Home / ಕಥೆ / ಕಿರು ಕಥೆ / ಎಂಜಲು ಬೋರೆ

ಎಂಜಲು ಬೋರೆ

ಶ್ರೀ ರಾಮಚಂದ್ರ ದೇವರು ಶಬರಿಯು ಕೊಟ್ಟ ಎಂಜಲು ಬೋರೆಯನ್ನು ತಿಂದ ಸುದ್ದಿಯು ಆ ಅರಣ್ಯ ಪ್ರದೇಶದಲ್ಲಿ ಕಾಳಿಚ್ಚಿನಂತೆ ಹಬ್ಬಿತು. ಕೇಳುವದೇನು? ಬುಟ್ಟಿ ತುಂಬ ಎಂಜಲು ಬೋರೆಯನ್ನು ಹೊತ್ತು ಬೇಡತಿಯರ ಹಿಂಡೇ ಅವರ ಪರ್ಣಶಾಲೆಗೆ ಬಂದು ಆ ಹಣ್ಣನ್ನು ತಿನ್ನಲು ಪ್ರಾರ್ಥಿಸಿ ಕೊಂಡಿತು. “ಶಬರಿಯು ಕೊಟ್ಟಿದ್ದನ್ನು ಮಾತ್ರ ತಿನ್ನಬೇಕೇ? ನಾವೇನು ಪಾಪಿಗಳೇ?” ಎಂದು ಕೈಜೋಡಿಸಿ ಬೇಡಿಕೊಂಡರು. ರಾಮಚಂದ್ರನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಹೇಗಾದರೂ ಅವರನ್ನು ಕಳಿಸುವ ಯತ್ನ ಮಾಡಿದನು.

ಆದರೆ ಬೇಡತಿಯರು ಬಿಡುತ್ತಾರೆಯೇ? “ನೀವು ನಮ್ಮ ಕಾಣಿಕೆಯನ್ನು ಸ್ವೀಕರಿಸದಿದ್ದರೆ ಇಲ್ಲೇ ಸಾಲು ಹಿಡಿದು ಕುಳಿತು ನಿಮ್ಮ ಹೆಸರನ್ನು ಭಜಿಸುತ್ತ ಕಾಲಕಳೆಯುವೆವು” ಎಂದರು.

ಬೋರೆಗಳನ್ನು ಪರ್ಣಶಾಲೆಯೊಳಗೆ ಇಟ್ಟು ಹೋಗುವಂತೆ ಸೀತಾ ಪತಿಯು ಸೂಚಿಸಿದನು.

ಒಬ್ಬೊಬ್ಬರ ಬುಟ್ಟಿಯಿಂದ ಒಂದೊಂದು ಬೋರೆಯನ್ನಾದರೂ ತಿನ್ನಲೇಬೇಕೆಂದು ಬೇಡತಿಯರು ಹಟ ಹಿಡಿದರು.

ಅವರ ಸತ್ಯಾಗ್ರಹಕ್ಕೆ ಸೋತು ದಶರಥ ತನಯನು ಒಂದೊಂದು ಬುಟ್ಟಿಯಿಂದ ಒಂದೊಂದು ಬೋರೆಯನ್ನು ತಿನ್ನಹತ್ತಿದನು.

ಅದನ್ನು ಕಂಡು ಸೀತಾದೇವಿಯು “ಬೇಡ” ಅಂದಳು. ಲಕ್ಷ್ಮಣನೂ ಅದೇ ಅಭಿಪ್ರಾಯ ವ್ಯಕ್ತಪಡಿಸಿದನು. ಆದರೆ ಭಕ್ತವತ್ಸಲನಾದ ರಾಮಚಂದ್ರನು ಕೇಳಲಿಲ್ಲ. ಎಲ್ಲ ಬುಟ್ಟಿಗಳಿಂದಲೂ ಒಂದೊಂದು ಎಂಜಲು ಬೋರೆಯನ್ನು ತಿಂದನು.

ಸಂಜೆಯಹೊತ್ತಿಗೆ ಶ್ರೀ ರಘುಪತಿಯ ಮುಖಕಮಲವು ತುರಿಸಹತ್ತಿತು.

“ನಾವು ಹೇಳಲಿಲ್ಲವೇ?” ಎಂದು ಸೀತಾದೇವಿಯು ಕೇಳಿದಳು.

ಅವುಗಳನ್ನು ತಿಂದುದರಿಂದಲೇ ಹೀಗೆ ತುರಿಸುತ್ತಿವೆಯೆಂದು ನಿಮ್ಮ ಅಭಿಪ್ರಾಯವೇ? ಛೇ! ಆತ್ಮಾರ್ಪಣೆಯ ಭಾವದಿಂದ ನಿರ್ಮಲ ಹೃದಯದ ಬೇಡತಿಯರು ಕೊಟ್ಟ ಹಣ್ಣಿನಿಂದ ಇಂಥ ಅನಿಷ್ಟವಾಗಲು ಸಾಧ್ಯವೇ ಇಲ್ಲ” ಅ೦ದನು ಜಾನಕೀ ವಲ್ಲಭನು.

ಮರುದಿನ ಆತನ ತುಟಿಗಳು ಬಾತು ಅವುಗಳಲ್ಲಿ ಬೊಕ್ಕೆಗಳು ಕಂಡು ಕೊಂಡವು.

ಗಿಡಮೂಲಿಕೆಯೊಂದನ್ನು ಅರೆಯುತ್ತ ಲಕ್ಷ್ಮಣನು ಹೇಳಿದನು “ಬೇಡತಿಯರ ಹೃದಯ ಎಷ್ಟೇ ನಿರ್ಮಲವಿದ್ದರೂ ಅವರ ಎಂಜಲು ಬೋರೆಯು ಮಾತ್ರ…. ಅಂಟುರೋಗವು ಹೃದಯ ನೈರ್ಮಲ್ಯಕ್ಕೆ ಹೆದರುತ್ತದೆಯೇ? ಭಾವನೆಯ ಜತೆಗೆ ಬುದ್ಧಿಯನ್ನೂ…. ”

ಸೀತಾ ಮಾತೆಯು ಈ ಪಾಠವನ್ನು ತನ್ನ ಪತಿದೇವನಿಗೆ ಇರುಳಿನಲ್ಲಿ ‘ಕಾಂತಾ ಸಮ್ಮಿತತಯಾ’ ತಿಳಿಸಿ ಹೇಳಿದಳು. ಅಂದಿನಿಂದ ಶ್ರೀ ರಾಮಚಂದ್ರ ದೇವರು ಭಕ್ತರ ಎಂಜಲು ಗಿಂಜಲು ತಿನ್ನಲಿಲ್ಲ.
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...