Home / ಕವನ / ಕವಿತೆ / ವಚನ ಸಂಪತ್ತು

ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು
ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು ||

ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ
ವಚನವೊಂದರಲಿ ಕಂಡುಬರುತಿದೆ ಕಲ್ಪ ||

ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ
ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ||

ಕನ್ನಡದ ಪುಣ್ಯವದು ಹಣ್ಣಿಬಂದಿಹ ಕಾಲ
ಕನ್ನಡ ವಾಣಿ ಮನದಿಂಬುಗೊಂಡಿಹ ಕಾಲ ||

ಮಾತಿಗೆಟುಕದ ಭಾವ ಶಬ್ದದಲಿ ತುಂಬಿಟ್ಟು
ಚಿನ್ನರನ್ನಗಳಾಸ್ತಿ ಹರಸಿರುವೆ ನಮಗಿಟ್ಟು||

ನಿನ್ನ ಬಾಯಲಿ ನುಡಿಯು ಶ್ರೀಮಂತವಾಗಿತ್ತು
ನಿನ್ನ ಸಹವಾಸದಲಿ ನುಡಿಗೆ ಮೈ ಬೀಗಿತ್ತು ||

ತಲೆದಡವಿ ತಣಿಸಿತ್ತು ವಚನಾರ್ಥ ತಂಗಾಳಿ
ಮೈದಡವಿ ಸುಖಿಸಿತ್ತು ಸ್ವಚ್ಛಂದ ಸುಳಿಗಾಳಿ ||

ವಚನಗಳ ಬಿರುಗಾಳಿ ಒಮ್ಮೆ ಹುಡಿಯೋಡಿಸಿತು
ಒಮ್ಮೆ ಸುಟ್ಟುರಿಗಾಳಿ ದುರ್ಗಂಧವಡಗಿಸಿತು ||

ಮನೆಮನವ ತಟ್ಟಿತ್ತು ಸೊಡರು ಬೆಳ್ ಬೆಳಕಾಗಿ
ಮನಮನವ ತಟ್ಟಿತ್ತು ಮುದ್ದಿಡುವ ಶಿಶುವಾಗಿ ||

ದಿವ್ಯಲೋಕದ ಭಾವ ನೆಲಕಿಳಿಸಿ ತಂದಿತ್ತು
ಭವ್ಯರೊಳು ಸಲಿಗೆ ಸಲ್ಲಾಪಗಳಿಗಿಂಬಿತ್ತು ||

ವಚನದಲಿ ಹುದುಗಿರುವ ಪರುಷಮಣಿ ಬಲಗೊಂಡು
ಕಬ್ಬುನಕೆ ತಗಲಿ ಹೊನ್ನಾಗಿಸುವ ಪರಿಯೊಂದು ||

ನಿನ್ನ ವಚನವು ಹಾಲಹೊಳೆಯಾಗಿ ಹರಿದಿತ್ತು
ತೀರದಲಿ ಸಕ್ಕರೆಯ ಮಳಲಾಗಿ ಹರಹಿತ್ತು ||

ತವರಾಜದಂಥ ಕೆಸರಾಗಿತ್ತು ತಳದಲ್ಲಿ
ಸವಿದಿನಿಸು ರಸಿಕನಿಗೆ ಹರಿದೋಡಿ ಸವಿದಲ್ಲಿ ||

ಅನುಭಾವದೆಸಕಿನಲಿ ತುಂಬಿತ್ತು ಹೆಜ್ಜೇನು
ಹದವರಿತು ಸವಿಯೆ ಸಂಜೀವ ಸುಧೆ ಹೆಚ್ಚೇನು ||

ಮಾತುರೀತಿಗಳಲ್ಲಿ ಭಾವದಲಿ ಮಿಗಿಲಾಗಿ
ಶಾಶ್ವತದ ಸಾಹಿತ್ಯವೆನಿಸಿತ್ತು ಮುಗಿಲಾಗಿ

ಕಳೆದುಹೋದವು ಇಂದು ಎಂಟು ಶತಮಾನಗಳು
ಅಚ್ಚಳಿಯದುಳಿದಿಹವು ಮೈಗೊಂಡ ಹೊನ್ನುಗಳು ||

ಚಿಕ್ಕ ಮೂರುತಿಗಿಹುದು ಬಿತ್ತರದ ಘನಕೀರ್ತಿ
ಮಾತು ಮಾತಿಗು ಮಿಂಚಿ ಕಣ್ಕುಕ್ಕಿಸುವ ರೀತಿ ||

ಸಾಹಿತ್ಯ ಶಾರದೆಯ ಸಿರಿಮುಡಿಗೆ ಹೂವಾಗಿ
ಸತ್ತಿರುವರೆದೆ ಸೇರಿ ಕಳೆಯಿಡುವಕಾವಾಗಿ ||

ಅನುದಿನವು ಹೊಗರೇರಿ ಹೊಳೆಯುವದು ಈ ವಚನ
ಚಣಚಣವು ತಣಿಸುತಿದೆ ಅನುಭಾವದೀ ರಚನ ||

ವಚನ ಸುಂದರಿಯಲ್ಲ ಮನಸೆಳೆವ ನಲ್ಗೂಸು
ಎಂತು ಮುದ್ದಿಸಲದನು ಮನಕಾಗುವದು ಲೇಸು ||

ಸವಿದು ಮೆಲುಕಾಡಿಸಲು ಅರ್ಥ ಸ್ವಾರಸ್ಯವಿದೆ
ಎಣಿಸಿ ಯೋಚಿಸಿದಲ್ಲಿ ಬುದ್ಧಿ ವೈಶಾಲ್ಯವಿದೆ ||

ಕನ್ನಾಡ ಈ ಬೆಳೆಯು ಅಕ್ಷಯದ ಸಂಪತ್ತು
ಅಟ್ಟುಣ್ಣ ಬಲ್ಲವಗೆ ನೆತ್ತಿಗನ್ನವದಾಯ್ತು ||

ಯಾವ ಮನ್ವಂತರಕು ಈ ವಚನ ಕಲ್ಪತರು
ಕಳೆಯುವದು ಮಾನವನ ಬೆಕ್ಕಸದ ನಿಟ್ಟುಸಿರು ||
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...