Home / ಕವನ / ಕವಿತೆ / ಭೂದೇವಿಯ ನೋಟ

ಭೂದೇವಿಯ ನೋಟ

ಜಗದ ಮೌನವನೊಡೆದು ಗಗನ ಗರ್ಭವ ಸೀಳಿ
ಜಲದ ಶಾಂತಿಯ ಕಡೆದು ಯುಗಯುಗದ ಬಗೆ ಕನಲಿ
ಉರಿವ ಬೆಂಕಿಯ ಜ್ವಾಲೆ ಹರಿವ ಗಾಳಿಯನಾಳಿ
ಮಾನವರ ಜೀವನವ ಬಲಿಗೊಳ್ಳುತಿದಿರಾಳಿ
ಸತ್ಯ ಧರ್ಮದ ಹೆಸರ ಬಗೆಯೆತ್ತಿ ಕರೆಯುತಿದೆ
ಲೋಕವೇ ಬರೆದಿಟ್ಟ ಶಾಸನವ ಮುರಿಯುತಿದೆ
ಕ್ರಾಂತಿ ಮಾರಿಯ ಬರವು ಲೋಕಕಾಯ್ತು.

ಮೂಡ ಪಡು ಬಡಗ ತೆಂಕಣದ ಮೂಲೆಗಳಿಂದ
ಬದುಕುಗಳ ಬಗೆಯೊಗೆದು ಕಾಲದೀ ಕರೆಯಿಂದ
ಹೆತ್ತೊಡಲ ಮಮತೆಯನು ಹೊತ್ತೊಡಲ ಶಾಂತಿಯನು
ತಿಳಿಯಲಾರದ ಹೃದಯ ನೂಕುತಿದೆ ಮೋಹವನು
ಈ ಮಣ್ಣು ವಿಷ ಹುಣ್ಣು. ನುಡಿವೆಣ್ಣು ಸುಡುಗಣ್ಣು
ಧರ್ಮದೀ ಹೆಸರಿನಲಿ ಕರ್ಮಗಳನುರಿಸುತಿದೆ
ಆಸೆಗಳ ಬಗಯಿಂದ ಪ್ರಳಯವಾಯ್ತು.

ಲೋಕದಾಯುಷ್ಯದಲಿ ಯುಗಯುಗಗಳುರುಳಿದುವು
ಯುಗದ ಯಂತ್ರವ ನಡೆಸಿ ನೋಡುವನು ರವಿ ದಿನವು
ರಜನಿಯನ್ನಾಳುತಲಿ ಕಳದ ಶಶಿ ನಿಶಿ ಹಲವು
ಜಲರಾಶಿಯೇರಿನಲಿ ಪ್ರಳಯಗಳು ದಾಟಿದುವು
ಆಸೆಗಳ ನೆಲೆಯಿಲ್ಲ, ದೋಷಗಳ ಬಗಯಿಲ್ಲ
ಒಂದು ಗುಣ ಒಂದು ನೆಲೆ ಒಂದು ಕೃತಿ ಒಂದು ಸ್ಮೃತಿ
ಶಾಂತಿಧರ್ಮದ ಬೀಡು ಪಾಲಿಗಾಯ್ತು.

ಜಗದಗಲ ನಭದಗಲ ಜಲಗಗನ ರಣವಾಗಿ
ಭೀಕರದ ದೃಶ್ಯದಲಿ ಕ್ರಾಂತಿ ರಾಕ್ಷಸಿಯಾಗಿ
ಶಾಂತಿ ದಾಂತಿಗೆ ಮಣಿವ ಮಕುಟಗಳ ಹಗೆಯಾಗಿ
ಜಗದ ಬದುಕನು ಮುರಿವ ಕಾಣದಿಹ ತೊಡರಾಗಿ
ನುಡಿಯೊಂದು ನಡೆಯೊಂದು ಮನವೊಂದು ಗುಣವೊಂದು
ಕರುಣರಸಕಿಂಬಿಲ್ಲ ಅರುಣರಸಧಾರೆಯಲಿ
ಬಿಸಿ ನೆತ್ತರೀಂಟುತಿದೆ ಕಾಲವಿಂದು.

ಬಂಡೆಬಂಡೆಗಳುರುಳಿ ಹುಡಿಯಾಗಿ ಹಸರಳಿಸಿ
ಬದುಕಿನಾಗರವಾದ ಲೋಹಗಳು ರೂಪಳಿಸಿ
ಸುಖದ ಬೀಡೆನಿಸಿರ್ದ ಓಷಧಿಯು ಗುಣ ಮರೆಸಿ
ಗಾಳಿ ನೀರುಗಳಲ್ಲಿ ಹಸಿದಿಹವು ಮೈಮರೆಸಿ
ಮುಟ್ಟಿದರೆ ನೋಡಿದರೆ ಕೇಳಿದರೆ ಹೇಳಿದರೆ
ದೇಹವನೆ ಸುಟ್ಟಾವು ಜೀವವನೆ ಕೊಂಡಾವು
ಜಗದ ಜೀವದ ಜೀವ ಮೃತ್ಯುವಾಯ್ತು.

ಶಾಂತಿ ಸತ್ಯವು ಸೆರೆಗೆ ದ್ವೇಷಕರ್ಮವು ಹೊರಗೆ
ಸಾಧು ಶೌಚವು ಮರೆಗೆ ಪಾಪಸೂತಕ ಕೊಲೆಗೆ
ಸುಖದ ಸಂತಸವಡಗೆ ಹಿಂಸೆ ಭಯಗಳು ನೆರೆಗೆ
ಪುಣ್ಯಭೂಮಿಯ ಮಣ್ಣು ಮನೆಯಾಯ್ತು ಹಣಗಳಿಗೆ
ಇಲ್ಲಿ ಮೊರೆಯಲ್ಲಿ ಸೆರೆ, ಇಲ್ಲಿ ಭಯಮಲ್ಲಿ ಕೊಲೆ
ಉಸಿರುಸಿರು ಹೂಗಯಾಗಿ ಸಿಡಿಮದ್ದು ಕರೆದಾವು
ತವರಿಗೇ ಕಿಚಿಕ್ಕಿ ಸುಡುವುದಾಯ್ತು.

ಭೂಮಿಯಾಚೆಯ ಕರೆಗೆ ತನುವೊಡ್ಡಿ ನಡೆದಿಹರು
ಆಚೆ ಈಚೆಯ ಕೃತಿಗೆ ಸಿಲುಕಿ ಮರೆಯಾಗಿಹರು
ಹಸಿವಿಗಾಹುತಿಯಾಗಿ ಕೆಲರು ಶಿಲೆಯಾಗಿಹರು
ನೀರಡಸಿ ಉಸಿರಾರಿ ಹಲರು ಹೆಣವಾಗಿಹರು
ಬದುಕೇಕೆ ಜಗೆಯೇಕೆ ಹೊಲಸು ಜೀವನವೇಕೆ
ಕಾಲರುದ್ರನ ಕರೆಗೆ ತಲೆವಾಗಿ ನಡೆದಿಹರು
ಪ್ರೇಮಪಾಶವ ಹರಿದು ಹೃದಯದಿಂದ.

ಆಲದೆಲೆ ನೌಕೆಯಲಿ ಕ್ಷೀರಸಾಗರದಲ್ಲಿ
ಕ್ರೀಡಿಸುವ ವಿಷ್ಣುವಿನ ಸುಳಿವೆಲ್ಲಿ ಇರವೆಲ್ಲಿ?
ಪಾರ್ವತಿಯ ಕೈಸೇರಿ ಕೈಲಾಸಗಿರಿಯಲ್ಲಿ
ನೃತ್ಯಲಾಸ್ಯದಿ ನಲಿವ ಶಂಕರನ ನಡೆಯೆಲ್ಲಿ?
ಕಾಣೆವೋ ಮರೆತೆವೋ ತಿಳಿಯೆವೋ ನೋಡೆವೋ
ದೇವರಿಹ ನೆನವೊಂದು ಭಯವೊಂದು ಕಾಣದೀ
ವಿಲಯಭೈರವಮೂರ್ತಿ ಚೇಷ್ಟೆಯಿಂದ.

ಅವತಾರಪುರುಷರಿಂದಾಗದಾ ನವಯುಗದ
ನಿರ್ಮಾಣ ಮಾಡುವೆವು ನಿಲಿಸುವೆವು ಹೊಸ ಜಗದ
ಕೋಟೆಯಲಿ ಶಾಂತಿಯನ್‌ ಕರೆತಂದು ಸವಿಸುಖದ
ಪೆಂಪುಬಿಂಪುಗಳುಣಿಸಿ ತಣಿಸುವೀ ಹಿರಿಮನದ
ಕಾಣದಿಹ ಕನಸುಗಳು ಕೇಳದಿಹ ವಾಣಿಗಳು
ತೋರುತಿಹವೆಮಗಿಂದು ನುಡಿಯದಿಹ ಸತ್ಯಗಳು
ಕಾಲರುದ್ರನ ನೃತ್ಯದೆಸಕದಿಂದ.

ಇದೊ ಸಿದ್ದರಾಗಿಹೆವು ಕಾಲಪುರುಷನ ಕರೆಗೆ
ಇದು ನೋಡಿ ಅದು ಕೇಳಿ ನೀಗಿ ನೆಮ್ಮದಿಯ ಬಗೆ
ಈ ಬಾಳು ಈ ಗೋಳು ಸಾಕೆನಿಸೆ ಭೂತಾಯ್ಗೆ
ಸಾವು ನೋವುಗಳೆಲ್ಲ ಹೋಗಲಿಂದೇ ಕೊನೆಗೆ
ಹೂಸ ಯುಗದ ಸೋದರರು ಮಂಗಳವ ಹಾಡುವರು
ಕಲ್ಯಾಣಮಂಟಪವ ಕಟ್ಟುವರು ಮೆರೆಯುವರು
ಭೂತಾಯ ಸಿಂಗರಿಸಿ ತಿಲಕವಿರಿಸಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...