Home / ಲೇಖನ / ಇತರೆ / ವಚನ ವಿಚಾರ – ಅತಿಮಥನ

ವಚನ ವಿಚಾರ – ಅತಿಮಥನ

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ
ದಿತಿಗೆಟ್ಟೆ ನಾನು ಅದರಿಂದ
ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ
ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ
ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು
ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ
ಕಪಿಲಸಿದ್ಧಮಲ್ಲಿಕಾರ್‍ಜುನಾ

[ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ, ಗತಿ-ಚಲನೆ, ಬಾಳು, ಭವಿಷ್ಯ]

ಸಿದ್ಧರಾಮನ ವಚನ. ಇದು ಅತಿಯಾದ ವಿಶ್ಲೇಷಣೆಯ ಅಪಾಯವನ್ನು ಕುರಿತು ಹೇಳುವಂತಿದೆ. ಅತಿಮಥನದ ಪ್ರವೃತ್ತಿಯು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತದೆ. ಮಥನ ಅನ್ನುವುದು ಅಗತ್ಯ; ಆದರೂ ಅದು ಅತಿ ಆದಾಗ ತೊಂದರೆಕೊಡುವುದು ಖಚಿತ. ಸಿದ್ಧರಾಮನಂತೆಯೇ ಅಲ್ಲಮ ಕೂಡ ವಿಚಾರವೆಂಬುದು ಸಂದೇಹಕ್ಕೆ ಒಳಗು ಎನ್ನುತ್ತಾನೆ.

ಅತಿಯಾದ ಮಥನ ನನ್ನ ಗತಿಯನ್ನು ಕೆಡಿಸಿತ್ತು. ಆದ್ದರಿಂದಲೇ ಅತಿಶಯದ, ವಿಶೇಷವಾದ, ಆಶ್ಚರ್ಯಕರವಾದ, ಬಲು ನೆಮ್ಮದಿಯನ್ನು ತರುವ ಗುರು ಭಕ್ತಿಯನ್ನು ಅರಿಯದೆ ಹೋದೆ. ಗುರು ಭಕ್ತಿ ಅನ್ನುವುದನ್ನು ದೊಡ್ಡದಾದುದರ ಬಗ್ಗೆ ಇರುವ ವಿನಯವೆಂದೂ ಅರ್ಥಮಾಡಿಕೊಳ್ಳಬಹುದು. ಗುರುವಿನ ಬಗ್ಗೆ ಭಕ್ತಿ ಇಲ್ಲದೆ, ಅತಿ ಮಥನದಲ್ಲಿ ತೊಡಗಿ, ಗತಿಗೆಟ್ಟ ನನ್ನ ಮನಸ್ಸನ್ನು ದೇವರು ತನ್ನತ್ತ ತಿರುಗಿಸಿಕೊಂಡು ಎಲ್ಲ ಅರ್ಥದ ಸಾರಾಂಶರೂಪವಾಗಿರುವ ಗುರುಭಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತಾನೆ ಸಿದ್ಧರಾಮ.

ದೇವರು ದೊಡ್ಡವನೇ ಇರಬಹುದು, ಆದರೆ ಕಣ್ಣಿಗೆ ಕಾಣುವ ‘ದೊಡ್ಡ’ ಸಂಗತಿಗಳ ಬಗ್ಗೆ ವಿನಯ, ಭಕ್ತಿ ಇರದಿದ್ದರೆ ನಿಜವಾಗಿ ದೊಡ್ಡವನಾದ ದೇವರು ಸಿಕ್ಕಲಾರ. ಅತಿಮಥನ ಎಂದೂ ನಿಲುಗಡೆಗೆ ಬಾರದು. ಎಲ್ಲ ಮಥನದ ಉದ್ದೇಶವೂ ಒಂದು ನಿರ್ಣಯವನ್ನು ತಲುಪುವುದೇ ತಾನೇ? ಹಾಗೆ ನಿಜವಾದ ತಾತ್ಪರ್ಯವೆಂದರೆ ಗುರುವಿನ ಕುರಿತ ಭಕ್ತಿ, ಅದು ಮಥನದಿಂದ ಅಲ್ಲ, ವಿಶ್ವಾಸದಿಂದ ಮೂಡುವುದು. ಅದು ಬೇಕು ಅನ್ನುತ್ತಾನೆ ಸಿದ್ಧರಾಮ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...