Home / ಕವನ / ಕವಿತೆ / ಹುಲ್ಲು ಗರಿಕೆಯ ಆಸೆ

ಹುಲ್ಲು ಗರಿಕೆಯ ಆಸೆ

ರಕ್ತ ಸಿಕ್ತ ಕರ್‍ಬಲಾದ ಬೀದಿಗಳೇ
ನಿಮ್ಮೆದೆಯ ಕದವ ತೆರೆದು ಮಾತಾಡಿಸಿ
ಗಲೀಫ್ ತೊಟ್ಟ ಕಲ್ಲು ಗೋರಿಯಾಗಿಸದಿರಿ
ನಿಮ್ಮ ಮನೆ ಬಾಗಿಲಿಗೆ ಬಂದಿರುವೆನು.
ನಿಮ್ಮ ಮನೆ ಮುಂದೆಯೇ ರಕ್ತ ರಣರಂಗವಾಗುವಾಗ,
ನೀವೇಕೆ ಪ್ರತಿಭಟಿಸಲಿಲ್ಲ ಮಾತಾಡಿ ಮೀನಾರುಗಳೇ.
ನಿಮ್ಮ ಬಾಗಿಲ ಮುಂದೆಯೇ ಮನುಷ್ಯತ್ವದ
ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವಾಗ
ನೀವೇಕೆ ಸುಮ್ಮನಿದ್ದೀರಿ ಹೇಳಿ ಮಂದಿರದ ಗೋಪುರಗಳೇ
ಕೊಲೆಯಾಗಿ ಬಿದ್ದ ಶವರಾಶಿಯಲ್ಲಿ
ಜಾತಿ ಹೆಕ್ಕುವವರನು ನಡುಬೀದಿಯಲಿನ ನಿಲ್ಲಿಸಿ ಕೇಳುವೆ
ಕೊಲೆಗಡುಕರೇ ವಿಶ್ವದ ಕಳಂಕಿತರೇ
ಮಂದಿರ, ಮಸೀದಿಯಲಿ ಕದನಕ್ಕೆ ಕಾಲುಕೆದರುವವರೇ,
ದೇಶಭಕ್ತಿಯ ಸೋಗಿನಲಿ ಮುಂದೆ ಬಂದವರೇ
ಹಾಡುಹಗಲೇ ನಿಮ್ಮ ಸೋದರಿ ವಿಧವೆಯಾದುದಕ್ಕೆ
ಧನದಾಹದ ಬೆಂಕಿಯಲ್ಲಿ ಬೆಂದುಹೋದುದಕ್ಕೆ
ದೇಗುಲ ಸಂಸ್ಕೃತಿಗೆ ತಳಪಾಯ ಹಾಕಿದುದಕ್ಕೆ
ಹೆಣ್ಣುಗಳ ಸಾಯಿಸಿ, ಹೊಟ್ಟೆ ಹೊರೆಯುತ್ತಿರುವುದಕ್ಕೆ
ಅವಳ ‘ಸತಿ’ ಗುಡಿಯ ಜೀರ್‍ಣೋದ್ಧಾರದ ಬಗ್ಗೆ
ಎಚ್ಚರ! ಸತಿಯಾದ ಗುಡಿಯ ಕಲ್ಲುಗಳೇ ಕೇಳುತ್ತವೆ
ಮುಂದೊಂದು ದಿನ ನಿಮ್ಮ ಕರ್‍ಮಕಾಂಡದ ಲೆಕ್ಕ
ಅವಳ ಖಾತೆ ಪುಸ್ತಕದಲ್ಲಿ ಬರೆದು
ನಿಮ್ಮನು ಕೋರ್‍ಟಿಗೆ ಎಳೆಯುತ್ತಾಳೆ.
ನಿಮ್ಮ ಮೇಲಿನ ಆರೋಪಪಟ್ಟಿ ಸಿದ್ಧಪಡಿಸುತ್ತಾಳೆ.
ದಾಸ್ತಾವೇಜುಗಳು ಸಾಬೀತಾದ ದಿನ
ಲೋಕದ ಜೈಲಿನ ಗೋಡೆಗಳು ಸಾಕಾಗಲಾರವು
ನಿಮ್ಮನ್ನು ಕೂಡಿ ಹಾಕಲು.
ನಿಮ್ಮ ಪಾಪದ ಬೆಳೆ ಬಾನೆತ್ತರಕ್ಕೆ ಬೆಳೆದು
ಬಹುದೂರ ನಿಮ್ಮ ಮೋಕ್ಷದ ದಾರಿ.
ಕಾವೇರಿ, ಗಂಗೆ, ತುಂಗೆ ಯಮುನೆಯರು
ಸಾಕಾಗುವುದಿಲ್ಲ ನಿಮ್ಮ ಪಾಪ ತೊಳೆಯಲು.
ಕಾವಿಗಳೆದೆಯಲ್ಲಿ ಮುಚ್ಚಿಟ್ಟ ಕೋವಿಗಳೇ
ಮಂದಿರ – ಮಸೀದಿಗಳಲ್ಲಿ ಅಡಗಿಸಿಟ್ಟ ಬಂದೂಕುಗಳೇ,
ಮದ್ದು ತುಂಬಿದ ಕುಂಡ ಕಮಂಡಲಗಳೇ,
ಆಧ್ಯಾತ್ಮದ ಗುಹೆಯಲ್ಲಿ ಮೊಳಕೆಯೊಡೆಯಲಾರಿರಿ
ಕಣ್ಣ ಬಿಂಬದ ತುಂಬ ವಸಂತ ಮೂಡಿಸಲಾರಿರಿ
ಹಸಿದ ಹೊಟ್ಟೆಗೆ ರೊಟ್ಟಿಯಾಗಲಾರಿರಿ
ಮಂತ್ರದುಗುಳಿನಲಿ ತೇಜಾಬು ಬೆರಸಿ
ಗರ್‍ಭಗುಡಿಯಲಿ ಒಳಸಂಚು ನಡೆಸಿ,
ವ್ಯಾಪಾರ ವಹಿವಾಟು ಕುದುರಿಸಲಾರಿರಿ
ಖಾದಿ, ಖಾಕಿ, ಕಾವಿಗಳಿಗೆ
ಅರ್‍ಪಿತ ದೆಹಲಿಯೆಂಬ ಬೆಲೆವಣ್ಣು
ಡಿಸೆಂಬರ್ ಆರು ಬಂತೆಂದರೆ ನಡುಗುತ್ತಾಳೆ
ಬಾಬ್ರಿ ಮಸೀದಿ ನೆಲಕ್ಕುರುಳಿ
ಇತಿಹಾಸದಲ್ಲಿ ಕಪ್ಪಾದ ಆ ದಿನ
ಗುಮ್ಮಟ ಉರುಳಿದ ದಿನ
ಜಟಕಾ ಬಂಡಿ ಸುಟ್ಟು ಹೋದ ದಿನ
ಕೂಲಿ ಬಡವರು ಕರಕಲಾದ ದಿನ
ಸಂಸ್ಕೃತಿಯೆಂಬ ಮಂತ್ರ ಉಗುಳುವ ನೀವು
ಸೌಹಾರ್‍ದ ಸಂಪತ್ತನು ಲೂಟಿ ಮಾಡಿದ ದಿನ
ಗಣಿ ಧೂಳಿನಲ್ಲಿ ಉಸಿರುಗಟ್ಟಿ
ನೆತ್ತರ ಪಸೆಯಲಿ ಮೊಳಕೆ ಹೆಪ್ಪುಗಟ್ಟಿದೆ.
ಬೆಂಕಿ ಬಿದ್ದ ಗುಡಿಸಲಲ್ಲಿ ಅಸ್ತಿಪಂಜರಗಳು
ಕರಕಲಾದ ಕನಸುಗಳಲಿ ಚಿಗುರು ಮೊಳೆತು
ಕೆಂಪು ಹೂವುಗಳು ಅರಳಿ ನಿಂತಾಗ

ಮಂದಿರ – ಮಸೀದಿಗಳ ಠೇಕೇದಾರರಿಗೆ
ಚೌಕದಲಿ ನಿಲ್ಲಿಸಿ ಕೇಳುತ್ತೇನೆ ಪಾಪಿಗಳೇ
ನೀವೆಷ್ಟೇ ಹೊಸಕಿ ಹಾಕಿದರೂ ನಾವು
ಮತ್ತೆ ಮತ್ತೆ ಕಂಪು ಬೀರುವ ಹೂವಾಗಿ
ಅರಳಿ ನಿಲ್ಲುತ್ತೇವೆ ಬಯಲು ನಾಡಿನ ತುಂಬ
ಹಚ್ಚ ಹಸುರಿನ ಆಸೆಯ ಹುಲ್ಲು ಗರಿಕೆಯಾಗಿ
ಸೌಹಾರ್‍ದ ಬದುಕಿಗೆ ನಾಂದಿಯಾಗಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...