Home / ಕಥೆ / ಜನಪದ / ಕಾಳಿನ ಮೇಲೆ ಹೆಸರು

ಕಾಳಿನ ಮೇಲೆ ಹೆಸರು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಸಾಹುಕಾರನು ನೆಲಗಡಲೆ ತಿನ್ನುತ್ತ ತನ್ನ ಮನೆಯ ತಲೆವಾಗಿಲ ಮುಂದೆ ಕುಳಿತಿದ್ದನು. ಅತ್ತಕಡೆಯಿಂದ ಒಬ್ಬ ಸಾಧು ಬಂದು ಭಿಕ್ಷೆ ಬೇಡಿದನು. “ಮುಂದಿನ ಮನೆಗೆ ಹೋಗು’” ಎಂದು ಸಾಹುಕಾರನು ನುಡಿದನು.

“ತಿನ್ನಲು -ನಾಲ್ಕು ಕಾಯಿಗಳನ್ನಾದರೂ ಕೊಡಿರಿ” ಎಂದನು ಸಾಧು.

“ಅವು ಪುಕ್ಕಟೆ ಬಂದಿಲ್ಲ. ನಮಗೆ ಸಾಕಾಗಿ ಉಳಿದರೆ, ನಿನ್ನನ್ನು ಕರೆದು ಕೊಡುವೆನು. ಆಯಿತೇ ?” ಎಂದು ಸಾಹುಕಾರನು ಹೀಯಾಳಿಸಿದನು.

“ಎಲ್ಲವನ್ನೂ ನಾನೇ ತಿನ್ನುವೆನೆಂದರೆ ಸಾಧ್ಯವೇ ? ಪ್ರತಿಯೊಂದು ಕಾಳಿನ ಮೇಲೆ ಅದು ಹುಟ್ಟುವಾಗಲೇ ಅದನ್ನು ಯಾರು ತಿನ್ನಬೇಕಾಗಿದೆಯೋ ಅವರ ಹೆಸರು ಬರೆದಿರುತ್ತದೆ.”

ಸಾಹುಕಾರನ ತಲೆ ತಿರುಗಿತು – ಸಾಧುವಿನ ಬ್ರಹ್ಮಜ್ಞಾನವನ್ನು ಕೇಳಿ. ಕೇಳಿದನು – “ನೀನೊಬ್ಬ ಒಂಟೆಯ ಮೇಲಿನ ಜಾಣನೇ ಬಂದಿರುವೆಯಲ್ಲ ! ಇಲ್ಲಿ ನೋಡು ನನ್ನ ಕೈ ಬೆರಳಿನಲ್ಲಿ ಹಿಡಿದ ಕಾಳು ! ಇದರ ಮೇಲೆ ಯಾರ ಹೆಸರು ಬರೆದಿದೆ ಹೇಳು ನೋಡುವಾ.”

“ಅದರ ಮೇಲೆ ಒಂದು ಕಾಗೆಯ ಹೆಸರಿದೆ. ಆ ಕಾಳು ಅದರ ಆಹಾರ” ಎಂದನು ಸಾಧು.

ಸಾಹುಕಾರನು ಈರ್ಷೆಯಿಂದ – “ಇದೋ ನಾನಿದನ್ನು ತಿಂದುಬಿಡುವೆ. ಎಲ್ಲಿದೆ ನಿನ್ನ ಆ ಕಾಗೆ ?” ಎನ್ನುತ್ತ ಆ ಕಾಳನ್ನು ಬಾಯಲ್ಲಿ ಒಗೆದುಕೊಳ್ಳಹೋದನು. ಅದು ತಪ್ಪಿ ಅವನ ಮೂಗಿನ ಹೊರಳೆಯಲ್ಲಿ ಸೇರಿಬಿಟ್ಟಿತು.

ನೆಲಗಡಲೆಯಕಾಳು ಮೂಗಿನ ಹೊರಳೆಯಲ್ಲಿ ಸೇರಿಬಿಟ್ಟಿದ್ದರಿಂದ ಸಾಹುಕಾರನ ಉಸಿರಾಟಕ್ಕೆ ತಡೆಯಾಯಿತು. ಕೂಗಾಡತೊಡಗಿದನು. ಆ ಗಲವಿಲಿಗೆ ನೆರೆಹೊರೆಯವರು ನೆರೆದರು. ಆತನನ್ನು ಹೊತ್ತುಕೊಂಡು ಕ್ಷೌರಿಕನ ಮನೆಗೆ ಹೋದರು.

ತನ್ನಲ್ಲಿರುವ ಚಿಮಟಿಗೆಯಿಂದ ಹಡಪಿಗನು, ಸಾಹುಕಾರನ ಮೂಗಿನೊಳಗಿನ ಆ ಕಾಳನ್ನು ತೆಗೆದು ಬೀಸಿ ಅಂಗಳಕ್ಕೆ ಒಗೆದನು. ಕೂಡಲೇ ಬದಿಯ ಗಿಡದಲ್ಲಿ ಕುಳಿತ ಕಾಗೆ ಹಾರಿಬಂದು ಆ ಕಾಳನ್ನು ಕಟ್ಟಿಕೊಂಡು ಹೋಯಿತು.

“ಕಾಗೆಗೆಂದು ಹುಟ್ಟಿದ ಕಾಳು ಕಾಗೆಗೆ ಸಂದಿತು” ಎಂದನು ಆ ಸಾಧು. ಆ ಬಳಿಕ ಸಾಧುವನ್ನು ಕರೆದು ಸಾಹುಕಾರನು ಸತ್ಕರಿಸಿ ಕಳಿಸಿದನು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...