Home / ಲೇಖನ / ವಿಜ್ಞಾನ / ಯುಕ್ಕ ಮತ್ತು ಟಿಜಿಟಿಕುಲಾ ಪರಾಗಣದ ಈ ಪರಿ

ಯುಕ್ಕ ಮತ್ತು ಟಿಜಿಟಿಕುಲಾ ಪರಾಗಣದ ಈ ಪರಿ

ಪರಾಗಕಣಗಳು ಪರಾಗಾಶಯದಿಂದ ಶಲಾಕಾಗ್ರಕ್ಕೆ ವರ್‍ಗಾವಣೆಯಾಗುವುದಕ್ಕೆ ಪರಾಗಣ ಎಂದು ಕರೆಯುತ್ತಾರೆ. ಇದು ಸಸ್ಯಗಳ ಜೀವನದಲ್ಲಿ ಒಂದು ಪ್ರಮುಖ ಕ್ರಿಯೆ. ಏಕೆಂದರೆ ಈ ಕ್ರಿಯೆಯ ಅನಂತರವೇ ಪುಷ್ಪಗಳ ಅಂಡಾಶಯದಲ್ಲಿ ಫಲೀಕರಣವಾಗಿ ಬೀಜಕಟ್ಟುತ್ತದೆ.

ಪರಾಗಣದಲ್ಲಿ ಎರಡು ವಿಧಗಳಿವೆ.

೧. ಪರಾಗಕಣಗಳು, ಒಂದೇ ಪುಷ್ಪದ ಪರಾಗಾಶಯದಿಂದ ಶಲಾಕಾಗ್ರಕ್ಕೆ ತಲುಪುವುದು. ಇದು ಸ್ವಪರಾಗಣ. ದ್ವಿಲಿಂಗೀ ಪುಷ್ಪಗಳಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.

೨. ಒಂದು ಸಸ್ಯದ ಪುಷ್ಪದ ಪರಾಗಕಣಗಳು ಅದೇ ಜಾತಿಗೆ ಸೇರಿದ ಇನ್ನೊಂದು ಸಸ್ಯದ ಪುಷ್ಪದ ಶಲಾಕಾಗ್ರ ತಲುಪುವುದು. ಅದಕ್ಕೆ ಸಂಕರ ಪರಾಗಣ ಎಂದು ಕರೆಯುತ್ತಾರೆ. ಏಕಲಿಂಗೀ ಪುಷ್ಪಗಳಲ್ಲಿ ಇದನ್ನು ಕಾಣಬಹುದು.

ಸಂಕರ ಪರಾಗಣ ಕ್ರಿಯೆಯಲ್ಲಿ ಪರಾಗಕಣವು ಒಂದು ಸಸ್ಯದ ಪುಷ್ಪದಿಂದ ಇನ್ನೊಂದು ಸಸ್ಯದ ಪುಷ್ಪಕ್ಕೆ ತಲುಪಬೇಕಾದರೆ ಬಾಹ್ಯ ಮಾಧ್ಯಮದ ಅವಶ್ಯಕತೆಯಿದೆ. ಗಾಳಿ, ನೀರು, ಕೀಟಗಳು ಮತ್ತು ಪಕ್ಷಿಗಳು ಇಂತಹ ಮಾಧ್ಯಮಗಳಾಗಿ ಕಾರ್‍ಯ ನಿರ್‍ವಹಿಸುತ್ತವೆ.

ಯುಕ್ಕ ಎಂಬುದು ಮೆಕ್ಸಿಕೋ ಮತ್ತು ಅಮೇರಿಕದಲ್ಲಿ ಕಾಣಸಿಗುವ ಲಿಲೀ ಗಿಡದ ಜಾತಿಗೆ ಸೇರಿದ ಒಂದು ಸಸ್ಯ. ಯೂರೋಪ್ ಮತ್ತು ಉತ್ತರ ಅಮೇರಕದಲ್ಲಿಯೂ ಅಲಂಕಾರಿಕ ಗಿಡವಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಈ ಗಿಡದ ಎಲೆಗಳ ತುದಿಯು ಚೂಪಾಗಿ ಮುಳ್ಳಿನಂತಿದೆ. ಎಲೆಗಳ ಸಮೂಹದ ಮಧ್ಯದಿಂದ ದೊಡ್ಡದಾದ ಮಿಶ್ರಮಂಜರಿ (ಪ್ಯಾನಿಕಲ್) ಬೆಳೆದು ಅಂಡಾಕಾರದ ಬಿಳಿ ಹೂಗಳನ್ನು ಬಿಡುತ್ತದೆ. ಇವು ರಾತ್ರಿಯಲ್ಲಿ ಅರಳಿ ಸುಗಂಧ ಸೂಸುತ್ತವೆ.

ಟಿಜಿಟಿಕುಲಾ ಕುಲಕ್ಕೆ ಸೇರಿರುವ ಪತಂಗವನ್ನು ಯುಕ್ಕ ಪತಂಗವೆಂದೇ ಕರೆಯಲಾಗುತ್ತದೆ. ರೆಕ್ಕೆ ಬಿಚ್ಚಿದಾಗ ಇವು ಎರಡೂವರೆ ಸೆ.ಮೀ. ಅಗಲದ ಬಿಳಿಯ ಪತಂಗಗಳು.

ಯುಕ್ಕ ಗಿಡವು ಪರಾಗಣಕ್ಕೆ ಪತಂಗವನ್ನೇ ಅವಲಂಬಿಸಿದೆ. ಪತಂಗದ ಲಾರ್‍ವಗಳು ಯುಕ್ಕದ ಬೀಜಗಳನ್ನಷ್ಟೇ ಆಹಾರವಾಗಿ ಸೇವಿಸುತ್ತದೆ! ಈ ಸಂಬಂಧವು ಅಸಾಮಾನ್ಯವೂ, ಜಟಿಲವೂ ಆಗಿದೆ. ಇದನ್ನು ಮೊಟ್ಟಮೊದಲ ಬಾರಿಗೆ ಅಧ್ಯಯನ ನಡೆಯಿಸಿ ಅಮೆರಿಕದ ಕೀಟತಜ್ಞ ಸಿ.ವಿ.ರಿಲಿ ೧೮೭೨ರಲ್ಲಿ ವಿವರಿಸಿದರು.

ಯುಕ್ಕ ಪತಂಗವು ರಾತ್ರಿಯಲ್ಲಿ ಚುರುಕಾಗಿ ಯುಕ್ಕ ಗಿಡವನ್ನು ಅರಸಿ ಹೋಗುತ್ತದೆ. ಯುಕ್ಕ ಗಿಡದ ಪರಾಗಕಣಗಳು ಒಂದು ರೀತಿಯ ಅಂಟುಪದಾರ್‍ಥದಲ್ಲಿದ್ದು ಜಿಗಿಟಾಗಿರುತ್ತವೆ. ಪತಂಗದ ಪ್ರೊಬೊಸಿಸ್‌ನ ಎಡ ಮತ್ತು ಬಲ ಭಾಗಗಳು ಎರಡು ಗ್ರಹಣಾಂಗಗಳಾಗಿ ಮಾರ್‍ಪಟ್ಟಿವೆ. ಅವುಗಳ ಸಹಾಯದಿಂದ ಅದು ಪರಾಗಕಣಗಳನ್ನು ಸಂಗ್ರಹಿಸಿ, ತನ್ನ ತಲೆಗಿಂತಲೂ ದೊಡ್ಡದಾದ ಪರಾಗಕಣಗಳ ಚೆಂಡನ್ನು ತಯಾರಿಸುತ್ತದೆ. ಆ ಪರಾಗಕಣದ ಚೆಂಡನ್ನು ಗ್ರಹಣಾಂಗಗಳು, ತಲೆ ಮತ್ತು ಮುಂಭಾಗದ ಕಾಲುಗಳ ಮಧ್ಯೆ ಹಿಡಿದು ಇನನ್ನೊಂದು ಗಿಡದ ಪುಷ್ಪಕ್ಕೆ ಹಾರಿ, ಅದರ ಶಲಾಕಾಗ್ರದಲ್ಲಿ ಪರಾಗಕಣದ ಚೆಂಡನ್ನು ಇಟ್ಟು ನಾಲಿಗೆಯಿಂದ ದಬ್ಬುತ್ತದೆ. ಅನಂತರ ಅದು ಅಂಡ ನಿಕ್ಷೇಪಕ (ಓವೀಪಾಸಿಟರ್‍)ನ ಸಹಾಯದಿಂದ ಅಂಡಾಶಯಕ್ಕೆ ರಂಧ್ರ ಕೊರೆದು, ಒಳಹೊಕ್ಕು ಒಂದೆರಡು ಮೊಟ್ಟೆಗಳನ್ನು ಇಡುತ್ತದೆ. ಇದೇ ಕಾರ್‍ಯ ಮುಂದೆವರೆಸಲು ಇನ್ನಿತರ ಪುಷ್ಪಗಳಿಗೆ ಹಾರಿಹೋಗುತ್ತದೆ. ಹೀಗೆ ಪರಪರಾಗಣ ಜರುಗುತ್ತದೆ.

ಪರಾಗವು ಅಂಡಕಗಳನ್ನು ಫಲೀಕರಿಸಿ, ಬೀಜಗಳಾಗಿ ಬೆಳೆದಾಗ ಅವುಗಳಲ್ಲಿರುವ ಪತಂಗದ ಲಾರ್‍ವಗಳು ಬೀಜಗಳೊಂದಿಗೆ ಬೆಳೆಯುತ್ತ ಕೆಲವು ಬೀಜಗಳನ್ನು ಆಹಾರವಾಗಿ ಉಪಯೋಗಿಸುತ್ತವೆ.

ಲಾರ್‍ವಗಳು ಕೀಟಗಳಾದಾಗ ಹಣ್ಣಿಗೆ ರಂಧ್ರ ಕೊರೆದು ಹೊರ ಹಾರಿಹೋಗುತ್ತವೆ. ಆ ರಂಧ್ರದ ಮೂಲಕ ಹಲವು ಬೀಜಗಳು ಹೊರಬಿದ್ದು ಬೀಜ ಪ್ರಸಾರವಾಗುತ್ತದೆ. ಹೀಗೆ ಈ ಎರಡು ಜೀವಿಗಳ ಸಹಜೀವನ ಸಾಗುತ್ತದೆ.

ಹೀಗೆ ಟಿಜಿಟಿಕುಲಾ ಕುಲದ ಪ್ರತಿಯೊಂದು ಜಾತಿಯ ಪತಂಗಗಳು ಯುಕ್ಕ ಗಿಡದ ಒಂದೊಂದು ಜಾತಿಯ ಯುಕ್ಕಗಿಡಗಳನ್ನು ಪರಾಗಣಿಸುತ್ತವೆ. ಉದಾಹರಣೆಗೆ ಟಿಜಿಟಿಕುಲಾ ಯುಕ್ಕಾಸೆಲಾ ಪತಂಗವು ಯುಕ್ಕ ಫಿಲಾಮೆಂಟೋಸ್ ಗಿಡದಲ್ಲಿ ಪರಾಗಣಿಸುತ್ತದೆ. ಟಿಜಿಟಿಕುಲಾ ಸಿಂಥೆಟಿಕಾ ಮತ್ತು ಟಿ. ಮ್ಯೂಕುಲೆಟಾ ಪತಂಗಗಳು ಕ್ರಮವಾಗಿ ಯುಕ್ಕ ಬ್ರೆವಿಫೋಲಿಯ, ಯುಕ್ಕ ವಿಪ್ಲೇ ಜಾತಿಯ ಗಿಡಗಳನ್ನು ಪರಾಗಣಿಸುತ್ತವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...