Home / ಕವನ / ಕವಿತೆ / ನೆನಪುಗಳೇ!

ನೆನಪುಗಳೇ!

ನೆನಪುಗಳೇ
ಬಾರದಿರಿ! ಬಾರದಿರಿ!

ಸೊಂಡಿಲಾಡಿಸುತ್ತ ಬಂದು
ಮೊದಲೆ ಕದಡಿಹೋದ ಕೊಳವ
ಮತ್ತೆ ಮತ್ತೆ ಕದಡುತ,
ಎರಡೆ ದಿನಕೆ ತಾನೆ ಬಾಡಿ-
ಹೋಗಲಿರುವ ಒಂದೊ ಎರಡೊ
ಹೂವುಗಳನು ಕಿತ್ತು ಬಿಸುಟು
ಘೀಳಿಡುವ ಆನೆಯಂತೆ
ಬಾರದಿರಿ! ಬಾರದಿರಿ!
ಮನದ ಕೊಳವು ತನಗೆ ತಾನೆ
ಬತ್ತಿಹೋಗಲನುವು ಕೊಡಿ!
ನುಗ್ಗದಿರಿ! ನುಗ್ಗದಿರಿ!
ನೆನಪುಗಳೇ:
ಬಾರದಿರಿ! ಬಾರದಿರಿ!

ಎದೆಯ ಬಸಿರು ಒಂದೆ ಸಮನೆ
ನಿಟ್ಟುಸಿರಿನ ಕೂಸುಗಳನು
ಹೆತ್ತು ಹೆತ್ತು ಹೆರಿಗೆನೋವಿನಿಂದ ನರಳುವಂತೆ
ಮಾಡಬೇಡಿರಿ!
ನದಿಯ ತಡಿಯ ಮಳಲ ಕೆರೆದು ಕೆರೆದು ಬಗೆದು ಬಗೆದು
ನೀರುಕ್ಕಿಸುವಂತೆಯೇ,
ಕಣ್ಣಿನೊಳಗೆ
ಇಲ್ಲದಿರುವ ಕಂಬನಿಗಳ
ತಾರದಿರಿ! ತಾರದಿರಿ!
ಬಾರದಿರಿ! ಬಾರದಿರಿ!
ನೆನಪುಗಳೇ!

ಅಂದು-ನಿಮ್ಮನಿಂದು ಹೆರುವ
ಅನುಭವಗಳ ಸವಿಯುವಂದು-
ಮನಕಾಸರೆಯಾಗಿ ದೇಹ
ನಿಂತು ನರಳಿತು,
ಅಂದನುಭವದಗ್ನಿ ಕುಂಡ-
ದಲ್ಲು ದೇಹ ಕಲ್ಲಿನಂತೆ
ನಿಂತು ಮನನ ಕಾದಿತು!

ಇಂದು ನಿಮ್ಮ ಧಾಳಿಗೆಲ್ಲ
ಮನವದೊಂದೆ ಗುರಿಯು ಕಣಾ!
ನೆನಪ ಶಾಖವೊಂದೆ ಸಾಕು
ಮನದಣುವನು ಸಿಡಿಸಲು!
ಇರುವ ಒಂದೊ ಎರಡೊ ಆಸೆಗಳನು
ಸುಟ್ಟು ಕರಿಕು ಮಾಡಲು!
ನೆನಪುಗಳೇ ಬಾರದಿರಿ!
ಬಾರದಿರಿ! ಬಾರದಿರಿ!
* * *

ಯಾರು?
ಸರಿ ನೀನೋ?
ಅಂದು ನನ್ನ ಬಾಳನೋಡಿನಲ್ಲಿ
ಅರಳ ತೆರದಿ ಹುರಿದುದೊಂದೆ
ಸಾಲದೇನೆ?
ನೆನಪನೇರಿ ಬರುವೆಯೇಕೆ?
“ನಾನೆ ಬಂದರೇನೊ ಎಂತೊ?”
ಎಂಬ ಭಯವೆ?
ಅಂದು ನಿನ್ನನಂತೆ ಬಿಟ್ಟು
ತಪ್ಪ ಮಾಡಿದೆ.
ಹೇಡಿ! ತೊಲಗು ಸಾಕು! ಸಾಯಿ!
“ಸಾಯಿ”!
ಸಾವು?
ಓ ಗೆಳೆಯನೆ ಎಂಥ ಸಾವೊ ನಿನ್ನದು?
ತಂದೆ ತಾಯಿಗಳನು ಬಿಟ್ಟು
ಸಾಯ್ವುದಕೇ ಊರಿನಿಂದ
ನಗುತ ಬಂದೆ!
ಸಾವೆಂದರೆ ನಿನ್ನ ನೆನಪು!
ನೀನೆಂದರೆ
ನಿನ್ನ ನಗೆ ನಿನ್ನ ಮಾತು
ನಿನ್ನ ಒಲವು, ನಿನ್ನ ಸರಸ-
ಇವುಗಳೊಂದು ಮನಕೆ ಬಾರವು!
ಬರುವುದೊಂದೆ!
ಅದೇ ನಿನ್ನ ಹೆಣದ ಚಿತ್ರ!
ನಿನ್ನ ಮಾತು ಬಂದರೆ ಸರಿ
ನಿನ್ನ ಹೆಣವೆ ಕಣ್ಣ ಮುಂದೆ!
ಓ ಗೆಳೆಯನೆ! ಏಕೆ ಸತ್ತೆ?
‘ಬದುಕಿ’ದೆನ್ನ ನೇಕೆ ಕೊಲುವೆ?
ಹೆಣದ ನೆನಪ ತಂದು ನೀನು
“ಹಾಳು ಗೆಳೆಯನಿವನ ಸ್ನೇಹ
ಯಾವ ಶಾಪದೊಂದು ಫಲವೊ!”
ಎಂಬನುಚಿತ ನುಡಿಯ ಬಾಯ್ಗೆ
ತಾರದಿರು! ತಾರದಿರು!
ಕರಗು ಕರಗು ಕರೆಗೆಲೆ!
* * *

ಶುದ್ಧ ಹುಚ್ಚು!
ಕರಗೆಂದರೆ ತೊಲಗೆಂದರೆ ಸಾಯೆಂದರೆ
ಕರಗುವವೇ, ತೊಲಗುವವೇ, ಸಾಯುವವೇ
ಮನದ ಗೋರಿಯಿಂದೇಳುವ
ನೆನಪ ಪ್ರೇತ ಪಂಕ್ತಿಯು?

ನೆನಪುಗಳೇ!
ನಿಮ್ಮ ಕಾಲ ಹಿಡಿದು ಬೇಡುವೆ!
ಇಂತು ಒಂದೆ ಸಮನೆ ಬಗೆಗೆ
ಬಾರದಿರಿ! ಬಾರದಿರಿ!
ದುಗುಡವನ್ನು
ತಾರದಿರಿ! ತಾರದಿರಿ!
ಎಲ್ಲಿಂದಲೊ
ಸೋರದಿರಿ! ಸೋರದಿರಿ!
ಬಂದಂತೆಯೆ ಮಾಯವಾಗಿ
ಮತ್ತೆ ಇತ್ತ ಬಾರದಿರಿ!
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...