ಸೀತಾದೇವಿಗೆ ಲವಕುಶರನಂತರ ಮಕ್ಕಳಾಗಲೇ ಇಲ್ಲವೆ? ಪುರಾಣದಲ್ಲಿ ಅವಳಿಗೆ ತದನಂತರ ಪತಿಯ ಸಮಾಗಮ ಲಭಿಸಲಿಲ್ಲವೆಂದೇನೋ ಹೇಳಿದೆ. ನನ್ನ ಕತೆ ಮಾತ್ರ ಹೀಗಿದೆ.
“ಹಿಂದಕ್ಕೆ ನಾವು ವನವಾಸದಲ್ಲಿದ್ದಾಗ ನಮ್ಮ ಕುಟೀರದ ಎದುರಿಗೆ ಒಂದು ಮಲ್ಲಿಗೆ ಬಳ್ಳಿಯನ್ನು ಬೆಳೆಯಿಸಿದ್ದೆ, ನೆನಪಿದೆಯೇ ನಿಮಗೆ?”
“ಈಗ ಅದರ ನೆನಪೇಕಾಯಿತೋ ದೇವಿಗೆ!”
“ಆ ಬಳ್ಳಿಯ ಹೂವಿನ ಕಂಪಿನ ಸಮಾನವಾದುದು ಅಯೋಧ್ಯೆಯಲ್ಲಿ ನನಗೆ ಯಾವುದೂ ಸಿಗಲಿಲ್ಲ. ಅದೇ ಬಳ್ಳಿಯ ಹೂಗಳನ್ನು ತರಿಸಿಕೊಳ್ಳ ಬೇಕೆಂದು ಮನಸ್ಸಾಗಿದೆ.”
“ವ್ಹ! ಒಳ್ಳೆಯ ಬಯಕೆ. ಆ ಬಳ್ಳಿ ಈಗ ಅದೆಯೋ ಒಣಗಿದೆಯೋ ಯಾರು ಬಲ್ಲರು?”
“ಒಣಗಿರಲಾರದು”
“ಒಣಗಿರದಿದ್ದರೂ ತರುವದು ಸುಲಭವಲ್ಲ. ಕಾಂಚನಮೃಗ ಬೇಕೆಂದು ನೀನು ಹಟ ಹಿಡಿದಾಗ ಎಷ್ಟು ಫಜೀತಿಯಾಯಿತು ನೋಡು! ಮತ್ತೆ ನೀನು ಇಂತಹ ಬಯಕೆಯನ್ನು ಮಾಡುವದನ್ನು ನೋಡಿದರೆ…….. ”
ಸೀತಾದೇವಿಯು ನಾಚಿಕೆಯಿಂದ ತಲೆವಾಗಿದಳು. ಶ್ರೀ ರಾಮಚಂದ್ರ ದೇವನು ದಿವ್ಯ ಚಕ್ಷುವಿನಿಂದ ತನ್ನ ಪತ್ನಿಯು ಗರ್ಭವತಿಯೆಂಬುದನ್ನು ಕೂಡಲೆ ತಿಳಿದುಕೊಂಡುಬಿಟ್ಟನು!
“ಹಾಗಿದ್ದರೆ ನಿನ್ನ ಬಯಕೆಯನ್ನು ಈಡೇರಿಸಿ ಕೊಡಲೇಬೇಕಾಯಿತು.” ಅಂದವನೇ ಹನುಮಂತನನ್ನು ಕರೆದು ಪಂಚವಟಿಯ ಕುಟೀರದ ಎದುರಿನ ಮಲ್ಲಿಗೆ ಬಳ್ಳಿಯಿಂದ ಒಂದು ಬೊಗಸೆ ಹೂ ತರಲು ಆಜ್ಞಾಪಿಸಿದನು. ಸೀತಾ ದೇವಿಯು ಪತಿದೇವನ ಈ ಪತ್ನಿ ಭಕ್ತಿಗೆ ಹಿಗ್ಗಿದಳು.
X X X x
ಹನುಮಂತನು ಎಷ್ಟು ಹುಡುಕಿದರೂ ಆ ಮಲ್ಲಿಗೆಯ ಬಳ್ಳಿ ಕಾಣಲಿಲ್ಲ. ತಾನೇ ಎಷ್ಟೋಸಲ ನೀರೆರೆದ ಬಳ್ಳಿ ತನಗೇ ಕಾಣುವದಿಲ್ಲವಲ್ಲ ಎಂದು ಅವನು ಮಿಡುಕಿದನು. ಕಟ್ಟ ಕಡೆಗೆ ಅದು ಬತ್ತಿರಲು ಸಾಕೆಂದು ಅವನಿಗೆನಿಸಿತು. ಈ ವಿಚಾರ ದೇವದೇವಿಯರಿಗೆ ಹೊಳೆದಿರಲಿಕ್ಕಿಲ್ಲವೇ ಎಂದು ಅವನು ಪ್ರಶ್ನಿಸಿಕೊಂಡನು.
ಕೊನೆಗೆ ಬರಿಗೈಯಲ್ಲಿ ಮರಳಬೇಕಾಯಿತು.
ಮಲ್ಲಿಗೆ ಬಾರದುದನ್ನು ಕಂಡು ಸೀತಾದೇವಿಯು ಕಣ್ಣೀರು ಹಾಕಿದಳು. ಪತ್ನಿಯ ಕಂಬನಿಯನ್ನು ಕಂಡು ಶ್ರೀರಾಮಚಂದ್ರ ದೇವನು ತನ್ನ ಕಣ್ಣಿನಿಂದ ಹನುಮಂತನ ಮೇಲೆ ಕೆಂಡಕಾರಿದನು. “ಸರಿಯಾಗಿ ಹುಡುಕಲೇ ಇಲ್ಲ ನೀನು. ಇನ್ನೊಮ್ಮೆ ಹೋಗಿ ಸಂಶೋಧಿಸಿಕೊಂಡು ಬಾ” ಎಂದು ಆಜ್ಞೆಯಾಯಿತು.
“ಸ್ವಾಮಿಯಾಜ್ಞೆಯನಾಂತು ಹನುಮ ನಿಜಶಿರದೆ” ಮತ್ತೊಮ್ಮೆ ಪಂಚವಟಿಗೆ ಜಿಗಿದನು. ಪುನಃ ಗಿಡಗಿಡ, ಬಳ್ಳಿ ಬಳ್ಳಿಗಳನ್ನೆಲ್ಲ ಮುಟ್ಟಿ ಮುಟ್ಟಿ ಮೂಸಿ ಮೂಸಿ ನೋಡಿದನು. ಆದರೆ ಆ ಮಲ್ಲಿಗೆಯ ಬಳ್ಳಿ ಸಿಗಲಿಲ್ಲ.
ಕೆಟ್ಟ ಮೋರೆಮಾಡಿಕೊಂಡು ಬಂದು ದೇವದೇವಿಯರಿಗೆರಗಿ ಕುಳಿತನು. ಎರಡು ಸಲ ಹಾರಿದ ಶ್ರಮದಿಂದ ಆತನು ನಿರ್ವಿಣ್ಣನಾಗಿದ್ದನು.
ಈ ಸಲವೂ ಖಾಲಿಯಾದುದನ್ನು ತಿಳಿದು ಸೀತಮ್ಮನವರು ಮೂರ್ಚ್ಛೆ ಹೋದರು. ಅದನ್ನು ನೋಡಿ ಶ್ರೀರಾಮಚಂದ್ರ ದೇವನು ಎದುರು ಕುಳಿತ ಮಾರುತಿಯು ರಾವಣನೆಂಬಂತೆ ವರ್ತಿಸಿದನು.
“ಆ ಮಲ್ಲಿಗೆ ಸಿಗದಿದ್ದರೆ ಬೇರೆ ಯಾವದಾದರೊಂದು ಮಲ್ಲಿಗೆಯನ್ನು, ಮಲ್ಲಿಗೆಯೇ ಸಿಗದಿದ್ದರೆ ಮತ್ತಾವದಾದರೊಂದು ಹೂವನ್ನು ತರಬಾರದಿತ್ತೇ ಕಪಿಯೇ?” ಎಂದು ಗುಡುಗಿದನು ಸೀತಾಪತಿ.
ಹನುಮಂತನಿಗೆ ಬಹಳ ಅಪಮಾನವಾಯಿತು. “ಹಾಗೆಯೇ ಆಗಲಿ” ಎಂದು ಮೂರನೆಯಸಲ ಪಂಚವಟಿಗೆ ಹಾರಿದನು. ಹಸಿವೆ, ಶ್ರಮಗಳಿಂದ ಬಳಲಿದ ಆತನಲ್ಲಿ ಆ ಮಲ್ಲಿಗೆ ಬಳ್ಳಿಯು ಸತ್ತಿದ್ದರೂ ಚಿಗುರಿಸಿ ಅದರ ಹೂವನ್ನೇ ತರಬೇಕೆಂಬ ಹಟಮೂಡಿತು.
ಬತ್ತಿ ಬೆಂಡಾದ ಆ ಬಳ್ಳಿಯ ಅವಶೇಷ ಸಿಗುವುದರೊಳಗಾಗಿ ಆತನಿಗೆ ಬವಳಿ ಬರುವಂತಾಯಿತು. “ಇಂಥ ಬಯಕೆ ಯಾಗುವುದಕ್ಕಿಂತ ಬಸಿರೇ….” ಎಂದು ಅವನ ಬಾಯಿಯಿಂದ ಹೊರಟುಬಿಟ್ಟಿತು.
ಕಂಬನಿಯಿಂದ ಆ ಬಳ್ಳಿಯನ್ನು ಚಿಗುರಿಸಿ ಅದರ ಮೊಗ್ಗೆಯನ್ನು ಹಿಡಿದು ಮಾರುತಿಯು ಬಂದನು. ಅವನು ಬರುವುದರೊಳಗಾಗಿ ಅವನು ನೊಂದು ನುಡಿದಂತೆ ಗರ್ಭಪಾತವಾಗಿ ಬಿಟ್ಟಿತ್ತು.
ಸೀತೆ ಮತ್ತೆ ಬಸುರಿಯಾಗಲೇ ಇಲ್ಲ.
*****








