Home / ಕವನ / ಕವಿತೆ / ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ
ಹೃದಯಸ್ವರಂ,
ಹೃದಯದಲಿ ಕಲುಕುತಿದೆ
ವಿರಹಜ್ವರಂ;
ಎತ್ತ ನಡೆದವನೆಂದು
ಮತ್ತೆನಗೆ ಬಹನೆಂದು
ಮನಸಿನೋಪಂ,
ಬಾಗಿಲೊಳೆ ನಿಲುಕುತಿದೆ
ನಯನ ದೀಪಂ.

ಮರಳುವೊಸಗೆಯ ಬೀರಿ
ಗುಡುಗು ಮೊಳಗೆ,
ಮನೆಯ ದಾರಿಯ ತೋರಿ
ಮಿಂಚು ತೊಳಗೆ,
ಬಂದರೆಲ್ಲಿದರೆಲ್ಲ,
ನೀನನಿತೆ ಬಂದಿಲ್ಲ
ವೇಕೆ ನಲ್ಲ?
ಮುಗಿಲ ಸಜ್ಜೆಯ ಭೇರಿ
ಕೇಳಿಸಿಲ್ಲ?

ಬಸಿರೊಳೆಮ್ಮಯ ಕೂಸು
ಬಂದಂದಿನಿಂ,
ನವಿಲ ಮದುವೆಯ ಲೇಸು
ಸಂದಂದಿನಿಂ,
ತೆರಳಿನ್ನು ಮರಳಿಲ್ಲ;
ನಿನ್ನೊಸಗೆ ನನಗಿಲ್ಲ
ದೊಲೆವೆನಿಲ್ಲಿ,
ಗೂಡುಬೆಳಕೊಲು ಬೀಸು
ವಿರುಳಿನಲ್ಲಿ.

ಹಾಲನೂಡಿಸೆ ಹುಬ್ಬೆ
ಹಸುಳೆ ತೆನೆಗೆ,
ಬತ್ತಿದೆದೆಯಕಟ್ಟಬ್ಬೆ
ಗಿಹುದೆ ನನಗೆ?
ನುಡಿಗೆ ನುಡಿ ಮೂಡಿಲ್ಲ,
ಮಗುವಿನಡಿ ಕೂಡಿಲ್ಲ
ದನಿತರೊಳಗೆ
ಸೆಳೆದಳದನಿಳೆ ತಬ್ಬೆ
ತನ್ನ ಬಳಿಗೆ.
* * * *

ಎದೆಯ ಬಯಕೆಯ ಗನಿಯೊ
ಳೊಗೆದ ರನ್ನ
ಎವೆಯನೊಲ್ಲದ ಹನಿಯೊ
ಲುದುರಿತೆನ್ನ!
ಇಲ್ಲಿ ನೀನಿರೆ, ನಲ್ಲ,
ಅಂತಾಗುತಿರಲಿಲ್ಲ-
ಇನನಿಲ್ಲದೆ
ಕಮಲಮದು ಕಮಲಿನಿಯೊ
ಳಿರಬಲ್ಲುದೆ?

ಬರದಿ ನೀರಗೆವಲ್ಲಿ
ನಿಧಿಯನೆಟಕಿ
ಪಡೆದಣುಗನೊಗೆದಲ್ಲಿ
ವಿಧಿಯ ಕಟಕಿ
ಗಿಡುಗನೆನೆ ಮರಿಗಿಳಿಯ
ತುಡುಗೆ ನೀನಿರೆ ಬಳಿಯ
ಲಿಂದು, ನಲ್ಲ,
ಚಿಲಿಮಿಲಿವ ಗೂಡಲ್ಲಿ
ಮೌನವಲ್ಲ!

ಬಳ್ಳಿಗೆಲ್ಲವ ಸಲ್ಲಿ
ಸುವಳೆ ಧರಣಿ?
ಬೆಳಕವಳಿಗಕಟೆಲ್ಲಿ
ತರದೆ ತರಣಿ?
ಧರಣಿಯಕ್ಕರೆ ಸವಿಸೆ,
ತರಣಿ ಮೋರೆಯನವಿಸೆ,
ಬಳ್ಳಿ ತಾರೆ,
ತಂದೆ ತಾಯವರಲ್ಲಿ
ಯಾರ ದೂರೆ?

ಕುರುಡನರಗನಸಂತೆ
ಬಗೆದು ಬೇಯೆ,
ಗರಿಮುರಿದ ಖಗದಂತೆ
ನೆಗೆದು ನೋಯೆ,
ನನ್ನ ಬಾಳಕಟಿನಿಸೆ?
ಹಣ್ಣು ಹುಳುವಿನ ತಿನಿಸೆ?
ಎದೆಯ ತಿರುಳು
ಕೊರೆಯೆ ಸೋರುವ ಚಿಂತೆ
ಹಗಲು ಇರುಳು!
* * * *

ಸರಿದೊಮ್ಮೆ ಬರಸಲ್ಲ
ದಲರಿನಳಿವೊ?
ಸರಿದಂತೆ ಬರಬಲ್ಲ
ಉಡುವಿನಿಳಿವೊ?
ಮರುತರಂಗಿಪ ತೆರೆಯೊ?
ಹುಳು ಪತಂಗಿಪ ಸೆರೆಯೊ?
ಮರಳಿ ಚನ್ನ
ಬಹನೆ, ಬಾರನೆ, ನಲ್ಲ,
ಬಸಿರೊಳೆನ್ನ?

ಎಳೆಯೊಳಿಂಗಿದ ಗೀತಿ
ಮಾರುಲಿಸದೆ,
ಸೊಡರೊಳಾರಿದ ಜ್ಯೋತಿ
ಮಾರುರಿಸದೆ,
ಮರುಕಣಿಸಲೆಂತೆರೆಯ?
ಮರಳಿ ಮುದ್ದಿನ ಮರಿಯ
ನಳವೆ ದೊರೆಯೆ?
ಮುತ್ತು ಮೊಳೆವುದೆ ಸ್ವಾತಿ
ಗಿರಿಯೊಳೆರೆಯೆ?

ಕೋರಿಕೆಯೊಳಡಿಮೆಟ್ಟಿ
ಮುಂದೆ ಪಾರೆ,
ಶಂಕೆ ಹಾವಸೆಗಟ್ಟಿ
ಮನಸು ಜಾರೆ,
ಮೇದ ಮೇವನೆ ಮೇವ
ಕಟ್ಟು ಕಂಬದ ಗೋವ
ತೆರದೊಳೆನ್ನ
ನೆನದ ನೆನವೊಳೆ ದಿಟ್ಟಿ
ಗೊಳುವೆ ನಿನ್ನ.

ಬಲೆಯ ನೀರಲಿ ಸುತ್ತ
ಬರುವ ತನ್ನ
ನೆಳಲನಿನೆಯಂ ಗೆತ್ತ
ಮೀನೊಲೆನ್ನ
ಮನದಿ ಸುಳಿಯುವ ನಿನ್ನ
ನೆನವೆ ನೀನೆನುತೆನ್ನ
ದಿನವ ಕಳೆವೆ-
ಕರೆ ಎತ್ತ ತೆರೆಯತ್ತ
ಮರಳದೊಳವೆ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...