Home / ಕವನ / ಕವಿತೆ / ಗಡಿಗಳ ಗೆರೆ ಕೊರೆಯಲಾರೆನು

ಗಡಿಗಳ ಗೆರೆ ಕೊರೆಯಲಾರೆನು

ಎಷ್ಟೊಂದು ನಕ್ಷತ್ರಗಳು
ಅಡ್ಡ ಬಂದವು ಸೂರ್ಯನ ಬೆಳಕಿಗೆ
ಕತ್ತಲೆಯನ್ನು ಕತ್ತರಿಸುವ
ಕೋಲ್ ಮಿಂಚನು ತುಂಡರಿಸಬಹುದೆ?
ಎಷ್ಟೊಂದು ಶಬ್ದ ಕಂಪನಗಳಾಗಿವೆ
ಕತ್ತಲೊಡಗಿನ ಭೂಮಿಯ ಗರ್ಭದಲಿ
ಅಂತರಂಗದ ಕತ್ತಲೆಗೆ ಓಡಿಸಲು
ನಿಶ್ಯಬ್ದದೊಳಗಣ ಶಬ್ದ ಚಿತ್ತಾರ
ಶಬ್ದವಿಲ್ಲ ಬೇರು ಬಿಡಲು ಬ್ರಹ್ಮವೃಕ್ಷಕೆ

ಬದುಕು ಧಾನಸ್ಥ ತಪಸ್ಸಿನ ಮಾದರಿ
ಅಂತಃಕರಣ ತುಂಬಿ ಕಣಕಣದಲಿ
ತನ್ನಾಚೆ ದಿಟ್ಟಿಸುವ ಅಕ್ಷಿಪಟಲದ ನೋಟ
ಕಾಲಮಾನದಾಚೆಗೂ ನುಡಿವ ಸಾಕ್ಷಿಭೂತ
ಅಂತರಂಗ ಅರಳಿಸುವ ಮಹಾಗುರು
ಅರಿವಿನ ಜೋಳಿಗೆಯಲಿ ಹಸಿವಿನ ಹಪಹಪಿ
ಅಕ್ಷರಗಳು ಬಿತ್ತರಿಸುವ ವಿಚಾರವಾದದ ಲಹರಿ
ಸಮತಾವಾದದ ಬೆಳಕಿನ ಕಿಂಡಿ.

ಚೆಲ್ಲಾಪಿಲ್ಲಿಯಾದ ಅಕ್ಷರಗಳಿಗೆ ಪದಗಳ ಹಂಗಿಲ್ಲ
ನಿನ್ನ ಬಣ್ಣಿಸುವ ಮಾತಿಗೂ ಹೊಳಪಿಲ್ಲ
ದಾರಿ ಕ್ರಮಿಸಿದೆ ಬಹುದೂರ ದೂರ..
ಬಾಳ ಬಯಲ ಅಂಗಳದಲಿ ನಿಂತು
ಎದೆಯ ಹಣತೆಯ ಮಂದ ಬೆಳಕಿನಲ್ಲಿ
ಕ್ರಮಿಸಿದ ಸುದೀರ್ಘ ಹಾದಿಯ ನೋಟ
ಅಂಕು ಡೊಂಕುಗಳ ಸಿಂಹಾವಲೋಕನ

ಕನ್ನಡದ ಕಂಪು ರಷ್ಯಾದವರೆಗೂ ಹರಡಿ
ರಾಷ್ಟ್ರಗಳ ಸ್ನೇಹ ಸೇತುಗಳ ಬಿಗಿ ಬಂಧ
ಸೋವಿಯತ್ ಲ್ಯಾಂಡಿನ ಗೌರವದ ಧಿರಿಸು
ತಾಯ್ನಾಡಿನ ನೆಹರು ಪ್ರಶಸ್ತಿಗಳ ಮುಡಿಗೇರಿಸಿ
ಅಸಂಖ್ಯಾತ ಶಿಷ್ಯ ಬಳಗದ ಗುರುವಾಗಿ
ಧಾರವಾಡದ ಕರ್ಮಭೂಮಿಯ ಕಿಂಕರವಾಗಿ
ವಟುವೃಕ್ಷದ ಬೇರು ಎಷ್ಟೊಂದು ಆಳ-ನೀರಾಳ

ದೀಪದಿಂದ ದೀಪ ಹಚ್ಚುವ ನೀಲಾಂಜನ
ಬೆಳಕು ಚೆಲ್ಲಿದೆ ಬುದ್ಧಪೂರ್ಣಿಮೆಯ ಬುದ್ಧಣ್ಣ
ಸುತ್ತ ಹರಡಿದೆ ನೋಡು ಪ್ರಚಂಡ ಪ್ರಭೆ
ಬೆಳಕೆಂದರೆ ದೀಪ, ದೀಪವೆಂದರೆ
ಹಿಂಗಮಿರೆಯೆಂಬ ಬೆಳಕಿನ ಸೆಳಕು
ಹಣತೆ, ಕಂದೀಲು, ಬಲ್ಬು, ದೀಪಗಳು
ಸೂರ್ಯ ಬೆಳಕಿಗೆಲ್ಲಿಯ ಸಾಟಿ ಹೇಳು?

ಉದಯರಾಗದಿಂದ ಉದಯಿಸಿದ ಸೂರ್ಯ
ಭೂಮಿಗೀತದಿಂದ ಬೈಲೋರಷ್ಯದವರೆಗೆ
ಹೊಸ ದಿಕ್ಕುಗಳ ಹುಡುಕಿದ ಸರದಾರನಿಗೆ
ದೇಶ, ಗಡಿ, ಭಾಷೆಗಳ ಗೆರೆ ಕೊರೆಯಲಾರೆನು.
ಹರಿವ ನದಿ, ಸುಳಿವ ಗಾಳಿ, ಸುಗಂಧಗಳಿಗೆ
ಬಂಧನದ ಕಟ್ಟುಗಳನು ಬಿಗಿಯಲಾರೆನು
ಸಮತಾವಾದದ ಸಂತ ಸಾಧಕನಿಗೆ
ಭಾಷೆ, ದೇಶ, ಗಡಿಗಳ ಗೆರೆ ಕೊರೆಯಲಾರೆನು
*****
(ಬುದ್ಧಣ್ಣ ಹಿಂಗಮಿರೆಯವರ ಅಭಿನಂದನ ಗ್ರಂಥಕ್ಕಾಗಿ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...