Home / ಕವನ / ಕವಿತೆ / ಮಂಗಳ

ಮಂಗಳ

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು
ತಿಳಿಯದಿದ್ದುದು ಹೇಗೆ ಮಾರಾಯ?
ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ
ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ!

ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು
ಮುರಿದುಬಿದ್ದಿತು ಈಗ ಲೊಡ್ಡು ಹಲಗೆ,
ಚಂದ್ರಮಾಯೆಯು ಕವಿದ ಸ್ವಪ್ನನಗರಿಯಲಿ
ಕರ್ಪೂರ ಭವನಕ್ಕಿದ್ದ ಪರವಾನಿಗೆ!

ಅಲ್ಲಿ ಬಂದಿದ್ದಾಗ ಏನೆಲ್ಲ ತೋರಿಸಿದೆ
ಮಂಜುಮಂಜಾಗಿದ್ದ ಮಂತ್ರಲೋಕ!
ಕನಸಿನಲ್ಲಷ್ಟೆ ಬಿಗಿದಪ್ಪಿ ಮುದ್ದಿಟ್ಟರೂ
ವಂಶ ಬೆಳೆಸುವ ಹೆಣ್ಣ ಘನ ಕಾಯಕ!

ಮುಟ್ಟಿದರೆ ಸಾಕು ಥಟ್ಟನೆ ತೆರೆದು ಬಾಗಿಲು
ರಂಭೆ ಊರ್ವಶಿ ಮೇನಕೆಯರ ಸಾಲು;
ಬೀದಿ ಹೆಣ್ಣೂ ಸಿಗದೆ ಉರಿ ಕೆರಳುತಿದ್ದಂಥ
ತಿರುಕ ಬದುಕಿಗೆ ಗಾಳಿ, ಜೇನು ಹಾಲು!

ಬೆಳುದಿಂಗಳಲಿ ಬರೆದ ಗಾಳಿಮೈ ಬಾಲೆಯರ
ಬಾಳೆತೋಟಕ್ಕೆ ನಾ ಲಗ್ಗೆ ಹೊಡೆದೆ;
ತೊಣಚಿ ಹೊಕ್ಕಿದ ಗೂಳಿ ಸೊಕ್ಕಿ ಸೊಟ್ಟಗೆ ಓಡಿ
ಬಟ್ಟೆ ತುಂಬಾ ಕೆಟ ಚಿತ್ರ ಬರೆದೆ.

ಮದುವೆಯಾಗಲು ಬಯಸಿ ಸಿಗದ ಚೆಲುವೆಯರನ್ನ
ತಂಗಿ ಎಂದಾದರೂ ಕರೆವ ಕಲೆಯ,
ಕಲಿಸಿದೆಯೊ ಕೀಟಲೆಗೆ ಮೈಮುಟ್ಚಿ ಕಣ್ಮುಚ್ಚಿ
ಜೂಟಾಟಕೆಳೆವ ಆದರ್ಶರತಿಯ!

ಎಲ್ಲಿ ದೊರೆತಾರು ಬಿಡು ನಿನ್ನಂಥ ಕಲೆಗಾರ
ಗೀರ್ವಾಣರಾಗದಲ್ಲೆ ಎಲ್ಲ ವ್ಯವಹಾರ;
ಗುಗ್ಗು ಭೋಳೇರಾಮರನ್ನು ಹಳ್ಳಕ್ಕೆ ತಳ್ಳಿ
ಆಯ್ತು ನಿನ್ನಂಗಡಿಗೆ ಪೂರ್ತಿವ್ಯಾಪಾರ!

ಸಂಕ ಮುರಿದಿದೆ, ನಡುವೆ ಗಡಿ ಎದ್ದಿದೆ,
ನಮ್ಮ ವ್ಯವಹಾರಕ್ಕೆ ಕೊನೆ ಬಿದ್ದಿದೆ;
ದಾಕ್ಷಿಣ್ಯ ದಡ್ಡತನ ಹೆಣೆದ ಸಂಬಂಧಕ್ಕೆ
ಹಳೆರಾಗದಲ್ಲಿ ಮಂಗಳ ಹಾಡುವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...