Home / ಕವನ / ಅನುವಾದ / ಧೂರ್‍ತ ಒರಟು ಮುದುಕ

ಧೂರ್‍ತ ಒರಟು ಮುದುಕ

ಮೂಲ: ವಿಲಿಯಂ ಬಟ್ಲರ್ ಏಟ್ಸ್

‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ
ಮಲೆಗಳಲ್ಲೂ ಇಂಥ ಮೋಹ’
ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು
ಮುದುಕ ನುಡಿದನು ಹೀಗೆ ಮನವ.
“ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ
ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,
ಆಕಾಶದಲ್ಲಿರುವ ಆ ಮುದುಕನಿಂದ ನಾ
ಇಷ್ಟನ್ನೆ ಕೇಳುವುದು ನಲ್ಲೆ’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಏನು ಹಿತವೇ ಚಿನ್ನ ನಿನ್ನ ಮಾತುಗಳೆಲ್ಲ
ಉಳಿದಿದ್ದ ಕೊಡದೆ ಇರಬೇಡೇ;
ಹತ್ತ ಮುದುಕನ ರಕ್ತ ಯಾವಾಗ ಆರೀತೊ
ತಿಳಿಯಬಲ್ಲವರಾರು ಹೇಳೆ?
ಭಾರಿ ಪ್ರೀತಿಸುವಂಥ ಯಾವ ಯುವಕಗೂ ಇರದ
ಬೇರೇನೊ ಇದೆ ನನ್ನ ಒಳಗೆ
ಬಹಳವೆಂದರೆ ಆತ ಸೋಕಬಲ್ಲನು, ನಾನೊ
ಮಾತಿನಲೆ ಹೃದಯವನ್ನಿರಿವೆ?
-ಬೆಳಗಾಯ್ತು, ಮುಂಬತ್ತಿ ಮುಗಿಯಿತು.

ಬಗಲಲ್ಲಿ ದಪ್ಪದೊಣ್ಣೆಯ ಊರಿ ನಿಂತಿದ್ದ
ಧೂರ್‍ತ ಮುದುಕನಿಗಾಕೆ ನುಡಿದಳು:
‘ಪ್ರೇಮವನು ಕೊಡುವುದೋ, ಇಲ್ಲ ಹೋಗೆನ್ನುವುದೊ
ನನ್ನದಾಗಿಲ್ಲ ನಾ ಆಳು.
ಮುಗಿಲಮನೆ ಮುದುಕನಿಗೆ, ನಿನಗಿಂತ ಹಿರಿಯನಿಗೆ
ಕೊಟ್ಟು ಬಿಟ್ಟೆನೊ ಎಲ್ಲವನ್ನ
ಅವನ ಜಪಮಣಿ ಹಿಡಿದ ಬೆರಳಿಗಿಲ್ಲವೊ
ಬಿಡುವು ಮುಚ್ಚಲಾರವು ಅವು ಕಣ್ಣ’.
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ನಿನ್ನ ದಾರಿಯ ಹಿಡಿದು ಹೋಗೆ ಹಾಗೇ ಹೆಣ್ಣೆ
ನನ್ನ ಗುರಿಯೇ ಬೇರೆ ಇದೆಯೆ,
ಕಡಲ ದಂಡೆಯ ಮೇಲೆ ಕತ್ತಲಿನರ್‍ಥ ತಿಳಿದು
ಸುಳಿವ ಹುಡುಗಿಯರ ಗುಂಪಿದೆಯ,
ಮೀನುಗಾರರ ಕೂಡ ಪೋಲಿಮಾತಿನ ಲಲ್ಲೆ
ಬೆಸ್ತ ಚಿಣ್ಣರಿಗಾಗಿ ಕುಣಿತ,
ಕತ್ತಲಿಳಿಯಿತೊ ಕಡಲಮೇಲೆ ಹೆಣ್ಣುಗಳಿಗೆ
ಹಾಸಿಗೆಯ ಅರಳಿಸುವ ತವಕ,’
– ಬೆಳಗಾಯ್ತು ಮುಂಬಡ್ತಿ ಮುಗಿಯಿತು.

‘ಒಡ್ಡು ಮಾತಿನ ಮುದುಕ ನಾನು ಹಗಲಲ್ಲಷ್ಟೆ
ಕತ್ತಲಾಯಿತೊ ಗಟ್ಟಿಯುವಕ,
ಬೆಕ್ಕ ನಗಿಸಲು ಬಲ್ಲೆ, ಗುಟ್ಟ ಕೂಗಿಸಬಲ್ಲೆ
ಜಾಣನುಡಿಯಲಿ ತೆಗೆದು ಚಿಲಕ.
ಮೊಡವೆ ಮೂಡಿದ ಮುಖದ ಎಳೆಯ ನುಡಿಸುವನೇನೆ
ನೆಣದೊಳಗೆ ಹುದುಗಿರುವ ಹಾಡ?
ಬದಿಗೆ ಮಲಗಿದ್ದ ಮಾತ್ರಕ್ಕೆ ದಕ್ಕೀತೇನು
ಕಾಲಪಾತಾಳಗಳ ಗೂಢ?’
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ಹುಟ್ಟುಹಾಕಲು ಮುಂದೆ ಬಾಗಿರುವ ಅಂಬಿಗನೊ,
ಮಗ್ಗದಲಿ ಬಗ್ಗಿರುವ ನೇಯ್ಗೆಯವನೊ,
ಎದೆಸೆಟಿಸಿ ಕೂತ ಅಶ್ವಾರೋಹಿಯೋ ಅಥವ
ಬಸಿರಿನಲಿ ಮುದುಡಿ ಮಲಗಿರುವ ಶಿಶುವೊ,
ಮೇಲಕೊಯ್ಯುವ ದಾರಿ ಹಿಡಿದವರೆ ಆಗಿರಲಿ
ಕೆಳನೆಲೆಯಲುಳಿದಂಥ ತೃಪ್ತರಿರಲಿ,
ನೋವಿನಲೆ ಬಾಳುವರು ಎಲ್ಲ ಮಾನವರೂ
ನನ್ನಂಥ ಕೆಲವರೇ ಇದ ಬಲ್ಲರು.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಬಲ್ಲ ಜನ ಯಾರೂ ಅಲ್ಲಗಳೆಯುವುದಿಲ್ಲ
ಮುಗಿಲಿನೊಳಗಿರುವ ಆ ಮುದುಕ
ಮಿಂಚಿನ ಧಾರೆ ಕಳಿಸಿ ಯಾತನೆಯ ಹರಿಸುವನು
ಎಂಬ ನಂಬಿಕೆಯ ಹಳೆಮಾತ.
ಆದರೂ ನಾ ಮಾತ್ರ ಬಲು ಒರಟು ಮುದುಕನೇ,
ನನಗಿರಲಿ ಎರಡನೆಯ ದಾರಿ,
ಹೆಣ್ಣಿನೆದೆ ಮೇಲೊರಗಿ ಮಲಗುವೆನು ಹಾಯಾಗಿ
ಯಾತನೆಯ ಮರವೆಯಲಿ ಹೂಳಿ.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...