Home / ಕವನ / ಕವಿತೆ / ಅವರು ತಾಯಂದಿರು

ಅವರು ತಾಯಂದಿರು

ಅವರು ತಾಯಂದಿರು ಮತ್ತೆ
ಕತ್ತಲ ರಾತ್ರಿಯ ಬಿಕ್ಕುಗಳ
ನಕ್ಷತ್ರಗಳ ತಂಪು ಆಗಸಕೆ ಒಡ್ಡಿ
ಒಡಲ ಸೆರಗತುಂಬ ಬೆಳದಿಂಗಳು
ತುಂಬಿಕೊಂಡವರು.

ಹಾರುವ ಹಕ್ಕಿ ತೇಲುವ ಮೋಡಗಳು
ಎಳೆಯುವ ತೇರಿನ ನಕ್ಷೆಗಳ
ಕಸೂತಿ ಅರಳಿಸಿಕೊಂಡು ಮತ್ತೆ
ಅಂಗಳದ ತುಂಬ ಸಡಗರದ
ದೀಪಾವಳಿ ದೀಪಗಳ ಹಚ್ಚಿದವರು.

ಹರಿಯುವ ನದಿಯ ನೀರು.
ಥಳಥಳ ಹೊಳೆಯುವ ಕೊಡಪಾನ
ಗಳಲಿ ತುಂಬಿ ಹೊಗೆ ಹಾರುವ
ಒಲೆಯ ಮೇಲೆ ಕಾಯಿಸಿ ಎಣ್ಣೇಹಚ್ಚಿ
ಬಿಸಿನೀರು ಅಭ್ಯಂಜನ ಸ್ನಾನ ಪುಳಕ ಹುಟ್ಟಿಸಿದವರು.

ಎಲ್ಲಾ ದಾರಿಗಳ ಕಲ್ಲು ಕಣಿವೆಯ
ದಾಟಿಸಿ ಕೈ ಹಿಡಿದು ಹಾಲು ಕುಡಿಸಿ
ಮೆಲ್ಲಗೆ ಬಯಲ ಹಸಿರು ನದಿಗುಡ್ಡ
ಹಸಿರ ಹೊಳಪಿಗೆ ಬಿಸಿಲಿಗೊಡ್ಡಿ ತಂದು
ಗುಬ್ಬಚ್ಚಿ ಗೂಡು ಕಟ್ಟಿಸಿದವರು.

ಬಿರುಬಿಸಿಲ ಕೆಂಡದಲಿ ಬೇಯುವಾಗ
ಅದೃಷ್ಟದ ಮಳೆ ಮೋಡ ಹರಿಸಿದ ಪ್ರೀತಿ
ಭೋರೆಂದು ಸುರಿದ ಮಳೆಯಲಿ
ತಬ್ಬಿ ಅಂಗಳದ ಮಲ್ಲಿಗೆ ಮುಡಿಗೇರಿಸಿ –
ಬಯಲಗಾಳಿಯಲಿ ಹೂವಹಕ್ಕಿ ಹಾಡು ಕೇಳಿಸಿದವರು.

ಜಾತ್ರೆಯಲಿ ಬಣ್ಣದ ಬಲೂನ ಬಳೆ
ಜರಿಲಂಗ ತೊಡಿಸಿ ಜಡೆತುಂಬ ಕೇದಿಗೆ
ಅರಸಿನ ಚಂದನ ಆರತಿ ಬೆಳಗಿ ಒಡಲಲಿ
ನೂಲನೇಯ್ದು ಬಟ್ಟೆ ಬಯಲ ದಾರಿ
ನಮಗೂ ನಿಮಗೂ ಅರಳಿಸಿ ತೋರಿಸಿದವರು.

ಅವರು ತಾಯಂದಿರು ಮಾತಿನ
ಮಂತ್ರ ಪುಷ್ಪ ಎದೆಗೆ ಅವಚಿಕೊಂಡ
ಗಾಳಿಗಂಧ ಸೇರಿಸಿ ಬೆರಗಿಗೆ ಉತ್ತರಿಸಿ
ಚರಿತೆ ಹುಟ್ಟಿಸಿ ಬತ್ತದ ಒರತ
ಎಲ್ಲರ ಒಡಲಲಿ ಜೀವಜಲವಾಗಿ ಹರಿದವರು.

ಅವರು ಜಗದ ತಾಯಂದಿರು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...