Home / ಕವನ / ಕವಿತೆ / ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಜೀತದ ತೊಟ್ಟಿಲು (ಬೀದಿ ನಾಟಕದ ಹಾಡು)

ಕತೆಯಾ ಕೇಳಿರಣ್ಣ
ಕಲ್ಲು ಮನಸಿನ
ಮುಳ್ಳು ಜನಗಳು
ಹೂವು ಕೊಲ್ಲುವಂಥ ||

ಅಲ್ಪನ ಐಶ್ವರ್ಯ
ಮಾಡುವ ಆಶ್ಚರ್ಯ
ಎತ್ತ ನೋಡಿದರೂ
ಕೊಲ್ಲುವ ಕೊಲ್ಲುವ ||

ಬದುಕೆಲ್ಲ ಬಂಡೆಯು
ಹಸಿವು ರಕ್ಕಸಿಯು
ಎಣಿಸಿದ ದುಡ್ಡೆಲ್ಲ
ಬೆವರಿನ ಹನಿಯು ||

ಹಾಡು – ೨

ಜೀತದ ತೊಟ್ಟಿಲಲಿ
ಸಾವಿನ ಜೋಕಾಲಿ
ತೂಗು ನಿಲ್ಲಿಸುವ
ಧೀರರ್‍ಯಾರಿಹರೊ ||

ಹುಟ್ಟಿದ ದಿನ ಬಂತು
ಬದುಕುವುದೆಂಗಣ್ಣ
ಸಾಲದ ಈ ಬಾಧೆ
ಬಿಡಿಸುವುದೆಂಗಣ್ಣ ||

ಸುತ್ತಲು ಭರವಸೆ
ಭಾಷಣಗಳಲಿ
ಮುತ್ತಿದೆ ಬಂಧನ
ಸಾಲದ ಹೆಸರಲಿ ||

ಹಾಡು – ೩

ದೇಶೋದ್ಧಾರದ ಮಾತು
ನಮ್ಮನೆಲ್ಲಾ ಮರೆತು
ಧರ್ಮದ ಚರ್ಪು ಹಂಚಿ
ಕಾಲ ಸರಿಯಿತು ಮಿಂಚಿ ||

ನಿಮ್ಮ ಪಾಪದ ಬೆಳೆಯು
ನಮ್ಮನ್ನೀಗೆ ಸಾಕಿದೆ
ಮಿಗಿಲು ನಿಮಗೂ ಕೂಡ
ನಮ್ಮಂಥವರೆ ಬೇಕಿದೆ ||

ಎಲ್ಲಿ ಹೋಯಿತಣ್ಣ
ದಯೆಯಾ ನಿಮ್ಮ ಧರ್ಮ
ಎಲ್ಲಿ ಹೂತಿರಣ್ಣ
ಗಯೆಯಾ ನಿಮ್ಮ ಧಮ್ಮ ||

ಹಾಡು – ೪

ಅಟ್ಟಹಾಸವೊ ಅಣ್ಣ
ದುಡ್ಡುಳ್ಳೋರ ಬಣ್ಣ
ಯಡ್ಡರ ಮಾಡಿ ಬಡವರ
ಬಿದ್ದೆದ್ದು ನಗುತಾರಲ್ಲೊ ||

ಹಸಿವೀನ ನೋವಿಗೆ
ಅಪಹಾಸ್ಯ ಮಾಡುತಾರೊ
ತಿನ್ನೊ ಅನ್ನಕೆ ಬದಲು
ಮಾತು ಪೋಣಿಸುತಾರೊ ||

ದುಡ್ಡು ಗಂಟಿನ ಮಹಿಮೆ
ಕೆಟ್ಟದ್ದೊ ಬದುಕಿಗೆ
ಬಡವರ ಜೀವಾವ
ಸುಲಿತೈತೊ ತಣ್ಣಾಗೆ ||

ಹಾಡು – ೫

ದಡ್ಡರು ದುಡಿತಾರೆ
ಕೇಳಣ್ಣಾ ಕೇಳೊ
ಬುದ್ದಿವಂತರೆಲ್ಲಾ
ದುಡ್ಡು ಎಣಿಸುತ್ತಾರೆ ||

ನಿನ್ನ ಬೆವರು ರಕ್ತ ಬಸಿದು
ಮಹಲು ಕಟ್ಟಿ ಮೆರೆದು
ನಾಯಿ ಸಾಕ್ತಾರೆ ಮೋಜಿಗೆ
ಹಿಡಿ ಅನ್ನ ಕೊಡದ ನೀಚರು ||

ದುಡಿದುಡಿದು ಸತ್ತೆ ನೀನು
ನಿನ್ನ ಸಮಾಧಿ ಮೇಲೆ
ಗುಲಾಬಿಯನ್ನ ಬೆಳಿತಾರೆ
ಮತ್ತೆ ಮೂಸಿ ನೋಡುತಾರೆ ||

ಹಾಡು – ೬

ಒಂದೆಡೆ ಆದರೆ ಗಾಯ
ಮನಸಿಗೆಲ್ಲ ನೋವು
ಯೋಗ್ಯ ದುಡಿಮೆ ಇಲ್ಲದಿರೆ
ಬದುಕೆಲ್ಲ ಸಾವು ||

ಬಡತನದ ಬಸಿರಿಗೆ
ಕೋಟಿಗಟ್ಟಲೆ ತತ್ತಿಗಳು
ಒಂದಕೊಂದು ಬೆಳೆದು
ನೆಮ್ಮದಿಯ ಕೊಂದವು ||

ಕೊರೆವ ಚಳಿಯಲ್ಲಿ
ಚಿಂದಿ ಹೊದ್ದಂತೆ
ಬಡತನದ ದುಡಿಮೆ
ಏನಿದು ನಿನ್ನ ಮಹಿಮೆ ||

ಹಾಡು – ೭

ದುಡ್ಡುಳ್ಳ ಧಿಮಾಕು
ಮಾಡುತ್ತೆ ಶೋಕಿ
ಎಲ್ಲದನು ತಿನ್ನಬೇಕು
ಯಾವುದಿಲ್ಲ ಬಾಕಿ ||

ಹಣ್ಣೆಂದು ತಿಳಿದರೊ
ಹೆಣ್ಣುಗಳನೆಲ್ಲ
ಹೊನ್ನೆಂದು ತಿಳಿದರೊ
ಅಣ್ಣ ಮಣ್ಣನೆಲ್ಲ ||

ಅಪ್ಪನ ಪಾಪದ ಶಾಪ
ಮಗನ ತಲೆಗೆ
ಇಬ್ಬರೂ ನಿಂಥರಲ್ಲ
ಬದುಕಾ ಕೊಲೆಗೆ ||

ಹಾಡು – ೮

ಎಲ್ಲಿ ಕೊನೆಯಣ್ಣ
ಜೀತದ ಹಿಡಿತಕ್ಕೆ
ಎಲ್ಲಿ ನೆಲೆಯಣ್ಣ
ಬಂಧಿತ ಜೀವಕ್ಕೆ ||

ಹೊಡೆದೊಡೆದು ಬಳಲಿದರೂ
ಬಂಡೆ ಸವೆಯಲಿಲ್ಲ
ಯುಗಯುಗ ಕಳೆದರೂ
ಹೊಟ್ಟೆಯು ತುಂಬಲಿಲ್ಲ ||

ನರಕವಲ್ಲವೆ ಇದುವೆ
ನಿತ್ಯಾದ ಹಿಂಸೆ
ಜೀವನವೆ ಬೇಡೆಂದು
ಹಾರಿತು ಹಂಸೆ ||

ಮಂಗಳದ ಈ ಸುದಿನ
ಮದುರವಾಗಲಿ
ನಿಮ್ಮೊಲುಮೆ ಈ ಮನೆಗೆ
ನಂದಾ ದೀಪವಾಗಲಿ ||

ಹಾಡು – ೯

ಕಾಲಿಗೆ ಹಾಕಿ ಬೇಡಿಗಳಾ
ಕಲ್ಲು ಹೊಡಿಸೊ ಹನುಮಣ್ಣ
ಮಾಡಿದ ಸಾಲಕೆ ಜೀತದಲಿ
ದಿನವೂ ನರಳುವ ತಮ್ಮಣ್ಣ ||

ಕೊಟ್ಟ ದುಡ್ಡಿಗೆ ಬಡ್ಡಿ ಬೆಳೆದು
ಬಿಡುಗಡೆ ಆಸೆಯ ತೊರೆದು
ಹೊಡೆದೇ ಹೊಡೆಯುತಾರೊ
ಕಲ್ಲು ಕಲ್ಲಿಗೆ ಸುತ್ತಿಗೆಯಿಂದ ||

ಪುಡಿಯಾಗುತೈತಿ ಅಣ್ಣಾ ಬದುಕು
ಹಿಡಿಗಲ್ಲು ಬೇಬಿ ಜಲ್ಲಿಯಂತೆ
ಬೆವರ ಕುಡಿದು ನಲಿಯುತಾರೆ
ಮದದಿ ಮೋಜು ಮಾಡುತಾರೆ ||

ಹಾಡು – ೧೦

ಜೀತದ ತೊಟ್ಟಿಲಲಿ
ನರಕುರಿಗಳ ಬಲಿ
ಸುಖ ಜೋಕಾಲಿಯಲಿ
ನರಕ ಹಿಂಸಾ ಬಲೆ ||

*****

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...