Home / ಕವನ / ಕವಿತೆ / ಸೂರ್‍ಯನಿಗೆ

ಸೂರ್‍ಯನಿಗೆ

ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ
ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ,
ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ,
ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು-

ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು
ಬೆಳಗು ಸಂಜೆಗಳ ನಿರಂತರ ಪರ್ಯಾಯದಲ್ಲಿ
ಹುಟ್ಟಿ ಸತ್ತರೆ ಅಕ್ಷಯ ಪುನರ್ಜನ್ಮ ನಿನಗೆ. ನಿನ್ನ
ಅಹರ್ನಿಶೆಯ ಬಂಧ ನಮ್ಮ ಮೋಕ್ಷದ ಕಬಂಧ

ಜ್ವಲಿಸುವಗ್ನಿಗೆ ಆಜ್ಯ ಮೇದಸ್ಸು ಹೋಮಹವನ
ಯಾವ ಪೂರ್ವಜರ ರೇತಸ್ಸು ಸಂಯಮನ
ನಿನಗದೆಲ್ಲವು ಆಪೋಶನ-ಮನೆಯೊಳಗೆ ಹೊರಗೆ
ಬೀದಿಯಲಿ ಮಣ್ಣಿನಲಿ ಕಡಲ ತೀರದಲಿ

ಸೆರೆಹಿಡಿದು ಹಿಡಿದ ಬೆಂಕಿ ಪ್ರಕೃತಿಪೌರುಷ
ಕಾಮದಲಿ ಹರಿದು ಸೇರಿದ ಅಂಥ ತೇಜಸ್ಸು
ಇಲ್ಲಿ ಮೊದಲು ಏನೂ ಇರದಲ್ಲಿ ನೀನುಂಟಾದೆ
ನಿನ್ನ ಪ್ರಭಾವಲಯದಲ್ಲಿ ಅದೆಷ್ಟೋ ಜೀವಿಗಳು

ದೀಪದಿಂದ ದೀಪಗಳು-ಬೆಳಕಿನ ಹಿಂದು ಮುಂದು
ಕಂಡವರು ನಾವಲ್ಲ. ಸಾಲು ದೀಪಗಳಲ್ಲಿ ಒಂದು
ಎಂದು ಅರಿತೊ ಏನೊ. ಬೆಳಕಿನಿಂದ ಬೆಳಕಿನೆಡೆಗೆ
ಸಾಗುವುದು ದೀಪಾವಳಿ ಮರಳಿ ಮರಳಿ

ಕಣ್ಣುಗಳು ಕಣ್ಣುಗಳ ನೋಡುವಾಗ ಮಾತು
ಬೆರಳುಗಳು ಬೆರಳುಗಳ ಮಿಳಿಸಿದಾಗ ಶಾಖ
ಮಾತು ಮಂತ್ರವಾದಾಗ ಪ್ರಾರ್ಥನೆ ಅಂತೆಯೇ
ಶಾಖ ದೀಪವಾದಾಗ ಪೂಜೆ. ಮೌನದಲಿ ಧ್ಯಾನ

ನಮ್ಮ ಕರ್ಮಗಳ ಹೊರ ಪರಿಧಿ ಹರಿದು
ನಿನ್ನ ವಿಸ್ತಾರಕ್ಕೆ ಎಳೆದುಕೊಂಡರೆ
ನಮ್ಮ ಭಾಷೆಗಳ ಒಳ ಅರ್ಥ ಅರಳಿ
ನಿನ್ನ ಚೈತನ್ಯಕ್ಕೆ ಸೆಳದುಕೊಂಡರೆ

ಹಗಲಿರುಳ ವರ್ಣಮಯ ಬೆಳಕು ಪಸರಿಸಿ
ಮಣ್ಣುಮರಗಿಡ ಜೀವರಾಶಿಗಳೊಂದಿಗೆ ನಾವು
ಗುರುತು ಪಡೆದಾಗ ನಿನ್ನ ಅಖಂಡ ಕಾಲದಲಿ
ಸದಾ ವರ್ತಮಾನವಾಗುವಂತೆ ಭೂತ ಭವಿಷ್ಯ

ನಿನ್ನ ಮುಖದಿಂದ ಶಕ್ತಿ ಹರಿಯಲಿ ನಮ್ಮ ಕಡೆಗೆ
ನಿನ್ನ ಮುಖದಿಂದ ಜ್ಞಾನ ಹರಿಯಲಿ ನಮ್ಮ ಕಡೆಗೆ
ನಿನ್ನ ಓಜಸ್ಸು ಬರಲಿ ನಮಗೆ
ನಿನ್ನ ಆಯಸ್ಸು ಬರಲಿ ನಮಗೆ
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...