ಒಂದಾನೊಂದು ಸರೋವರದಲ್ಲಿ ಕಂಬುಗ್ರೀವನೆಂಬ ಒಂದು ಅಮೆಯುಂಟು. ಅದಕ್ಕೆ ಸಂಕಟ, ವಿಕಟ, ಎಂಬ ಎರಡು ಹಂಸಗಳು ಮಿತ್ರರಾಗಿದ್ದರು. ಅವೆರಡೂ ದಿನವೂ ಬಂದು ಅದರೊಡನೆ ಅನೇಕಾನೇಕ ಪುಣ್ಯ ಪುರುಷರ ಚರಿತ್ರೆಗಳನ್ನು ಕುರಿತು ಮಾತನಾಡಿ ಸಂಜೆಯವರೆಗೂ ಅಲ್ಲಿದ್ದು ಸಂಜೆಯಾಗುತ್ತಲೂ ತಮ್ಮ ಗೂಡುಗಳಿಗೆ ಹೋಗುವುವು.
ಹೀಗೆ ಇರುತ್ತಿರಲು ದೈವಯೋಗದಿಂದ ಅನಾವೃಷ್ಟಿಯು ಬಂದು ಆ ಸರೋವರವು ಬರುಬರುತ್ತ ಒಣಗುತ್ತಾ ಬಂತು. ಆಗ ಆ ಹಂಸಮಿತ್ರರು, ಆಮೆಯ ಸ್ಥಿತಿಯನ್ನು ಕಂಡು ಮರುಕಪಟ್ಟು “ಮಿತ್ರ, ನಿನಗೆ ಎಂತಹ ಕಷ್ಟ ಬಂತು! ಈ ಸರೋವರವು ಕೆಸರಿನ ಕಟ್ಟೆಯಾಗಿರುವುದು. ನೀನು ಇನ್ನು ಇಲ್ಲಿ ಇರುವುದೆಂತು ಎಂದು ನಮಗೆ ದುಃಖವಾಗುತ್ತಿದೆ” ಎಂದುವು. ಅದನ್ನು ಕೇಳಿ ಕಂಬುಗ್ರೀವನು ಹೇಳಿತು:- ಮಿತ್ರರೆ ಇಲ್ಲಿ ನೀರಿಲ್ಲವಾಗಿ ನಾವು ಬದುಕುವುದೇ ಕಷ್ಟವಾಗಿದೆ. ಏನಾದರೂ ಒಂದು ಉಪಾಯವನ್ನು ಚಿಂತಿಸಿ ಬುದ್ಧಿವಂತನಾದವನು ಮಿತ್ರರಿಗೂ ಬಂಧುಗಳಿಗೂ ಆಪತ್ತು ಬಂದಾಗ ಪ್ರಯತ್ನಪಟ್ಟು ಉಪಕಾರ ಮಾಡಬೇಕು ಎಂದು ಮನುವು ಹೇಳಿರುವನು. ನನಗೆ ಒಂದು ಉಪಾಯವು ತೋರುವುದು ಕೇಳಿ. ನೀವು ಒಂದು ಕಡ್ಡಿಯನ್ನು ತನ್ನಿ. ಅದನ್ನು ನಾನು ನನ್ನ ಹಲ್ಲುಗಳಿಂದ ಭದ್ರವಾಗಿ ಕಚ್ಚಿಕೊಳ್ಳುವೆನು. ನೀವು ಅದನ್ನು ನಿಮ್ಮ ಕೊಕ್ಕುಗಳಲ್ಲಿ ಕಚ್ಚಿಕೊಳ್ಳಿ. ಯಾವುದಾದರೂ ನೀರು ಹೆಚ್ಚಾಗಿರುವ ಸರೋವರಕ್ಕೆ ಕರೆದುಕೊಂಡು ಹೋಗಿ” ಎಂದಿತು.
ಅವು ಹೇಳಿದುವು: “ಹೀಗೇನೋ ಆಗಬಹುದು. ಆದರೆ, ನೀನು ಮೌನವಾಗಿರಬೇಕು. ಇಲ್ಲವಾದರೆ ಬಾಯಿಬಿಟ್ಟಿರೆ ಕೆಳಗೆ ಬಿದು ಹೋಗುವೆ!” ಆಮೆಯು ಒಪ್ಪಿಕೊಂಡಿತು. ಹಂಸಗಳು ಅದರಂತೆಯೇ ಒಂದು ಕಡ್ಡಿಯನ್ನು ತಂದುವು ಅದನ್ನು ಆಮೆಯು ನಡುವೆ ಕಚ್ಚಿ ಕೊಂಡಿತು. ಅವೆರಡೂ ಆ ಕೊನೆ ಈ ಕೊನೆಯನ್ನು ಕಚ್ಚಿ ಕೊಂಡು ಹಾರಿದುವು.
ಅವು ಆಕಾಶದಲ್ಲಿ ಹೋಗುತ್ತಿದ್ದರೆ, ಎಲ್ಲೆಲ್ಲೂ ಜನರು ಅದನ್ನು ಕಂಡು ವಿಸ್ಮಯಪಟ್ಟರು: “ಈ ಹಕ್ಕಿಗಳು ಚಕ್ರದಂತಿರುವ ಏನನ್ನೋ ಹೊತ್ತುಕೊಂಡು ಹೋಗುತ್ತಿವೆ. ನೋಡಿ, ಬನ್ನಿ, ನೋಡಿ, ಬನ್ನಿ.” ಎಂದು ಒಬ್ಬರನ್ನೊಬ್ಬರು ಕರೆದರು. ಆ ಕೋಲಾಹಲವನ್ನು ಕೇಳಿ ಕಂಬುಗ್ರೀವನಿಗೆ ಅದೇನು ಎಂದು ಕೇಳಬೇಕು ಎನ್ನಿಸಿತು. ಕುತೂಹಲವು ಹೆಚ್ಚಾಗಿ ಕೇಳಿಯೇ ಬಿಡಬೇಕು ಎಂದು ಅ ಎಂದು ಬಾಯಿ ಬಿಟ್ಟತೋ ಇಲ್ಲವೋ ಕೆಳಕ್ಕೆ ಬಿದ್ದು ಚೂರು ಚೂರಾಗಿ ಹೋಯಿತು. ಅದರಿಂದ ಆಮೆಯಂತಾಗಬಾರದು ಎಂದೆನು” ಎಂದು ಹೇಳಿ ಅಷ್ಟೇ ಅಲ್ಲ, ಮುಂದೆ ಬರುವುದನ್ನು ಯೋಚಿಸಿದವನು, ಬಂದಾಗ ನೋಡಿ ಕೊಳ್ಳುವನು ಇಬ್ಬರೂ ಸುಖವಾಗಿದ್ದರೆ, ಆದದ್ದು ಆಗಲಿ ಎನ್ನುವನು ಹಾಳಾಗುವನು” ಎಂದಿತು.
ಟಿಟ್ಟಿಭವು ಅದು ಹೇಗೆ ಎನ್ನಲು, ಟಿಟ್ಟಿಭಿಯು ಹೇಳಿತು:-
*****
ಯದ್ಭವಿಷ್ಯನ ಕಥೆ ಓದಿ










