Home / ಕವನ / ಕವಿತೆ / ಅಡಿಕೆ ಆಡುವ ಹಾಡು

ಅಡಿಕೆ ಆಡುವ ಹಾಡು

ಐದು ಅಕ್ಷರದಿಂದ ತೆಯದು ಗಂಧಾಽದಿಂದ|
ಮಲ್ಲಿಗ್ಹೂವಿಽನ ಕ್ರಮಽದಿಂದ||
ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ|
ರಾಯರ ಶೀಪಾದಾಽ ತೊಳಂದಾಳ ||೧||

ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ|
ಪಾದಲಿ ಕಂಡಾಳಽ ಪದಮವ||
ಪಾದಲಿ ಕಂಡಾಽಳೆ ಪದಮವ ರಾಯಿರ ನಿಮಗ|
ಆನಿ ಏರಂಥಾ ಬಲಽ ಬಂದ ||೨||

ಶಟ್ಟೆವರ ಮಗಳ ಬಂಽಮ ಬಟ್ಟ್‌ ಪೂಜಿ ಮಾಽಡಟಿಗೆ|
ಬಟ್ಟಿಲಿ ಕಂಡಾಳಽ ಪದಽಮಽವ||
ಬಟ್ಟಿಲಿ ಕಂಡಾಽಳ ಪದಮವ ರಾಯರ ನಿಮಗ|
ಮಂಚ ಏರಂಥಾಽ ಬಲಽ ಬಂದ ||೩||
* * *

ಹೆತ್ತೂರ ರಾಽಜ್ಯ ನಿಮ್ಮಪ್ಪ ಆಳಿದರೇನ|
ಒಂಕಿಗಿ ನಮ್ಮ ಕಾಲಽ ತೊಳಽದೆಲ್ಲ||
ಒಂಕಿಗಿ ನಿಮ ಕಾಽಲ ನಾವ್ಯಾಕ ತೊಳಿಯುನು ಧೊರಿಯ|
ಪ್ರೇಮ ಬಲ್ಲವರಽ ಗುಣಕಾಗಿ ||೪||

ಎಂಟೂರ ರಾಜ್ಯ ನಿಮ್ಮಣ್ಣ ಆಳಿದರೇನ|
ಸರಗಿಗಿ ನಮ ಕಾಲಽ ತೊಳಽದೆಲ್ಲ||
ಸರಗಿಗಿ ನಿಮ ಕಾಽಲ ನಾವ್ಯಾಕ ತೊಳೆಯುನು ಧೊರಿಯ|
ಚಿತ್ತ ಬಲ್ಲವರಽ ಗುಣಾಕಾಽಗಿ ||೫||

ಆರೂರ ರಾಽಜ್ಯ ನಿಮ ತಮ್ಮ ಆಳಿದರೇನ|
ನತ್ತಿಗಿ ನಮ ಕಾಲ ತೊಳಽದೆಲ್ಲ|
ನೆತ್ತಿಗಿ ನಿಮ ಕಾಲ ನಾವ್ಯಾಕ ತೊಳೆಯುನು ಧೊರಿಯ|
ಮುತ್ತೈೈದಿತನಽ ಪಡಽದೇವ ||೬||
* * *

ಬಾಳಿಯ ಕಾಯಾಂಽಗ ಬಾಗಿ ಬಂದಳ ಬಾಲಿ|
ಭಾಗ ಕೊಡು ರಾಯಾಽ ಎಡಽದಲ್ಲಿ||
ಭಾಗ ಕೊಡು ರಾಽಯ ಎಡದಲಿ ಸಾವಿರದ|
ಮಾಣೀಕ್ಹೇರವರಽ ಮಗಽಳೀಗಿ ||೭||

ನಿಂಬಿ ಕಾಯ್ಹಾಂಽಗ ತುಂಬಿ ಬಂದಳ ಬಾಲಿ|
ಇಂಬ ಕೊಡು ರಾಯಾಽ ಎಡಽದಲ್ಲಿ||
ಇಂಬ ಕೊಡು ರಾಽಯ ಎಡದಲ್ಲಿ ಸಾವಿರದ|
ಒಜ್ಜಿರ್‍ಹೇರವರಽ ಮಗಳೀಗಿ ||೮||
* * *

ರಾಜರಾಜರು ಕೂಽಡಿ ರಾಜೆಲ್ಲ ಹುಡುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವೀನ||
ಮತ್ತೆಲ್ಲಿ ತಂದ್ಯೋ ಚೆಲವೀನ ಹಲಸಂಗಿ|
ಆಗರದಾಗಿತ್ತೊಂದರಽಗಿಣಿಯ ||೯||

ಶೆಟ್ಟಿ ಶೆಟ್ಟೆರು ಕೂಽಡಿ ದಿಕ್ಕೆಲ್ಲಾ ಹುದುಕಿದರ|
ಮತ್ತೆಲ್ಲಿ ತಂದ್ಯೊಽ ಚೆಲಽವಿನ||
ಮತ್ತೆಲ್ಲಿ ತಂಜ್ಯೊ ಚೆಲವೀನ ಹಲಸಂಗಿ|
ಬಾಳಿ ಬನೆದಾನೊಂದರಽಗಿಣಿಯ ||೧೦||
*****

ವಧುವರರಿಗೆ ಸರ್ವಜನರು ಕೂಡಿ ಅಕ್ಕೀಕಾಳು (ಅಕ್ಷತೆ) ಒಗೆದ ಮೇಲೆ ತುಸು ಹೊತ್ತಿನಲ್ಲಿ ಅವರಿಂದ ನಗೆಯಾಟವನ್ನು ಆಡಿಸುತ್ತಾರೆ. ಆಗ ಒಬ್ಬರು ಅಡಿಕೆಯನ್ನು ಗಟ್ಟಿಯಾಗಿ ಹಿಡಿಯಬೇಕು; ಇನ್ನೊಬ್ಬರು ಅದನ್ನು ಬಿಡಿಸಿಕೊಳ್ಳಬೇಕು. ಆಗ ಸುತ್ತಮುತ್ತಲಿನ ಹೆಣ್ಣುಮಕ್ಕಳು ಈ ಹಾಡನ್ನು ಹಾಡುವರು.

ಛಂದಸ್ಸು:- ತ್ರಿಪದಿ.

ಶಬ್ದಪ್ರಯೋಗಗಳು:- ಐದು ಅಕ್ಷರ=ಶಿವಪಾರ್ವತಿ ಎಂಬ ಐದು ಅಕ್ಷರಗಳಾಗಿರಬಹುದು. ಮಲ್ಲಿಗ್ಹೂವಿನ ಕ್ರಮದಿಂದ= (ಅಡಿಗಳು) ಮಲ್ಲಿಗೆಯಂತೆ ಮೃದುವಾಗಿವೆಯೆಂದು ಭಾವಿಸಿ. ಪಾದಲಿ=ಪಾದದಲ್ಲಿ. ಪದಮ=ಪದ್ಮಚಿಹ್ನ. ಬಲಬಂದು=ಬಲವು ಬರಲಿ. ಬಟ್ಟಲಿ=ಬೆರಳಲ್ಲಿ. ಒಂಕಿ=ತೋಳಿನ ಆಭರಣ. ಸರಗಿ=ಕೊರಳಿನ ಆಭರಣ. ಕಾಯಾಂಗ-ಕಾಯಿಯಂತೆ. ಭಾಗ=ಸ್ಥಳ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...