Home / ಕವನ / ಕವಿತೆ / ಹೋದ ಬಾಲ್ಯ

ಹೋದ ಬಾಲ್ಯ

ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಹರೆಯದೊಡನೆ ನಿಲುವುದೆಂತು
ಕಿರಿಯತನದ ಮುಗ್ಧತೆ?
* * *
ಹಗಲು ಹಣ್ಣು ತಿರುಗುತಿತ್ತು,
ಹೊಗೆಯ ಬಂಡಿಯೋಡುತಿತ್ತು,
ಮನದಿ, ಹಿಂದೆ ಬಿಟ್ಟುದರದು
ನೆನಪು ಬೇಯುತಿದ್ದಿತು.

ಕಳೆದ ಸುಖವ, ತಬ್ಬುವಳಲ,
ಒಳಗೆ ಕುಳಿತು ನೆನೆಯುತಿದ್ದೆ-
ಹೆಗಲ ಜಗ್ಗು ತೊದೆದರಾರೊ!
ಹಗಲ ಕನಸು ಚೆದರಿತು.

ಹಿಂದೆ ನೋಡೆ – ನಗುವ ಕಣ್ಣ
ಕಂದನೆಂದು! ತುಂಟತನದ
ಬೆಳಕ ಹೊಳೆಸಿ, ಕಣ್ಣ ನೆಟ್ಟ
ಚೆಲುವನೆಂತು ಮರೆವೆನು!

“ಬೇಡ ಕಂದ, ಹೊರಗಿನವರ
ಕಾಡಲುಂಟೆ? ಬೇಡ ಬಿಡೆಲೊ”
ಎಂದು ತಡೆವ ತಾಯ ನುಡಿಯ
ಕಂದನಂದು ಕೇಳದು.

ಅದರ ತುಂಟತನವ ಕಂಡು
ಮುದವನಾಂತೆನಂದು ನಾನು.-
ಹುಡುಗನೊದೆಗೆ ಅರ್‍ಥವುಂಟೆ?
ನುಡಿಗೆ ಕೊಂಡಿ ಇರುವುದೆ?
* * *
ಎಳೆಯನಂತೆ ಹೆಗಲ ಜಗ್ಗಿ
ಕೆಳೆಯನೊಡನೆ ಸೆಣಸಲಿಲ್ಲ;
ದಿಟ್ಟತನದಿ ನಗುವ ಕಣ್ಣ
ನೆಟ್ಟು ಜರೆಯಲಿಲ್ಲವು.

ಹರೆಯತನಕೆ ಬೆಳೆದುದನ್ನು
ಮರೆತು ನುಡಿದೆನೊಂದು ನುಡಿಯ.
ಆದರದಕೆ ಕೊಂಡಿಯಿತ್ತು,
ಎದೆಯ ಚುಚ್ಚಿ ಕೊರೆಯಿತು.

‘ಯುವಕ’ನೆನ್ನುವರಿವು, ಅಯ್ಯೊ,
ಅವನ ತೆರದೊಳೆನಗೆ ಇತ್ತೆ?
ಆದರೀಗ ಅದರ ತಿಳಿವು
ಎದೆಯನೆಂತು ಇರಿವುದು!
* * *
ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಆದರೆಷ್ಟು ನೋವು: ಬಾಲ್ಯ
ಹೋದುದೆಂದು ತಿಳಿಯಲು!
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...