Home / ಕವನ / ಕವಿತೆ / ಸ್ವಾತಂತ್ರ್ಯ ದೇವಿಗೆ

ಸ್ವಾತಂತ್ರ್ಯ ದೇವಿಗೆ

ತುಳಿದ ರಭಸಕೆ ನೆಲವೆ ಬಿರಿವಂತೆ, ಬಿಡುಗಡೆಯೆ,
ಇಳಿತಂದೆಯೌ ಪರಮರೌದ್ರವನು ಮೆರೆದು
ನಿನ್ನ ಭಜಕರ ತಪಕೆ ಒಲಿದರೂ ಈ ಎಡೆಗೆ
ಬರೆ ಬಿಂಕಗೊಂಡಂತೆ ಸೌಮ್ಯತೆಯ ತೊರೆದು
ಭಾರತದ ಸಾಧುಜನರಾತತಾಯಿಗಳಾಗೆ
ದುರ್ಮೋಹ ಧೂಮದಿಂ ಚಿತ್ತವನು ಕವಿದು
ಕಾಂಬವರು ಕಂದೆಗೆಯೆ ವಿಪುಳ ತೇಜದೊಳುರಿದು
ನೀರಸರು ಸಿಡಿದೊಡೆವ ತೆರದಿ ಕಿಡಿಗರೆದು

ನೀ ಬಂದೆಯಂದು ಬಾನುಳಿವ ಸ್ವರ್‌ಗಂಗೆಯಂತೆ
ಶಿವನ ಹೃದಯವ ತುಳಿದು ನರ್ತಿಸುವ ಕಾಳಿಯಂತೆ
ವಿಷದ ಮುಂಗಾವಲಂ ಕೊಂಡು ಬಂದಮೃತದಂತೆ
ನಿನ್ನ ನೆನೆದವರೂಹೆಗೆಟ್ಟಾಸೆ ಹಿಂಗುವಂತೆ.

ಶುಭದ ಶಂಖಧ್ವನಿಯ ಓಂಕಾರದಾಹ್ವಾನ
ಜಯ ಜಯೆಂಬುಗ್ಗಡಣೆ, ಸ್ವಸ್ತಿಸ್ವಸ್ತ್ಯುಕ್ತಿ
ಮರುಚಣವೆ ದುಃಖಾರ್ತಲೋಕದಾಕ್ರಂದನವು
ಲೋಭದುರ್ಮದಮೋಹವೈಷಮ್ಯಮುಕ್ತಿ
ಕೃತಕೃತ್ಯತೆಯ ಸೊಗದ ಸಂಮೋದ ಸಂಭ್ರಮದ
ಜತೆಗೆ ರುಷ್ಟೋದ್ರಿಕ್ತಜನದ ನಿರ್‌ಹ್ರಾದ
ನಿಶ್ಶೃಂಖಲತೆಯೊಡನೆ ಉಚ್ಛೃಂಖಲಾವೃತ್ತಿ
ವಿಶ್ವಮಾನಿತೆಯೊಡನೆ ವಿಶ್ವಾಪವಾದ-

ಇಂತಾತ್ಮ ತ್ರೈಗುಣ್ಯಬಂಧಗಳ ಎಲ್ಲೆ ಮೀರೆ
ಉದ್ರಸೋಜ್ವಲವಾಗಿ ನವರಸಗಳೆಲ್ಲವನು ತೋರೆ
ನಿನ್ನುಸಿರಕೊಂಡೆದ್ದ ಜೀವಬುದ್‌ಬುದಗಳೆಂತು
ಭಾವವಿಸ್ಫುರಣವಂ ಕೊಂಡವವೌ ಸ್ಫುಟಿಸುವಂತು!

ಭಕ್ತ ವಿಶ್ವಾಸದಿಂ ಪಾರ್ಥನಿದಿರೊಳು ನಿಂದ
ವಿಶ್ವರೂಪದ ಅಪ್ರಮೇಯನಂ ಹೋಲಿ
ಮಾತವಸಿಯಿದಿರಿಂತು ನೀ ನಿಲ್ಲೆ ಕಾಣುತ್ತ
ಭೀತಿ ವಿಹ್ವಲನಾದನಾ ಸತ್ವಶಾಲಿ
ತನ್ನಳತೆಗಳವಟ್ಟು ಮಮತೆಯೊಳೆ ನಡೆದಂಥ
ದಿನದ ಬಳಕೆಯ ಕನಸು ಇಂಥ ಕಣಸಾಯ್ತೆ
ತನ್ನ ನಯಸಂಪನ್ನವಾಗಿದ್ದ ಬದ್ಧ ಜನ
ಸ್ವಾಚ್ಛಂದ್ಯದೊಳಗಿಂತು ದುರ್ದಮ್ಯವಾಯ್ತೆ!-

ಈ ಅಚಿಂತ್ಯಕೆ ಚಿತ್ತ ಕೋರೈಸೆ ಕುರುಡನಾಗಿ
ಉಪವಾಸದಿಂ ತವಿಸಿ ಮುದನೀಗಿ ಮೌನಿಯಾಗಿ
ಓ ರುದ್ರೆ ಭದ್ರಳಾಗೆಂದು ಒಮ್ಮನದೊಳೆರೆದಂ
ಎಲ್ಲ ಮನದೊಳಗಿಂತೆ ಮೊರೆಗೊಡಲು ತನುವ ಮರೆದಂ

ದೇವಿ, ಸ್ವಾತಂತ್ರ್ಯಾಂಬೆ, ಎನಿತು ಶತಶತಮಾನ
ನಾವೆರೆದು ಕಾದಿಹೆವು ನೀ ಬಿಜಯಗೈಯೆ
ಎನಿತು ದೇಹದೊಳೆನಿತು ರೀತಿಯೊಳು ನಿನಗಾಗಿ
ಎನಿತು ಸೊಗದಾಹುತಿಯ ನಿತ್ತೆವೌ, ತಾಯೆ.
ಪರಶಿಶಿರ ಶೈತ್ಯದೊಳು ಋಷಿತೇಜದುಷ್ಣದಿಂ
ನಮ್ಮ ತಾಯ್ನೆಲ ಬದುಕೆ ಕಡುಪಾಡ ಪಡುತ

ಜಾತಿ ಜಾತಿಯ ಗೂಢ ರೂಢಿಗಳ ಮೂಡೆಯೊಳು
ಅವಳ ಸತ್ವದ ಬೀಜಗಳನು ಕಾಪಿಡುತ

ಕೊನೆಗೆ ನೀನೈತಂದೆ, ಶುಭ ಸುಪ್ರಭಾತವೆಂದೆ
ಮುಂಬೆಳಗ ತಂದವಳು ನಂಜ ಮರೆಗೇಕೆ ನಿಂದೆ?
ಅರಿಷಟ್ಕತೊಲಗೆ ಮೊದಲವಕೆ ಈ ರೌದ್ರಬೇಕೆ
ದುರ್‌ಗ್ರಹೋಚ್ಚಾಟನಕೆ ಕೊಟ್ಟಬಲಿ ಇನ್ನು ಸಾಕೆ?

ಎಂತಾದರೂ ಸರಿಯೆ, ಇಲ್ಲೆ ನೀ ನಿಲ್ಲವ್ವ
ಏನಾದರೂ ನಮ್ಮ ನೀ ತೊರೆಯಬೇಡ
ನಿನ್ನ ಅಭಯದ ವರದೊಳೆಲ್ಲ ಭಯಗಳ ನೀಗಿ
ವಿಶ್ವತೋಮುಖವಾಗೆ ನಡೆಸು ಈ ನಾಡ
ಸ್ವಾರ್ಥಿಗಳ ಲೋಭಕ್ಕೆ ಮತವಳರ ಕಾಮಕ್ಕೆ
ಧ್ಯೇಯ ಮೋಹಕು ನಾವು ಸಲ್ಲದಂತಿರಿಸು
ಕ್ಷೇಮಮಿತಿಯುದ್ಯೋಗ ಹೃದಯಮಿತಿ ವಿಜ್ಞಾನ
ವಿಶ್ವಮಿತಿ ನಮ್ಮಾತ್ಮವಾಗಲನುಗೊಳಿಸು.

ಸಂತನಸುವೇ ನಿನಗೆ ನಾವಿಡುವ ರಾಮರಕ್ಷೆ
ನಿರ್ಬಾಧ ಪೌರುಷೋತ್ತಮ್ಯವೇ ಬಯಪ ಭಿಕ್ಷೆ
ಇಂದು ಉದಯದ ಮಂಜುಹರಿದು ಹಗಲಾಯಿತೆಂಬೆ
ದೇವಿ, ಜಯಜಯ, ಶರಣು, ಹರಸು ಕೈಮುಗಿವೆನಂಬೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...