Home / ಕವನ / ಕವಿತೆ / ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು

ಮಾನ್ಯರಿಗೆ ಶರಣು ಜನ
ಸಾಮಾನ್ಯರಿಗೆ ಶರಣು
ಅನ್ಯರಿಗೆ ಶರಣು ಅನನ್ಯರಿಗೆ ಶರಣು
ಗಣ್ಯರಿಗೆ ಶರಣು ನಗಣ್ಯರಿಗೆ ಬಹಳ ಶರಣು

ಹೊನ್ನೆ ಮರದಡಿ ಕೂತವರಿಗೆ
ಚೆನ್ನೆಯಾಡುವ ಕನ್ನೆಯರಿಗೆ
ಕನ್ನಡದ ಜಾಣೆಯರಿಗೆ
ಕನ್ನಡದ ಜಾಣರಿಗೆ ಬಹಳ ಶರಣು

ಮೊನ್ನೆ ಹೋದವರಿಗೆ
ನಿನ್ನೆ ಬಂದವರಿಗೆ
ಮುನ್ನ ಇದ್ದವರಿಗೆ
ಇನ್ನು ಬರುವವರಿಗೆ ಬಹಳ ಶರಣು

ಅಂಕೆಗಳಲಿ ಸೊನ್ನೆಗೆ
ಸಂಕದಲಿ ದಾರಿ ಬಿಡುವವರಿಗೆ
ತೆಂಕಣ ಗಾಳಿಗೆ
ಮಂಕು ಪರಿಹರಿಸುವ ವಿದ್ಯೆಗೆ ಬಹಳ ಶರಣು

ನಿಂತ ಗಿರಿಗಳಿಗೆ
ಹರಿವ ತೊರೆಗಳಿಗೆ
ತುಂಬಿದ ಕೆರೆಗಳಿಗೆ
ಬೀಳುವ ಮಳೆಹನಿಗಳಿಗೆ ಬಹಳ ಶರಣು

ಕತೆಗೆ ಕತೆ ಹೇಳುವರಿಗೆ
ಕವಿತೆಗೆ ಕವಿತೆ ಕಟ್ಟುವರಿಗೆ
ಸುಖದಂತೆ ವ್ಯಥೆಯ ಹಂಚಿಕೊಳ್ಳುವವರಿಗೆ
ಪೃಥ್ವಿಯೇ ಸ್ವರ್‍ಗವೆಂದು ತಿಳಿದವರಿಗೆ ಬಹಳ ಶರಣು

ಕೋಲಾಟದವರಿಗೆ ಬಯಲಾಟದವರಿಗೆ
ಡೊಳ್ಳುಕುಣಿತದವರಿಗೆ
ಹಲಗೆ ಬಡಿವವರಿಗೆ
ಉಳುವ ರೈತರಿಗೆ ಬಹಳ ಶರಣು

ವೈದ್ಯರಿಗೆ ವಕೀಲರಿಗೆ
ಮದ್ಯ ಕುಡಿಯದವರಿಗೆ
ಗದ್ಯ ಬರೆವವರಿಗೆ ಪದ್ಯ ಓದುವರಿಗೆ
ಸದ್ಯ ದುಡಿವವರಿಗೆ ಬಹಳ ಶರಣು

ದೇಶವನಾಳುವ ಪ್ರಜೆಗಳಿಗೆ
ವೇಷ ಹಾಕುವ ನಟರಿಗೆ
ಕಾಶಾಯವಸ್ತ್ರಧಾರಿಗಳಿಗೆ
ಬೇಸಾಯಗಾರರೆಲ್ಲರಿಗೆ ಬಹಳ ಶರಣು

ದೀನರಿಗೆ ದಲಿತರಿಗೆ
ದಾನ ನೀಡುವ ಉದಾರಿಗಳಿಗೆ
ಜ್ಞಾನಿಗಳಿಗೆ ವಿಜ್ಞಾನಿಗಳಿಗೆ
ಧ್ಯಾನಿಗಳಿಗೆ ಮಹಾಮೌನಿಗಳಿಗೆ ಬಹಳ ಶರಣು

ನಕ್ಷತ್ರಗಳಿಗೆ ಶರಣು
ಸಕಲ ಸಾಕ್ಷಿಗಳಿಗೆ ಶರಣು
ಅಕ್ಷಯ ಕನಸುಗಳಿಗೆ ಶರಣು
ಕನಸ ರಕ್ಷಿಸುವ ಕವಿಗಳಿಗೆ ಬಹಳ ಶರಣು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...