Home / ಕವನ / ಕವಿತೆ / ಓನಮಿ

ಓನಮಿ

(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ)

ಒಂದೂರಿನಲ್ಲಿ ಓನಮಿ
ಎಂಬ ಮಲ್ಲನಿದ್ದ.
ಕಣಕ್ಕಿಳಿಯಲು ಆತ ಸದಾ ಸಿದ್ಧ.

ಒಬ್ಬಿಬ್ಬರೆದುರಲ್ಲಿ
ಎಲ್ಲರ ಒದ್ದು ಕೆಡವುತ್ತಿದ್ದ.
ಒಟ್ಟಿನಲ್ಲಿ, ಗುಟ್ಟಿನಲಿ
ಈತ ಗುರು ಮೀರುವ ಶೂರ
ಮಂದಿಯೆಂದರೆ ಮಾತ್ರ
ಕಂದಿಹೋಗುವ ಮೋರೆ
ಜನ ನೆರೆದರೆಂದರೆ ಇನ್ನೂ ತೊಂದರೆ
ಬಾಲರೆದುರೂ ಈತ ಅಧೀರ.

ಹಲವು ಹತ್ತು ಸಲ ಕಾಳಗದಲ್ಲಿ
ಎದುರಾಳಿಗಳಿಗೆ ಒಪ್ಪಿಸಿದ ಕಡಗ
ನಗೆಪಾಟಲಿಗೀಡಾದ ಹುಡುಗ.
ಇನ್ನಿಲ್ಲದಷ್ಟು ಸೋಲುಂಟು
ಏನಾದರೂ ಮಾಡಲೇಬೇಕೆಂದು
ಅಂದುಕೊಂಡು
ಕಿರೀಟವ ಕನಸುತ್ತ ಹೊರಟ.

ಹೀಗಿರುವಾಗ-
ರೋಗದ ಭಾಗ್ಯವೋ, ಓನಮಿಯ
ಯೋಗವೋ
ಕಡಲತಡಿಯೊಳಗೆ ಪುಟ್ಟ ಗುಡಿಯೊಳಗೆ
ಭಿಕ್ಷುವೊಬ್ಬ ಬಂದಿಳಿದ
ಓನಮಿ ಓಡೋಡಿ ಬಂದು
ನೀನೇ ಗತಿಯೆಂದು ಅಂದು
ತನ್ನ ದುಃಖವನ್ನೆಲ್ಲ ತೋಡಿಕೊಂಡ.

ಭಿಕ್ಷು ನುಡಿದ-
ಓನಮಿಯಲ್ಲವೆ ನಿನ್ನ ಹೆಸರು?
ಹೋಗು ಅಲೆಗಳನ್ನು ಆಲಿಸು
ನೀನೇ ಅಲೆಗಳೆಂದು ಭಾವಿಸು
ನಿನ್ನ ಕಿವಿಗಳನ್ನು ಅಲೆಗಳಲ್ಲಿ ಇಡು
ನಿನ್ನನ್ನೇ ಅಲೆಗಳಲ್ಲಿ ಇಡು
ನೀನೀಗ ಮಲ್ಲನಲ್ಲ
ಮರೆತುಬಿಡು ಹಿಂದಿನದೆಲ್ಲ.

ಆಕಾಶದೆತ್ತರ ಎದ್ದು
ಎದುರಿಗಿರುವುದನ್ನೆಲ್ಲ ಒದ್ದು
ನೀನಾಗು
ಎಲ್ಲವನ್ನು ನಿನ್ನೊಳಗಿರಿಸಿಕೊಂಡು
ನೀನು ಅದೇ ಆಗು
ಅಲೆಗಳನ್ನು ಲಾಲಿಸು
ಅಲೆಗಳನ್ನು ಪಾಲಿಸು
ಹೋಗು ಹಿಂಬಾಲಿಸು.

ಓನಮಿ ಅಲೆಗಳಿಗೆ
ಗಾಳ ಹಾಕಿ ಕುಳಿತ
ಯೋಚನೆಗಳ ಬಲೆ ಬೀಸಿ
ಇವನನ್ನೆ ಹಿಡಿದವು.

ಓನಮಿ
ಅಲೆಗಳನ್ನು ನೋಡಿದ
ಅದರ ಹಿಂದೆ ಓಡಿದ
ಅಲೆಗಳನ್ನು ಕರೆದ.
ಗೋಗರೆದ.
ಅಲೆಗಳು ಇವನನ್ನೆ ನೋಡಿದವು
ಹಿಂದೆ ಹಿಂದೆ ಓಡಿದವು
ಇವನನ್ನು ಧಿಕ್ಕರಿಸಿದವು.

ಚುಕ್ಕಿಗಳು ಹೊಳೆದವು
ರಾತ್ರಿಗಳು ಸವೆದವು
ಹಗಲುಗಳು ಉರಿದವು
ಮುಂಗಾರುಗಳು ಮುದುರಿದವು
ಹಿಂಗಾರುಗಳು ಹಾರಿದವು
ಋತುಗಳು ಬಾಡಿದವು
ಮೋಡಗಳ ಹಿಂಡುಗಳು
ಓನಮಿಯನ್ನೆ ನೋಡಿದವು
ತಿರುಗಿ ತಿರುಗಿ ನೋಡಿದವು
ನೋಡಿಯೇ ನೋಡಿದವು.

ಓನಮಿ
ಅಲೆಗಳನ್ನು ಧ್ಯಾನಿಸಿದ
ಧ್ಯಾನಿಸಿದ, ಧ್ಯಾನಿಸಿದ….
ಅಲೆಯ ಹಾಗೆ ನಡುಗಿದ
ಅಲೆಯೊಳಗೆ ಅಡಗಿದ
ಅಲೆಗಳಿಗೆ ಕೊರಳಾದ
ಅಲೆಗಳ ಬೆರಳಾದ
ಕಣ್ಣಾದ, ಕಿವಿಯಾದ
ಮೈಯಾದ, ಮನವಾದ
ಅಲೆಯಲ್ಲೊಂದು ಅಲೆಯಾದ

ಮತ್ತೊಂದು, ಮಗದೊಂದು
ಇನ್ನೊಂದು ಅಲೆಯಾದ
ಅಲೆಯಂತೆ ಕುಣಿದ
ಆಕಾಶಕ್ಕೆ ನೆಗೆದ.
ದೇವಾಲಯ ಮುಚ್ಚಿ ಹೋಯ್ತು
ಬುದ್ಧನ ಪ್ರತಿಮೆ ಕೊಚ್ಚಿ ಹೋಯ್ತು
ಒಬ್ಬ ಸೂರ್ಯ ಕಡಲಲ್ಲಿದ್ದ
ಮತ್ತೊಬ್ಬ ದಡದಲ್ಲಿದ್ದ

ಓನಮಿ ದಡದಲ್ಲಿದ್ದ
ಓನಮಿ ಧ್ಯಾನದಲ್ಲಿದ್ದ
ಆ ದಿನವೆ ಓನಮಿ
ಅಲ್ಲಿಂದ ಹೊರಟ
ಕಣ್ಣೊಳಗೆ ಕಡಲಿತ್ತು
ಬೆಳಕಿನದೆ ಮಾಟ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ