Home / ಕವನ / ಕವಿತೆ / ಏನೆಂದು ಹಾಡಲಿ

ಏನೆಂದು ಹಾಡಲಿ

ಏನೆಂದು ಹಾಡಲೀ ಏನನ್ನು ಹಾಡಲೀ ನಿಮ್ಮ ಮುಂದೆ ನಿಂತು
ಒಡೆದ ಗಂಟಲಿಂದಾ ಬಿರಿದ ಒಣಾ ನಾಲಿಗಿಂದ ||ಪ||

ಕಣ್ಣು ಕಣ್ಣುಗಳ ಚಿಕ್ಕೆ ಕಾಂತಿಗಳು ನಂದಿ ನರಳುತಿರಲು
ಬಾನ ಚಿಕ್ಕೆಗಳ ಬೆಣ್ಣೆ ಚಂದ್ರಮನ ತೋರಿ ಹಾಡಲೇನು
ಮಣ್ಣ ಜೀವಗಳ ಬಳ್ಳಿ ಗಿಡಗಳಿಗೆ ಮುಳ್ಳುಹೋದರು ಮುಚ್ಚಿ
ಚುಚ್ಚುತಿರಲು ಆ ಸಗ್ಗ ನಂದನವ ಕೊಂಡು ಕೊನರಲೇನು ||೧||

ಎಲುಬು ಗೂಡುಗಳ ಹರಿದ ಚಿಂದಿಗಳ ಬಿಟ್ಟು ಸುತ್ತ ಮುತ್ತ
ಗುಲಾಬಿಯ ಕೆನ್ನೆ ತೊಂಡೆಗುಟಿ ಕನ್ಯೆ ಎಂದು ಕನವರಿಸಲೆ
ಕೊಳಚೆ ಕೊಂಪೆಗಳ ಮುರುಕು ಗೂಡುಗಳ ನೋಡೀ ನೋಡದಂತೆ
ಭವ್ಯ ಬಂಗಲೆಯ ದಿವ್ಯ ಗೋಪುರವ ಹಾಡಿ ಹೊಗಳುತಿರಲೆ ||೨||

ತುತ್ತನ್ನಕ್ಕಾಗಿ ಬೇಡಿ ಕಾಡುವ ಪುಟ್ಟ ತಿರುಪ ಕೈಯಿ
ಹೆಜ್ಜೆ ಹೆಜ್ಜೆಗೂ ಕಾಲ ತೊಡರಿರಲು ಹಾಡಲೆಲ್ಲಿ ಬಾಯಿ
ಅಂದದುಡಿಗೆಗಳ ಸೇಬುಗಲ್ಲಗಳ ಮಮ್ಮಿ ಡ್ಯಾಡಿ ಎನುವ
ದುಂಡು ದುಂಡಗಿನ ಧನಿಕ ಮಕ್ಕಳನು ಮೆಚ್ಚಿ ಹಾಡಲೇನು ||೩||

ನೂರು ಸಾವಿರದ ದೇವರುಗಳು ಕಚ್ಚಾಡಿ ಮೆರೆಯುವಿಲ್ಲಿ
ದೇವರುಗಳ ಸೃಷ್ಟಿಸಿದ ಮಾನವನ ಮರೆತ ನರಕದಲ್ಲಿ
ಸುತ್ತ ಜಗಕೆ ಕಿವಿ ಕಣ್ಣು ಮುಚ್ಚಿ ತೇಲ್ಗಣ್ಣ ಭಾವದಲ್ಲಿ
ದೇವ ಭಜನೆಯನು ನಾಮ ಕೀರ್ತನೆಯ ಕಟ್ಟಿ ಹಾಡಲೇನು ||೪||

ದುಡಿದು ದಣಿವ ಮೈ ರಕ್ತ ಬೆವರುಗಳ ಧಾರೆ ಧಾರೆಯಿಂದ
ಭಟ್ಟಿ ಉಳಿದ ಸೆರೆ ತುಂಬಿ ಕುಡಿಯುತಿಹ ದಣಿಯ ಹೊಗಳಲೇನು
ಮರುಳು ಕುರಿಗಳನು ಸವರಿ ನೇಯ್ದ ಕಂಬಳಿಯ ಗದ್ದುಗೆಯಲಿ
ಮೆರೆಯುತಿರುವ ನರಭಕ್ಷಕರನು ನಾ ಹೊಗಳಿ ಹಾಡಲೇನು ||೫||

ಸುತ್ತ ಮುತ್ತಿರಲು ಅಂಧಕಾರತೆಯು ಕತ್ತಲಲ್ಲಿ ಕುಳಿತು
ಎಲ್ಲ ಬೆಳ್ಳಗಿದೆ ಇದೇ ಬೆಳಕು ಎನ್ನುತ್ತ ಹಾಡಲೇನು
ಎಲ್ಲ ತೋಟಗದ್ದೆಗಳ ಚೆಲುವ ಹಲ ಹದ್ದು ಮುಕ್ಕುತಿರಲು
ಎಲ್ಲ ಅಂದ ಸುಂದರವು ಎಂದು ನಾ ಬಣ್ಣಿಸಿ ಹಾಡಲೇನು ||೬||

ಕೋಟೆ ಅರಮನೆಯ ಶಿಲ್ಪ ಸಿರಿಗಳನು ಕಟ್ಟಿದವರ ಮರೆತು
ಲೂಟಿ ಮಾಡಿ ಮೆರೆದಂಥ ರಾಜರುಗಳ ಚರಿತೆ ಹೊಗಳಲೇನು
ಕ್ರೌರ್ಯ ಹಿಂಸೆಗಳ ಬಾಯ್ಗಳಲ್ಲಿ ಜನ ಜೀವ ಮಿಡುಕುತಿರಲು
ದಯೆಯೆ ಧರ್ಮಕ್ಕೆ ಮೂಲವೆಂದು ಒಣ ಶಾಂತಿ ಪಠಿಸಲೇನು ||೭||

ಜಾತಿ ಭಾಷೆ ಕುಲ ಧರ್ಮ ದೈವಗಳ ಛಿದ್ರ ಛಿದ್ರ ನೆಲವ
ಭವ್ಯ ದಿವ್ಯ ಭಾರತವೆ ಎಂದು ಎದೆ ತುಂಬಿ ಹಾಡಲೇನು
ತಲೆತಲಾಂತರದ ಮೌಢ್ಯಬಳುವಳಿಯ ಕೊಳೆತು ನಿಂತ ಕೊಳವ
ಗಂಗೆ ತುಂಗೆಯರ ಪುಣ್ಯರಂಗೆಂದು ಹಾಡಿ ಹರಸಲೇನು ||೮||

ಬೆನ್ನಿಗಂಟಿರುವ ಬರಿಯ ಹೊಟ್ಟೆಗಳು ಬಿಕ್ಕಿ ಬಿಕ್ಕುತಿರಲು
ಬೊಜ್ಜು ಹೊಟ್ಟೆಗಳ ಕಮರು ಡೇಗು ಹಾಡುಗಳ ತೇಗಲೇನು
ಹಳ್ಳಿಪಾಡು ಹಾಡುವಾ ಹಕ್ಕಿ ಕುತ್ತಿಗೆಯ ಹಿಚುಕುತಿರಲು
ಡಿಳ್ಳಿದರಬಾರು ಮೋಡಿ ಮೆರಗುಗಳ ಹಾಡು ಕಿರುಚಲೇನು ||೯||

ಸತ್ಯ ಹೇಳಿದರೆ ಕುತ್ತು ಹೊರಿಸುವರು ಕತ್ತಿಯೊತ್ತಿ ಶಿರಕೆ
ಅದಕೆ ಹೆದರಿ ಬರಿ ಸುಳ್ಳು ಗೊಳ್ಳು ಶಬ್ದಗಳ ಬುರುಗು ಬಿಡಲೆ
ಹೇಳುವುದು ಒಂದು ಮಾಡುವುದು ಒಂದು ನಮ್ಮ ಧರ್ಮ ನೀತಿ
ಎಂದಿನಿಂದಲೋ ಬಂದ ರೀತಿ ಅದರಂತೆ ಬುರುಡೆ ಬಿಡಲೆ ||೧೦||

ಜನತೆ ಗಂಡ ಜನನೀತಿ ಹೆಂಡತಿಯು ಗಂಡನೆದುರೆ ಅವಳ
ಸೀರೆ ಹರಿದು ವ್ಯಭಿಚಾರ ಮಾಡಿದರು ಗಂಡ ಸುಮ್ಮನಿರಲು
ಜನರ ತಾಯಿಯನು ಕಿತ್ತಿತಿನುವ ತಾಯ್ಗಂಡರಾಳುತಿರಲು
ನಮ್ಮದೇಶ ಜನತಂತ್ರದೇಶ ಎನ್ನುತ್ತ ಹಾಡಲೇನು ||೧೧||

ಹಾಡು ಬೇಡ ಹಣ ಹೆಂಡ ತಿಂಡಿಕೊಡು ಓಟು ಹಾಕುತೀವಿ
ಓಟು ಹಾಕಿ ನೆಲ ಗೋರಿ ಗೋರಿ ಮುಲುಗುತ್ತ ಮಲಗುತೀವಿ
ಬಹಳ ಹಳೆಯ ಹುಳಿ ಹೆಂಡ ಧರ್ಮವಿದೆ ನಿಶೆಯಲ್ಲಿ ಬಾಳುತೀವಿ
ನಮ್ಮ ನಡೆಸಲಿಕೆ ಗುರುವು ಮಠವು ದೇವರುಗಳಿರುವರಲ್ಲ ||೧೨||

ಆಗಾಗ ಅವನು ಅವತರಿಸಿ ಬರುವ ನಮಗೇಕೆ ಚಿಂತೆಯೆಲ್ಲ
ಎನುತ ಮಲಗಿ ಸತ್ತಿಲ್ಲದಿರುವ ಈ ಜನರ ಮುಂದೆ ನಾನು
ಏನು ಹಾಡಲೀ ಎಂತು ಹಾಡಲೀ ಒಡೆದ ಗಂಟಲಿಂದ
ಬಿರಿದಾ ಒಣಾ ನಾಲಿಗಿಂದ ||೧೩||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...