Home / ಕವನ / ಕವಿತೆ / ಮಾನಸ ಆತ್ಮದಲ್ಲಿ

ಮಾನಸ ಆತ್ಮದಲ್ಲಿ

(ಸಾವಿತ್ರಿ)
ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು.
ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು.
ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು.
ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು.

ಲವಲವಿಕೆಯೆಲ್ಲ ಎಕ್ಕೆಕ್ಕಿ ನಡೆದು ಮುಗ್ಗರಿಸಿಕೊಂಡು ಬಿತ್ತು.
ಬರಿ ಸಾಮಸೂಮ ಹಬ್ಬುತ್ತ ಒಮ್ಮೆಗೆಲೆ ಸ್ತಬ್ಧವಾಗಿ ಇತ್ತು.
* * *

ನಿರಾಕಾರ, ನಿಶ್ಚರ್ಯ ಮತ್ತು ನಿಃಶಬ್ಬ ಪುರುಷನೊಬ್ಬ.
ಹೊತ್ತು ಹೊರತಾಗೆ, ತನ್ನ ತಿಳಿದವನು ತಾನೆ ತಾನು ಆಗಿ,
ನಿಸ್ತರಂಗದಾ ಆಳದಲ್ಲಿ ಅರಿವೆನಿಸಿ ಆಗಳೂನೂ
ನಿರ್ಮಾತನಲ್ಲ, ನಿರ್ಮಾಣವಲ್ಲ, ಪೂರಾ ಅಜಾತನಾಗಿ

ಒಂದರದೆ ಹಲವು, ಇವನಿಂದೆ ಹರವು, ಎರವಿಲ್ಲದೊಬ್ಬನೊಬ್ಬ,
ಇಲ್ಲದಕೆ ಅಳತೆ ಬೆಳ್ಳಂ ಬೆಳಕು-ಮುಸುಕಿತ್ತು ಗುಪ್ತವಿರಿಸಿ.
ಅವ್ಯಕ್ತ ತನ್ನ ಆವರಣಗಳಲಿ ಕಾಪಾಡಿದಂತೆ ಉಳಿಸಿ,
ವಿಶ್ವದೊಂದು ವಿಷ್ಕಂಭದಾಚೆ ಲೋಕಾಲೋಕ ದಾಟಿ,
ಬ್ರಹ್ಮದಕ್ಷರದ ಪರಂಧಾಮ ಏಕೋ ಏಕವೆನಿಸಿ,

ಅರಿದಾದ ಗೂಢಕಾರಣವು ತಾನು ದುರ್ಭೇದ್ಯದಾತನಾಗಿ,
ಚಿರಂತನವು ತಾ, ತಾನನಂತ್ಯ ಕೇವಲವಗಮ್ಯವಾಗಿ,
* * *

ಆಕಾರವಿರದ ಆಕಾರವೊಂದು ಆತ್ಮಾರ್ಥವೆಂದು ತಿಳಿಯೆ,
ತುಹದ್ಭೂತ ಗತಿಸಿರಲು ಅದರ ಘನಛಾಯೆ ಹಿಂದೆ ಉಳಿಯೆ,
ಆ ಅಪಾರ ಪಾರಾವಾರದಲ್ಲಿಳಿವ ಮೊದಲು ಗಳಿಗೆ,
ಅಳಿವೆ ಅಲೆಯಲೆಯ ಕೊನೆಯ ಕಲೆಯ ಅನುಭವದ ಹಾಗೆ ಕಳೆಯೆ,

ಶೂನ್ಯ ಸಾಗರದ ತೀರದಲ್ಲೆ ಇಂಗಿಂಗಿ ಜಡಧಿ ಹೋಗೆ,
ಬಯಲು ಭಾವನೆಯ ತೇವ ಭಾವಿಯಲೆ ಆರಿಹೋದ ಹಾಗೆ,
ಅವಕಾಶವನ್ನು ನೆಂಬಿಲ್ಲ ಎಂಬ ಮಹದಾತ್ಮಧ್ಯಾನ ಪ್ರಖರ,
ಕಾಲವನೆ ಕೊಸರಿ ನಿಡಿದಾದ ತಾನು ಶಾಶ್ವತದ ಶೂನ್ಯಶಿಖರ,

ಅದ್ಭುತವು ಭವ್ಯ ವ್ಯಭಿಚರಣೆ ಇದರ ಸುಸ್ಥಾಣು ದಾಂತಶಾಂತ.
ಜಗಜೀವಗಳನು ತಾ ಹೊರಗು ಮಾಡಿ ನಿಬ್ಬೆರಗು ಮೌನವಾಂತ
ಎರಡರಿಯದೊಂದು ಕೈವಲ್ಯ ನೈಜ ಬರಿಬೆತ್ತಲೆತ್ತಲೂನೂ.
ಕಂಡಿತ್ತು ಅವನ ಕಡು-ರಾಗಿ ಜೀವ ಅರಸರಸಿ ಕೊನೆಗೆ ತಾನು.
* * *

ಆಳಾದ ಶಾಂತಿ ಅಲ್ಲಿತ್ತು, ಇಲ್ಲ ಹೆಸರಿರದ ಶಕ್ತಿಯಾಕೆ
ಇರಲಿಲ್ಲ ಅಲ್ಲಿ ಮಾಧುರ್ಯವಂತೆ, ಮಾಶಕ್ತಿ ನಮ್ಮ ಮಾತೆ
ತನ್ನೆದೆಗೆ ಅವಚಿಕೊಳುವವಳು, ತನ್ನ ಸಂತತಿಯ ಬಾಳ್ಕೆ ಜೋಕೆ.

ಏನವಳ ಹಿಡಿತ, ಸಕಲ ಪ್ರಪಂಚ ಆ ಅಗಲ ತಕ್ಕೆಯಲ್ಲಿ
ನೆಲೆ ಹತ್ತದಂಥ ಹರ್ಷಪ್ರಮೋದ ಆನಂತ್ಯದಬ್ಧಿಯಲ್ಲಿ
ನಾಳೆ ನಾಡಿದಿನ ಬಾಳಕಾಳು ಬೆಳೆಸೆನುವ ಮೋದಮುದ್ರೆ
ದೈವದುನ್ಮಾದದಲ್ಲಿ ಬಿಳಿಗಾವು ಎದ್ದ ಭಾವಭದ್ರೆ.
* * *

ಬೆಳಕುಕತ್ತಲೆಯ ಎರಡು ಗೋಲಗಳು ಒಂದನ್ನೊಂದು ದೂಡೆ,
ಮೇರೆಗೆರೆಯಲ್ಲಿ ಆತ್ಮಚರಿತಕ್ಕೆ ಗೀರುಹಾದಿ ಮಾಡೆ
ಕ್ಷಣಿಕ ಘಟನೆಗಳ ರಾಜ್ಯದಲ್ಲಿ; ಜೀವಪ್ರಪಂಚದಲ್ಲಿ.
ಬದುಕಲಿಕ್ಕೆ ಸಾಯುವರು ಅಲ್ಲಿ ಬದುಕುವರು ಸಾವಿಗೆಲ್ಲಿ?

ಮರಳಿ ಮರಳಿ ಮರಣವನೆ ಉಂಡು ಅಮರತ್ವ ಭೋಗಭಾಗಿ
ತನ್ನ ಕೃತಿಯ ಗೋಪುರದ ಚಕ್ರದಲಿ ವಕ್ರವಕ್ರವಾಗಿ
ಆಡಿದ್ದೆ ಆಡಿ ಮಾಡಿದ್ದೆ ಮಾಡಿ ಬಲಗೊಂಬುವಂತೆ ಆಗಿ

ಮೂಲ ಭಂಡವಲು ಮುಗಿಯಲಿಲ್ಲ, ನಿಜ, ಬೆಳೆಯಲಿಲ್ಲ ಕೂಡ
ಜ್ಞಾನವೆಲ್ಲ ಅಜ್ಞಾನದಂತೆ ಮೊದಲಿದ್ದ ಹಾಗೆ ಮೂಢ.
ಆತ್ಮದಾನಂತ್ಯದಿಂದ ಮರೆಯಾಗಿ ಅದುವು ಸಾಗುತಿತ್ತು.
ಇರವು ಬಂಧನದ ಬಾಳು; ಸಾವುದೇ ಮುಕ್ತಿ ಎನಿಸಲಿತ್ತು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...