Home / ಕವನ / ಕವಿತೆ / ಬಯಕೆಯ ಹಾಡು

ಬಯಕೆಯ ಹಾಡು

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ|
ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ|
ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ|
ಇಸಮಾಡಿ ಒಂದ ತುತ್ತ ತಿಂದೇನ ತಾಯಿ|
ಬಂಕಿ ಕಾಡತಾವ ತಾಯಿ ಪರಿಪರಿಯಿಂದ
ಬಂಕಿ ಕಾಡತಾವ ||೧||

ಆಕಳ ಹಾಲಾಗ ದುಮ್ಮಸ ಮಾಡ|
ಪರಡಿ ಸವತೀಬೀಜ ಪಾಯಸ ಮಾಡ|
ಯಾಲಕ್ಕಾಯ ಪತ್ತುರಿ ಜಾಜಿಕಾಯಿ ಮೊದಲುಮಾಡಿ|
ಇಷ್ಟ ಸಾಹಿತನೆಲ್ಲ ಹದಮಾಡ ತಾಯಿ|
ಬಂಕಿ ಕಾಡತಾವ ||೨||

ಗಂಗಾಳ ಝರಗಿ ಝಳಝಳ ಬೆಳಗ|
ತೆಂಬೀಗಿ ತುಂಬಿ ಬದಿಯಲ್ಲಿ ಇಡಽ|
ಡೊಣ್ಣಿ ತುಂಬ ತುಪ್ಪ ತಂದು ಮುಂದಿಟ್ಟಿರ|
ಬಟ್ಟೆದ್ದಿ ಬಾಯಾಗ ಇಟ್ಟೀನ ತಾಯಿ|
ಬಂಕಿ ಕಾಡತಾವ ||೩||

ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನೀಕಾಯಿ|
ಮಸರ ಕಲಸಿದ ಬುತ್ತಿ ಬಿಸಿಯ ಬಾನ|
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ|
ಬಂಕಿ ಕಾಡತಾವ ||೪||

ಹೋಳಿಹೆಣ್ಣಿವಿ ಸುತ್ತ ತನುಗಾಳಿ ಬೀಸ್ಯಾವ|
ಮಾಳೀಗಿ ಏರಿ ಬೆಳಖಿಂಡಿ ಮುಚ್ಚ|
ಬಣ್ಣಽದ ಹಚ್ಚಡ ಬಿಗಿಬಿಗಿದು ಹೊಚ್ಚಿದರ|
ಕಣ್ತುಂಬ ಒಂದು ನಿದ್ದಿ ಮಾಡೇನ ತಾಯೀ|
ಬಂಕಿ ಕಾಡತಾವ ||೫||

ಕುಂತಽರ ಆಕಡಿಕಿ ನಿಂತರ ತೂಕಡಿಕಿ|
ತಾಳಲಾರೆನೆ ತಾಯಿ ತೋಳಾರೆ ತಾರ|
ಮಂಚಕ ಒಪ್ಪತ ಹಾಸೀಗಿ ಮಾಡ|
ಮಂಚಕ ಎನ್ನ ಎಳದ್ಹಾಕ ತಾಯೀ|
ಬಂಕಿ ಕಾಡತಾವ ||೬||
*****
ಬಯಕೆಯ ಹಾಡು

ಒಬ್ಬ ಗರ್ಭಿಣಿಗೆ ಬಯಕೆಗಳು ಕಾಡುತ್ವೆ. ಅವಳು ತಾಯಿಯಲ್ಲಿ ತನ್ನ ಬಯಕೆಗಳನ್ನೆಲ್ಲ ಬೇಡುತ್ತಾಳೆ. ಅವಳ ಸಲಿಗೆಯ ಮಾತು ಹೇಳುವ ಬಗೆ ಎಶ್ಟು ಸೊಗಸಾಗಿವೆ; `ಕಸಕಸಿ ಕೊಬ್ಬರಿ, ಹೆಸನುಳ್ಳ ಜಿಲಿಬಿಲಿ, ಬಿಳಿಯ ಬೆಲ್ಲದ ಬಿಸಿಯ ಹೊರಣಗಡುಬು… ಇವನ್ನು ಮುಂದಿಟ್ಟರೆ ಇಸಮಾಡಿ ಒಂದು ತುತ್ತ ತಿಂದೇನು’ ಎನ್ನುತ್ತಾಳೆ! ಇದರಂತೆಯೆ `ಬಟ್ಟೆದ್ದಿ ಬಾಯಾಗ ಇಟ್ಟೇನು ತಾಯಿ’ `ತಾಳಲಾರೆನೆ ತಾಯಿ ತೋಳಾರೆ ತಾರ’-ಮೊದಲಾದುವು.

ಛಂದಸ್ಸು:- ಕುಸುಮಷಟ್ಟದಿಗೆ ಹೊಂದುತ್ತದೆ.

ಶಬ್ದ ಪ್ರಯೋಗಗಳು:- ಇಸ=ವಿಷ. ದುಮ್ಮಸ ಮಾಡ=ಅದರಲ್ಲಿ ಅಡಿಗೆ ಮಾಡು. ಮಸರ=ಮೊಸರು. ಬಾನ=ಬೋನ. ತನುಗಾಳಿ=ತಂಪುಗಾಳಿ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...