Home / ಕವನ / ಕವಿತೆ / ಹೇಮಾವತಿಯ ತೀರದಲ್ಲಿ

ಹೇಮಾವತಿಯ ತೀರದಲ್ಲಿ

ಹಗಲ ಕಣ್ಣನು ಮಂಕು ಕವಿಯಿತು,
ಮುಗಿಲ ಬಾಣದ ಬಿರುಸು ಹೆಚ್ಚಿತು,
ನೆಗೆದು ನೊರೆಯನು ಕೀಳುತೋಡಿತು
ಮಲೆಯನಾಡಿನ ಹೇಮೆಯು.

ಕರೆಯ ಮಂಟಪದೊಳಗೆ ಕುಳಿತು,
ಬೆರಗುಮಾಡುವ ಪ್ರಕೃತಿಯಂದಿನ
ಇರವ ನೋಡುತ ಮೂಕರಾದೆವು
ನಾನು ರಾಮ ಇಬ್ಬರೂ.

ಮುಗಿಲಿನಾರ್‍ಭಟ, ಗಾಳಿಯುಲುಹು,
ಹಗಲ ಕಂಬನಿಯಂತೆ ಸೋನೆಯು,
ನೆಗೆದು ಮೊರೆಯುವ ಹೇಮೆಯಬ್ಬರ-
ಏನು ಭೀಕರ ಪ್ರಕೃತಿಯು!

ಬಾನ ನೀಲವನಲೆಯೊಳಿಟ್ಟು,
ತಾನದೊಂದಿಗೆ ಹಾಡಿ ತೂಗಿದ
ಮಾನವತಿ ಮೃದುಗಮನೆ ಹೇಮೆಯೆ
ಕನಲಿ ಮೊರೆವೀ ಹೇಮೆಯು!

ಹಗಲಿನಂದಿನ ರೂಪು ತಂದಿತು
ಬಗೆಗೆ ಸಾವಿನ ಚಿಂತೆಗಳನು,
ನಗೆಯನಣಕಿಸಿ ಸೊಗವ ಜರೆಯುತ
ಬವಣೆಗೊಳ್ಳುವ ಭಾವವ.

ಏನು ಸೋಜಿಗ ಇಂಥ ದಿನದೊಳು
ಸ್ನಾನಮಾಡಲು ಪುಣ್ಯ ಕೆಳಸಿ
ಸಾನುರಾಗದಿ ಬಂದ ಬಾಲೆಯ-
ರಸುವ ನುಂಗಲು ಹೇಮೆಯು!

ಇರಲಿ ರೂಪವು, ಇರಲಿ ಬೆಡಗು,
ಸುರರ ಕನ್ಯೆಯ ಜರೆವ ಕೊರಲು,
ಇರಲಿ ಸ್ವರ್ಗದ ಮೌಗ್ಧ್ಯ-ಕನ್ನೆಯು
ಹೊನಲ ಮುನಿಸನು ತಡೆವಳೆ?

“ಇರುಳನೆಲ್ಲಾ ಹಾಡಿ ದಣಿದು
ಕೊರಲು ಕಟ್ಟಿದೆ, ಮೊಗವು ಸೊರಗಿದೆ.
ಬರಿಯ ಛಲವೇಕಿಂದು ಮೀವರೆ,
ಸೋನೆ ಹಗಲೊಳು, ಹೊಳೆಯೊಳು?”

ಕೆಳದಿಯರ ಜೊತೆ ಕೂಡಿ ಸರಸದಿ
ಹೊಳೆಯೊಳಲೆಯುತ ನಲಿವ ಕೌತುಕ-
ಕೆಳಸಿ, ತುಡಿಯುವ ಬಾಲೆ ಕೇಳ್ವಳೆ
ತಾಯಿ ನುಡಿದಾ ಹಿತವನು?

“ಬಾರೆ ಕಮಲೆ, ಬಾರೆ ಗೌರಿ,
ಬಾರೆ ಶಾರದೆ, ಪುಣ್ಯದಿನದೊಳು
ಕಾರ ಮುಗಿಲಿನ ಮೊಳಗಿಗಂಜುತ
ಹೊಳೆಗೆ ಹೋಗದೆ ನಿಲ್ವರೆ?”

ಏನು ಸಡಗರ! ಏನು ನಗೆಯು!
ಏನು ಉಲ್ಲಸವವರಿಗಂದು!
ಹೊನಲೊಳಡಗಿದ ಜವನ ಮೊಗದೊಳು
ನಗೆಯ ಹರಡುವ ಸರಸವು!

ಅವರ ಮೋದಕೆ, ಆದೊಡಯ್ಯೋ,
ಬುವಿಯೊಳಂದೇ ಚರಮದಿನವು.
ಅವರ ಜೀವದ ಹಣತೆ ಕ್ಷಣದೊಳು
ನಂದಿಹೋಯಿತು ಹೊನಲೊಳು.

ಹೊಳೆಯ ಮಂಟಪದೊಳಗೆ ಕುಳಿತು
ಹಳೆಯ ನೆನಪನು ಮನಕೆ ತಂದೆನು:
ಹಳುವ ತುಂಬಿದ ಗೋಳ ಹೊಳಲನು,
ಹರಿದ ಕಂಬನಿಕಾಲ್ವೆಯ;

ಆರ ಗಾನದ ಲಹರಿ ಹೃದಯಕೆ
ತೂರಿ ತೋರಿದ ಆತ್ಮದರಕೆಯ-
ನಾರ ಪ್ರೇಮವೆ ಪೂರ್‍ಣಮಾಡಿತೊ,
ಅಂಥ ತಂಗಿಯ ಸಾವನು.

ತಿಳಿವು ಮರಳಿತು, ಮನದ ದುಗುಡವ-
ನಳೆದು ಮರುಕವನೆರೆವ ತೆರದೊಳು
ತಲೆಯ ತಡಹುತ ರಾಮುವಿದ್ದನು-
ನುಡಿದೇನೀಪರಿ ಕೆಳೆಯಗೆ:

“ಏನು ದಿನವಿದು, ಕೆಳೆಯ, ಹೇಮೆಗೆ
ಏನಿದಬ್ಬರ!- ಇಂಥ ಹಗಲೊಳು
ಹೊನಳೊಳಳಿದಳು ತಂಗಿ ಜಾನಕಿ;
ತೋರಬಲ್ಲೆಯ ಮಸಣವ?”

ಎನ್ನ ಮಾತಿಗೆ, ರಾಮು ಸುಯ್ಯುತ,
“ಚಿನ್ನ, ನೆರೆಯೊಳು ಕಾಣದೆ”ಂದನು-
ಎನ್ನ ಕಂಬನಿಕೋಡಿ ಬೆರೆಯಿತು
ಮೊರೆವ ಹೇಮೆಯ ತೆರೆಯೊಳು.

ಸಾವು ಸೋಕುವುದೆಲ್ಲರನು, ದಿಟ-
ಸಾವಿಗಂಜುತ ಗೋಳ ಕರೆವುದು
ಸಾವು ಒಯ್ಯುವ ಜೀವಕಲ್ಲವು-
ಹಿಂದೆ ಉಳಿಸುವ ಅರಕೆಗೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...