Home / ಕವನ / ಕವಿತೆ / ಬಿಂದು

ಬಿಂದು

ಒಂದು ಚಣದ ಆವೇಶದಲ್ಲಿ ಮೇಲಿಂದ ಇಳಿದು ಬಂದು
ತುಂಬಿಯೊಡಲು ಜೇನಾಗಿ ಹೂವಿನಲಿ ಮಧುರ ಮಧುವ ತಂದು

ಬಿಂದು ಬಿಂದು ಸಿಹಿ ನೀರ ಧಾರೆ ಅದಕಾಯ್ತು ದಿನದ ಅನ್ನ
ಕುಂದು ಕೊರತೆಗಳ ನಗೆಯ ಅಲೆಗಳಲಿ ತೇಲಿಸಿತು ತನ್ನ

ಎಲೆಯ ಗಾಳಿಯುಲಿಯಾಗಿ ತೇಲಿ ನಲಿದಾಡಿ ಹೂವ ಹನಿಯು
ತಲೆಯ ತುಂಬ ಸವಿಗನಸ ತುಂಬಿ ತುಂಬಿಗಳ ರಸದ ಗನಿಯು

ಅದರ ಇದರ ಬಾಯಿಯಲಿ ಜೊಲ್ಲು ಹನಿ ಬೀಳೆ ಅಮೃತವೆಂದು
ಉದರ ಭರಿಸಿ ನಾಲಗೆಯ ಚಲಿಸಿ ಕಹಿಗೊಲಿದು ಸಿಹಿಯದೆಂದು

ನೀಲಿ ಮೈಯನಲೆದಾಡಿ ದುಡಿಯುತಿಹ ಬಿಂದು ಬಿಂದು ಕರೆಗೆ
ಸಾಲು ಪುಳಕ ಮೈಗಾಗೆ ತಿರೆಯ ಹನಿ ಒಳಗೆ ಒಳಗೆ ಕೊರಗೆ

ಬಿಂದು ಕರಗಿ ಹೊರನೋಟದಲ್ಲಿ ಬರಿಗುಳ್ಳೆಯಾಗಿ ಹೊಳೆದು
ಅಂದವೆಂದು ಬಂಧಿಸಲು ಅದನು ಏನೇನೊ ಕವಚ ತಳೆದು

ಬಿಂದುವೊಂದು ಇದು ಅಂದಗುಂದಿ ಕಳೆಗುಂದುತಿಹುದು ಇಲ್ಲಿ
ಚೆಂದ ಚೆಲುವುಗಳು ಕಂದಿ ಕರಗಿರಲು ಕರೆಯು ಮಾತ್ರದಲ್ಲಿ

ಒಂದು ಬಿಂದು ನೂರೊಂದು ವೇಷಗಳ ಅಂಗ ಅಂಗಿಯಾಯ್ತ
ಚೆಂದ ಚೆಂದವೆಂದಂದಗೆಟ್ಟರೂ ಅದುವೆ ದೊಂದಿಯಾಯ್ತು

ಹನಿಯ ಮೋಹ ಹನಿಗೂಡಿ ಹಳ್ಳದಲಿ ಬಿರಿದು ಮುಚ್ಚಿ ಹೋಯ್ತು
ತನಗೆ ತಾನೆ ಕಂದಕದಿ ಧುಮುಕಿ ಆ ರೂಪ ಕೊಚ್ಚಿ ಹೋಯ್ತು

ನುಚ್ಚು ನೂರು ಛಿದ್ರಗಳ ತಾಳಿ ಬಂಡೆಗಳ ಮೇಲೆ ಢಿಕ್ಕಿ
ಹುಚ್ಚು ಹಿಡಿದು ಎಳೆ‌ಎಳೆಯ ನಾಡಿ ಕೂದಲಲೆ ಹರಣಸಿಕ್ಕಿ

ಉಬ್ಬಿ ಒಡೆದು ಮತ್ತುಬ್ಬಿಯುಬ್ಬಿ ಉದರಕ್ಕೆ ಬರಿಯ ಬೇನೆ
ಹಬ್ಬಿ ಬೆಳೆವ ಹಂದರದ ಮೇಲೆ ಬೀಳುತಿರೆ ಬೆಂಕಿ ಸೋನೆ

ಬಿದ್ದ ಅಗುಳ ನನ ನನಗೆ ಎಂದು ಮುಗಿಬಿದ್ದವೆಷ್ಟೊ ಮೀನು
ಹದ್ದು ಕಚ್ಚಿ ಕಣ ಕಣವನೆಲ್ಲ ಬರುಸೂರೆ ಗೈಯೆ ತಾನು

ಎಲ್ಲ ಮೀನುಗಳು ಕಿತ್ತು ತಿಂದರೂ ನೀರಿನೊಡನೆ ಬೆರೆತು
ಇಲ್ಲವಾದರೂ ಇರುವ ಛಲದ ಸೂತ್ರವನೆ ಅರಿತು ಕುರಿತು

ಚಿಮ್ಮಿ ಚೀರುತಿಹ ಛಿದ್ರ ತುಂತರಲೆ ಅಯಸ್ಕಾಂತ ಸೆಳೆತ
ಹೊಮ್ಮಿ ತೋರಿತಿದೆ ಕಂಡು ಕಾಣದೆಯೆ ರೂಹುಗೊಡುವ ಹರಿತ

ಬಿಂದು ಅಳಿಯಿತೋ ಬಿಂದು ಬೆಳೆಯಿತೋ ಅಂತು ರೂಪ ಹೋಯ್ತು
ತಿಂದು ಕಳೆಯಿತೋ ಕೊಂದು ನರಳಿತೋ ಬಿಕ್ಕು ಬೀಗಿ ಹೋಯ್ತು

ಕಣ್ಣಿನಂಚಿನಲಿ ಉರುಳಿ ಬೀಳ್ವ ಕರುಳುಗಳ ಬಿಂದು ಮಾಲೆ
ಹಣ್ಣಿನಲ್ಲಿ ಹರಿದು ಕಾಣದೆಯೆ ಉಳಿದ ಬೀಜಕ್ಕೆ ಭವ್ಯ ಲೀಲೆ
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...