Home / ಕವನ / ಕವಿತೆ / ಒಂದು ಗ್ರಾಮದ ಮುಖಗಳು

ಒಂದು ಗ್ರಾಮದ ಮುಖಗಳು

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ
ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ
ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ
ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ

ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ
ಒಮ್ಮೊಮ್ಮೆ ಊರ ಕೆರೆಯಲ್ಲಿ ಬಿದ್ದು
ಕೆರೆ ಬತ್ತಿದಾಗ ಮೋಡಗಳೆದ್ದು
ಗುಡ್ದಗಳ ಹಿ೦ದೆ ಮರೆಯಾಗಿ ಕದ್ದು

ಕಾರಡ್ಕ ಮುಳ್ಳೆರಿಯ ಕಾನತ್ತೂರು ಕರಣಿ
ವಿಚಿತ್ರ ಹೆಸರುಗಳ ಸರಣಿ
ಹೊತ್ತ ಈ ಧರಣಿ ನಮ್ಮ ಪಡೆದಾಗ
ಇನ್ನೂ ತರುಣಿ

ಪಂಡಿತರ ಮನೆಯಂಗಳದಲ್ಲಿ ಬಿತ್ತಾವ ಶಕುನದ ಹಕ್ಕಿ
ಎರಡು ತಲೆಗಳ ಗಂಡಬೇರುಂಡವೆ ಅಥವ ಇನ್ನೊಂದೆ ?
ಯಾರಿಗೆ ಗೊತ್ತು? ಜಜ್ಜಿ ಹೋಗಿತ್ತು ರುಂಡ
ಎಲ್ಲರಿಗಿಂತ ಮೊದಲೇ ಎದ್ದ ಭಂಡ ಕಾಗೆ
ಕುಕ್ಕಿ ಎಳೆಯುತ್ತಿತ್ತು ಅದರ ಕರುಳ
ಅಂದು ಮೇಯಲು ಹೋದ ದನ ಮರಳಿ ಬರಲಿಲ್ಲ
ಹೆರಿಗೆಗೆ ಬಂದ ಮಗಳು ಗಂಡನಮನೆ ಸೇರಲಿಲ್ಲ
ನೆರೆಮನೆಯಾಕೆ ಎರಡು ಮಕ್ಕಳ ತಾಯಿ
ಓಡಿಹೋದಳು ಘಟ್ಟದಿಂದ ಬಂದವನ ಜತೆ
ಅಜ್ಜಿಯೆಂದಳು-ಇದು ಕಲಿಯುಗದ
ಮೂರನೆಯ ಅಥವ ನಾಲ್ಕನೆಯ ಪಾದ
ಕಳವು ಕೊಲೆ ದಗೆ ಹಾದರ
ಇವೆಲ್ಲ ಲಕ್ಷಣಗಳದರ
ಮೊದಲು ಬರುವುದು ಭೀಕರ ಕ್ಷಾಮ
ಅಮೇಲೆ ಬರುವುದೆ ಪ್ರಳಯ
ಗಂಗಾಜಲದ ಚೊಂಬು ತಲೆಯ ಬಳಿಯಿರಿಸಿ
ಕಾಯುತಿದ್ಡಳು ಆಕೆ ಉತ್ತರಾಯಣವ
ಕಾಯಲಿಲ್ಲ ಮರಣ

ಕೊನೆಯ ಎತ್ತಿನ ಗಾಡಿ
ಹೊರಟು ಹೋಯಿತು ಎ೦ದು?
ಊರ ಚೌಕದಲಿತ್ತು ತಿಂಗಳಿಂದಲು ಹಾಗೆ
ಎಷ್ಟೋ ದಾರಿಗಳ ಸುತ್ತುಹಾಕಿದ ಗಾಲಿ
ಎಷ್ಟೋ ಹೊಲಗಳ ಹುಲ್ಲು ಮೋದ ಜೊಡೆತ್ತು
ಒ೦ದು ದಿನ ಮುಂಜಾನೆ ಕಾಣಿಸಲಿಲ್ಲ ಎಲ್ಲು
ಅಂದುಕೊಂಡೆವು ನಾವು-ಹೋಗಿರಬಹುದು
ಕುಂಬಳೆಗೆ ಅಥವ ಉಪ್ಪಿನಂಗಡಿಗೆ
ಉಳ್ಳಾಲ ಅಥವ ಮಂಜೇಶ್ವರಕ್ಕೆ
ಹೊದೆವ ಹಂಚುಗಳನ್ನು ಅಥವ
ಉಪ್ಪಿನ ಚೀಲಗಳನ್ನು ತರಲು
ಕಾದು ಕುಳಿತವು ಎಲ್ಲರೂ
ಗಾಡಿ ಬರುವುದನ್ನು

ಬರಲಿಲ್ಲ ಗಾಡಿ- ಬಂತು ಕೊರೆಯುವ ಮಾಗಿ
ಕಾದಿದ್ದ೦ತೆ ಎಲ್ಲೋ ಸಂದಿಯಲಡಗಿ
ಬಂತು ಮನೆಮನೆ ಸೂರುಗಳಿಂದ ಇಬ್ಬನಿತೂಗಿ
ಒ೦ದು ಮೈ ನಡುಕದಿಂದ ಇನ್ಮೊಂದಕ್ಕೆ ಸಾಗಿ
ಮುಟ್ವಿದುವೆಲ್ಲ ಸೊರಗಿ ಸುಕ್ಕುಗಳಾಗಿ
ಬಂತು ಮತ್ತೊಮ್ಮೆ ತಿರುಗಿ
ಮಳೆಗೊಮ್ಮೆ ಪ್ರಳಯ ಬೇಸಿಗೆಗೆಷ್ಟೋ ಕ್ಷಾಮ
ಚಲಿಸುತಿತ್ತು ಹೀಗೆ ಕಾಲಕ್ರಮ
ತತ್ತರಿಸುತಲಿತ್ತು ಗ್ರಾಮ

ಒ೦ದು ವರುಷಕ್ಕೇ ಒ೦ದು ಶಕೆ
ಅಬ್ಬ! ಅಂಥ ಸೆಕೆ
ತಿಳಿದವರು ಹೇಳುವರು-
ಮಾಗಿಯ ಹಕ್ಕಿಗಳು ಬೇಸಿಗೆಯಲ್ಲಿ ಹಾರಿಹೋಗುವುವು
ಮಳೆಗಾಲದ ಕಪ್ಪೆಗಳು ನೆಲದೊಳಗೆ ಕುಳಿತುಕೊಳ್ಳುವುವು
ಮೀನುಗಳೂ ಹಾಗೆ ಇನ್ನೆಲ್ಲೋ ಅವಿತುಕೊಳ್ಳುವುವು
ಭೂಮಿ ತನ್ನೊಳಗೆ ಬೀಜಗಳನ್ನು ಇಟ್ಟುಕೊಳ್ಳುವುವು
ಅದು ಎಲ್ಲಿವನ್ನೂ ಸಹಿಸುವುದು

ಅವರು ಬಂದರು-
ಮೊದಲು ಬಸ್ಸುಗಳಲ್ಲಿ ಅಮೇಲೆ ಕಾರು ಜೀಪುಗಳಲ್ಲಿ
ಮೆಟಡೋರು ಟ್ರಕ್ಕುಗಳಲ್ಲಿ ನೆಲನಡುಗಿಸುವ ಯಂತ್ರಗಳಲ್ಲಿ
ಯಾರವರ ನೇತಾರ ಕಪ್ಪುಚಷ್ಮದ ಧೀರ
ನೊಡಿರವನ ಉಡುಗೆ ತೊಡುಗೆಯ ಗತ್ತು
ಮಾತುಮಾತಿಗೆ ವಿಚಿತ್ರ ಒತ್ತು
ಕಾಲನಡೆಯಲ್ಲೂ ಬೇರೆ ಒತ್ತಡವಿತ್ತು
ಕಲಿಯೊ ಕಲ್ಕಿಯೊ ಕಲ್ಕಿಯ ಮಗನೊ
ತಿಳಿಯುವುದಿಲ್ಲ ಊಹೆಗೂ ನಿಲುಕದ ಮಲ್ಲ
ಬಿಸಿಲ ಝಳದಲ್ಲಿ ತೊಳಗುತ್ತ ತಳತಳ
ನಮ್ಮ ಬೆವರುಗಣ್ಣಿನಲ್ಲಿ ಒಂದು ಎರಡಾಗುವನು
ಎರಡು ಮೂರಾಗುವನು ನೂರಾಗುವನು
ನೂರು ಸಾವಿರವಾಗುವನು
ತನ್ನ ಪ್ರಭಾವಲಯದೊಳಗೆ ಆಳುವನು
ಈ ಊರ ಸೃಷ್ಟಿ ಸ್ಥಿತಿ ಲಯಗಳನ್ನು
ಅದರ ಹೇಳಲಾರದ ಭಯಗಳನ್ನು
******

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...