Home / ಕವನ / ಕವಿತೆ / ಗಡಿಗಳ ಗೆರೆ ಕೊರೆಯಲಾರೆನು

ಗಡಿಗಳ ಗೆರೆ ಕೊರೆಯಲಾರೆನು

ಎಷ್ಟೊಂದು ನಕ್ಷತ್ರಗಳು
ಅಡ್ಡ ಬಂದವು ಸೂರ್ಯನ ಬೆಳಕಿಗೆ
ಕತ್ತಲೆಯನ್ನು ಕತ್ತರಿಸುವ
ಕೋಲ್ ಮಿಂಚನು ತುಂಡರಿಸಬಹುದೆ?
ಎಷ್ಟೊಂದು ಶಬ್ದ ಕಂಪನಗಳಾಗಿವೆ
ಕತ್ತಲೊಡಗಿನ ಭೂಮಿಯ ಗರ್ಭದಲಿ
ಅಂತರಂಗದ ಕತ್ತಲೆಗೆ ಓಡಿಸಲು
ನಿಶ್ಯಬ್ದದೊಳಗಣ ಶಬ್ದ ಚಿತ್ತಾರ
ಶಬ್ದವಿಲ್ಲ ಬೇರು ಬಿಡಲು ಬ್ರಹ್ಮವೃಕ್ಷಕೆ

ಬದುಕು ಧಾನಸ್ಥ ತಪಸ್ಸಿನ ಮಾದರಿ
ಅಂತಃಕರಣ ತುಂಬಿ ಕಣಕಣದಲಿ
ತನ್ನಾಚೆ ದಿಟ್ಟಿಸುವ ಅಕ್ಷಿಪಟಲದ ನೋಟ
ಕಾಲಮಾನದಾಚೆಗೂ ನುಡಿವ ಸಾಕ್ಷಿಭೂತ
ಅಂತರಂಗ ಅರಳಿಸುವ ಮಹಾಗುರು
ಅರಿವಿನ ಜೋಳಿಗೆಯಲಿ ಹಸಿವಿನ ಹಪಹಪಿ
ಅಕ್ಷರಗಳು ಬಿತ್ತರಿಸುವ ವಿಚಾರವಾದದ ಲಹರಿ
ಸಮತಾವಾದದ ಬೆಳಕಿನ ಕಿಂಡಿ.

ಚೆಲ್ಲಾಪಿಲ್ಲಿಯಾದ ಅಕ್ಷರಗಳಿಗೆ ಪದಗಳ ಹಂಗಿಲ್ಲ
ನಿನ್ನ ಬಣ್ಣಿಸುವ ಮಾತಿಗೂ ಹೊಳಪಿಲ್ಲ
ದಾರಿ ಕ್ರಮಿಸಿದೆ ಬಹುದೂರ ದೂರ..
ಬಾಳ ಬಯಲ ಅಂಗಳದಲಿ ನಿಂತು
ಎದೆಯ ಹಣತೆಯ ಮಂದ ಬೆಳಕಿನಲ್ಲಿ
ಕ್ರಮಿಸಿದ ಸುದೀರ್ಘ ಹಾದಿಯ ನೋಟ
ಅಂಕು ಡೊಂಕುಗಳ ಸಿಂಹಾವಲೋಕನ

ಕನ್ನಡದ ಕಂಪು ರಷ್ಯಾದವರೆಗೂ ಹರಡಿ
ರಾಷ್ಟ್ರಗಳ ಸ್ನೇಹ ಸೇತುಗಳ ಬಿಗಿ ಬಂಧ
ಸೋವಿಯತ್ ಲ್ಯಾಂಡಿನ ಗೌರವದ ಧಿರಿಸು
ತಾಯ್ನಾಡಿನ ನೆಹರು ಪ್ರಶಸ್ತಿಗಳ ಮುಡಿಗೇರಿಸಿ
ಅಸಂಖ್ಯಾತ ಶಿಷ್ಯ ಬಳಗದ ಗುರುವಾಗಿ
ಧಾರವಾಡದ ಕರ್ಮಭೂಮಿಯ ಕಿಂಕರವಾಗಿ
ವಟುವೃಕ್ಷದ ಬೇರು ಎಷ್ಟೊಂದು ಆಳ-ನೀರಾಳ

ದೀಪದಿಂದ ದೀಪ ಹಚ್ಚುವ ನೀಲಾಂಜನ
ಬೆಳಕು ಚೆಲ್ಲಿದೆ ಬುದ್ಧಪೂರ್ಣಿಮೆಯ ಬುದ್ಧಣ್ಣ
ಸುತ್ತ ಹರಡಿದೆ ನೋಡು ಪ್ರಚಂಡ ಪ್ರಭೆ
ಬೆಳಕೆಂದರೆ ದೀಪ, ದೀಪವೆಂದರೆ
ಹಿಂಗಮಿರೆಯೆಂಬ ಬೆಳಕಿನ ಸೆಳಕು
ಹಣತೆ, ಕಂದೀಲು, ಬಲ್ಬು, ದೀಪಗಳು
ಸೂರ್ಯ ಬೆಳಕಿಗೆಲ್ಲಿಯ ಸಾಟಿ ಹೇಳು?

ಉದಯರಾಗದಿಂದ ಉದಯಿಸಿದ ಸೂರ್ಯ
ಭೂಮಿಗೀತದಿಂದ ಬೈಲೋರಷ್ಯದವರೆಗೆ
ಹೊಸ ದಿಕ್ಕುಗಳ ಹುಡುಕಿದ ಸರದಾರನಿಗೆ
ದೇಶ, ಗಡಿ, ಭಾಷೆಗಳ ಗೆರೆ ಕೊರೆಯಲಾರೆನು.
ಹರಿವ ನದಿ, ಸುಳಿವ ಗಾಳಿ, ಸುಗಂಧಗಳಿಗೆ
ಬಂಧನದ ಕಟ್ಟುಗಳನು ಬಿಗಿಯಲಾರೆನು
ಸಮತಾವಾದದ ಸಂತ ಸಾಧಕನಿಗೆ
ಭಾಷೆ, ದೇಶ, ಗಡಿಗಳ ಗೆರೆ ಕೊರೆಯಲಾರೆನು
*****
(ಬುದ್ಧಣ್ಣ ಹಿಂಗಮಿರೆಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...