Home / ಲೇಖನ / ಇತರೆ / ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್
ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್

ಪ್ರಿಯ ಸಖಿ,
ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು ಅರಳಿಸುವ ಶಕ್ತಿ, ಪ್ರತಿಭೆ ಹೊರಹಾಕುವ ಒಂದು ಮಾರ್ಗ, ಬೌದ್ಧಿಕ ಆಟ, ಹಣ ಹೆಸರು ಮಾಡುವ ಒಂದು ದಾರಿ, ಆತ್ಮಸಂತೋಷ ನೀಡುವ ಸಾಧನ… ಹೀಗೆ ಒಬ್ಬೊಬ್ಬರದು ಒಂದೊಂದು ಉತ್ತರ. ಹಾಗೆ ನೋಡಿದರೆ ಕವಿತೆಯೊಂದು ಹೀಗೆ ಇರಬೇಕು. ಇಷ್ಟು ಸಾಲುಗಳು ಇಂತದೇ ರೂಪದಲ್ಲಿರಬೇಕು ಎಂದು ಯಾರೂ ಚೌಕಟ್ಟು ಹಾಕುವಂತಿಲ್ಲ. ಏಕೆಂದರೆ ಕಾವ್ಯ ಸೃಷ್ಟಿಯೆಂಬುದು ಅತ್ಯಂತ ವೈಯಕ್ತಿಕವಾದ ಸೃಜನಶೀಲ ಸೃಷ್ಠಿಕ್ರಿಯೆ. ಎಲ್ಲ ಚೌಕಟ್ಟುಗಳನ್ನು ಮೀರಿ ಕಾವ್ಯ ರಚಿಸುವುದೇ ಹೊಸ ಕಾವ್ಯದ ಸೃಷ್ಠಿಗೆ ಕಾರಣವಾಗುತ್ತದೆ!

ಎಷ್ಟೋ ಬಾರಿ ಕವನಗಳು ಓದುಗರಿಗೆ ಅರ್ಥವಾಗದೇ ಇರುವುದೂ ಉಂಟು. ಕವಿಯ ಭಾವೋತ್ಕಟತೆಯ ಹಂತವಮ್ನ ಮುಟ್ಟದೇ ಕಾವ್ಯದೊಳಗೆ ಪರಕಾಯ ಪ್ರವೇಶವನ್ನು ಮಾಡದ ಹೊರತು ಸಹೃದಯನಿಗೆ ಕವಿತೆ ಅರ್ಥವಾಗುವುದು ಸಾಧ್ಯವಿಲ್ಲ. ಹೀಗೆಂದೇ ಕವಿತೆಯೊಂದರ ಓದು ಬೇರೆ ಪ್ರಕಾರಗಳ ಸಾಹಿತ್ಯದ ಓದಿಗಿಂತಾ ಹೆಚ್ಚಿನ ಏಕಾಗ್ರತೆಯನ್ನು, ಏಕಾಂತವನ್ನು, ನಿರ್ಮಲ ಪ್ರಶಾಂತ ಮನಸ್ಥಿತಿಯನ್ನು ಅರ್ಥೈಸುವಿಕೆಯ ನಿಟ್ಟಿನಲ್ಲಿ ದೀರ್ಘಸಮಯವನ್ನು ಬಯಸುತ್ತದೆ.

ಕವಿ, ಪ್ರೇಮಿ, ಹುಚ್ಚ ಇವರು ಮೂವರು ಹೆಚ್ಚು ಕಡಿಮೆ ಒಂದೇ ಮನಸ್ಥಿತಿಯವರೆಂದು ಹಿಂದಿನಿಂದ ಹೇಳುತ್ತಾ ಬಂದಿದ್ದಾರೆ. ಹುಚ್ಚನ ಮನೋವ್ಯಾಪಾರ ಸಾಮಾನ್ಯರಿಗೆ ನಿಲುಕುವಂತಹದ್ದಲ್ಲ. ಅವನು ಭಾವೋತ್ಕರ್ಷದಲ್ಲಿ ಮಾತನಾಡುವಾಗ ಎದುರಿನವರಿಗೆ ಅದರ ಹಿನ್ನೆಲೆ, ತಲೆಬುಡ ಒಂದೂ ತಿಳಿಯುವುದಿಲ್ಲ. ಪ್ರೇಮಿಯೊಬ್ಬನ ಸ್ಥಿತಿಯೂ ಇಂತಹುದೇ ಉತ್ಕಟ ಪ್ರೇಮದ ಅಮಲಿನಲ್ಲಿರುವವನಿಗೆ/ಳಿಗೆ, ಪ್ರಪಂಚದ ತುಂಬೆಲ್ಲಾ ತನ್ನ ಪ್ರೇಮಿಯ ಪ್ರತಿರೂಪವೇ ಕಾಣುತ್ತಿರುತ್ತದೆ. ಹಗಲುಗನಸು ಕಾಣುತ್ತಾ ಲೋಕವನ್ನೇ ಮರೆತು ತಮ್ಮಷ್ಟಕ್ಕೆ ನಗುತ್ತಿರುವುದು ಪ್ರೇಮ ತೀವ್ರತೆಯಲ್ಲಿ ನಡೆಸುವ ಹುಚ್ಚಾಟಗಳು, ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವಂತಹುದಲ್ಲ. ಸಹಜವಾಗಿ ಅದವರಿಗೆ ಒಂದು ರೀತಿಯ ಹುಚ್ಚು ಎನ್ನಿಸುತ್ತದೆ. ಹಾಗೇ ಕವಿ ಕೂಡ. ಭಾವಜೀವಿಯಾದ ತನ್ನ ಭಾವತೀವ್ರತೆಯಲ್ಲಿ ಉಕ್ಕಿದ ಭಾವನೆಗಳನ್ನು ಕವನವಾಗಿಸುವ ಅವನ ಮನಸ್ಥಿತಿಯೂ ಎಲ್ಲರಿಗೂ ಅರ್ಥವಾಗುವಂತಹುದಲ್ಲ.

ಉಕ್ಕುವ ಕಡಲಾಗಿಬಿಟ್ಟೆ
ಬಯಲಿನ ಒಡಲಾಗಿಬಿಟ್ಟೆ
ಈ ಜಗದ ತಾಯಾಗಿಬಿಟ್ಟೆ!
ಎಂಬ ಸಾಲುಗಳನ್ನು ಓದಿದಾಗ ಹೀಗಾಗಲು ವಾಸ್ತವದಲ್ಲಿ ಎಂದಾದರೂ ಸಾಧ್ಯವೇ? ಎನಿಸಿ ಬಿಡುತ್ತದೆ. ಆದರೆ ಕವಿಯ ಭಾವ ಲೋಕದ ತೀವ್ರ ಸ್ಪಂದನೆಯಲ್ಲಿ ಎಲ್ಲವೂ ಸಾಧ್ಯ. ಈ ನಿಟ್ಟಿನಲ್ಲಿ ಕವಿಯೂ ಕೂಡ ಅರ್ಥವಾಗದವನೇ ! ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕಿಂತ ಹೀಗಿರಬಹುದು, ಹಾಗಿರಬಹುದು ಎಂದು ಆರೋಪಿಸಿಕೊಂಡು ಕವನವನ್ನು ಓದುವವರೇ, ಅರ್ಥೈಸಿಕೊಳ್ಳುವವರೇ ಬಹುಮಂದಿ!

ಸಖಿ, ಕವಿ, ಹುಚ್ಚ, ಪ್ರೇಮಿಗಳು ಅರ್ಥವಾಗಲು ಅವರಂತದೇ ಸೂಕ್ಷ್ಮ ಸಂವೇದನೆಗಳುಳ್ಳ ಸಹೃದಯರಿಗೆ ಮಾತ್ರ ಸಾಧ್ಯ ಅಲ್ಲವೇ ? ಅಂತಹ ಸಹೃದಯರು ಇರಲಿ ಬಿಡಲಿ ಕವಿ, ಪ್ರೇಮಿಗಳು ಮಾತ್ರ ಎಲ್ಲ ಕಾಲದಲ್ಲೂ ಇರುತ್ತಾರೆ. ತಮ್ಮ ಸಂವೇವನೆಗಳನ್ನು ತಮ್ಮದೇ ಭಾವಲೋಕದ ಭಾಷೆಯಲ್ಲಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಅಲ್ಲವೇ ಸಖಿ ?
*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...