Home / ಬಾಲ ಚಿಲುಮೆ / ಕವಿತೆ / ಪಾಂಡು-ಮಾದ್ರಿಯರ ಪ್ರಸಂಗ

ಪಾಂಡು-ಮಾದ್ರಿಯರ ಪ್ರಸಂಗ

-ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಗಾಂಧಾರಿ ಮತ್ತು ದಾಸಿಯರಿಂದ ದುರ್ಯೋಧನ ದುಶ್ಯಾಸನಾದಿಯಾಗಿ ನೂರೊಂದು ಮಂದಿ ಮಕ್ಕಳು ಜನಿಸಿ ಸಂತಸವನ್ನುಂಟುಮಾಡಿದ್ದರೆ, ಅತ್ತ ಪಾಂಡುವು ನಿಯೋಗಪದ್ಧತಿಯಲ್ಲಿ ಕುಂತಿಯಿಂದ ಯುಧಿಷ್ಠಿರ, ಭೀಮ, ಅರ್ಜುನರೆಂಬ ಮೂರು ಮಂದಿ ಮಕ್ಕಳನ್ನೂ ಮಾದ್ರಿಯಿಂದ ನಕುಲ, ಸಹದೇವರೆಂಬ ಇಬ್ಬರು ಮಕ್ಕಳನ್ನೂ ಪಡೆದುಕೊಂಡ ಬಳಿಕ ಇನ್ನೂ ಕೆಲವು ಕಾಲ ಅಲ್ಲಿನ ಪ್ರಶಾಂತ ವಾತಾವರಣದಲ್ಲಿಯೇ ಇರಲಿಚ್ಛಿಸಿ ಹಿಮಾಲಯದ ಶತಶೃಂಗ ಪರ್ವತಗಳ ತಪ್ಪಲಿನಲ್ಲಿ ಆಶ್ರಮವೊಂದನ್ನು ನಿರ್ಮಿಸಿಕೊಂಡು ಐವರು ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದನು. ಹೀಗೆ ನಾಲ್ಕು ವರ್ಷಗಳು ಕಳೆದುವು-

ವಸಂತಮಾಸದ ಸಮಯದೊಳೊಂದಿನ ಎಲ್ಲೆಡೆಯಲ್ಲೂ ಸಂಭ್ರಮವು
ಮಾವಿನ ಚಿಗುರಲಿ ಕೋಗಿಲೆ ಕೂಜನ ಅರಳಿದ ಹೂಗಳ ಸಿರಿನಗುವು
ಸಂಭ್ರಮದಿಂದಲಿ ಮಧುವನು ಹೀರುವ ಸೊಕ್ಕಿದ ದುಂಬಿಯ ಝೇಂಕಾರ
ಸಗ್ಗದ ಸೊಬಗಿನ ಹಿಗ್ಗಿನ ಹಗಲಲಿ ಕಾಮನಬಿಲ್ಲಿನ ಠೇಂಕಾರ!
ಪಾಂಡುರಾಜನಲಿ ಹೊಸ ಬದಲಾವಣೆ ವರ್ಣಿಸಲಾಗದ ಅನುಭೂತಿ
ನವಚೇತನದುತ್ಸಾಹವು ಅವನಲಿ ಯೌವನ ಕಾಲದ ಸಂಕ್ರಾಂತಿ
ವೈದ್ಯರು ಅನುದಿನ ನೀಡಿದ್ದಂತಹ ಚಿಕಿತ್ಸೆ ಫಲಕೊಡತೊಡಗಿತ್ತು
ಪುರುಷತ್ವದ ಲಕ್ಷಣ ಅವನೆದೆಯಲಿ ಪುಟಿದೇಳಲು ಹಾತೊರೆದಿತ್ತು!
ಪೂರ್ಣ ಚಿಕಿತ್ಸೆಯು ಫಲಿಸುವವರೆಗೂ ಹೆಣ್ಣಿನ ಸಂಗವು ಬೇಡೆಂದು
ಮಕ್ಕಳ ಫಲಕ್ಕೆ ಚಿಕಿತ್ಸೆ ನೀಡಿದ ಸಿದ್ಧರು ನುಡಿದಿದ್ದರು ಅಂದು
ಆದರೆ ಸಿದ್ಧರ ಮಾತನು ಮರೆತನು ಚಿಕಿತ್ಸೆ ಫಲಿಸಿದ ಭರದಲ್ಲಿ
ಉತ್ಸಾಹದ ಅಮಲೇರುತಲಿದ್ದಿತು ಉಕ್ಕುವ ಅಲೆಗಳ ತೆರದಲ್ಲಿ!
ಹಲವು ವರುಷಗಳ ತಪಸಿನ ಫಲವದು ಸಿದ್ಧಿಸಿ ಅವನಿಗೆ ಒಲಿದಿರಲು
ತನ್ನಯ ಅಂಶದ ಮಗನನ್ನು ಪಡೆಯುವ ಕಾತರ ಅವನಲಿ ಬಲಿತಿರಲು
ಪಟ್ಟದರಾಣಿಯು ಕುಂತಿಗೆ ತಿಳಿಸದೆ ಕಿರಿಯ ಮಡದಿಯಲಿ ಅನುರಕ್ತ
ಸುರಸುಂದರಿ ಆ ಮಾದ್ರಿಯ ಮೋಹದಿ ಉಕ್ಕುತಲಿದ್ದಿತು ಬಿಸಿರಕ್ತ!

ಪಾಂಡುವು ಸಂತಸದಲೆಯಲ್ಲಿ ತೇಲುತ ಅವಳಲಿ ಮನವನು ನಿಲಿಸಿದನು
ತನ್ನಲ್ಲಿಯ ಬದಲಾವಣೆಯೆಲ್ಲವ ಮೆಲ್ಲನೆ ಅವಳಿಗೆ ಉಸುರಿದನು
ವಿಷಯವ ತಿಳಿಯುತ ಹಿಗ್ಗಿದ ಮಾದ್ರಿಯು ಸ್ವರ್ಗವ ಕಾಣಲು ಕಾತರಿಸಿ
ಕುಂತಿಗೆ ಮೂವರು ಮಕ್ಕಳು ಇರುವರು ತನಗಿಬ್ಬರು ಎಂಬುದ ತಿಳಿಸಿ
ಗಂಡನ ಹೇಗೋ ಒಪ್ಪಿಸಿಬಿಟ್ಟಳು ಮಂಡಿಸಿ ತನ್ನಯ ಸಿದ್ಧಾಂತ
ಕುಂತಿಯ ಕಣ್ಣನು ತಪ್ಪಿಸಿ ಇಬ್ಬರೂ ನಡೆದರು ಹುಡುಕುತ ಏಕಾಂತ!

ಆಹಾ! ಚಿಗುರಿತು ಹಸುರಿನ ಪಲ್ಲವ ಓಹೋ! ವಸಂತನಾಗಮನ
ಕುಹೂ ಕುಹೂ ಕೋಗಿಲೆ ಕೂಜನದಲ್ಲಿ ಆಹಾ! ಅದೆಂತಹ ಮಧುಗಾನ
ಮಧುರ ಮಧುರ ಮಧು ಮಲ್ಲಿಗೆ ಬನದಲಿ ಮದೋನ್ಮತ್ತ ದುಂಬಿಯ ಗಾನ
ಮಧುವು ತುಂಬಿ ಹೂವೆದೆಯ ಭಾಂಡದಲಿ ಮಧುಕರನಿಗೆ ಅಮೃತಪಾನ

ವಸಂತಮಾಸದ ಹಸುರಿನ ಪರಿಮಳ ಎಲ್ಲೆಡೆಯಲ್ಲೂ ಹರಡಿರಲು
ಹಸುರಿನ ಚಿಗುರಲಿ ಅರಳಿದ ಹೂಗಳು ದುಂಬಿಯ ತನ್ನೆಡೆ ಸೆಳೆದಿರಲು
ಹರಿಯುವ ನದಿಯಲ್ಲಿ ಅಲೆಗಳ ಕಲರವ ಕಿವಿಗಳಿಗಿಂಪನು ಸುರಿದಿರಲು
ಬಿಸಿಲಿನ ಬೇಗೆಯ ತಣಿಸಲು ಮೆಲ್ಲಗೆ ತಣ್ಣನೆ ಗಾಳಿಯು ತೀಡಿರಲು
ಪಾಂಡುವು ಮಾದ್ರಿಯು ಸಂಭ್ರಮದಿಂದಲಿ ನಡೆದರು ಹರಿಯುವ ನದಿಯ ಬಳಿ
ಚೆಂದದಿ ಹರಿಯುವ ಸುಂದರ ಜಲದಲಿ ಮಿಂದರು ದಂಪತಿ ಜೊತೆಯಲ್ಲಿ
ಒಬ್ಬರ ಮೇಲಿನ್ನೊಬ್ಬರು ನೀರನು ಎರಚುತ ಕ್ರೀಡೆಯನಾಡಿದರು
ಬ್ಬರೂ ತಬ್ಬಿ ಅಬ್ಬರದಲೆಯಲಿ ಜೊತೆಜೊತೆಯಲ್ಲಿಯೆ ತೇಲಿದರು!
ಯೌವನದುತ್ಸಾಹದಿ ಮುಳುಗೇಳುವ ದಂಪತಿ ಮೈಗಳ ಶಾಖಕ್ಕೆ
ಹರಿಯುವ ನದಿಯೂ ಬಿಸಿಯೇರಿದ್ದಿತು ಬದುಕಿನಲ್ಲಿ ಅಪರೂಪಕ್ಕೆ
ತೇಲುತ ಮುಳುಗುತ ಆಟವನಾಡುತ ಕೈಗಳ ಬೆಸೆಯುತ ಹೊರಬಂದು
ತೀರದ ಮರಳಲಿ ಆಡುತ ಹೊರಳುತ ನೀರೊಳಗುರುಳುತ ಮಿಂದೆದ್ದು
ದಾಹದಿ ದಹಿಸುವ ದೇಹಗಳೆರಡನು ತಣಿಸುವ ಯತ್ನವ ಮಾಡಿದರು
ದೇಹದ ನರನಾಡಿಗಳಲ್ಲಿ ತುಂಬಿದ ಮೋಹದ ಜೊತೆಯಲಿ ಆಡಿದರು!
ದಡದಲಿ ಬೆಳೆದಿಹ ಹಚ್ಚನೆ ಹಸುರಿನ ಗರಿಕೆಯೆ ಮೇಲುರುಳಾಡುತ್ತ
ಹುಲ್ಲಿನ ಮೆತ್ತನೆ ಹಾಸಿಗೆಯಲ್ಲಿಯ ಬೆಚ್ಚನೆಯಪ್ಪುಗೆ ಸವಿಯುತ್ತ
ಇಷ್ಟೂ ಕಾಲದ ಸಂಕಟವೆಲ್ಲವ ಜಾಡಿಸಿ ದೂರಕೆ ದೂಡಿದರು
ಇಚ್ಚೆಯನರಿತಿಹ ಸುಂದರ ದಂಪತಿ ಸ್ವರ್ಗಕೆ ಕಿಚ್ಚನು ಹಚ್ಚಿದರು!
ಹಿಂದಿನ ದಿನಗಳು ನೆನಪಿಗೆ ಬಂದವು ಯೌವನದಲ್ಲಿನ ಘಳಿಗೆಗಳು
ಅರಮನೆಯಲ್ಲಿನ ದಾಸಿಯರೊಂದಿಗೆ ಕಳೆದಂತಹ ರಸನಿಮಿಷಗಳು
ಅಂಕೆಯು ಇಲ್ಲದೆ ಹರಿದಾಡಿದ್ದನು ಯೌವನ ಮದದಲಿ ಆ ದಿನವು
ಬೆಂಕಿಯ ಸಂಗಡ ಸರಸವಾಡಿದ್ದ ಅಂಗನೆ ಸಂಗದೊಳನುದಿನವು!
ಇಂದಿನ ಆನಂದಕೆ ಸಮವೆಲ್ಲಿದೆ? ಗಂಡಸು ಎನಿಸಿದ ಸಂತಸವು!
ಹೆಂಡತಿಯರು ಅವರೆಷ್ಟೇ ಇದ್ದರೂ ಬಂಡನು ಉಣಿಸುವ ಸಂಭ್ರಮವು
ಚಿನ್ನದ ಬಣ್ಣದ ಸುಂದರಿ ಎನಿಸಿದ ಮಾದ್ರಿಯ ಸಂಗವು ಒಂದು ಕಡೆ
ತನ್ನಯ ಅಂಶದಿ ಮಗುವನು ಪಡೆವೆನು ಎನ್ನುವ ಖುಷಿ ಇನ್ನೊಂದು ಕಡೆ
ಸುಖವನು ಸೂರೆಯ ಮಾಡುತ ಪಾಂಡುವು ಮಾದ್ರಿಯ ಸಂಗಡ ರಮಿಸಿದನು
ಮುಖವನು ಹುದುಗಿಸಿ ಅವಳೆದೆ ಬಯಲಲಿ ಹಾಗೆಯೆ ನಿದ್ರೆಗೆ ಜಾರಿದನು!

ಹರಿಯುವ ನದಿಯೂ ಪರವಶಗೊಳ್ಳುತ ಮೆಲ್ಲಗೆ ತವಳಲು ತೊಡಗಿತ್ತು
ಬಿರಿದಿಹ ಹೂವು ದುಂಬಿಗೆ ಬಂಡನು ಉಣಿಸಿ ಧನ್ಯತೆಯ ಪಡೆದಿತ್ತು
ನೀರಿನ ಮೇಗಡೆ ಬೀಸುವ ತಣ್ಣನೆ ಗಾಳಿಯು ಹಿತವನು ನೀಡಿತ್ತು
ಹಸುರಿನ ಎಲೆಗಳ ಮರ್ಮರ ಧ್ವನಿಯೂ ತಾಳವ ಹಾಕುತ ಹಾಡಿತ್ತು
ತಾಳಮೇಳಗಳು ಹೊಂದಿಕೆಯಾಗುತ ಹೊಸರಾಗವು ಒಡಮೂಡಿತ್ತು
ಸರಿಗಮಪದನಿಸ ರಾಗವ ಗುನುಗುತ ಪರಿಸರದಲ್ಲಿ ಬೆರೆತಾಡಿತ್ತು
ಸಂಗೀತದ ಸುಧೆ ಎಲ್ಲೆಡೆಯಲ್ಲೂ ಸಂತಸದಲಿ ಹೊರಹೊಮ್ಮಿತ್ತು
ತಲ್ಲೀನತೆಯಲಿ ಮೈಮರೆಯುತ್ತಲಿ ಕವಿಮನ ಹಾಡಲುತೊಡಗಿತ್ತು!

ಮಾದ್ರಿಯು ಮಂಪರಿನಲ್ಲಿಯೆ ಇದ್ದಳು ಮರದಡಿ ತಣ್ಣನೆ ನೆರಳಲ್ಲಿ
ಮೆಲ್ಲನೆ ನಿಮಿಷಗಳುರುಳುತಲಿದ್ದವು, ಪಾಂಡುವು ಮಾದ್ರಿಯ ಮಡಿಲಲ್ಲಿ
ಹಕ್ಕಿಯ ಕಲರವ ಎಚ್ಚರಿಸಿದ್ದಿತು ಸುಖದಲಿ ಮುಳುಗಿದ ಮಾದ್ರಿಯನು
ಮೆಲ್ಲನೆ ಮಾದ್ರಿಯು ಕಣ್ಣನು ತೆರೆಯುತ ಒಲವಲಿ ಕರೆದಳು ಇನಿಯನನು
ಪಾಂಡುವು ಸುಮ್ಮನೆ ಮಲಗೇ ಇದ್ದನು ಅತ್ತಿತ್ತಲುಗದೆ ಇದ್ದಲ್ಲಿ
ಮಾದ್ರಿಯು ಅವನನು ಅಲುಗಿಸಿ ನೋಡಲು ಉತ್ತರವಿರಲಿಲ್ಲವನಲ್ಲಿ!
ಮಧುರತೆ ತುಂಬಿದ ಸುಖವನು ಉಣಿಸಿದ ದೇಹವು ನಿಶ್ಚಲವಾಗಿತ್ತು
‘ಅಯ್ಯೋ!’ ಎನ್ನುತ ಚೀರಿದ ವನಿತೆಯ ಮಾರ್ಧನಿ ಎಲ್ಲೆಡೆ ಮೊಳಗಿತ್ತು!!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...