Home / ಕವನ / ಅನುವಾದ / ಧೂರ್‍ತ ಒರಟು ಮುದುಕ

ಧೂರ್‍ತ ಒರಟು ಮುದುಕ

ಮೂಲ: ವಿಲಿಯಂ ಬಟ್ಲರ್ ಏಟ್ಸ್

‘ಹೆಣ್ಣುಗಳ ವ್ಯಾಮೋಹ ಇದೆಯೆಂತಲೇ ನನಗೆ
ಮಲೆಗಳಲ್ಲೂ ಇಂಥ ಮೋಹ’
ದೈವ ಕಳಿಸಿದ ಜಾಗದಲ್ಲಿ ಅಲೆಯುವ ಒರಟು
ಮುದುಕ ನುಡಿದನು ಹೀಗೆ ಮನವ.
“ಸಾಯಲಾರೆನೆ ನಾನು ಮನೆಯ ಚಾಪೆಯ ಮೇಲೆ
ಮುಚ್ಚು ಕಣ್ಣನು ನಿನ್ನ ಕೈಯಿಂದಲೇ,
ಆಕಾಶದಲ್ಲಿರುವ ಆ ಮುದುಕನಿಂದ ನಾ
ಇಷ್ಟನ್ನೆ ಕೇಳುವುದು ನಲ್ಲೆ’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಏನು ಹಿತವೇ ಚಿನ್ನ ನಿನ್ನ ಮಾತುಗಳೆಲ್ಲ
ಉಳಿದಿದ್ದ ಕೊಡದೆ ಇರಬೇಡೇ;
ಹತ್ತ ಮುದುಕನ ರಕ್ತ ಯಾವಾಗ ಆರೀತೊ
ತಿಳಿಯಬಲ್ಲವರಾರು ಹೇಳೆ?
ಭಾರಿ ಪ್ರೀತಿಸುವಂಥ ಯಾವ ಯುವಕಗೂ ಇರದ
ಬೇರೇನೊ ಇದೆ ನನ್ನ ಒಳಗೆ
ಬಹಳವೆಂದರೆ ಆತ ಸೋಕಬಲ್ಲನು, ನಾನೊ
ಮಾತಿನಲೆ ಹೃದಯವನ್ನಿರಿವೆ?
-ಬೆಳಗಾಯ್ತು, ಮುಂಬತ್ತಿ ಮುಗಿಯಿತು.

ಬಗಲಲ್ಲಿ ದಪ್ಪದೊಣ್ಣೆಯ ಊರಿ ನಿಂತಿದ್ದ
ಧೂರ್‍ತ ಮುದುಕನಿಗಾಕೆ ನುಡಿದಳು:
‘ಪ್ರೇಮವನು ಕೊಡುವುದೋ, ಇಲ್ಲ ಹೋಗೆನ್ನುವುದೊ
ನನ್ನದಾಗಿಲ್ಲ ನಾ ಆಳು.
ಮುಗಿಲಮನೆ ಮುದುಕನಿಗೆ, ನಿನಗಿಂತ ಹಿರಿಯನಿಗೆ
ಕೊಟ್ಟು ಬಿಟ್ಟೆನೊ ಎಲ್ಲವನ್ನ
ಅವನ ಜಪಮಣಿ ಹಿಡಿದ ಬೆರಳಿಗಿಲ್ಲವೊ
ಬಿಡುವು ಮುಚ್ಚಲಾರವು ಅವು ಕಣ್ಣ’.
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ನಿನ್ನ ದಾರಿಯ ಹಿಡಿದು ಹೋಗೆ ಹಾಗೇ ಹೆಣ್ಣೆ
ನನ್ನ ಗುರಿಯೇ ಬೇರೆ ಇದೆಯೆ,
ಕಡಲ ದಂಡೆಯ ಮೇಲೆ ಕತ್ತಲಿನರ್‍ಥ ತಿಳಿದು
ಸುಳಿವ ಹುಡುಗಿಯರ ಗುಂಪಿದೆಯ,
ಮೀನುಗಾರರ ಕೂಡ ಪೋಲಿಮಾತಿನ ಲಲ್ಲೆ
ಬೆಸ್ತ ಚಿಣ್ಣರಿಗಾಗಿ ಕುಣಿತ,
ಕತ್ತಲಿಳಿಯಿತೊ ಕಡಲಮೇಲೆ ಹೆಣ್ಣುಗಳಿಗೆ
ಹಾಸಿಗೆಯ ಅರಳಿಸುವ ತವಕ,’
– ಬೆಳಗಾಯ್ತು ಮುಂಬಡ್ತಿ ಮುಗಿಯಿತು.

‘ಒಡ್ಡು ಮಾತಿನ ಮುದುಕ ನಾನು ಹಗಲಲ್ಲಷ್ಟೆ
ಕತ್ತಲಾಯಿತೊ ಗಟ್ಟಿಯುವಕ,
ಬೆಕ್ಕ ನಗಿಸಲು ಬಲ್ಲೆ, ಗುಟ್ಟ ಕೂಗಿಸಬಲ್ಲೆ
ಜಾಣನುಡಿಯಲಿ ತೆಗೆದು ಚಿಲಕ.
ಮೊಡವೆ ಮೂಡಿದ ಮುಖದ ಎಳೆಯ ನುಡಿಸುವನೇನೆ
ನೆಣದೊಳಗೆ ಹುದುಗಿರುವ ಹಾಡ?
ಬದಿಗೆ ಮಲಗಿದ್ದ ಮಾತ್ರಕ್ಕೆ ದಕ್ಕೀತೇನು
ಕಾಲಪಾತಾಳಗಳ ಗೂಢ?’
– ಬೆಳಗಾಯ್ತು ಮುಂಬತ್ತಿ ಮುಗಿಯಿತು.

‘ಹುಟ್ಟುಹಾಕಲು ಮುಂದೆ ಬಾಗಿರುವ ಅಂಬಿಗನೊ,
ಮಗ್ಗದಲಿ ಬಗ್ಗಿರುವ ನೇಯ್ಗೆಯವನೊ,
ಎದೆಸೆಟಿಸಿ ಕೂತ ಅಶ್ವಾರೋಹಿಯೋ ಅಥವ
ಬಸಿರಿನಲಿ ಮುದುಡಿ ಮಲಗಿರುವ ಶಿಶುವೊ,
ಮೇಲಕೊಯ್ಯುವ ದಾರಿ ಹಿಡಿದವರೆ ಆಗಿರಲಿ
ಕೆಳನೆಲೆಯಲುಳಿದಂಥ ತೃಪ್ತರಿರಲಿ,
ನೋವಿನಲೆ ಬಾಳುವರು ಎಲ್ಲ ಮಾನವರೂ
ನನ್ನಂಥ ಕೆಲವರೇ ಇದ ಬಲ್ಲರು.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.

‘ಬಲ್ಲ ಜನ ಯಾರೂ ಅಲ್ಲಗಳೆಯುವುದಿಲ್ಲ
ಮುಗಿಲಿನೊಳಗಿರುವ ಆ ಮುದುಕ
ಮಿಂಚಿನ ಧಾರೆ ಕಳಿಸಿ ಯಾತನೆಯ ಹರಿಸುವನು
ಎಂಬ ನಂಬಿಕೆಯ ಹಳೆಮಾತ.
ಆದರೂ ನಾ ಮಾತ್ರ ಬಲು ಒರಟು ಮುದುಕನೇ,
ನನಗಿರಲಿ ಎರಡನೆಯ ದಾರಿ,
ಹೆಣ್ಣಿನೆದೆ ಮೇಲೊರಗಿ ಮಲಗುವೆನು ಹಾಯಾಗಿ
ಯಾತನೆಯ ಮರವೆಯಲಿ ಹೂಳಿ.’
– ಬೆಳಗಾಯ್ತು, ಮುಂಬತ್ತಿ ಮುಗಿಯಿತು.
*****

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...