Home / ಕಥೆ / ಸಣ್ಣ ಕಥೆ / ಕೆಂಬಲ್ಲಿನ ಗೆಲುವು

ಕೆಂಬಲ್ಲಿನ ಗೆಲುವು

ರಾಜ ಒಡೆಯರವರು ಶ್ರೀರಂಗಪಟ್ಟಣದಲ್ಲಿದ್ದ ತಿರುಮಲ ರಾಯನ ಆಸ್ಥಾನಕ್ಕೆ ಹೋಗುತ್ತಲಿರಬೇಕಾಗಿತ್ತು. ಏಕೆಂದರೆ ಆಗಿನಕಾಲದ ಪಾಳಯಗಾರರೂ ಒಡೆಯರೂ ವಿಜಯನಗರದ ಅರಸರಿಗೆ ಅಧೀನರಾಗಿದ್ದು ಶ್ರೀರಂಗಪಟ್ಟಣದಲ್ಲಿದ್ದ ಅವರ ಪ್ರತಿನಿಧಿಯ ವಶವರ್ತಿಗಳಾಗಿದ್ದರು. ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಒಡೆಯರೂ ಪಾಳಯಗಾರರೂ ಪರಸ್ಪರ ಸೇರಿ ಜಗಳವಾಡುವುದು ಸಾಮಾನ್ಯವಾಗಿತ್ತು.

ಶ್ರೀರಂಗಪಟ್ಟಣಕ್ಕೆ ರಾಜ ಒಡೆಯರು ತಮ್ಮ ಮೈಗಾವಲಿನ ಭಟರೊಡನೆಯೂ ವಾಲಗ ಮೇಳದೊಡನೆಯೂ ಹೊರಟರು. ದಾರಿಯಲ್ಲಿ ಕೆಂಬಲ್ಲೆಂಬ ಗ್ರಾಮದ ಒಡೆಯನೂ ಅದೇ ರೀತಿಯಲ್ಲಿ ಮೇಳತಾಳಗಳೊಡನೆ ಹೋಗುತ್ತಿದ್ದನು. ರಾಜ ಒಡೆಯರಿಗೆ ಇದು ಅವಮಾನವಾಗಿ ತೋರಿತು. “ಮೇಳತಾಳಗಳೊಡನೆ ನಮ್ಮೆದುರಿಗೆ ಯಾರು ಹೋಗುತ್ತಿರುವವರು” ಎಂದು ಕೇಳಲು “ಕೆಂಬಲ್ಲಿನ ಒಡೆಯರು” ಎಂಬ ಉತ್ತರ ಬಂತು. ಕೂಡಲೆ ರಾಜ ಒಡೆಯರು ತಮ್ಮ ವಾದ್ಯಗಳನ್ನು ನಿಲ್ಲಿಸುವಂತೆ ಆಜ್ಞೆ ಮಾಡಿದರು. ಸದ್ದಿಲ್ಲದೆ ಶ್ರೀರಂಗಪಟ್ಟಣವನ್ನು ಸೇರಿ ತಿರುಮಲರಾಯರ ಆಸ್ಥಾನವನ್ನು ಹೊಕ್ಕರು. ಇದನ್ನು ಕಂಡು ತಿರುಮಲರಾಯರು “ಇದೇನು ರಾಜ ಒಡೆಯರೇ ತಮ್ಮ ಪದವಿಗೆ ತಕ್ಕಂತೆ ಮೇಳತಾಳಗಳೊಡನೆ ಪ್ರವೇಶಮಾಡದೆ ಮೌನದಿಂದ ಬಂದಿರಿ?” ಎಂದು ಕೇಳಲು ರಾಜ ಒಡೆಯರು ಕ್ರೋಧದಿಂದ “ಮೇಳತಾಳಗಳನ್ನು ನಮಗಿಂತಲೂ ಕೀಳಾದವರೂ ಇಟ್ಟುಕೊಳ್ಳುವಾಗ ಅದರಿಂದ ನಮ್ಮ ಪದವಿಗೇನು ಗೌರವ?” ಎಂದು ನುಡಿದರು. ಇದನ್ನು ಕೇಳಿದ ಕಂಬಲ್ಲಿನ ಒಡೆಯನು ಕೋಪದಿಂದ ಕಣು ಕೆರಳಿಸಿದನು. ಅದನ್ನು ಕಂಡು ರಾಜ ಒಡೆಯರು “ಏಕೆ? ಒಡೆಯರೇ? ನಿಮಗಿಷ್ಟವಾದರೆ ಈಗಲೇ ಯಾರು ಶ್ರೇಷ್ಟರೆಂದು ಕಾಣುವ! ತಾಳಮೇಳಗಳು ಯಾರಿಗೆ ಸಲ್ಲತಕ್ಕದ್ದೆಂದು ನಿರ್ಣಯವಾಗಲಿ ” ಎಂದರು. ತಿರುಮಲರಾಯರು “ನೀವಿಬ್ಬರೂ ಹೀಗೆ ಕಲಹವಾಡಬಾರದು” ಎನ್ನಲು ಅವರೆದುರಿಗೇನೂ ಮಾಡಲಾರದೆ ಇಬ್ಬರೂ ರೋಷವನ್ನು ನುಂಗಿಕೊಂಡು ಸುಮ್ಮನಿದ್ದರು. ಮಾರನೆ ದಿವಸ ಬಂದಕೂಡಲೆ ರಾಜ ಒಡೆಯರು ಕೆಂಬಲ್ಲಿನ ಮೇಲೆ ಪಡೆಸಹಿತ ಹೊರಟು ಆ ಒಡೆಯರನ್ನು ಸೋಲಿಸಿ ಕೆಂಬಲ್ಲನ್ನು ವಶಪಡಿಸಿಕೊಂಡರು.
*****
[ವಿಲ್ಕ್ಸ್, ಸಂ. ೧. ಪುಟ ೨೪]

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...