ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು –
“ಹತ್ತೂರು ಕೊಡುತ್ತೇನೆ, ಮುಖತೋರಿಸು.”

“ಹತ್ತೂರು ಕೊಟ್ಟರೂ ನನ್ನ ನತ್ತಿನ ಬೆಲೆಯಾಗುವುದಿಲ್ಲ.  ಅತ್ತೆಯ ಹೊಟ್ಟೆಯಲ್ಲಿ ಹುಟ್ಟಿದವನು ಪ್ರತ್ಯಕ್ಷ ಅರ್ಜುನನೇ ಆಗಿದ್ದಾನೆ. ಆತನ ಕಾಲಕೆರವಿನ ಬೆಲೆ ನಿನಗಿಲ್ಲ” ಎಂದು ಖಂಡತುಂಡವಾಗಿ ನುಡಿದಳು ಸಂಗಮ್ಮ.  ಆದರೇನು, ಹಸಿದ ಹುಲಿಯನ್ನು ಕೆಣಕಿದೆನಲ್ಲ ಎಂದು ಎದೆಗುದಿ ಉಂಟಾಗದೆ ಇರಲಿಲ್ಲ ಆಕೆಗೆ.

ಹೊಳೆಗೆ ಹೇಗೆ ಹೋದಳೋ ನೀರು ಹೇಗೆ ತುಂಬಿದಳೋ ಆಕೆಗೆ ತಿಳಿಯಲಿಲ್ಲ. ತುಂಬಿದ ಕೊಡವನ್ನು ತಲೆಯಮೇಲೆ ಹೊತ್ತುದೇ ತಡ, ಗಾಳಿವೇಗದಿಂದ ಬಂದು ಮನೆಯನ್ನು ಸೇರಿದಳು. ಹೊಟ್ಟೆಯಲ್ಲಿ ಸಾಸಿವೆಯೆಣ್ಣೆ ಕಲೆಸುತ್ತಿತ್ತು.

ಮನೆಗೆ ಬಂದು ನೀರುಕೊಡವನ್ನು ಇಳುಹಿದವಳೇ ತಲೆಕಟ್ಟಿಕೊಂಡು ಸಂಗವ್ವ ಮಲಗಿಯೇಬಿಟ್ಟಳು.

ಕೆಲಸಕ್ಕೆ ಹೋದ ಮಾವಯ್ಯನು ಮನೆಗೆ ಬಂದು, ಸಂಗವ್ವ ಮಲಗಿದ್ದನ್ನು ಕಂಡನು. ತಲೆದಿಂಬಿನ ಬಳಿ ನಿಂತುಕೊಂಡು – “ಯಾಕೆ ಸಂಗಮ್ಮ ಮಲಗಿರುವೆಯಲ್ಲ” ಎಂದನು.

“ಕೈನೋವು, ಕಾಲುನೋವು. ವಿಚಿತ್ರವಾದ ಹಲವು ನೋವು ಮಾವಯ್ಯ.  ಸಾಯುತ್ತೇನೆ, ನೋವು ತಾಳಲಾಸಲ್ಲ – ತವರವರಿಗೆ ಹೇಳಿಕಳಿಸಿರಿ” ವಿನಯದಿಂದ ಸಂಗವ್ವ ನುಡಿದಳು.

ಕೈಹಿಡಿದ ಪತಿದೇವರು ಹೊರಗಿನಿಂದ ಬಂದು ಮಂಚದ ಬಳಿ ನಿಂತು ಕೇಳುತ್ತಾನೆ – “ಯಾಕೆ, ಮಲಗಿಕೊಂಡೆ ಕೆಳದಿ ?”

ಏನು ಹೇಳಲಿ, ಸಂದುಸಂದಿನ ನೋವು. ಸೂಜಿಯೂರುವಸ್ಟು ಸಹ ಸ್ಥಳ ನೋವಿಲ್ಲದಿಲ್ಲ. ಸಾಯುತ್ತೇನೆ ನನ್ನ ದೊರೆಯೇ ಹೆಚ್ಚಿನ ನೋವು !

ಹಾದಿಬೀದಿ ಉಡುಗಿಸಿ, ಹಾಲಿನ ಚಳಿಕೊಡಿರಿ. ಹಾದಿಯಲ್ಲಿ ನಿಂತವರೆಲ್ಲ ಬದಿಗಾಗಿರಿ. ಸಂಗಮ್ಮನ ತಾಯಿ ಅಳುತ್ತ ಬರುತ್ತಿದ್ದಾಳೆ.

ತಿಪ್ಪೆಯನ್ನು ಉಡುಗಿಸಿರಿ, ತುಪ್ಪದ ಚಳಿಕೊಡಿರಿ. ತಿಪ್ಪೆಯೊಳಗಿನ ಮಂದಿಯೆಲ್ಲ ಬದಿಗಾಗಿರಿ. ಸಂಗಮ್ಮನ ತಂದೆ ಅಳುತ್ತ ಬರುತ್ತಿದ್ದಾನೆ.

ಸಂಜ್ಞೆಯಿಂದ ತಾಯಿತಂದೆಗಳನ್ನು ಹತ್ತಿರಕ್ಕೆ ಕರೆದು ಕಿವಿಯಲ್ಲಿ ಹೇಳಿದಳು – ತಾನು ಹೇಳಬೇಕಾದುದನ್ನು. ಆ ಜೀವಬಿಟ್ಟು ಮೃತ್ಯುವನ್ನು ಗೆದ್ದಳು. ಮುಗಿಲ ದಾರಿಯಲ್ಲಿ ನಿಂತು ಕಿತ್ತೂರದೊರೆಯನ್ನು ಈಡಾಡಿದಳು.

ತಲೆಯಲ್ಲಿ ಚಂಡುಹೂವಿನ ದಂಡೆಯಿಂದ ಶೋಭಿಸುತ್ತಿರುವ ಸಂಗಮ್ಮನನ್ನು ಬಾಳೆಯ ಬನದಲ್ಲಿ ಬಯತಿರಿಸಿದರು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು