ಒಂದಾನೊಂದು ಊರಿನಲ್ಲಿ ದ್ರೋಣನೆಂಬ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಅವನು ಅವರಿವರು ಕೊಟ್ಟುದನ್ನು ತಂದು ತಿಂದು ಕಾಲಹರಣೆ ಮಾಡುವ ಬಿಡವನು. ಅವನಿಗೆ ಸೊಗಸಾದ ಬಟ್ಟೆ, ಒಡವೆ ಕೊನೆಗೆ ದಿನವೂ ತಾಂಬೂಲ ಕೂಡ ಇರಲಿಲ್ಲ. ಅವನನ್ನು ಕಂಡು ಯಾರೋ ಮರುಗಿ ಅಯ್ಯೋ ಪಾಪ ಎಂದು ಎರಡು ಹೆಂಗರುಗಳನ್ನು ಕೊಟ್ಟರು. ಅದನ್ನು ಅವನು ಬಹು ಕಷ್ಕಪಟ್ಟು ಬೆಳೆಸಿದನು. ಅವು ಚೆನ್ನಾಗಿ ಆಗಿದ್ದವು.
ಅವನ್ನು ಕಂಡು ಒಬ್ಬ ಕಳ್ಳನಿಗೆ. ಇವುಗಳನ್ನು ಹಾರಿಸಿಕೊಂಡು ಹೋಗಬೇಕು ಎನ್ನಿಸಿತು. ಅದಕ್ಕಾಗಿ ಅವನು ಎಲ್ಲವನ್ನೂ ಸಿದ್ದಪಡಿಸಿಕೊಂಡು ಹೊರಟನು. ದಾರಿಯಲ್ಲಿ ವಿಕಾರನಾಗಿ ನೋಡಿದರೆ ಹೆದರಿಕೆಯಾಗಬೇಕು ಅಂತಹದೊಂದು ಆಕಾರವು ಕಾಣಿಸಿತು. “ನೀನು ಯಾರು?” ಎಂದು ಕಳ್ಳನು ಕೇಳಲು, ಅದು ನಾನು “ಸತ್ಯವಚನನೆಂಬ ಬ್ರಹ್ಮರಾಕ್ಷಸನು. ನೀನು ಯಾರು? ನಿಜ ಹೇಳು” ಎಂದಿತು. ಕಳ್ಳನು ನಾನು ಕ್ರೂರಕರ್ಮನೆಂಬ ಚೋರನು. ಇಲ್ಲೊಬ್ಬ ದರಿದ್ರ ಬ್ರಾಹ್ಮಣನ ಮನೆಯಿದೆ. ಅಲ್ಲಿ ಎರಡು ಕಡಸುಗಳಿವೆ. ಆವುಗಳನ್ನು ತೆಗೆದುಕೊಂಡು ಹೋಗಲು ಹೊರಟಿದ್ದೇನೆ. ನೀನು ಎಲ್ಲಿಗೆ ಹೊರಟದ್ದೀಯೇ?” ಎಂದು ಕೇಳಿದನು. ಆಗ ಬ್ರಹ್ಮರಾಕ್ಷಸನು, ನಾನು ಆರುದಿನಕ್ಕೊಮ್ಮೆ ಊಟ ಮಾಡುವವನು. ನಾನು ಈದಿನ ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದಿರುವೆನು. ಅದಕ್ಕಾಗಿ ಹೊರ ಬರುವೆನು ನಾವಿಬ್ಬರೂ ಒಂದೇ ಕಡೆಗೆ ಹೊರಟರುವೆವು. ಜೊತೆಯಲ್ಲಿಯೇ ಹೋಗೋಣ” ಎಂದು ಮಾತನಾಡಿಕೊಂಡು ಆ ಮನೆಯ ಬಳಿಗೆ ಬಂದರು.
ಬ್ರಾಹ್ಮಣನು ಮನೆಯಲ್ಲಿ ಮಲಗಿದ್ದನು. ಕಳ್ಳನು ಹೇಳಿದನು. “ಅಯ್ಯಾ ರಾಕ್ಷಸ ನೀನು ಹೋಗಿ ಬ್ರಾಹ್ಮಣನನ್ನು ಹಿಡಿದುಕೊ೦ಡರೆ ಗದ್ದಲವಾಗುವುದು. ಮನೆಯಲ್ಲಿ ಏಳುವರು. ನನಗೆ ಕಡಸುಗಳನ್ನು ಹೊಡೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಅದರಿಂದ ನಾನು ಉಪಾಯವಾಗಿ ಕಡಸುಗಳನ್ನು ಹೊಡೆದುಕೊಂಡು ಬಂದಮೇಲೆ ನೀನು ಮನೆಯೊಳಕ್ಕೆ ಹೋಗಿ ನಿನ್ನ ಕಾರ್ಯವನ್ನು ಮಾಡಿಕೊ” ಎಂದನು. ಬ್ರಹ್ಮರಾಕ್ಷಸನು ಅಯ್ಯಾ, ಹಾಗಲ್ಲ. ನೀನು ಕರುಗಳನ್ನು ಬಿಚ್ಚುವಾಗ ಅವು ಕೂಗಿಕೊಳ್ಳುವುವು. ಮನೆಯವರು ಎದ್ದುಬಿಡುವರು. ನನ್ನ ಕೆಲಸಕ್ಕೆ ಅಡ್ಡಿಯಾಗುವುದು. ಈ ದಿನ ನಾನು ಏನೂ ತಿನ್ನದಿದ್ದರೆ ಇನ್ನು ಆರು ದಿನ ಏನೂ ತಿನ್ನುವಹಾಗಿಲ್ಲ. ಅದರಿ೦ದ ಇವತ್ತು ನಾನು ತಿಂದೇ ತಿನ್ನಬೇಕು. ನಾನು ಮೊದಲು. ಆಮೇಲೆ ನೀನು” ಎ೦ದನು.
ಹೀಗೆ ಇಬ್ಬರಿಗೂ ನಾನು ಮೊದಲು, ನಾನು ಮೊದಲು ಎಂದು ವಾಗ್ವಾದವಾಗಿ ಅದು ವಿಪರೀತವಾಗಿ ಪರಿಣಿಮಿಸಿತು. ಕಳ್ಳನು “ಹಾಗಾದರೆ ನೋಡು, ನಾನು ಬ್ರಾಹ್ಮಣನನ್ನು ಎಬ್ಬಿಸುತ್ತೇನೆ.” ಎ೦ದನು. ರಾಕ್ಷಸನಿಗೂ ರೇಗಿತು: “ನಾನು ಕೂಗಿ ನೀನು ಏಕೆ ಬಂದಿರುವೆಯೆಂಬುದನ್ನು ಹೇಳುತ್ತೇನೆ” ಎಂದು ಅದೂ ಕೂಗಿತು. ಈ ಇಬ್ಬರ ಕೂಗಾಟದಲ್ಲಿ ಬ್ರಾಹ್ಮಣನಿಗೆ ಎಚ್ಚರವಾಗಿಯೇ ಹೋಗಿತು. ಹಾಗೆ ಅವನು ಎದ್ದುದನ್ನು ಕಂಡು ಕಳ್ಳನು “ಬ್ರಾಹ್ಮಣಾ, ಇದೋ ನೋಡು ಈ ರಾಕ್ಷಸನು ನಿನ್ನನ್ನು ತಿಂದುಹಾಕಲು ಬಂದಿರುವನು. ಎಚ್ಚರಿಕೆ,” ಎಂದು ಕೂಗಿದನು. ರಾಕ್ಷಸನೂ “ಬ್ರಾಹ್ಮಣ, ಇವನು ನಿನ್ನ ಕಡಸುಗಳನ್ನು ಹೊಡೆದುಕೊಂಡು ಹೋಗಲು ಬಂದಿರುವ ಕಳ್ಳ. ಎಚ್ಚರಿಕೆ” ಎಂದು ಕೂಗಿದನು.
ಇವರಿಬ್ಬರ ಮಾತನ್ನೂ ಕೇಳಿದ ಬ್ರಾಹ್ಮಣನು ಕೈ ಕಾಲು ತೊಳೆದುಕೊಂಡು ಮಡಿಯಾಗಿ ಮಂತ್ರ ಜಪ ಮಾಡಿ ದೇವರಿಗೆ ನಮಸ್ಕಾರ ಮಾಡಲು ಬ್ರಹ್ಮರಾಕ್ಷಸನು ಓಡಿ ಹೋದನು. ಮನೆಯವರು ದೊಣ್ಣೆಗಳನ್ನು ತೆಗೆದುಕೊಂಡು ಬರಲು, ಕಳ್ಳನು ಓಡಿಹೋದನು. ಅದರಿಂದ ನಾನು “ಜಗಳವಾಡುವ ಹಗೆಯೆಮಗೆ ಹಿತಕರನು” ಎಂದು ಹೇಳಿದೆನು ಎಂದನು.
ಅವನ ಮಾತಾದ ಮೇಲೆ ಅರಿಮರ್ದನನು ಪ್ರಕಾರಕರ್ಣನನ್ನು “ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು. ಅವನೂ ಹೇಳಿದನು. “ದೇವ, ಈತನನ್ನು ವಧಿಸಬಾರದು. ಇವನನ್ನು ಕಾಪಾಡಿ ಇಟ್ಟು ಕೊಂಡಿದ್ದರೆ ಇನ್ನೇನಿಲ್ಲದಿದ್ದರೂ ಸುಖವಾಗಿ ಕಾಲವನ್ನು ಕಳೆಯುವುದಕ್ಕಾದರೂ ಆಗುವುದು ಕೇಳಿಲ್ಲವೆ?
ಒಬ್ಬರೊಬ್ಬರ ಮರ್ಮವನು | ಒಬ್ಬರೊಬ್ಬರು ಭೇದಿಸಲು |
ಇಬ್ಬರೂ ಸಾಯುವರು ನಿಜ | ಹುತ್ತ ಹೊಟ್ಟೆಯ ಹಾವ್ಗಳಂತೆ ॥೨೯॥
ಅರಿಮರ್ದನನು ಅದು ಹೇಗೆ ಎನ್ನಲು, ಪ್ರಾಕಾರಕರ್ಣನು ಹೇಳಿದನು.:-
******
ಮರ್ಮಗಳನ್ನು ಭೇದಿಸಿ ಕೆಟ್ಟ ಹಾವುಗಳ ಕಥೆ ಓದಿ