Home / ಕವನ / ಕವಿತೆ / ಒಂದು ಪೇಟೆಯೆಂದರೆ

ಒಂದು ಪೇಟೆಯೆಂದರೆ

ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ
ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ
ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ

ಅದರಿದರ ಮಿದುಳು ಯಾವುದೋ ನಾನು ಕಾಣೆ
ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ,
ರೈಲು ನಿಲ್ದಾಣವೆ, ಅಥವ ಕಾವಿ ಬಳಿದ ಪೋಲೀಸು ಠಾಣೆ?

ಮಿದುಳಿರುವುದಕ್ಕೆ ಇದೇನೂ ಸಾವಯವ ಜೀವಿಯಲ್ಲ ಖರೆ
ಬಹುಶಃ ಇದ್ದೀತು ಇದು ಬೆಳೆದುಬಂದ ರೀತಿ ಸರಿಯಲ್ಲದೆ, ಅಥವ
ನಾವು ಮಾಡಿದ ಹೋಲಿಕೆಯಲ್ಲಿ ಏನೊ ತೊಂದರೆ

ಇದ್ದರೂ ಇರಬಹುದು.  ಆದರೂ ಈ ಸ್ಥಾವರಕ್ಕೆಷ್ಟು ನೆನಪು
ಕದಂಬರು ನಿಲ್ಲಿಸಿದ ಶಾಸನ ಮತ್ತೆ ಯಾರೋ ಹೇರಿಸಿದ ಮದರಾಸು
ಸಂಸ್ಥಾನ, ನಿನ್ನೆ ಮೊನ್ನೆ ಈ ಕಡೆ ಬಂದವನು ಟಿಪ್ಪು

ಇದು ಚರಿತ್ರೆ.  ಚರಿತ್ರೆಯೊಂದೇ ನೆನಪಲ್ಲ.  ನೆನಪು ಉಪ್ಪಿನ ಹಾಗೆ
ಸಮುದ್ರದಿಂದ ಮೊಗೆದುದು ಅಥವ ಭೂಮಿಯೊಳಗಿಂದ ಅಗೆದುದು
ಮೈಯಲ್ಲಿ ಕರಗಿರುವುದು, ಹರಳುಗಟ್ಟುವುದಿಲ್ಲ ಒಳಗೆ

ತಲೆಹೊರೆಯಾಗಿ ಇಲ್ಲಿಗಿದು ಬಂತು ಈ ನೆನಪು ಬಳಸು ದಾರಿ
ಸಾಗಿ, ನೆಲಕ್ಕೆ ಸುರಿದ ಇಲ್ಲವೇ ಉಟ್ಟ ವಸ್ತ್ರಕ್ಕೆ ಒರಸಿದ ಬೆವರಾಗಿ
ಕಣ್ಣ ಒಸರಿನಲ್ಲಷ್ಟು ನಡೆಯೆಬ್ಬಿಸಿದ ಧೂಳಿನಲ್ಲಷ್ಟು ಸೇರಿ

ಬಂದರೆ ಆಲ ಅಶ್ವತ್ಥ ಗುಡಿಗುಡಾರಗಳು ಗದ್ದೆ ಬಯಲು
ಗಡಿ ಗಡಿಗೆ ಒಮ್ಮೆ ನಿಲ್ಲಿಸಿದ್ದ ಹೊರೆಕಂಬಗಳು
ಮತ್ತೆ ನಸುಕಿಗೇ ಕಟ್ಟಿದ ಎತ್ತಿನ ಗಾಡಿಗಳ ಸಾಲು

ಈ ನೆನಪಿನ ಸಾಕ್ಷಿ.  ಹೀಗೆ ಈ ಪೇಟೆಯ ನರಗಳಿಗೆ ಎಲ್ಲೆಲ್ಲೂ
ಸಾಗಿ ಸೆಣೆದು ಸೇರುವಾತುರ ಈ ಹೊರೆ ಹೊತ್ತು ಆ ಅಗೋಚರ ಕೇಂದ್ರ
ಯಾವ ಅರೆಗನಸಿನ ತೆಕ್ಕೆಯಲ್ಲೊ ಯಾವ ಕೊಚ್ಚೆಯ ಮಗ್ಗುಲಲ್ಲೊ

ಸೇರುವುವು ಸೇರಲೇಬೇಕಾಗಿ.  ಒಂದು ಪೇಟೆಯೆಂದರೆ ನೆಲ
ಸಾರಿಸಿ ಹಾಕಿದ ರಂಗೋಲಿಯಲ್ಲ, ಟೇಬಲಿನ ಮೇಲೆ ಹೊಳೆಯುವ
ತಾಟಿನಲ್ಲಿ ನೀಟಾಗಿ ಕತ್ತಿರಿಸಿಟ್ಟ ಕಸಿಮಾವಿನ ಹಣ್ಣಲ್ಲ

ಒಂದು ಪೇಟೆಗೆ ತನ್ನದೇ ಎದೆಬಡಿತವಿದೆ.  ಕೇಳಿಲ್ಲವೇ ನಾವದನ್ನು
ಒಂಟಿಯಾಗಿ ಎಲ್ಲಿಂದೆಲ್ಲಿಗೆ ಸಾಗುವ ರಾತ್ರಿ ಉಗಿಬಂಡಿಯ
ಭಾರವಾದ ಕಾಲಸಪ್ಪಳದಲ್ಲಿ ಮಿಳಿಯುವುದನ್ನು

ಕಂಡಿಲ್ಲವೇ ಅದು ಮುದುಕುವುದು ಘಟ್ಟದ ಕೆಳಗೆ ಮಳೆ ಬೀಳುವ ಇರುಳು
ವೃದ್ಧನಂತೆ ಅಥವ ತೆರೆಯುವುದಂಗಾತ ಹೆಣ್ಣಿನಂತೆ
ಮುಂದೊತ್ತುವಾಗ ಯಕ್ಷಿಣೀ ಲಾಂದ್ರದ ನೆರಳು

ಒಂದು ಪೇಟೆಯೆಂದರೆ ಬರೇ ಅಂಗಡಿಬೀದಿಗಳಲ್ಲ.  ಇದರ ವಸ್ತು
ಈ ಹೊಗೆಹಿಡಿದ ಹಂಚಿನ ಮತ್ತು ಮುಳಿಮನೆಗಳ ಬದಿಗೆ
ಅಡ್ಡಾದಿಡ್ಡಿ ಹೆಜ್ಜೆಗಳಲ್ಲಿ ಮೂಡಿದ ಪ್ರತ್ಯೇಕ ಗುರುತು

ಒದಗಬೇಕಷ್ಟೆ ಇಲ್ಲಿ ನಡೆವವರಿಗೆ ಮಾತ್ರ.  ಎಷ್ಟೆ
ಹೊರಟರೂ ಮತ್ತೆ ತನ್ನ ಒಳಪ್ರಾಕಾರಗಳಲ್ಲಿ ಸುತ್ತಿಸುವ ಕೋಟೆ
ನೀವೇ ಹೇಳಿದಂತೆ ನಮಗೆ ವಿಧಿಸುವುದು ನಾವು ಕಲ್ಪಿಸಿದ ಪೇಟೆ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...