ಮಳೆ

ಪ್ರಿಯ ಸಖಿ,
ಮಳೆಯನ್ನು ನೆನೆದೇ ಮನ ಪುಳಕಗೊಳ್ಳುತ್ತದಲ್ಲವೇ? ಮಳೆ ಜೀವನಾಧಾರವಾದುದು. ಪ್ರಕೃತಿಯ ಉಳಿವಿನ ಸಂಕೇತ.

ಮಳೆ ಬಿದ್ದೊಡನೆ ಅದೆಷ್ಟು ಜೀವಗಳಿಗೆ ಸಂತಸ! ರೈತನಿಗೆ ಬಿತ್ತನೆಗೆ ಭೂಮಿ ಹದವಾಯಿತು. ಮೃದುವಾಯಿತೆಂಬ ಖುಷಿ.  ಪುಟ್ಟ ಮಕ್ಕಳಿಗೆ ಮನೆ ಮುಂದೆ ನಿಂತ ನೀರಲ್ಲಿ ಕಾಗದದ ದೋಣಿ ಬಿಡುವ ಸಂಭ್ರಮ. ಸುರಿವ ಮಳೆಯಿಂದ ಹುಟ್ಟಿದ ಚಳಿಗೆ ಬೆಚ್ಚಗೆ ಹೊದ್ದು ಮಲಗುವ, ಬಿಸಿ ಬಿಸಿ ಪಕೋಡ, ಬೋಂಡ ತಿನ್ನುವ ಉಮೇದು ಹಲವರಿಗೆ. ಕಾದು ಬೆಂಡಾಗಿದ್ದ ಧರಿತ್ರಿ ತಂಪಾದಳಲ್ಲಾ ಧಗೆ ಅಡಗಿತಲ್ಲಾ ಎಂಬ ಸಮಾಧಾನ. ಮೊದಲ ಮಳೆಯ ಮಣ್ಣಿನ ವಾಸನೆ ಅನುಭುವಿಸುವ ರಸಿಕತೆ ಕೆಲವರಿಗೆ, ಸುರಿವ ಮಳೆಯಿಂದ ಸಿಕ್ಕ ಅನಿರೀಕ್ಷಿತ ಬಿಡುವಿನಿಂವ ಬಹಳ ದಿನಗಳಿಂದ ಉಳಿದುಬಿಟ್ಟಿದ್ದ ಕೆಲಸಗಳನ್ನು ಪೂರೈಸುವ ಉತ್ಸಾಹ ಮತ್ತೆ ಕೆಲವರಿಗೆ ……

ಮತ್ತೆ ಅದೆಷ್ಟು ಜನರಿಗೆ ಅದಿನ್ನಿನ್ಯಾವ ಬಗೆಯ ಸಂತಸವೋ ಎಣಿಸಲಾಗದಂತಹುದು, ಗುಣಿಸಲಾಗದಂತಹುದು, ಹೇಳಲಾಗದಂತಹುದು!

ಎಡಬಿಡದೇ ಮೂರು ದಿನದಿಂದ ಸುರಿಯುತ್ತಿರುವ ಬಿರುಮಳೆಯಿಂದ ಇವನಂತೂ ಕಂಗಾಲಾಗಿದ್ದಾನೆ. ಒಂದು ದಿನ ಸಾಲ ತಂದು ಹೊಟ್ಟೆ ತುಂಬಿಸಿದ್ದಾಗಿದೆ. ಮತ್ತೆರಡು ದಿನದಿಂದಾ ಉಪವಾಸ. ಜೊತೆಗೆ ಮನೆಯಿಡೀ ಸೋರಿ ಕೆರೆಯಂತಾಗಿದೆ. ಮೂಲೆಯಲ್ಲೋ ಇವನ ಹೆಂಡತಿ, ಮೂವರು ಹಸಿದ ಮಕ್ಕಳು ಇವನತ್ತಲೇ ತಮ್ಮ ಕಣ್ಣು ಹರಿಸಿ ಕುಳಿತಿದ್ದಾರೆ. ಇವನಿಗೆ ಅವರನ್ನು ನೋಡುವ ಧೈರ್ಯವಿಲ್ಲ. ಅತ್ತ ನೋಡಿದೊಡನೆ ‘ಅಪ್ಪ ಹಸಿವು’ ಎಂದು ಮಗುವೊಂದು ನುಡಿದುಬಿಟ್ಟರೆ ಇವನೇನು ಮಾಡಬೇಕು? ಸುರಿವ ಮಳೆಗೆ ಶಾಪ ಹಾಕಿ ಸಾಕಾಗಿದ್ದಾನೆ.

ಸಖಿ, ಇವನೊಬ್ಬ ಫುಟ್ಪಾತ್ ವ್ಯಾಪಾರಿ, ಬೀದಿಯಲ್ಲಿ ತನ್ನ ಸಣ್ಣಪುಟ್ಟ ಸಾಮಾನುಗಳನ್ನು ಹರವಿ ದಿನವಿಡೀ ಕುಳಿತಿದ್ದು, ಮಾರಾಟವಾದ ಹಣದಿಂದ ಇವನ ಸಂಸಾರದ ದಿನದಿನದ ಹೊಟ್ಟೆ ತುಂಬಬೇಕು. ಒಂದು ದಿನ ವ್ಯಾಪಾರ ನಿಂತರೂ ಇವನ ಸಂಸಾರಕ್ಕೆ ಉಪವಾಸವೇ ಗತಿ. ಮಳೆಗಾಲದಲ್ಲಂತೂ ಉಪವಾಸ ಅನಿವಾರ್ಯ. ಕೆಲವೊಮ್ಮೆ ಒಂದು ದಿನ ಎರಡು ದಿನ ಮತ್ತೆ ಹಲಬಾರಿ ಐದಾರು ದಿನ. ದೀರ್ಘ ದಿನಗಳವರೆಗೆ ಮಳೆ ಬಿಡದೆ ಹುಯ್ಯುವ ಇಂತಹ ದಿನಗಳಲ್ಲಿ ಯೋಚಿಸುತ್ತಾನೆ. ಹೇಗೆ ತನ್ನ ಸಂಸಾರದ ಹೊಟ್ಟೆ ತುಂಬುವುದು? ಭಿಕ್ಷೆ ಬೇಡಿ…. ಕಳ್ಳತನ ಮಾಡಿ ಅಥವಾ……..

ಇಲ್ಲ! ಇವೆಲ್ಲಾ ತಾನು ಮಾಡಲಾರೆ. ತನಗೆ ಗೊತ್ತಿರುವುದು ವ್ಯಾಪಾರವೊಂದೇ! ಧೋ ಎಂದು ಸುರಿವ ಮಳೆಗೆ ಮನಃಪೂರ್ತಿ ಬೈಯ್ದು ಹಗುರಾಗಬೇಕೆಂದು ಕತ್ತನ್ನು ಆಕಾಶದೆಡೆಗೆ ಎತ್ತಿದ್ದಾನೆ. ಅವನಿಗೇ ಅರಿವಿಲ್ಲದೇ ಅವನ ಕಣ್ಣಿಂದ ಧಾರಾಕಾರ ನೀರು ಹರಿಯತೊಡಗಿದೆ. ‘ಎಷ್ಟೆಲ್ಲಾ ಜನರಿಗೆ ಸಂತಸ ನೀಡುವ ಮಳೆಯೇ ನನ್ನ ನನ್ನಂತಹ ಕೆಲವೇ ಕೆಲವರಿಗೆ ತೊಂದರೆಯಾದಾದರೂ ಸರಿಯೇ ನೀ ಸುರಿಯಲೇಬೇಕು. ಬೆಂದ ಮನೆ ಮನಗಳ ತಂಪಾಗಿಸಲೇಬೇಕು’ ಎಂದು ಎದೆ ತುಂಬಿ ಪ್ರಾರ್ಥಿಸುತ್ತಾನೆ. ಈಗ ಮಳೆ ನಿಂತಿದೆ. ಮತ್ತೆ ಅವನ ವ್ಯಾಪಾರ ಭರದಿಂದ ಪ್ರಾರಂಭವಾಗಿದೆ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್