Home / ಕವನ / ಕವಿತೆ / ಕುಬಸಾ ಮಾಡೂ ಹಾಡು

ಕುಬಸಾ ಮಾಡೂ ಹಾಡು

ಒಂದಂಬು ತಿಂಗಳಿಗಿ ಒಂದೇನ ಬಯಸ್ಯಾಳ|
ಅಂಗೈಯಲುಪ್ಪಾ ಎಳೆಹುಣಸಿ ||೧||

ಎರಡಂಬು ತಿಂಗಳಿಗಿ ಎರಡೇನ ಬಯಸ್ಯಾಳ|
ಎರಡೆಲಿಗೊಂಡ ಎಳಿಮಾವ ||೨||

ಮೂರಂಬು ತಿಂಗಳಿಗಿ ಮೂರೇನ ಬಯಸ್ಯಾಳ|
ಮೂಡಽಲ ದಿಕ್ಕಿಽನ ಮಗಿಮಾವ ||೩||

ನಾಕಂಬು ತಿಂಗಳಿಗಿ ನಾಕೇನ ಬಯಸ್ಯಾಳ|
ಕೊಯ್ದ ಹಣ್ಣು ಕೈತುಂಬಾ ||೪||

ಐದಂಬು ತಿಂಗಳಿಗಿ ಐದೇನ ಬಯಸ್ಯಾಳ|
ಕೊಯ್ದ ಮಲ್ಲೀಗಿ ನನಿದಂಡಿ ||೫||

ಆರೆಂಬು ತಿಂಗಳಿಗಿ ಆರೇನ ಬಯಸ್ಯಾಳ|
ಆರಾಕಿದ ಬಾನ ಕೆನಿ-ಮಸರ ||೬||

ಏಳಂಬು ತಿಂಗಳಿಗಿ ಏಳೇನ ಬಯಸ್ಯಾಳ|
ಹೇಳಿ ಕಳುವ್ಯಾಳ ತವರಿಗಿ ||೭||

ಎಂಟಂಬು ತಿಂಗಳಿಗಿ ಎಂಟೇನ ಬಯಸ್ಯಾಳ|
ಕಂಟಲ್ಯಾಲಕ್ಕಿ ಕೊಡ ತುಪ್ಪ ||೮||

ಒಂಬತ್ತು ತಿಂಗಳಿಗಿ ತುಂಬ್ಯಾವ ನವಮಾಸ|
ಸಂದು ಸಂದೆಲ್ಲ ಕಿರಿಬ್ಯಾನಿ ||೯||

ವ್ಯಾಳ್ಯವ್ಯಾಳ್ಯಕ್ಕೆ ಬ್ಯಾನಿ ತಾಳ ಬಾರಿಸಿದಂಗ|
ತಾಳಲಾರೆನೆ ನಿಲ್ಲಲಾರೆನವ್ವಾ| ತಾಯವ್ವನಿರಬೇಕು ಜನ್ಮಕ ||೧೦||

ಹೊತ್ತು ಹೊತ್ತಿಲೆ ಬ್ಯಾನಿ ಕತ್ತೀಲೆ ಕಡ್ದಂತೆ|
ಹೆತ್ತವ್ವನಿರಬೇಕ ಜನ್ಮಕ ||೧೧||

ಹತ್ತಂಬು ತಿಂಗಳಿಗಿ ಹೆತ್ತಾಳ ಹಸಗೂಸ|
ಸುತ್ತೆಲ್ಲ ನೆರದಾರ ಸುಮಂಗಲೇರು ||೧೨||
*****

ಮದುವೆ ಶೋಭನಗಳ ನಂತರ ಬರುವ ವಿಧಾನದ ಹಾಡುಗಳನ್ನೆಲ್ಲ ಈ ವಿಭಾಗದಲ್ಲಿ ಕೂಡಿಸಬೇಕೆಂದು ನಮ್ಮ ಇಚ್ಛೆ. ಹೆಣ್ಣುಮಕ್ಕಳು ಚೊಚ್ಚಿಲು ಬಸಿರಾದಾಗ ಐದನೆಯ ಇಲ್ಲವೇ ಏಳನೆಯ ತಿಂಗಳಲ್ಲಿ ಒಂದು ವಿಧಾನವು ಜರುಗಿಸಲ್ಪಡುತ್ತದೆ. ಮತ್ತು ಹಡೆದಾಗ ಕೂಸಿಗೆ ನಾಮಕರಣ ಮಾಡುವ ಕಾಲಕ್ಕೆ ಇನ್ನೊಂದು ವಿಧಾನವು ಜರುಗಿಸಲ್ಪಡುತ್ತದೆ. ಬಹುಶಃ ಇಲ್ಲಿಗೆ
ವಿಧಾನಗಳೆಲ್ಲ ಮುಗಿದಂತಾಗುವವು.

ಕುಬಸಾ ಮಾಡೂ ಹಾಡು

ಚೊಚ್ಚಿಲ ಬಸುರಿಗೆ ಐದನೆಯ ಇಲ್ಲವೆ ಏಳನೆಯ ತಿಂಗಳಲ್ಲಿ ಅಕ್ಕರತೆಯಿಂದ ಕುಪ್ಪಸದ ಉಡುಗೊರೆ ಮಾಡುತ್ತಾರೆ. ಆಗ ಹೇಳುವ ಹಾಡಿದು. ಇದರಲ್ಲಿ ಬಸುರಿಗೆ ಉಂಟಾಗುವ ಬಗೆಬಗೆಯ ಬಯಕೆಗಳು ಬಣ್ಣಿಸಲ್ಪಟ್ಟಿವೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದಪ್ರಯೋಗಗಳು:- ನೆನೆದಂಡಿ=ಮೊಗ್ಗೆಗಳ ದಂಡೆ. ಆರಾಕು=ಆರಲಿಕ್ಕೆ ಹಾಕು. ಕಂಟಲಿ ಎತ್ತು=ಮುಟ್ಟುಹಾಕಿದ ಎತ್ತು.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...