Home / ಲೇಖನ / ಇತರೆ / ವಚನ ವಿಚಾರ – ಹೀಗೆ ಸಂತೋಷ

ವಚನ ವಿಚಾರ – ಹೀಗೆ ಸಂತೋಷ

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು
ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ
ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ
ಚೆನ್ನಮಲ್ಲಿಕಾರ್ಜುನಯ್ಯಾ
ಗುರುಪಾದವ ಕಂಡು ಧನ್ಯಳಾದೆ ನೋಡಾ

[ಅರಲುಗೊಂಡ ಬತ್ತಿದ ಬರಲುಗೊಂಡ-ಒಣಗಿದ]

ಅಕ್ಕಮಹಾದೇವಿಯ ವಚನ. ಅಕ್ಕ ತನ್ನ ಗುರುವನ್ನು ಕಂಡು ಆದ ಸಂತೋಷವನ್ನಿಲ್ಲಿ ವ್ಯಕ್ತಪಡಿಸಿದ್ದಾಳೆ. ಈ ವಚನದ ಚೆಲುವು ಇರುವುದು ಆಕೆ ಬಳಸಿರುವ ಹೋಲಿಕೆಗಳಲ್ಲಿ, ಮಾತಿನ ಲಯದಲ್ಲೇ ಮನಸ್ಸಿಗೆ ಆದ ಸಂತೋಷ ನೆಮ್ಮದಿಗಳನ್ನು ಪ್ರಕಟಿಸಿರುವ ರೀತಿಯಲ್ಲಿ.

ಬತ್ತಿ ಹೋದ ಕೆರೆಗೆ ತೊರೆಯೇ ಹರಿದು ಬಂದರೆ ಬತ್ತಿದ ಕೆರೆಗೆ ಆಗುವ ಸಂತೋಷದಂತೆ, ಒಣಗಿ ಬರಲು ಬರಲಾಗಿರುವ ಸಸಿಯ ಮೇಲೆ ಮಳೆ ಸುರಿದಾಗ ಆಗುವ ಸಂತೋಷದಂತೆ ಗುರುವಿನ ಪಾದ ಕಂಡಾಗ ನನಗನ್ನಿಸಿತು. ಇಹದ ಸುಖ, ಪರದ ಗತಿ ನನ್ನತ್ತ ನಡೆದುಬಂದಂತಾಯಿತು ಎನ್ನುತ್ತಾಳೆ.

ಬತ್ತಿ ಹೋದದ್ದು, ನಿರ್ಜೀವವೇ ಆದದ್ದು ಮತ್ತೆ ತುಂಬಿಕೊಂಡ, ಜೀವಂತವಾದ ಸಾರ್ಥಕತೆ ಗುರುವನ್ನು ಕಂಡಾಗ ಆಯಿತು. ಇದು ಇಹದ ಸುಖ, ಹಾಗೆಯೇ ಗುರುವು ಪರದ ದಾರಿಯನ್ನೂ ಮುಂದಿನ ಗತಿಯನ್ನೂ ತೋರಬಲ್ಲವನು. ಗುರುವನ್ನು ದೈವದ ಇನ್ನೊಂದು ರೂಪವೇ ಎಂದು ಕಾಣುವುದರಿಂದ ಚನ್ನಮಲ್ಲಿಕಾರ್ಜುನನನ್ನು ತೋರಬಲ್ಲಾತನ ಕಂಡ ಸಂತೋಷವನ್ನು ಈ ವಚನ ಹೇಳುತ್ತದೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...