Home / ಕವನ / ಕವಿತೆ / ಸತ್ಯ ಎಂದರೆ ಗಡಿಯಾಚೆಯ ಸುಳ್ಳು

ಸತ್ಯ ಎಂದರೆ ಗಡಿಯಾಚೆಯ ಸುಳ್ಳು

‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ,
ನಕ್ಕರು.

‘ನೋಡು ಮರಿ, ಹತ್ತಾರು ಬಾರಿ
ಹೋಗಿ ಬಂದಿರುವ ದಾರಿ,
ಹೆಜ್ಜೆ ಗುರುತಿರುವ ಕಾಡು
ಬೇಕಾದರೆ ಬಂಡವಾಳ ಹೂಡು.
ಆದರೆ ಒಂದು ವಿಷಯ
ಊರಿರುವದೇ ಆಚೆ
ಹೋಗಿ ಸೇರಲೇ ಬೇಕು,
ದಾರಿ ಸಾಗಲೇ ಬೇಕು,
ತಕ್ಕ ಆಸಕ್ತಿಗೆ ಕಾಯಲೇಬೇಕು’
ಎಂದರು.

‘ಹೇಳಿಬಿಡಿ’ ಎಂದೆ
ಹಾಳಾಗಲಿ
ಕೇಳಿ ಕಳಿಸಿಬಿಡೋಣ
ಪ್ರಾರಬ್ಧ ಅಂತ.
ಅಸಹನೆ ಅರ್ಥವಾಗಿ ನಕ್ಕರು.

‘ಗಡಿಯೊಳಗೇ ಇರುವವನಿಗೆ’ ಗೋಡೆ ಅಡ್ಡವಾಗಿ
ಥಿಯೇಟರಿನೊಳಗಿನ ಚಿತ್ರದ ಸತ್ಯ ಇದೆಲ್ಲ.
ಮೈ ಅಲುಗದಂತೆ ಕುರ್ಚಿಯಲ್ಲಿಯೇ ಇದ್ದು
ಮನಸ್ಸು ಮಾತ್ರ ಅದರಿಂದ ಎದ್ದು
ಶಕುಂತಳೆ ರೇಖಾಳನ್ನು ದುಶ್ಯಂತ ಅಮಿತಾಭನಾಗಿ ತಬ್ಬುವ,
ಯಾರ ಒಡಲಲ್ಲೋ ಇಳಿದು
ತನ್ನಾಸೆಗಳನ್ನು ಆಡಿ ಕಳೆದು
ಕಡೆಗೆ ಕೊಳಬಿಟ್ಟು ಬರುವ ಅನುಭವ-
ಹೇಳು ನಾವು ಯಾರು?’ ಎಂದರು.
‘ಇದೆಲ್ಲ ಕಲೆ ನಾಟಕ ಚಿತ್ರದ ವಿಷಯ
ಉಳಿದದ್ದು ಹೇಳಿ ಈ ಗಟ್ಟಿಲೋಕ ಸುಳ್ಳಾ?’ ಎಂದೆ.

‘ಇಲ್ಲ.
ಬಾಳುತ್ತಿರುವ ಸುಳ್ಳು
ಸಾಯುವ ತನಕದ ಸತ್ಯ,
ಕನಸಿನಲ್ಲಿ ಅಸಂಬದ್ಧವೆಲ್ಲ ನಡೆಯೋಲ್ಲವಾ?’ ಎಂದರು.
ಕುತೂಹಲ ಚಿಗುರಿ
‘ಹೌದು ಹೌದು ಹೇಳಿ’ ಎಂದೆ
‘ಅಸಂಬದ್ಧ ಆಡಿಲ್ಲವಾ
ಅಸಂಬದ್ಧ ಕೇಳಿಲ್ಲವಾ?
ಕಂಡಿದ್ದ ಮೈಗೆ
ಕಾಣದ ಮುಖ ಹುಟ್ಟಿ
ಕೈಯನ್ನೇ ರೆಕ್ಕೆ ಹಾಗೆ ಬೀಸಿ ಗಾಳಿಯಲ್ಲಿ ಈಜಲ್ಲವಾ?
ನದಿತಳದಲ್ಲಿ ಮನೆ,
ಜಲಕನ್ಯೆಯ ಜೊತ ಭೋಗ,
ಅರ್ಧಗಂಟೆಯಲ್ಲೇ ಐವತ್ತು ವರುಷ ಬಾಳಿಲ್ಲವಾ?
ಬಗೆ ಬಗೆ ಸತ್ಯ,
ಎಲ್ಲಕ್ಕೂ ಅದರದ್ದೇ ಗಣಿತ ಕುಣಿತ
ಯಾರು ಪ್ರಶ್ನಿಸಿದ್ದರು ಅವನ್ನು ಗಡಿಯೊಳಗೆ
ಯಾವತ್ತು?’ ಎಂದರು.

ಎಲಾ! ಎನಿಸಿತು.
ನಿಜವೆನಿಸಿದರೂ ಒಪ್ಪಲು ಬಾರದೆ ಕೇಳಿದೆ
‘ಇದೆಲ್ಲ ಕನಸು ಕುಡಿಯುವ ಮನಸಿನ ಅಮಲು ಅಲ್ಲವೆ?
ಹುಲ್ಲಿನ ಮಾತು ಹೇಳಿ
ಕಂಪಿಸಲೂ ಬಾರದ ಕಲ್ಲಿನ ಮಾತು ಹೇಳಿ
ಕುಡಿಯಲು ಬಾರದ ಬೆಟ್ಟ ನದಿ ಜಡಗಳ ಸತ್ಯಕ್ಕೆ
ಎಲ್ಲಿದೆ ದಾಳಿ ?’ ಎಂದು
ಕಡೆಗೊಮ್ಮೆ ಹೆಡತಲೆಗೇ ಕೊಡಲಿ ಬೀಸಿದೆ!
‘ಹೌದಾ’ ಎಂದವರೇ ನಗುತ್ತ ಕೇಳಿದರು;
‘ಭೂಮಿಯ ಸೆಳೆತ ಮೀರಿದ ಮೇಲೆ
ಮಣಕ್ಕೆ ಎಷ್ಟು ತೂಕ, ತೃಣಕ್ಕೆ ಎಷ್ಟು ತೂಕ?
ನದಿ ಅಲ್ಲಿ ಹರಿಯುತ್ತದೆಯೆ?
ಕಾಮನ ಬಿಲ್ಲಿನ ಬಣ್ಣಗಳಲ್ಲಿ
ಯಾವುದು ಸುಳ್ಳು, ಯಾವುದು ಸಾಚಾ,
ಸತ್ಯಕ್ಕೆ ತಡೆಯುತ್ತದೆಯೆ?
ಬೆಳಕಿನ ವೇಗದಲ್ಲಿ ಎಸೆದರು ಎನ್ನು
ವಸ್ತು ಉಳಿಯುತ್ತದೆಯೆ?
ಹೇಳು ಹೇಳು,
ಸತ್ಯ ಎಂದರೆ ಯಾವುದು ಹೇಳೋ’ ಎಂದರು.

ಕಂಗಾಲಾದೆ
ಕುತ್ತಿಗೆಗೆ ಗುರಿಯಿಟ್ಟಂತೆ
ಹಿಂದಕ್ಕೆ ಬೀಸಿ ಬರುತ್ತಿರುವುದು
ನಾನೇ ಬೀಸಿದ ಕೂಡಲಿ ಎನಿಸಿತು.
ಗುರಿಗೆ ಸರಿಯಾಗಿ ತಲೆಕೊಡುತ್ತ ಹೇಳಿದೆ:
‘ಹೌದು ಹೌದು,
ಗಡಿ ದಾಟಿದ ಮೇಲೆ ಎಲ್ಲ ಬರಿ ಜಳ್ಳು,
ನಮ್ಮ ಸತ್ಯ ಕೂಡ ಗಡಿಯಾಚೆಗೆ ಸುಳ್ಳು.’
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...