Home / ಕವನ / ಕವಿತೆ / ಬಿಂದು

ಬಿಂದು

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು
ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು

ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ
ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ

ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹನಿಯು
ತಲೆಯ ತುಂಬ ಸವಿಗನಸ ತುಂಬಿ ತುಂಬಿಗಳ ರಸದ ಗನಿಯು

ಅದರ ಇದರ ಬಾಯಿಯಲಿ ಜೊಲ್ಲು ಹನಿ ಬೀಳೆ ಅಮೃತವೆಂದು
ಉದರ ಭರಿಸಿ ನಾಲಗೆಯ ಚಲಿಸಿ ಕಹಿಗೊಲಿದು ಸಿಹಿಯದೆಂದು

ನೀಲಿ ಮೈಯನಲೆದಾಡಿ ದುಡಿಯುತಿಹ ಬಿಂದು ಬಿಂದು ಕರೆಗೆ
ಸಾಲು ಪುಳಕ ಮೈಗಾಗೆ ತಿರೆಯ ಹನಿ ಒಳಗೆ ಒಳಗೆ ಕೊರಗೆ

ಬಿಂದು ಕರಗಿ ಹೊರನೋಟದಲ್ಲಿ ಬರಿಗುಳ್ಳೆಯಾಗಿ ಹೊಳೆದು
ಅಂದವೆಂದು ಬಂಧಿಸಲು ಅದನು ಏನೇನೊ ಕವಚ ತಳೆದು

ಬಿಂದುವೊಂದು ಇದು ಅಂದಗುಂದಿ ಕಳೆಗುಂದುತಿಹುದು ಇಲ್ಲಿ
ಚೆಂದ ಚೆಲುವುಗಳು ಕಂದಿ ಕರಗಿರಲು ಕರೆಯು ಮಾತ್ರದಲ್ಲಿ

ಒಂದು ಬಿಂದು ನೂರೊಂದು ವೇಷಗಳ ಅಂಗ ಅಂಗಿಯಾಯ್ತ
ಚೆಂದ ಚೆಂದವೆಂದಂದಗೆಟ್ಟರೂ ಅದುವೆ ದೊಂದಿಯಾಯ್ತು

ಹನಿಯ ಮೋಹ ಹನಿಗೂಡಿ ಹಳ್ಳದಲಿ ಬಿರಿದು ಮುಚ್ಚಿ ಹೋಯ್ತು
ತನಗೆ ತಾನೆ ಕಂದಕದಿ ಧುಮುಕಿ ಆ ರೂಪ ಕೊಚ್ಚಿ ಹೋಯ್ತು

ನುಚ್ಚು ನೂರು ಛಿದ್ರಗಳ ತಾಳಿ ಬಂಡೆಗಳ ಮೇಲೆ ಢಿಕ್ಕಿ
ಹುಚ್ಚು ಹಿಡಿದು ಎಳೆ‌ಎಳೆಯ ನಾಡಿ ಕೂದಲಲೆ ಹರಣಸಿಕ್ಕಿ

ಉಬ್ಬಿ ಒಡೆದು ಮತ್ತುಬ್ಬಿಯುಬ್ಬಿ ಉದರಕ್ಕೆ ಬರಿಯ ಬೇನೆ
ಹಬ್ಬಿ ಬೆಳೆವ ಹಂದರದ ಮೇಲೆ ಬೀಳುತಿರೆ ಬೆಂಕಿ ಸೋನೆ

ಬಿದ್ದ ಅಗುಳ ನನ ನನಗೆ ಎಂದು ಮುಗಿಬಿದ್ದವೆಷ್ಟೊ ಮೀನು
ಹದ್ದು ಕಚ್ಚಿ ಕಣ ಕಣವನೆಲ್ಲ ಬರುಸೂರೆ ಗೈಯೆ ತಾನು

ಎಲ್ಲ ಮೀನುಗಳು ಕಿತ್ತು ತಿಂದರೂ ನೀರಿನೊಡನೆ ಬೆರೆತು
ಇಲ್ಲವಾದರೂ ಇರುವ ಛಲದ ಸೂತ್ರವನೆ ಅರಿತು ಕುರಿತು

ಚಿಮ್ಮಿ ಚೀರುತಿಹ ಛಿದ್ರ ತುಂತರಲೆ ಅಯಸ್ಕಾಂತ ಸೆಳೆತ
ಹೊಮ್ಮಿ ತೋರಿತಿದೆ ಕಂಡು ಕಾಣದೆಯೆ ರೂಹುಗೊಡುವ ಹರಿತ

ಬಿಂದು ಅಳಿಯಿತೋ ಬಿಂದು ಬೆಳೆಯಿತೋ ಅಂತು ರೂಪ ಹೋಯ್ತು
ತಿಂದು ಕಳೆಯಿತೋ ಕೊಂದು ನರಳಿತೋ ಬಿಕ್ಕು ಬೀಗಿ ಹೋಯ್ತು

ಕಣ್ಣಿನಂಚಿನಲಿ ಉರುಳಿ ಬೀಳ್ವ ಕರುಳುಗಳ ಬಿಂದು ಮಾಲೆ
ಹಣ್ಣಿನಲ್ಲಿ ಹರಿದು ಕಾಣದೆಯೆ ಉಳಿದ ಬೀಜಕ್ಕೆ ಭವ್ಯ ಲೀಲೆ
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...