ಒಂದಾನೊಂದು ಪರ್ವತದಲ್ಲಿ ಒಂದು ಮಹಾ ವೃಕ್ಷವಿರುವುದು. ಅದರಲ್ಲಿ ಬಂಧುಕನೆಂಬ ಒಂದು ಪಕ್ಷಿಯು ಇರುವುದು. ಅದು ಚಿನ್ನದ ಹಿಕ್ಕೆಯನ್ನು ಇಡುವುದು. ಒಂದು ದಿನ ಅದು ಒಬ್ಬ ಬೇಡನ ಮುಂದೆ ಹಿಕ್ಕೆಯನ್ನಿಟ್ಟಿತು. ಅದು ಕೆಳಕೆ ಬೀಳುತ್ತಿದ್ದ ಹಾಗೆಯೇ ಚಿನ್ನವಾದುದನ್ನು ಕಂಡು, ಆ ಬೇಡನಿಗೆ ವಿಸ್ಮಯವಾಯಿತು: “ಎಲೆಲಾ, ನಾನು ಹುಟ್ಟಿದುದು ಮೊದಲು ಹಕ್ಕಿಯ ಬೇಟೆಯಲ್ಲಿಯೇ ಮುಳುಗಿದವನು. ನನಗೆ ಈಗ ಎಂಭತ್ತು ವರ್ಷವಾಯಿತು ನಾನು ಇಂತಹ ಆಶ್ಚರ್ಯವನ್ನು ಇದುವರೆಗೆ ಕೇಳಿಯೂ ಇರಲಿಲ್ಲ” ಎಂದು ಅದಕ್ಕೆ ಬಲೆಯನ್ನು ಬೀಸಿದನು. ಹಕ್ಕಿಯು ಬೇಡನನ್ನು ಕಂಡರೂ ಓಡಿ ಹೋಗದೆ ಕುಳಿತಿದ್ದ ಕಡೆಯೇ ಕುಳಿತಿದ್ದು ಅವನ ಬಲೆಗೆ ಸಿಕ್ಕಿ ಹೋಯಿತ್ತು.
ಅದನ್ನು ಅವನು ಹಿಡಿದು ಪಂಜರದಲ್ಲಿ ಇಟ್ಟು ಕೊಂಡು ಮನೆಗೆ ತಂದನು. ಆಗ ಅವನಿಗೆ ಯೋಚನೆಯು ಬಂತು: “ಈ ಪಕ್ಷಿಯು ಇಲ್ಲಿ ಇದ್ದರೆ ನನಗೆ ಅಪಾಯವು ತಪ್ಪದು. ಯಾರದರೂ ಹೋಗಿ ರಾಜನಿಗೆ ಈ ಹಕ್ಕಿಯ ವಿಷಯ ತಿಳಿಸಿದರೆ, ಆತನು ನನ್ನನ್ನು ಕೊಲ್ಲಿಸಿದರೂ ಕೊಲ್ಲಿಸಬಹುದು, ಆದುದರಿಂದ ನಾನೇ ಹೋಗಿ ಹಕ್ಕಿಯನ್ನು ರಾಜನಿಗೆ ಒಪ್ಪಿಸುವೆನು ಎಂದು ಗೊತ್ತು ಮಾಡಿಕೊಂಡು ಹಕ್ಕಿಯನ್ನು ತೆಗೆದುಕೊಂಡು ಹೋಗಿ ಅರಸನಿಗೆ ಒಪ್ಪಿಸಿದನು.
ಅರಸನಿಗೆ ಆ ಹಕ್ಕಿಯ ವೃತ್ತಾಂತವನ್ನು ಕೇಳಿ ಬಹಳ ಆಶ್ಚರ್ಯವೂ ಆಯಿತು. ಸಂತೋಷವೂ ಆಯಿತು. ಭಟರನ್ನು ಕರೆದು, “ಎಲೈ, ಇದನ್ನು ಜೋಪಾನವಾಗಿ ನೋಡಿಕೊಳ್ಳಿ, ಇದಕ್ಕೆ ಬೇಕಾದ ತಿಂಡಿ, ತೀರ್ಥಗಳಲ್ಲಿ ಯಾವುದೂ ಕೊರತೆಯಾಗಬಾರದು.” ಎಂದು ಅಪ್ಪಣೆ ಮಾಡಿದನು. ಮಂತ್ರಿಗಳು ಅದನ್ನು ಕೇಳಿ, “ಮಹಾಸ್ವಾಮಿ ಬೇಡನ ಮಾತು ನಂಬಿಕೊಂಡು ಈ ಹಕ್ಕಿಯನ್ನು ಇಟ್ಟು ಕೊಳ್ಳುವುದೇ? ಎಲ್ಲಾದರೂ ಹಕ್ಕಿಯು ಚಿನ್ನದ ಹಿಕ್ಕೆಯಿಡುವುದುಂಟೆ? ಮೊದಲು ಅದನ್ನು ಓಡಿಸಿ” ಎಂದರು. ಅರಸನು ಮಂತ್ರಿಗಳ ಮಾತನ್ನು ನಂಬಿ ಪಂಜರದ ಬಾಗಿಲು ತೆಗೆಯಿಸಿ ಅದನ್ನು ಓಡಿಸಿದನು.
ಹಕ್ಕಿಯು ಪುರ್ರನೆ ಓಡಿ ಹೋಗಿ ಎತ್ತರವಾದ ತೋರಣದ ಕಂಭದ ಮೇಲೆ ಹೋಗಿ ಕುಳಿತುಕೊಂಡಿತು. ಅಲ್ಲಿ ಹಿಕ್ನೆಯನ್ನು ಹಾಕಿತು. ಹಿಕ್ಕೆಯು ಚಿನ್ನವೂ ಆಯಿತು. ಆಗ “ಪ್ರಥಮ ಮೂರ್ಖನು ನಾನು” ಎಂದು ಮುಂತಾಗಿ ಹೇಳಿ, ಅಕಾಶ ಮಾರ್ಗದಲ್ಲಿ ಸುಖವಾಗಿ ಹಾರಿ ಹೋಯಿತು.” ಎಂದು ಹೇಳಿದನು.
ಗೂಗೆಗಳು ರಕ್ತಾಕ್ಷನ ಮಾತನ್ನು ಆಗಲೂ ನಂಬಲಿಲ್ಲ. ಅವರಿಗೆ ಅಪತ್ತು ಬರುವ ಕಾಲ. ಅದೆಂತು ಹಿತವಚನವನ್ನು ಕೇಳುವರು? ರಾಮನಿಗೆ ಮಾಯಾ ಮೃಗವನ್ನು ಕಂಡಾಗ ಬುದ್ದಿಯಿರಲಿಲವೆ? ನಲನಿಗೆ ಚಿನ್ನದ ಹಂಸೆಗಳನ್ನು ಕಂಡಾಗ ಅಲ್ಲಿ ಮೋಸವಿದೆಯೆಂದು ಏಕೆ ತಿಳಿಯಲಿಲ್ಲ? ಮೊದಲನೆಯ ಸಲ ಸೋತು ಅವಮಾನ ಪಟ್ಟಿದ್ದ ಧರ್ಮರಾಜನಿಗೆ ಜೂಜು ವಿಪತ್ತು ತರುವುದು ಎಂದು ಏಕೆ ತೋರಲಿಲ್ಲ? ಕಾಲವು ಯಾರನ್ನು ಕೊಲ್ಲಬೇಕು ಎಂದಿರುವುದೋ ಅವರ ಬುದ್ಧಿಯನ್ನು ಮೊದಲು ಕೊಲ್ಲುವುದು: ಅದರಿಂದ ಅವರಿಗೆ ಮಿತ್ರರು ಏನು ಹೇಳಿದರೂ ಹಿಡಿಯುವುದಿಲ್ಲ.
ರಕ್ತಾಕ್ಷನು ಇದನ್ನು ಕಂಡು ಇನ್ನು ಅರಿಮರ್ದನನಿಗೆ ಕೇಡು ತಪ್ಪಿದ್ದಲ್ಲ ಎಂದು ನಿಶ್ಚಯವಾಗಿ ತಿಳಿದು ತನ್ನವರನ್ನೆಲ್ಲಾ ಕರೆದು “ನಮ್ಮ, ಅರಸನೂ ಆತನ ಕುಶಲವೂ ಕೆಟ್ಟುವು. ಕುಲಕ್ರಮದಿಂದ ಬಂದ ಮಂತ್ರಿಯು ಏನು ಹೇಳಬೇಕೋ ಅದನ್ನು ಹೇಳಿದೆನು. ಆತನು ಕೇಳಲಿಲ್ಲ ನಾವೂ ಆತನ ಜೊತೆಯಲ್ಲಿದ್ದು ಏಕೆ ಕೆಡಬೇಕು? ನಾವು ಇನ್ನು ಎಲ್ಲಾದರೂ ಹೋಗೋಣ, ಕೇಳಿಲ್ಲವೆ?
ಬರುವ ಕೆಟ್ಟುದ ಚಿಂತಿಸಿ | ಪ್ರತಿಯ ಮಾಡಲು ಬದುಕುವ ॥
ಬಲವ ನುಡಿಯಿಸಿ ಬದುಕಿದ | ನರಿಯ ಕಥೆಯನು ಕೇಳೆಯಾ ॥ ೩೭ ॥
ಪರಿಜನರು ಅದೆಂತು ಎಂದು ಕೇಳಲು ರಕ್ತಾಕ್ಷನು ಹೇಳಿದನು. ಬಿಲವು ಮಾತಾಡಿದ ಕಥೆ
*****
ಬಿಲವು ಮಾತಾಡಿದ ಕಥೆ ಓದಿ