Home / ಕವನ / ಕವಿತೆ / ಬೆಳಕು ಮೂಡಿದ ಬಂಗಾಳ

ಬೆಳಕು ಮೂಡಿದ ಬಂಗಾಳ

ಬಂಗಾಳಕ್ಕೆ ಬಾಲ್ಯದಿಂದ
ಬೆಳಕಿನ ಕನಸು,
ಎಳೆದ ಗೆರೆ, ಬರೆದ ಅಕ್ಷರ, ಹರಿದ ದನಿ
ಎಲ್ಲದರಲ್ಲಿ
ಅದನ್ನೇ ಅರಸುವ ಮನಸು,
ಆಕಾಶದಂಗಳದಲ್ಲಿ
ಬಿಕ್ಕಿದ ಅಕ್ಕಿಕಾಳನ್ನೆಲ್ಲ
ಹೆಕ್ಕಿ ತರುವ ಹಬ್ಬಯಕೆ
ಈ ಹಕ್ಕಿಗೆ,
ಹೀಗಿದ್ದೂ ಅದನ್ನು
ಸುತ್ತಿ ನಿಂತ ಪಂಜರ
ಬಿರುಸು.

ಆದರೆ
ಮಾಯದ ಬಯಕೆ ಸಾಯುವುದಿಲ್ಲ,
ಬಣ್ಣ ಬಣ್ಣದ
ರಾಗ ನೇಯುತ್ತದೆ;
ನೋವು ನರಳು
ಕೋಪ ಕೆರಳು
ಬಿಗಿಯುವ ಉರುಳು ಬೆರಳು ಎಲ್ಲ
ಪೀತಾಂಬರ ಪೇಟೆ ತೆರೆಯುತ್ತವೆ;
ಆಸೆ ನೆಲವಾಗುತ್ತದೆ
ಹಾಸಿ ಜಲವಾಗುತ್ತದೆ
ಬೀಸಿ ಎಲರಾಗುತ್ತದೆ
ಉಣ್ಣುವ ಅನ್ನದಲ್ಲಿ ಸೇರಿ
ನಾಡಿನ ಉಸಿರಾಗುತ್ತದೆ.
ಆಗ ಪ್ರಾಣಕ್ಕೆ ಕವಡೆ ಬೆಲೆ
ಭಯ ದೈನ್ಯ ಲೋಭದಿಂದ
ಹಠಾತ್ ಬಿಡುಗಡೆ
ಸಾವಿನ ಬಾವಿಗಂಟಲಿಗೆ ಸುರಿದು ಹೋಗುತ್ತದೆ
ಪ್ರಾಣದ ನಿರರ್ಗಳ ಅಮೃತಧಾರೆ.

ಮೊನ್ನೆ
ಋತು ಕೆರಳಿತು ಬಂಗಾಳದಲ್ಲಿ.
ಮಾಗಿಯ ಕೊರೆತದಲ್ಲಿ
ಎಲ್ಲ ಕಡೆ ಬೋಳುಮರ, ಬಂಗಾಳದಲ್ಲಿ ಚಿಗುರು
ಕರುಳಿರಿಯುವ ಚಳಿಗೆ
ಭೂಗೋಳ ರಗ್ಗು ಹೊದ್ದಿದ್ದಾಗ
ಬಂಗಾಳಿಯ ಮೈಯಲ್ಲಿ ಕೆಂಪು ಬೆವರು;
ಹುಡುಗರ ಬಾಳೆಮೈ
ಹೂ ಬಿಟ್ಟ ಮುತ್ತುಗ,
ಹೆಣ್ಣಿನ ಮಾನ ಮೈ
ಕೀಚಕ ಕ್ರೀಡೆಗೆ ಗಜ್ಜುಗ,
ಎಂದಿನದೋ ಕಿಡಿ ಕೆರಳಿ
ದಳ ದಳ ದಳ ದಳ ಅರಳಿ
ಮೊಹರಂ ಕುಂಡ
ಭಾರಿ ಹೊಗೆ ಹಬ್ಬಿ
ಜಗತ್ತನ್ನೇ ತಬ್ಬಿ
ಪಶ್ಚಿಮದಲ್ಲಿ ಕೊಂಚ ಗೊಂದಲ
ಬೆಳಿಗ್ಗೆ ಎಲ್ಲ ಎದ್ದು
ಕಣ್ಣುಜ್ಜಿ ನೋಡುವಾಗ
ನಗುತ್ತಿದೆ ಪೂರ್ವದಲ್ಲಿ
ಬೆಳಕು ಮುಡಿದ ಬಂಗಾಳ *
*****
* ಬಾಂಗ್ಲಾದೇಶ ಸ್ವತಂತ್ರವಾದ ದಿನ ಬರೆದದ್ದು

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...