Home / ಲೇಖನ / ವಿಜ್ಞಾನ / ಅಬ್ಬಬ್ಬಾ! ಇದೆಂಥ ಹೂ!

ಅಬ್ಬಬ್ಬಾ! ಇದೆಂಥ ಹೂ!

ಸಸ್ಯ ಪ್ರಪಂಚ ಅದ್ಭುತ ಪ್ರಪಂಚ. ಸಸ್ಯಪ್ರಪಂಚದಲ್ಲಿ ಕುತೂಹಲಕಾರಿಯಾದ, ವಿಸ್ಮಯಕಾರಿಯಾದ ಉದಾಹರಣೆಗಳಿಗೆ ಕೊನೆಮೊದಲಿಲ್ಲ. ಸಸ್ಯಗಳು ನಿರ್‍ವಹಿಸುವ ಕಾರ್‍ಯವೈಖರಿ, ಅವುಗಳ ಗಾತ್ರ, ಎತ್ತರ ಅಥವಾ ದೀರ್‍ಘಾಯುಷ್ಯಗಳಲ್ಲಿ ದಾಖಲೆ ಸ್ಥಾಪಿಸಿವೆ. ಅಂತಹ ಕುತೂಹಲಕಾರಿಯಾದ ಅಂಶ ರಾಫ್ಲೇಶಿಯಾ ಎಂಬ ಸಸ್ಯದ ಹೂ ರಚನೆಯಲ್ಲಿ ಕಾಣಬಹುದು.

ರಾಫ್ಲೇಶಿಯಾ ಎಂಬ ಸಸ್ಯವು ಮಲೇಶಿಯಾ, ಇಂಡೋನೇಶಿಯಾ ಮತ್ತು ಬರ್‍ಮಾ ದೇಶಗಳ ಅರಣ್ಯ ಪ್ರದೇಶಗಳಲ್ಲಿ ಬೆಳೆಯುತ್ತದೆ. ರಾಫ್ಲೇಶಿಯೇಶೀ ಕುಟುಂಬವು ೧೪ ಜಾತಿಗಳನ್ನು ಹೊಂದಿದ್ದು ಅವುಗಳಲ್ಲಿ ರಾಫ್ಲೇಶಿಯಾ ಅರ್‍ನಾಲ್ಡಿ (Rafflesia arnoldii)ಯೂ ಒಂದು. ಇದೊಂದು ವಿಚಿತ್ರ ಸಸ್ಯ. ಈ ಸಸ್ಯಕ್ಕೆ ಎಲೆ ಅಥವಾ ಕಾಂಡಗಳಿಲ್ಲ. ಇದೊಂದು ಬೇರು ಪರಾವಲಂಬಿ (Root Parasite). ಇದರ ಬೇರುಗಳು ಶಿಲೀಂದ್ರಗಳಂತೆ ಸೂಕ್ಷ್ಮವಾದ ದಾರಗಳಾಗಿ ಮಾರ್‍ಪಾಟಾಗಿವೆ. ದ್ರಾಕ್ಷಿ ಕುಟುಂಬದ ಮೇಲೆ ಇತರ ಸಸ್ಯಗಳ ಬೇರುಗಳಲ್ಲಿ ತನ್ನ ಬೇರನ್ನು ತೂರಿಸಿ ಆಹಾರ ಹೀರುತ್ತ ಬದುಕುತ್ತದೆ! ಹಾಗಾಗಿ ಇದಕ್ಕೆ ಎಲೆಗಳ ಅವಶ್ಯಕತೆಯಿಲ್ಲ. ಹೂಗಳು ಮಾತ್ರ ನೆಲದ ಮೇಲೆ ಅರಳುತ್ತವೆ. ಹೂಗಳೆಂದರೆ ಎಂತಹ ಹೂಗಳೆನ್ನುತ್ತೀರಿ? ಅಬ್ಬಬ್ಬ! ದೈತ್ಯ ಹೂವುಗಳು. ವ್ಯಾಸದಲ್ಲಿ ಸಸ್ಯಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದೆಂಬ ಖ್ಯಾತಿಗಳಿಸಿವೆ.

ರಾಫ್ಲೇಶಿಯಾ ಹೂವಿನ ವ್ಯಾಸ ಅಷ್ಟಿಷ್ಟಲ್ಲ. ೫೦ ಸೆಂ.ಮೀ.ಗಳು ಎಂದರೆ ನಂಬುತ್ತೀರಾ? ದಪ್ಪ ೧.೯ ಸೆಂ.ಮೀ.ಗಳು. ಇದು ನಿಜ. ಅದರ ಐದು ದಳಗಳನ್ನು ಹೊಂದಿದ್ದು ಅವುಗಳ ಉದ್ದ ೩ ಅಡಿಗಳು. ಈ ದಳಗಳ ತೂಕ ೧೪೫ ಪೌಂಡ್‌ಗಳು ಅಂದರೆ ಸುಮಾರು ೭ ಕಿ.ಗ್ರಾಂ ಗಳು! ಒಂದೇ ಒಂದು ಹೂವಿನ ಒಟ್ಟು ತೂಕ ೧೧ ಕಿ.ಗ್ರಾಂಗಳು!

ಹೂಗಳು ಕೆಂಪು ಅಥವಾ ಊದಾಮಿಶ್ರಿತ ಕಂದು ಬಣ್ಣ ಇಲ್ಲವೇ ಪಟ್ಟೆಗಳನ್ನು ಹೊಂದಿದ್ದು, ದಪ್ಪ ಮತ್ತು ಮಾಸಲವಾಗಿರುತ್ತವೆ. ೫ ರಿಂದ ೭ ದಿನಗಳವರೆಗೆ ಅರಳಿರುತ್ತವೆ ಮತ್ತು ಏಕಲಿಂಗಿಯಾಗಿವೆ. ಈ ಹೂನಲ್ಲಿ ಐದು ಒರಟು ದಳಗಳಿದ್ದು ಅವುಗಳ ಮೇಲೆ ಬೊಬ್ಬೆಗಳಂತಹ ಬುಗುಟುಗಳಿವೆ. ಹೂ-ದೈತ್ಯಾಕಾರವಾಗಿದ್ದರೂ ಬೀಜ ಮಾತ್ರ ಗಸಗಸೆ ಕಾಳಿನಂತಿದೆ.

ಭೂಮಿಯಲ್ಲಿಯ ಹೆಚ್ಚಾನೆಚ್ಚು ಹೂಗಳು ಅವು ಬೀರುವ ಸುವಾಸನೆಗಳಿಗೆ ಹೆಸರುವಾಸಿಯಾಗಿವೆ. ಅವುಗಳ ಸುಗಂಧಕ್ಕೆ ನಾವೆಲ್ಲ ಮನಸೋತಿದ್ದೇವೆ. ಆದರೆ ರಾಫ್ಲೇಶಿಯಾ ಹೂವಿನಿಂದ ಹೊರಹೊಮ್ಮುವುದು ಸುಗಂಧವಲ್ಲ. ದುರ್‍ಗಂಧ ಅದೂ ಕೊಳೆತ ಮಾಂಸದಂತೆ. ಯಾವುದಾದರೂ ಪ್ರಾಣಿ ಕೊಳೆತು ನಾರುತ್ತಿದೆಯೋ ಏನೋ ಎಂಬಂತೆ. ಹಾಗಾಗಿ ಮನುಷ್ಯ ಅಥವಾ ಪ್ರಾಣಿಗಳು ಅದರ ಹತ್ತಿರ ಸುಳಿಯಲಾರವು. ಈ ದುರ್‍ಗಂಧಕ್ಕೆ ಆಕರ್‍ಷಿತವಾಗುವುದು ನೊಣಗಳು ಮಾತ್ರ. ಹಾಗಾಗಿ ನೊಣಗಳಿಂದಲೇ ಪರಾಗಣವಾಗುತ್ತದೆ.

ಸಿಂಗಾಪೂರ ದೇಶದ ಸ್ಥಾಪಕನಾದ ಈಸ್ಟ್ ಇಂಡಿಯ ಕಂಪನಿಯ ಗವರ್‍ನರ್‍ ಸರ್‍ ಸ್ಟ್ಯಾಂಫೋರ್‍ಡ್ ರಾಫಲ್ಸ್ ಅವರ ಹೆಸರನ್ನು ಈ ಸಸ್ಯಕ್ಕೆ ಇಡಲಾಗಿದೆ. ಏಕೆಂದರೆ ಈ ಸಸ್ಯವನ್ನು ಕಂಡುಹಿಡಿದದ್ದು ಅವನೇ. ೧೮೨೧ರಲ್ಲಿ ಬ್ರಿಟಿಶ್ ಸಸ್ಯ ವಿಜ್ಞಾನಿ ರಾಬರ್‍ಟ್ ಬ್ರೌನ್ ಈ ದೈತ್ಯ ಪುಷ್ಪದ ವಿವರಣೆಯನ್ನು ನೀಡಿದ.

ಈ ಹೂವು ಶೇಖರಿಸುವ ಮಕರಂದವೆಷ್ಟು ಗೊತ್ತೆ? ಪೂರ್‍ತಿ ೧೨ ಪಿಂಟ್‌ಗಳಷ್ಟು, ಅಂದರೆ ಸುಮಾರು ೭ ಲೀಟರ್‌ಗಳಷ್ಟು!

ರಾಫ್ಲೇಶಿಯಾ ಸಸ್ಯವು ಬೀಜರಹಿತ ತಿರುಳುಳ್ಳ ಹಣ್ಣು (Berry) ಉತ್ಪಾದಿಸುತ್ತದೆ. ಬೃಹದಾಕಾರದ ಹೂವಿನ ಗಿಡದ ಬೀಜಗಳ ಪ್ರಸಾರಕ್ಕೆ ಬೃಹದಾಕಾರದ ಪ್ರಾಣಿಗಳಾದ ಆನೆಗಳು ಕಾರಣವಾಗಿವೆ. ಬೀಜಗಳು ಅಂಟು-ಅಂಟಾಗಿದ್ದು, ಆನೆಗಳ ಕಾಲಿಗೆ ಅಂಟಿಕೊಂಡು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲ್ಪಡುತ್ತವೆ.

ಸುಮಾತ್ರ, ಜಾವಾ ಮತ್ತವುಗಳ ನೆರೆಯ ದೇಶಗಳ ಅರಣ್ಯಗಳಲ್ಲಿಯೂ ರಾಫ್ಲೇಶಿಯಾ ಸಸ್ಯಗಳು ಬೆಳೆಯುತ್ತವೆ. ಈ ಪ್ರಬೇಧಕ್ಕೆ ಸೇರಿದ ಸಸ್ಯಗಳು ನಮ್ಮ ದೇಶದ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ಗಳ ಅರಣ್ಯಗಳಲ್ಲಿ ಬೆಳೆಯುತ್ತವೆ. ಸಪ್ರಿಯಾ ಹಿಮಾಲಯಾನಾ ಅವುಗಳಲ್ಲೊಂದು. ಇದೂ ಪರಾವಲಂಬಿ ಸಸ್ಯವಾಗಿದ್ದು ಭಾರತದಲ್ಲಿ ಅತ್ಯಂತ ದೊಡ್ಡದಾದ (ವ್ಯಾಸದಲ್ಲಿ) ಹೂ ಬಿಡುವ ಸಸ್ಯ ಎಂಬ ಹೆಸರು ಪಡೆದಿದೆ. ಈ ಸಸ್ಯದ ಹೂಗಳ ವ್ಯಾಸ ೧೫ ರಿಂದ ೩೦ ಸೆಂಟಿಮೀಟರ್‍ಗಳು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...