Home / ಕವನ / ಕವಿತೆ / ಓನಮಿ

ಓನಮಿ

(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ)

ಒಂದೂರಿನಲ್ಲಿ ಓನಮಿ
ಎಂಬ ಮಲ್ಲನಿದ್ದ.
ಕಣಕ್ಕಿಳಿಯಲು ಆತ ಸದಾ ಸಿದ್ಧ.

ಒಬ್ಬಿಬ್ಬರೆದುರಲ್ಲಿ
ಎಲ್ಲರ ಒದ್ದು ಕೆಡವುತ್ತಿದ್ದ.
ಒಟ್ಟಿನಲ್ಲಿ, ಗುಟ್ಟಿನಲಿ
ಈತ ಗುರು ಮೀರುವ ಶೂರ
ಮಂದಿಯೆಂದರೆ ಮಾತ್ರ
ಕಂದಿಹೋಗುವ ಮೋರೆ
ಜನ ನೆರೆದರೆಂದರೆ ಇನ್ನೂ ತೊಂದರೆ
ಬಾಲರೆದುರೂ ಈತ ಅಧೀರ.

ಹಲವು ಹತ್ತು ಸಲ ಕಾಳಗದಲ್ಲಿ
ಎದುರಾಳಿಗಳಿಗೆ ಒಪ್ಪಿಸಿದ ಕಡಗ
ನಗೆಪಾಟಲಿಗೀಡಾದ ಹುಡುಗ.
ಇನ್ನಿಲ್ಲದಷ್ಟು ಸೋಲುಂಟು
ಏನಾದರೂ ಮಾಡಲೇಬೇಕೆಂದು
ಅಂದುಕೊಂಡು
ಕಿರೀಟವ ಕನಸುತ್ತ ಹೊರಟ.

ಹೀಗಿರುವಾಗ-
ರೋಗದ ಭಾಗ್ಯವೋ, ಓನಮಿಯ
ಯೋಗವೋ
ಕಡಲತಡಿಯೊಳಗೆ ಪುಟ್ಟ ಗುಡಿಯೊಳಗೆ
ಭಿಕ್ಷುವೊಬ್ಬ ಬಂದಿಳಿದ
ಓನಮಿ ಓಡೋಡಿ ಬಂದು
ನೀನೇ ಗತಿಯೆಂದು ಅಂದು
ತನ್ನ ದುಃಖವನ್ನೆಲ್ಲ ತೋಡಿಕೊಂಡ.

ಭಿಕ್ಷು ನುಡಿದ-
ಓನಮಿಯಲ್ಲವೆ ನಿನ್ನ ಹೆಸರು?
ಹೋಗು ಅಲೆಗಳನ್ನು ಆಲಿಸು
ನೀನೇ ಅಲೆಗಳೆಂದು ಭಾವಿಸು
ನಿನ್ನ ಕಿವಿಗಳನ್ನು ಅಲೆಗಳಲ್ಲಿ ಇಡು
ನಿನ್ನನ್ನೇ ಅಲೆಗಳಲ್ಲಿ ಇಡು
ನೀನೀಗ ಮಲ್ಲನಲ್ಲ
ಮರೆತುಬಿಡು ಹಿಂದಿನದೆಲ್ಲ.

ಆಕಾಶದೆತ್ತರ ಎದ್ದು
ಎದುರಿಗಿರುವುದನ್ನೆಲ್ಲ ಒದ್ದು
ನೀನಾಗು
ಎಲ್ಲವನ್ನು ನಿನ್ನೊಳಗಿರಿಸಿಕೊಂಡು
ನೀನು ಅದೇ ಆಗು
ಅಲೆಗಳನ್ನು ಲಾಲಿಸು
ಅಲೆಗಳನ್ನು ಪಾಲಿಸು
ಹೋಗು ಹಿಂಬಾಲಿಸು.

ಓನಮಿ ಅಲೆಗಳಿಗೆ
ಗಾಳ ಹಾಕಿ ಕುಳಿತ
ಯೋಚನೆಗಳ ಬಲೆ ಬೀಸಿ
ಇವನನ್ನೆ ಹಿಡಿದವು.

ಓನಮಿ
ಅಲೆಗಳನ್ನು ನೋಡಿದ
ಅದರ ಹಿಂದೆ ಓಡಿದ
ಅಲೆಗಳನ್ನು ಕರೆದ.
ಗೋಗರೆದ.
ಅಲೆಗಳು ಇವನನ್ನೆ ನೋಡಿದವು
ಹಿಂದೆ ಹಿಂದೆ ಓಡಿದವು
ಇವನನ್ನು ಧಿಕ್ಕರಿಸಿದವು.

ಚುಕ್ಕಿಗಳು ಹೊಳೆದವು
ರಾತ್ರಿಗಳು ಸವೆದವು
ಹಗಲುಗಳು ಉರಿದವು
ಮುಂಗಾರುಗಳು ಮುದುರಿದವು
ಹಿಂಗಾರುಗಳು ಹಾರಿದವು
ಋತುಗಳು ಬಾಡಿದವು
ಮೋಡಗಳ ಹಿಂಡುಗಳು
ಓನಮಿಯನ್ನೆ ನೋಡಿದವು
ತಿರುಗಿ ತಿರುಗಿ ನೋಡಿದವು
ನೋಡಿಯೇ ನೋಡಿದವು.

ಓನಮಿ
ಅಲೆಗಳನ್ನು ಧ್ಯಾನಿಸಿದ
ಧ್ಯಾನಿಸಿದ, ಧ್ಯಾನಿಸಿದ….
ಅಲೆಯ ಹಾಗೆ ನಡುಗಿದ
ಅಲೆಯೊಳಗೆ ಅಡಗಿದ
ಅಲೆಗಳಿಗೆ ಕೊರಳಾದ
ಅಲೆಗಳ ಬೆರಳಾದ
ಕಣ್ಣಾದ, ಕಿವಿಯಾದ
ಮೈಯಾದ, ಮನವಾದ
ಅಲೆಯಲ್ಲೊಂದು ಅಲೆಯಾದ

ಮತ್ತೊಂದು, ಮಗದೊಂದು
ಇನ್ನೊಂದು ಅಲೆಯಾದ
ಅಲೆಯಂತೆ ಕುಣಿದ
ಆಕಾಶಕ್ಕೆ ನೆಗೆದ.
ದೇವಾಲಯ ಮುಚ್ಚಿ ಹೋಯ್ತು
ಬುದ್ಧನ ಪ್ರತಿಮೆ ಕೊಚ್ಚಿ ಹೋಯ್ತು
ಒಬ್ಬ ಸೂರ್ಯ ಕಡಲಲ್ಲಿದ್ದ
ಮತ್ತೊಬ್ಬ ದಡದಲ್ಲಿದ್ದ

ಓನಮಿ ದಡದಲ್ಲಿದ್ದ
ಓನಮಿ ಧ್ಯಾನದಲ್ಲಿದ್ದ
ಆ ದಿನವೆ ಓನಮಿ
ಅಲ್ಲಿಂದ ಹೊರಟ
ಕಣ್ಣೊಳಗೆ ಕಡಲಿತ್ತು
ಬೆಳಕಿನದೆ ಮಾಟ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...