Home / ಕವನ / ಕವಿತೆ / ಒಂದು ಗ್ರಾಮದ ಮುಖಗಳು

ಒಂದು ಗ್ರಾಮದ ಮುಖಗಳು

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ
ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ
ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ
ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ

ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ
ಒಮ್ಮೊಮ್ಮೆ ಊರ ಕೆರೆಯಲ್ಲಿ ಬಿದ್ದು
ಕೆರೆ ಬತ್ತಿದಾಗ ಮೋಡಗಳೆದ್ದು
ಗುಡ್ದಗಳ ಹಿ೦ದೆ ಮರೆಯಾಗಿ ಕದ್ದು

ಕಾರಡ್ಕ ಮುಳ್ಳೆರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ

ಪಂಡಿತರ ಮನೆಯಂಗಳದಲ್ಲಿ ಬಿತ್ತಾವ ಶಕುನದ ಹಕ್ಕಿ
ಎರಡು ತಲೆಗಳ ಗಂಡಬೇರುಂಡವೆ ಅಥವ ಇನ್ನೊಂದೆ ?
ಯಾರಿಗೆ ಗೊತ್ತು? ಜಜ್ಜಿ ಹೋಗಿತ್ತು ರುಂಡ
ಎಲ್ಲರಿಗಿಂತ ಮೊದಲೇ ಎದ್ದ ಭಂಡ ಕಾಗೆ
ಕುಕ್ಕಿ ಎಳೆಯುತ್ತಿತ್ತು ಅದರ ಕರುಳ
ಅಂದು ಮೇಯಲು ಹೋದ ದನ ಮರಳಿ ಬರಲಿಲ್ಲ
ಹೆರಿಗೆಗೆ ಬಂದ ಮಗಳು ಗಂಡನಮನೆ ಸೇರಲಿಲ್ಲ
ನೆರೆಮನೆಯಾಕೆ ಎರಡು ಮಕ್ಕಳ ತಾಯಿ
ಓಡಿಹೋದಳು ಘಟ್ಟದಿಂದ ಬಂದವನ ಜತೆ
ಅಜ್ಜಿಯೆಂದಳು-ಇದು ಕಲಿಯುಗದ
ಮೂರನೆಯ ಅಥವ ನಾಲ್ಕನೆಯ ಪಾದ
ಕಳವು ಕೊಲೆ ದಗೆ ಹಾದರ
ಇವೆಲ್ಲ ಲಕ್ಷಣಗಳದರ
ಮೊದಲು ಬರುವುದು ಭೀಕರ ಕ್ಷಾಮ
ಅಮೇಲೆ ಬರುವುದೆ ಪ್ರಳಯ
ಗಂಗಾಜಲದ ಚೊಂಬು ತಲೆಯ ಬಳಿಯಿರಿಸಿ
ಕಾಯುತಿದ್ಡಳು ಆಕೆ ಉತ್ತರಾಯಣವ
ಕಾಯಲಿಲ್ಲ ಮರಣ

ಕೊನೆಯ ಎತ್ತಿನ ಗಾಡಿ
ಹೊರಟು ಹೋಯಿತು ಎ೦ದು?
ಊರ ಚೌಕದಲಿತ್ತು ತಿಂಗಳಿಂದಲು ಹಾಗೆ
ಎಷ್ಟೋ ದಾರಿಗಳ ಸುತ್ತುಹಾಕಿದ ಗಾಲಿ
ಎಷ್ಟೋ ಹೊಲಗಳ ಹುಲ್ಲು ಮೋದ ಜೊಡೆತ್ತು
ಒ೦ದು ದಿನ ಮುಂಜಾನೆ ಕಾಣಿಸಲಿಲ್ಲ ಎಲ್ಲು
ಅಂದುಕೊಂಡೆವು ನಾವು-ಹೋಗಿರಬಹುದು
ಕುಂಬಳೆಗೆ ಅಥವ ಉಪ್ಪಿನಂಗಡಿಗೆ
ಉಳ್ಳಾಲ ಅಥವ ಮಂಜೇಶ್ವರಕ್ಕೆ
ಹೊದೆವ ಹಂಚುಗಳನ್ನು ಅಥವ
ಉಪ್ಪಿನ ಚೀಲಗಳನ್ನು ತರಲು
ಕಾದು ಕುಳಿತವು ಎಲ್ಲರೂ
ಗಾಡಿ ಬರುವುದನ್ನು

ಬರಲಿಲ್ಲ ಗಾಡಿ- ಬಂತು ಕೊರೆಯುವ ಮಾಗಿ
ಕಾದಿದ್ದ೦ತೆ ಎಲ್ಲೋ ಸಂದಿಯಲಡಗಿ
ಬಂತು ಮನೆಮನೆ ಸೂರುಗಳಿಂದ ಇಬ್ಬನಿತೂಗಿ
ಒ೦ದು ಮೈ ನಡುಕದಿಂದ ಇನ್ಮೊಂದಕ್ಕೆ ಸಾಗಿ
ಮುಟ್ವಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ

ಒ೦ದು ವರುಷಕ್ಕೇ ಒ೦ದು ಶಕೆ
ಅಬ್ಬ! ಅಂಥ ಸೆಕೆ
ತಿಳಿದವರು ಹೇಳುವರು-
ಮಾಗಿಯ ಹಕ್ಕಿಗಳು ಬೇಸಿಗೆಯಲ್ಲಿ ಹಾರಿಹೋಗುವುವು
ಮಳೆಗಾಲದ ಕಪ್ಪೆಗಳು ನೆಲದೊಳಗೆ ಕುಳಿತುಕೊಳ್ಳುವುವು
ಮೀನುಗಳೂ ಹಾಗೆ ಇನ್ನೆಲ್ಲೋ ಅವಿತುಕೊಳ್ಳುವುವು
ಭೂಮಿ ತನ್ನೊಳಗೆ ಬೀಜಗಳನ್ನು ಇಟ್ಟುಕೊಳ್ಳುವುವು
ಅದು ಎಲ್ಲಿವನ್ನೂ ಸಹಿಸುವುದು

ಅವರು ಬಂದರು-
ಮೊದಲು ಬಸ್ಸುಗಳಲ್ಲಿ ಅಮೇಲೆ ಕಾರು ಜೀಪುಗಳಲ್ಲಿ
ಮೆಟಡೋರು ಟ್ರಕ್ಕುಗಳಲ್ಲಿ ನೆಲನಡುಗಿಸುವ ಯಂತ್ರಗಳಲ್ಲಿ
ಯಾರವರ ನೇತಾರ ಕಪ್ಪುಚಷ್ಮದ ಧೀರ
ನೊಡಿರವನ ಉಡುಗೆ ತೊಡುಗೆಯ ಗತ್ತು
ಮಾತುಮಾತಿಗೆ ವಿಚಿತ್ರ ಒತ್ತು
ಕಾಲನಡೆಯಲ್ಲೂ ಬೇರೆ ಒತ್ತಡವಿತ್ತು
ಕಲಿಯೊ ಕಲ್ಕಿಯೊ ಕಲ್ಕಿಯ ಮಗನೊ
ತಿಳಿಯುವುದಿಲ್ಲ ಊಹೆಗೂ ನಿಲುಕದ ಮಲ್ಲ
ಬಿಸಿಲ ಝಳದಲ್ಲಿ ತೊಳಗುತ್ತ ತಳತಳ
ನಮ್ಮ ಬೆವರುಗಣ್ಣಿನಲ್ಲಿ ಒಂದು ಎರಡಾಗುವನು
ಎರಡು ಮೂರಾಗುವನು ನೂರಾಗುವನು
ನೂರು ಸಾವಿರವಾಗುವನು
ತನ್ನ ಪ್ರಭಾವಲಯದೊಳಗೆ ಆಳುವನು
ಈ ಊರ ಸೃಷ್ಟಿ ಸ್ಥಿತಿ ಲಯಗಳನ್ನು
ಅದರ ಹೇಳಲಾರದ ಭಯಗಳನ್ನು
******

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...