Home / ಕವನ / ಕವಿತೆ / ಹುಲ್ಲು ಗರಿಕೆಯ ಆಸೆ

ಹುಲ್ಲು ಗರಿಕೆಯ ಆಸೆ

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ
ನಿಮ್ಮೆದೆಯ ಕದವ ತೆರೆದು ಮಾತಾಡಿಸಿ
ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ
ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು.
ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ,
ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ.
ನಿಮ್ಮ ಬಾಗಿಲ ಮುಂದೆಯೇ ಮನುಷ್ಯತ್ವದ
ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವಾಗ
ನೀವೇಕೆ ಸುಮ್ಮನಿದ್ದೀರಿ ಹೇಳಿ ಮಂದಿರದ ಗೋಪುರಗಳೇ
ಕೊಲೆಯಾಗಿ ಬಿದ್ದ ಶವರಾಶಿಯಲ್ಲಿ
ಜಾತಿ ಹೆಕ್ಕುವವರನು ನಡುಬೀದಿಯಲಿನ ನಿಲ್ಲಿಸಿ ಕೇಳುವೆ
ಕೊಲೆಗಡುಕರೇ ವಿಶ್ವದ ಕಳಂಕಿತರೇ
ಮಂದಿರ, ಮಸೀದಿಯಲಿ ಕದನಕ್ಕೆ ಕಾಲುಕೆದರುವವರೇ,
ದೇಶಭಕ್ತಿಯ ಸೋಗಿನಲಿ ಮುಂದೆ ಬಂದವರೇ
ಹಾಡುಹಗಲೇ ನಿಮ್ಮ ಸೋದರಿ ವಿಧವೆಯಾದುದಕ್ಕೆ
ಧನದಾಹದ ಬೆಂಕಿಯಲ್ಲಿ ಬೆಂದುಹೋದುದಕ್ಕೆ
ದೇಗುಲ ಸಂಸ್ಕೃತಿಗೆ ತಳಪಾಯ ಹಾಕಿದುದಕ್ಕೆ
ಹೆಣ್ಣುಗಳ ಸಾಯಿಸಿ, ಹೊಟ್ಟೆ ಹೊರೆಯುತ್ತಿರುವುದಕ್ಕೆ
ಅವಳ ‘ಸತಿ’ ಗುಡಿಯ ಜೀರ್‍ಣೋದ್ಧಾರದ ಬಗ್ಗೆ
ಎಚ್ಚರ! ಸತಿಯಾದ ಗುಡಿಯ ಕಲ್ಲುಗಳೇ ಕೇಳುತ್ತವೆ
ಮುಂದೊಂದು ದಿನ ನಿಮ್ಮ ಕರ್‍ಮಕಾಂಡದ ಲೆಕ್ಕ
ಅವಳ ಖಾತೆ ಪುಸ್ತಕದಲ್ಲಿ ಬರೆದು
ನಿಮ್ಮನು ಕೋರ್‍ಟಿಗೆ ಎಳೆಯುತ್ತಾಳೆ.
ನಿಮ್ಮ ಮೇಲಿನ ಆರೋಪಪಟ್ಟಿ ಸಿದ್ಧಪಡಿಸುತ್ತಾಳೆ.
ದಾಸ್ತಾವೇಜುಗಳು ಸಾಬೀತಾದ ದಿನ
ಲೋಕದ ಜೈಲಿನ ಗೋಡೆಗಳು ಸಾಕಾಗಲಾರವು
ನಿಮ್ಮನ್ನು ಕೂಡಿ ಹಾಕಲು.
ನಿಮ್ಮ ಪಾಪದ ಬೆಳೆ ಬಾನೆತ್ತರಕ್ಕೆ ಬೆಳೆದು
ಬಹುದೂರ ನಿಮ್ಮ ಮೋಕ್ಷದ ದಾರಿ.
ಕಾವೇರಿ, ಗಂಗೆ, ತುಂಗೆ ಯಮುನೆಯರು
ಸಾಕಾಗುವುದಿಲ್ಲ ನಿಮ್ಮ ಪಾಪ ತೊಳೆಯಲು.
ಕಾವಿಗಳೆದೆಯಲ್ಲಿ ಮುಚ್ಚಿಟ್ಟ ಕೋವಿಗಳೇ
ಮಂದಿರ – ಮಸೀದಿಗಳಲ್ಲಿ ಅಡಗಿಸಿಟ್ಟ ಬಂದೂಕುಗಳೇ,
ಮದ್ದು ತುಂಬಿದ ಕುಂಡ ಕಮಂಡಲಗಳೇ,
ಆಧ್ಯಾತ್ಮದ ಗುಹೆಯಲ್ಲಿ ಮೊಳಕೆಯೊಡೆಯಲಾರಿರಿ
ಕಣ್ಣ ಬಿಂಬದ ತುಂಬ ವಸಂತ ಮೂಡಿಸಲಾರಿರಿ
ಹಸಿದ ಹೊಟ್ಟೆಗೆ ರೊಟ್ಟಿಯಾಗಲಾರಿರಿ
ಮಂತ್ರದುಗುಳಿನಲಿ ತೇಜಾಬು ಬೆರಸಿ
ಗರ್‍ಭಗುಡಿಯಲಿ ಒಳಸಂಚು ನಡೆಸಿ,
ವ್ಯಾಪಾರ ವಹಿವಾಟು ಕುದುರಿಸಲಾರಿರಿ
ಖಾದಿ, ಖಾಕಿ, ಕಾವಿಗಳಿಗೆ
ಅರ್‍ಪಿತ ದೆಹಲಿಯೆಂಬ ಬೆಲೆವಣ್ಣು
ಡಿಸೆಂಬರ್ ಆರು ಬಂತೆಂದರೆ ನಡುಗುತ್ತಾಳೆ
ಬಾಬ್ರಿ ಮಸೀದಿ ನೆಲಕ್ಕುರುಳಿ
ಇತಿಹಾಸದಲ್ಲಿ ಕಪ್ಪಾದ ಆ ದಿನ
ಗುಮ್ಮಟ ಉರುಳಿದ ದಿನ
ಜಟಕಾ ಬಂಡಿ ಸುಟ್ಟು ಹೋದ ದಿನ
ಕೂಲಿ ಬಡವರು ಕರಕಲಾದ ದಿನ
ಸಂಸ್ಕೃತಿಯೆಂಬ ಮಂತ್ರ ಉಗುಳುವ ನೀವು
ಸೌಹಾರ್‍ದ ಸಂಪತ್ತನು ಲೂಟಿ ಮಾಡಿದ ದಿನ
ಗಣಿ ಧೂಳಿನಲ್ಲಿ ಉಸಿರುಗಟ್ಟಿ
ನೆತ್ತರ ಪಸೆಯಲಿ ಮೊಳಕೆ ಹೆಪ್ಪುಗಟ್ಟಿದೆ.
ಬೆಂಕಿ ಬಿದ್ದ ಗುಡಿಸಲಲ್ಲಿ ಅಸ್ತಿಪಂಜರಗಳು
ಕರಕಲಾದ ಕನಸುಗಳಲಿ ಚಿಗುರು ಮೊಳೆತು
ಕೆಂಪು ಹೂವುಗಳು ಅರಳಿ ನಿಂತಾಗ

ಮಂದಿರ – ಮಸೀದಿಗಳ ಠೇಕೇದಾರರಿಗೆ
ಚೌಕದಲಿ ನಿಲ್ಲಿಸಿ ಕೇಳುತ್ತೇನೆ ಪಾಪಿಗಳೇ
ನೀವೆಷ್ಟೇ ಹೊಸಕಿ ಹಾಕಿದರೂ ನಾವು
ಮತ್ತೆ ಮತ್ತೆ ಕಂಪು ಬೀರುವ ಹೂವಾಗಿ
ಅರಳಿ ನಿಲ್ಲುತ್ತೇವೆ ಬಯಲು ನಾಡಿನ ತುಂಬ
ಹಚ್ಚ ಹಸುರಿನ ಆಸೆಯ ಹುಲ್ಲು ಗರಿಕೆಯಾಗಿ
ಸೌಹಾರ್‍ದ ಬದುಕಿಗೆ ನಾಂದಿಯಾಗಿ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...