆ ಬರಿದು! ಬಾವಿ ಬರಿದು! ಕುಂಡ ತೆರವು! ಹೊಂಡ ತೆರವು!
ಹನಿಹನಿ ನೀರನರಸಿ ಅಂಡಲೆಯುತಿದೆ ನೋಡು, ಜನದನದ ಜಂಗುಳಿಯು!
ಅತ್ತಕಡೆ ಬಿದ್ದರೆ ಕೆಂಡದಂಥುಸುಬು! ಇತ್ತ ಜಲಸಮಾಧಿ!
ಅರಣ್ಯದ ಹಡಗವೇ ಪಶುವಿಲ್ಲಿ-ಒಂಟಿಯಾದ ಒಂಟಿ!
ಅದೇ ಎತ್ತು! ಅದೇ ಕರು! ಅದೇ ಎಮ್ಮೆ! ಅದೇ ಆಕಳು!
ಅಲ್ಲಿಯ ನರಪ್ರಾಣಿ ಸಹ ಒಂಟಿಯಂತೆ ಗೋಣೆತ್ತಿ ನೋಡುವನು.
ಪರಿಧಾನದಿ ಮೃಗಜಲವ ಕಂಡು ಬೆನ್ನಟ್ಟಿ ಬಿಸುಸುಯ್ಯುವನು.
ಎಂಥ ಭಯಂಕರ ತಾಪ! ಎಂಥ ಭಯಂಕರ ಶಾಪ!!

ಏಡಿಯಂತೆ ಏಡನ್ನನು ಹಿಡಿದ ಗುಡ್ಡದ ಕೆಳಗೆ
ಗಿಡ್ಡದಾಗಿ ನಿಂತಿದೆ ನೋಡು,-ಬ್ರಿಟನ್ನಿನ ಬ೦ದರ! ಕಡ್ಡಿಯ ಹಂದರ!
ಸಾಮ್ರಾಜ್ಯವೈಭವವೇ! ಮಣ್ಣು ಮುಕ್ಕಿಲ್ಲಿ ಬಂದು.
ಉಸುಬಿನ ಕಣಗಳನ್ನೆಣಿನು! ಮರಣದ ಪಾಠವನ್ನು ಕಲಿ!
ಹೋಲಿಸು ನಿನ್ನ ಸಂಪತ್ತನ್ನು ಈ ಹಾಳಿನೈಸಿರಿಯೊಡನೆ.
ಇದರ ಸಂಯಮ ನಿನಗೆ ಸಂಧಿಸೀತೆ?
ಇದರ ತಾಳ್ಮೆಯ ಗುಟ್ಟು ನಿನಗೆ ತುಸುವಾದರೂ ತಿಳಿದೀತೆ?
ಈ ಗುಡ್ಡದಡಿಗೆ ನಿನ್ನ ಮನೆಗಳು ಗುಬ್ಬಿಮನೆಗಿಂತ ಕಡೆ!
ಸುಡು ಅವುಗಳನು! ಬೆಂಕಿ ಹಚ್ಚು! ಅರಣ್ಯದಲಿ ತಿರುಗು ಅರಬನಂತೆ!
ಇಲ್ಲಿ ಬೇಡ ನಿನ್ನ ಸೊಕ್ಕು. ನಿನ್ನ ಸೆಡವಿಗೆ ಎಡೆಯಿಲ್ಲಿಲ್ಲಿ.
ಕಿತ್ತು ನಿನ್ನ೦ಗಡಿಯ! ಹದ್ದುಪಾರಾಗು ಬಿಟ್ಟೀ ಗಡಿಯ!
ನಿನ್ನ ಗರ್ವಭಂಗಕ್ಕೆ ಹೆಚ್ಚೇನು ಬೇಕು? ಏಡನ್ನಿನ ಗುಡ್ಡವೊಂದು ಸಾಕು!

ಈ ಉಸುಬಿನ ಬೈಲಿಗೆ ಹೊಸಬನಾದ ನನಗೆ ಹೂಳೆಯುವದು ಅರ್ಥವೊಂದು.
ನೀರಿಲ್ಲದ ಬೆಟ್ಟಗಳ ನಡುವೆ ಬೇರೂರಿ ಬೆಳೆದ ಆಲವ ನೋಡು!
ಸಾವಿರ ವರುಷ ಸೂರ್ಯನಡಿಗೆ ನೀರಡಿಸಿ ಮಲಗಿತ್ತು ಅರಬ್ಬಿ ದೇಶ!
ಆಗ ತಣಿಸಿದನದರುದರವನು ಪೈಗಂಬರನು ಹುಟ್ಟಿ.
ಆಂದು ಅರಬ್ಬಿಯು ಕುಡಿದ ನೀರಿಗೆ ಸಮುದ್ರಗಳು ಬತ್ತಿದವು,
ಆರಬು ಹಿಂಗಿತ್ತು, ಭೂಮಿಗಿಳಿದಿದ್ದ ಚಂದ್ರ!
ಜಗದ ನಂದನವನಗಳೆಲ್ಲ ಅರಬರ ಕೈವಶವಾದವಂದು!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...