Home / ಕವನ / ಕವಿತೆ / ವಿಧಿ

ವಿಧಿ

ತಾರಣ ವರುಷದ ನಾಲ್ಕನೆ ಮಾಸದ
ಅಂತ್ಯದ ದಿನವದು ಮುಂಜಾನೆ
ಊರಿನ ಜನರಿಗೆ ಹೇಳಲು ತೀರದ
ಸಡಗರ ತುಂಬಿದೆ ಬಿಡುವಿಲ್ಲ

ದಾನವು ಧರ್ಮವು ದಾಸರ ಪದಗಳು
ಸ್ನಾನವು ಜಪಗಳು ನಡೆದಿಹುವು
ಏನಿದು ಎಂದರೆ ಬಾಲಕನೊಬ್ಬನು
ಕನ್ನಡಿಯೊಂದನು ತೋರಿದನು

ಮಸಿಯನು ಪೂಸಿದ ಮುರುಕಿನ ಕನ್ನಡಿ
ಕಂಗಳಿಗಿಟ್ಟನು ನೋಡೆಂದು
ನೀಲಿಯ ಭವನದಿ ಕಾಂತಿವಿಹೀನದ
ಸ್ವಾಮಿಯ ಕಂಡೆನು ಕಾತರದಿ

ಧಗಧಗಿಸುವ ಆ ಕಿರಣಗಳಿಲ್ಲದೆ
ಭಿನ್ನದ ಮೂರುತಿ ಕಾಣಿಸಿತು
‘ರಾಹುವೊ ಕೇತುವೊ ನುಂಗಿವೆ ಸೂರ್ಯನ
ತಿಳಿಯಿತೆ’ ಎಂದನು ಬಾಲಕನು

ಸೃಷ್ಟಿಯನೆಲ್ಲವ ಪಾಲನೆ ಮಾಡುವ
ಸೂರ್ಯನ ಪಾಡನು ನೋಡಿದೆನು
ತಿವಿದನು ಕವಿ ಹೃದಯವ ಆ ಭಾಸ್ಕರ
ಮಗಳೇ ವಿಧಿಯನು ನೋಡೆಂದು

ಏನಿದು ಅಚ್ಚರಿ ಓ ರವಿ ದೇವಾ
ನಿನಗೂ ವಿಧಿಯಾಜ್ಞೆಯು ಉಂಟೇ?
ಬಾನೊಳು ಧಗಿಸುವ ಮಿಹಿರನ ಕೂಡ
ಬಂಧಿಸಿ ಕೆಡಿಸಿತೆ ಆ ವಿಧಿಯು

ನೀನಿರುತಿಹ ಬಹುದೂರದ ಭವನವು
ಕಲ್ಮಷವಿಲ್ಲದ ಆಗಸವು
ನಿನ್ನೊಳು ತುಂಬಿದೆ ಜಗವನು ಬೆಳಗಿಸಿ
ನಿತ್ಯವು ನಡಸುವ ಸಾಹಸವು

ಭುವಿಯನೆ ಕುದಿಸುತ ಪ್ರಜ್ವಲಿಸುವ ಪ್ರಭು
ವಿಧಿಯನು ಗೆಲ್ಲಲು ಅಸದಳವೆ?
ಎದುರಿಸಿ ನಿನ್ನಾ ಜ್ವಾಲೆಯ ಝಳಪಿಸಿ
ಸಹಿಸದೆ ಪೋದೆಯ ಆ ವಿಧಿಯ?

ಆಗದು ಆಗದು ಎಂದಿಗು ಮಗಳೇ
ಸಾಹಸಿಯಾ ವಿಧಿ ಚಿರಜೀವಿ!
ಬಾಳಿನ ತಳಿರಿನ ಕುಡಿಗಳ ಚಿವುಟುತ
ಕಿಲಿ ಕಿಲಿ ನಗುವುದೆ ಅವನಾಟ!

ಸುಖದೊಳು ದುಃಖದ ಮೊಳಕೆಯ ನಾಟಿಸಿ
ಕಂಬನಿಗರಸುತ ಬೆಳಸುವನು
ರೋದನ ದನಿಯನು ಕೇಳುತ ಹರುಷದಿ
ಕರತಾಡನದಿಂ ಕುಣಿಯುವನು

ಇಂತಿರು ಅಂತಿರು ಎನ್ನುತ ಸೃಷ್ಟಿಯ
ನಿಯಮಿಸಿ ಆಜ್ಞೆಯ ವಿಧಿಸುವನು
ಯಂತ್ರ ವಸ್ತುಗಳಾಗಿಹೆವೆಲ್ಲರು
ಆ ವಿಧಿ ಶಾಸನದಡಿಯೊಳಗೆ

ಮಾನುಷ ಯತ್ನಕೆ, ಸೌಖ್ಯಕೆ ದೈವವು
ನಾನಾ ಘಾತವ ತಂದಂತೆ
ಬಾನೊಳು ಸುಳಿಯುತ ಸುಖಿಸವ ನನ್ನನು
ಕ್ರಾಂತಿಯು ಕ್ಷಣದೊಳು ಕೆಡಿಸಿಹುದು

ವಿಧಿ ನಿಯಮದ ಒಂದಾಜ್ಞೆಯು ಮೀರದೆ
ಸಲಿಸುತ ಬಂದಿದೆ ಯುಗ ಯುಗವು
ನಾವದನೆದುರಿಸಲಾಗದು ಅಮ್ಮಾ
ಜನಕಜೆ ಎಂದನು ದಿನಕರನು
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...