Home / ಕವನ / ಕವಿತೆ / ಹೊಳಲು

ಹೊಳಲು

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ
ಅಂದಣವದೆತ್ತಿರಲು ಅಂದವೆನೆ ಪರರೆಲ್ಲ
ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ
ಭಾರತದಿ ಬಂತು ಹೊಳಲು

ಚಂದಿರನು ತಂಬೆಳಕ ನಗುವಿಡಲು ಅಪಹಾಸ
ದಂದಣವನೆತ್ತಿರಲು ಲಗುಬಿಗಿಯ ಪರರಾಳು
ಮಂದಿಗಳು ತಿಳಿದೇಳಲಗೊ! ಯೋಗಿ ಕರೆಯುತಿರೆ
ಬಾರೆನುತ ಬಂತು ಹೊಳಲು

ಕೀಳಕೀಳಲಿ ಪುಟ್ಟಿ ಮೇಲೆ ಮೇಲೇರುತಲಿ
ಆಳುತಲಿ ಜನಮನವ ಶೂಲಕೊಡ್ಡುತ ಸುರಿಸಿ
ಬಾಳ ಜೀವನ ಜಲವನಾಲಿಯರಿಯದಲಳಿಯೆ
ಜನರಿಳಿದು ಬಂದ ಹೊಳಲು

ಕಾಳು ಕಡ್ಡಿಯ ತೂರಿ ಮೇಲೆ ಮೇಲರಿಸುತ
ನಾಳಿನಾ ನವಯುಗಕೆ ಮೇಲೆನಿಪ ಬೀಜಗಳ
ಹೂಳುವರು ಬರಲಾಗಿ ಕಾಲ ಬಂದಿದೆಯೆನುತ
ಜನಜನದ ನುಡಿಯ ಹೊಳಲು

ಇದು ವಹ್ನಿಗಿರಿ ಇದುವೆ ಮಳೆವಹ್ನಿ ಹೊಳೆವಹ್ನಿ!
ಇದುವುಕ್ಕಿ ಧರೆಯೆಲ್ಲ ತಳಮಳಿಸಿ ನಡುಗುತಿದೆ
ಅದೊ! ಸೊಕ್ಕಿದಾಭಾವ! ತಳಹದಿಯು ಕುಸಿಬಿತ್ತು!
ಮರಳುತಿಹ ಯುಗದ ಹೊಳಲು

ಇದು ಸಿಡಿಲು ಕಾರ್ಮೋಡ ಪ್ರಳಯ ಜಲಧಾರೆಯಿವು
ಇದು ಝರಿಯ ಜಲಧಾರೆ ಇಳೆಗಿಳಿವ ದೇವನದಿ!
ಅದೋ! ವಹ್ನಿ ಕಬ್ಬೊಗೆಯು ಅಳಿದನಿವು ಸಿಡಿದವವು
ಚರಕದರೆ ತಿರುಗೆ! ಹೊಳಲು

ವಿಷಘಳಿಗೆ ಪರಜನಕೆ ಮಧುಯೋಗ ಭಾರತಕೆ
ಹಸಿದು ಶಂಕರಿ ನಿಲ್ಲಲದು ಪ್ರಲಯ ಪರಜನಕೆ
ಬಸಿಯಲೆಂಧಕ ರುಧಿರವದುನೆಲಕೆ ಶ್ರೀ ಶಾಂತಿ
ಎನುತೆನುವ ನರರ ಹೊಳಲು

ಹಸುಳೆಯಂದದಿ ನಕ್ಕು ಮಧುರ ಭಾವವ ಬೀರಿ
ಹೊಸತೆರನ ಜಿಹ್ವೆಯಲಿ ಸುಧೆಯ ಜಾಹ್ನವಿಯುದಿಸೆ
ಹೊಸಯುಗದ ಗಂಧವಹನಿದೊ ಗಾಂಧಿ ಏಳುತಿಹ
ಎನುತೆನುವ ನಾಡ! ಹೊಳಲು

ಅಲ್ಲೋಲ ಕಲ್ಲೋಲ ಉದಧಿಗಳು ಎಚ್ಚೆತ್ತು!
ಎಲ್ಲೆಲ್ಲು ಸಲ್ಲಾಪ ಕುದಿವ ಮನದಾಶಯದ
ಹೊಲ್ಲೆ ಹದ ಸುಳಿವಿರದ! ಮಧುಯುಗವು ಮರಳುತಿರೆ
ಉಲ್ಲಾಸದೊರೆಯ ಹೊಳಲು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...